Homeಪುಸ್ತಕ ವಿಮರ್ಶೆಬಳಗೋಡಕ್ಕೆ ಟಿಸಿ ಬಂದ ಕಥೆ; 'ಹಸಿರು ಟಾವೆಲ್'-ರೈತನೊಬ್ಬನ ಜೀವನ ಕಥನದಿಂದ ಆಯ್ದ ಅಧ್ಯಾಯ

ಬಳಗೋಡಕ್ಕೆ ಟಿಸಿ ಬಂದ ಕಥೆ; ‘ಹಸಿರು ಟಾವೆಲ್’-ರೈತನೊಬ್ಬನ ಜೀವನ ಕಥನದಿಂದ ಆಯ್ದ ಅಧ್ಯಾಯ

- Advertisement -
- Advertisement -

ಸೂಡಿಯಲ್ಲಿ ಪರಸಪ್ಪ ಎನ್ನುವ ದಲಾಲಿ ವ್ಯಾಪಾರಿಯ ಕಿರುಕುಳ ಜೋರಾಗಿತ್ತು. ಸಾವಿರಾರು ಕುಟುಂಬಕ್ಕೆ ಸಾಲ ಕೊಟ್ಟಿದ್ದ. ಆ ಸಾಲದ ಬಲೆಯಲ್ಲಿ ಒಮ್ಮೆ ಸಿಲುಕಿದರೆ ಮತ್ತೆ ವಾಪಸ್ ಬಿಡಿಸಿಕೊಂಡು ಬರೋದು ರೈತರಿಗೆ ಬಹಳ ಕಷ್ಟವಾಗುತ್ತಿತ್ತು. ಅದೊಂದು ತಿರುಗುಣಿ ಇದ್ದಂಗೆ. ಬಡ್ಡಿ, ಚಕ್ರಬಡ್ಡಿ ತಿರುಗುಣಿಯಲ್ಲೇ ರೈತರು ಬಿದ್ದು ಹೊರಳಾಡಬೇಕಿತ್ತು. ಆಮೇಲೆ ಬಡ್ಡಿ ಕೊಡದೇ ಇರುವವರ ಆಸ್ತಿಯನ್ನು ಜಬರ್‌ದಸ್ತಿ ಮಾಡಿ ಬೇರೆಯವರಿಗೆ ಬರೆಸಿಕೊಟ್ಟು ತನ್ನ ರೊಕ್ಕ ಪಡೆಯುತ್ತಿದ್ದ. ಪರಸಪ್ಪನ ಹತ್ತಿರ ಹೀಗೆ ಸಾಲ ಪಡೆದ ಎಷ್ಟೋ ರೈತರು ಬಡ್ಡಿ ಕಟ್ಟದೆ ಹೊಲ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ಇವರ ಉಪಟಳಕ್ಕೆ ಬೇಸತ್ತಿದ್ದ ರೈತನೊಬ್ಬ ಇದಕ್ಕೆ ಪರಿಹಾರ ಸಿಗಬಹುದೆಂದು ಕೂಡ್ಲೆಪ್ಪನವರ ಬಳಿಗೆ ಬಂದು ಅತ್ತು ಕರೆದಿದ್ದ. ಅವರು ಇದಕ್ಕೆ ಏನಾದರೂ ಮಾಡಲೇಬೇಕೆಂಬ ಯೋಚನೆಗೆ ಬಿದ್ದರು. ದಲಾಲರ ದಬ್ಬಾಳಿಕೆ ವಿರೋಧಿಸಿ ಸಂಘದಿಂದ ಕರಪತ್ರ ಹಾಕಿಸಿದರು. ರೈತಸಂಘದ ಕಾರ್ಯಕರ್ತರೆಲ್ಲ ಸೇರಿ ಕಾರು ಬಾಡಿಗೆ ಪಡೆದು ಸುತ್ತ ಮುತ್ತಲ ಇಪ್ಪತ್ತು ಹಳ್ಳಿಗೆ ಆ ಕರಪತ್ರ ಹಂಚಿದರು.

ಸಾಲ ಪಡೆದ ರೈತರು ಆ ಕರಪತ್ರವನ್ನು ಸಾಲಿ ಕಲಿತ ಮಕ್ಕಳ ಹತ್ತಿರ ಕದ್ದು ಮುಚ್ಚಿ ಓದಿಸಿದರು. ಏನೇನಾಗುತ್ತದೋ ಎಂದು ಜನ ಬಹಳ ಭಯಗೊಂಡಿದ್ದರು. ಹಳ್ಳಿಗಳ ಚಹಾದಂಗಡಿ, ಕಟಿಂಗ್ ಅಂಗಡಿ, ಗುಡಿ, ಮಸೀದಿಗಳ ಕಟ್ಟೆ ಮೇಲೆ ಗುಂಪುಗೂಡಿದ ಜನರಲ್ಲಿ ಈ ಕರಪತ್ರದ್ದೇ ಚರ್ಚೆ. ಒಂದೂರಿನಲ್ಲಿ ಕನಿಷ್ಠ ಅರ್ಧದಷ್ಟು ಜನರಾದರೂ ಪರಸಪ್ಪನ ಹತ್ತಿರ ಸಾಲ ಪಡೆದವರೇ ಆಗಿದ್ದರು. ಸಾಲಗಾರರು ಆ ಕರಪತ್ರ ಮಡಚಿ ಬೊಕ್ಕಣದಲ್ಲಿ ಇಟ್ಕೊಂಡು ಅಡ್ಡಾಡುತ್ತ ಕದ್ದುಮುಚ್ಚಿ ಅವರಿಗೆ ಇವರಿಗೆ ತೋರಿಸೋರು. ಆ ಬಗ್ಗೆ ಬಹಿರಂಗವಾಗಿ ಮಾತಾಡೋಕೆ ಹೆದರುತ್ತಿದ್ದರು. ಪರಸಪ್ಪ ಅಷ್ಟೊಂದು ಭಯವನ್ನು ರೈತರೊಳಗೆ ಬಿತ್ತಿದ್ದ.

ರೈತ ಸಂಘದ ಕರಪತ್ರ ನೋಡಿ ದಲಾಲ ಪರಸಪ್ಪ ಕುದ್ದು ಹೋದ. ಇದು ಅನಿರೀಕ್ಷಿತವಾಗಿ ಅಪ್ಪಳಿಸಿದ ಆಘಾತವಾಗಿತ್ತು. ಅವನ ಮೈ ತುಂಬಾ ರಕ್ತದ ಬದಲು ಸಿಟ್ಟು ಹರಿದಾಡಿತು. ಬರುವ ಸಾಲಗಳಾದರೂ ಬರಲೆಂದು ಹಳ್ಳಿಗಳ ಕಡೆ ವಸೂಲಿಗೆ ತೆರಳಿದ. ಮೊದಲಿಗಿಂತ ಕಠೋರವಾಗಿದ್ದ. ಆದರೆ, ಹಳ್ಳಿಗಳಿಗೆ ಹೋದಾಗ ಜನರ ವರ್ತನೆಗಳು ಮೊದಲಿಗಿಂತ ಈಗ ಬದಲಾಗಿದ್ದು ಗೋಚರವಾಗತೊಡಗಿತು. ಬಂದಾಗೊಮ್ಮೆ ವಿಧೇಯತೆ ತೋರುತ್ತ, ನಮಸ್ಕಾರ ಹೇಳುತ್ತಾ, ಸಾಲ ಹರಿಯಲೆಂದೇ ತಿಂಗಳಪೂರ್ತಿ ಕೂಲಿ ಮಾಡಿದ ದುಡ್ಡನ್ನು ಇವನ ಬೊಗಸೆಗೆ ಹಾಕುತ್ತಿದ್ದರು. ಆಗೆಲ್ಲ ಬಡ್ಡಿ ಹಣ ಕೊಡದಿದ್ದರೆ ಬೆದರಿಕೆ ಹಾಕುತ್ತಿದ್ದ. ಇದರಿಂದ ಹೆದರಿದ್ದ ಜನ ಹೊಟ್ಟೆ ಬಟ್ಟೆಗೆ ಇರದಿದ್ದರೂ ಅಡ್ಡಿ ಇಲ್ಲ, ಬಡ್ಡಿ ಕೊಡಲು ಹಣ ಹೊಂದಿಸುತ್ತಿದ್ದರು. ಈಗ ಜನ ಯಾಕೋ ಹೆದರಿದಂತೆ ಕಾಣುತ್ತಿಲ್ಲ. ಇದು ಪರಸಪ್ಪನನ್ನು ಮತ್ತಷ್ಟು ಕೆರಳಿಸತೊಡಗಿತು.

ರಾತ್ರಿ ಕನಸು ಬಿದ್ದರೆ ಅದರಲ್ಲಿ ರೈತಸಂಘದ ಕರಪತ್ರವೇ ಪಟಪಟಿಸಿ ನಿದ್ದೆಗೆಡುತ್ತಿದ್ದ. ಬೆಳಗಾದರೆ ಎಂದಿನಂತೆ ಹಳ್ಳಿಗಳಿಗೆ ಸಾಲ ವಸೂಲು ಮಾಡಲು ಹೋಗೋದು ಈಗೀಗ ಕಿರಿಕಿರಿ ಅನಿಸತೊಡಗಿತ್ತು. ಜನ ಸುಮ್ಮನಿದ್ದರೂ ಅಪಹಾಸ್ಯ ಮಾಡಿದಂತೆ ತೋರುತ್ತಿತ್ತು. ತಲೆಯೊಳಗೆ ನೂರಾರು ಹುಳುಗಳು ಓಡಾಡಿದಂತೆನಿಸುತ್ತಿತ್ತು. ಇದಕ್ಕೆ ಏನಾದರೂ ಮಾಡಲೇಬೇಕೆಂದು ಮನಸೊಳಗೆ ಅಕಲು ಹಾಕತೊಡಗಿದ.

ಜನರಿಗೆ ಭಯ ಹುಟ್ಟಿಸಲು ಮಾಸ್ತಕಟ್ಟಿಯ ಒಬ್ಬ ರೈತನನ್ನು ನಾಪತ್ತೆ ಮಾಡಿದ. ಆದರೆ, ಭಯದ ಬದಲು ಈ ತಂತ್ರ ಪರಸಪ್ಪನಿಗೇ ತಿರುವುಮುರುವಾಯಿತು. ಮಾಸ್ತಕಟ್ಟಿಯ ಜನ ಹನುಮಸಾಗರ ಪೊಲೀಸ್ ಠಾಣೆಗೆ ಹೋಗಿ ಅಲ್ಲಿನ ಪಿಎಸ್‌ಐ ಹುಡುಗಿ ಎನ್ನುವವರಿಗೆ ಕಂಪ್ಲೆಂಟ್ ಕೊಟ್ಟರು. ರೈತಸಂಘದ ಕರಪತ್ರವನ್ನು ಈ ಮೊದಲೇ ಗಮನಿಸಿದ್ದ ಪಿಎಸ್‌ಐ, ಪರಸಪ್ಪನನ್ನು ಒದ್ದು ಜೈಲಿಗೆ ಹಾಕಿದ. ರೊಕ್ಕದ ಪ್ರಭಾವ ಇದ್ದುದರಿಂದ ಕೆಲವೇ ದಿನಗಳಲ್ಲಿ ಪರಸಪ್ಪ ಜೈಲಿನಿಂದ ಹೊರಬಂದ. ಆದರೆ, ಪರಸಪ್ಪ ಜೈಲಿಗೆ ಹೋಗಿಬಂದಿದ್ದು ಹಳ್ಳಿಗಳಲ್ಲೆಲ್ಲಾ ಗುಲ್ಲೆದ್ದು ’ಬೇಸಿ ಮಾಡ್ಯಾರ ನೋಡು ಅಂವಂಗ’ ಅಂತ ಜನ ಮಾತಾಡಿಕೊಂಡರು.

ನೆಲ್ಲೂರಿನಲ್ಲಿ ಸಾಲ ವಸೂಲಿಗೆ ಬಂದಾಗ ಲೆಕ್ಕದ ಪುಸ್ತಕ ಕಸಿದುಕೊಂಡು ಜನ ನಾಲ್ಕು ಹೊಡೆದು ಕಳಿಸಿದರು. ಅವತ್ತಿನಿಂದ ಪರಸಪ್ಪನಿಗೆ ಬುಗಿಲು ಹೊಕ್ಕಿತು. ಬಡ್ಡಿ, ಚಕ್ರಬಡ್ಡಿ ಬಿಟ್ಟು ಕೊಟ್ಟ ದುಡ್ಡನ್ನಷ್ಟೇ ವಿನಯದಿಂದ ಕೇಳತೊಡಗಿದ. ದಲಾಲಿ ಅಂಗಡಿಯವರ ಸಾಲ, ಸಾಲ ಕೊಟ್ಟ ಖಾಸಗಿ ವ್ಯಕ್ತಿಗಳು ರೈತರಿಗೆ ಕಿರುಕುಳ ಕೊಡೋದನ್ನು ನಿಲ್ಲಿಸತೊಡಗಿದರು. ರೈತಸಂಘದ ಕಾಳಜಿಯ ಬಗ್ಗೆ ಜನ ಮಾತಾಡುತ್ತ, ಸಂಘಟಿತರಾಗತೊಡಗಿದರು.

***

ಬೆಳೆಗಳು ಅಷ್ಟಕ್ಕಷ್ಟೆ ಬರುತ್ತಿದ್ದರಿಂದ ರೈತರಿಗೆ ವಿದ್ಯುತ್ ಬಿಲ್ ತುಂಬೋದು ತ್ರಾಸದಾಯಕವಾಗತೊಡಗಿತ್ತು. ಇದನ್ನೆಲ್ಲ ಮನಗಂಡ ರೈತ ಸಂಘ ಕರ ನಿರಾಕರಣೆ ಚಳವಳಿ ಹಮ್ಮಿಕೊಂಡಿತು. ಬೋರ್‌ಗಳಿಗೆ ಅಳವಡಿಸಿದ್ದ ಮೀಟರ್‌ಗಳನ್ನೆಲ್ಲ ಕಿತ್ತು ರೈತರು ಕೊಪ್ಪಳಕ್ಕೆ ಹೋಗಿ ಕೊಟ್ಟುಬಂದರು. ರೈತರ ಪ್ರಬಲ ವಿರೋಧ ಎದುರಿಸಬೇಕಾದುದರಿಂದ ವಿದ್ಯುತ್ ಬಿಲ್ ವಸೂಲಿ ಮಾಡಲು ಹಳ್ಳಿಗಳಿಗೆ ಬರುವುದಕ್ಕೆ ಹಿಂದೇಟು ಹಾಕತೊಡಗಿದರು. ಹದಿಮೂರು ವರ್ಷಗಳವರೆಗೆ ರೈತರು ಹೀಗೆ ವಿದ್ಯುತ್ ಬಿಲ್ ತುಂಬಲಿಲ್ಲ.

ರೈತ ಸಂಘ ಇದೇ ಹೊತ್ತಿನಲ್ಲಿ ಇಬ್ಬಾಗ ಆಯ್ತು. ನಂಜುಂಡಸ್ವಾಮಿ ಬಣ ಮತ್ತು ಪುಟ್ಟಣ್ಣಯ್ಯ ಬಣಗಳಾದ ಮೇಲೆ ನಂಜುಂಡಸ್ವಾಮಿ ರೋಣದಲ್ಲಿ ಬಂದು ಮೂರು ದಿನ ಉಳಿದರು. ರೋಣ ತಾಲ್ಲೂಕಿನ ರೈತರು ತಮ್ಮ ಜೊತೆಗಿರಬೇಕೆಂಬುದು ನಂಜುಂಡಸ್ವಾಮಿಯವರ ಹಂಬಲವಾಗಿತ್ತು. ಆದರೂ ರೋಣದಲ್ಲಿ ರೈತರು ಎರಡು ಬಣಗಳಾಗಿ ಒಡೆದುಹೋದರು.

ಕೂಡ್ಲೆಪ್ಪನವರು ನಂಜುಂಡಸ್ವಾಮಿ ಬಣದಲ್ಲಿ ಉಳಿದರು. ಅಂದಿನಿಂದ ನಂಜುಂಡಸ್ವಾಮಿಯವರು ಕೂಡ್ಲೆಪ್ಪನವರಿಗೆ ರೈತ ಚಳವಳಿಯ ಮಾರ್ಗದರ್ಶನ ಮಾಡತೊಡಗಿದರು. ನಂಜುಂಡಸ್ವಾಮಿಯವರ ಮೂಲಕ ಇವರಿಗೆಲ್ಲ ಪೆರಿಯಾರ್ ಆಲೋಚನೆ ಪರಿಚಯ ಆಯ್ತು. ರೈತರು ತಿಳಿದುಕೊಳ್ಳಬೇಕಾದ ಕಾನೂನುಗಳ ಬಗೆಗಿನ ಸಾಹಿತ್ಯವನ್ನು ರೈತ ಮುಖಂಡರಿಗೆ ತಲುಪಿಸುತ್ತಿದ್ದರು. ಕರಪತ್ರಗಳು ಕೂಡ ಹೊಸ ತಿಳಿವಳಿಕೆ ನೀಡುವುದರ ಜೊತೆಗೆ ಅರಿವನ್ನು ತಿದ್ದುವಂತಿರುತ್ತಿದ್ದವು. ಪ್ರಭುತ್ವದ ಹುನ್ನಾರಗಳನ್ನು ಬಹುಬೇಗನೆ ಗ್ರಹಿಸುವಂತಾಯಿತು. ಸೈದ್ಧಾಂತಿಕವಾಗಿ ಆಗ ಕೂಡ್ಲೆಪ್ಪನವರು ಗಟ್ಟಿಗೊಳ್ಳತೊಡಗಿದರು.

ಅದೆಷ್ಟು ಗಟ್ಟಿ ಎಂದರೆ ಅಧಿಕಾರಶಾಹಿಯನ್ನು ರಾಜಾರೋಷವಾಗಿ ವಿರೋಧಿಸುವುದನ್ನು, ನೇರವಾಗಿ ಮಾತಾಡುವುದನ್ನು ಕಲಿತರು. ಬಳಗೋಡದಲ್ಲಿ ಒಮ್ಮೆ ಟಿಸಿ ಸುಟ್ಟಿತ್ತು. ಕೆಇಬಿಯವರು ಟಿ.ಸಿ.ಹಾಕಲೇ ಇಲ್ಲ. ರೈತರು ಸಂಘಟಿತರಾಗಿ ಕೆಇಬಿಗೆ ಹೋಗಿ ಮುತ್ತಿಗೆ ಹಾಕಲು ನಿರ್ಧರಿಸಿದರು. ಆಗ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದರು. ಹದಿನಾರು ಎತ್ತಿನ ಚಕ್ಕಡಿಗಳೊಂದಿಗೆ ನೂರಾರು ರೈತರು ಕೆಇಬಿಯೊಳಗೆ ನುಗ್ಗಿದರು. ಆಗ ಅಲ್ಲಿದ್ದ ಸಿಪಿಐ ಒಬ್ಬ, ರೈತ ಮುಖಂಡ ಕೂಡ್ಲೆಪ್ಪನವರಿಗೆ ’ಚಕ್ಕಡಿ ಒಳ ಬಿಡಬೇಡ್ರಿ..’ ಅಂತ ಕೈ ಜಗ್ಗಾಡಿದ.

ಆಗ ಕೂಡ್ಲೆಪ್ಪನವರು ’ಏನಪ್ಪ ಇದನ್ನೇ ಓದಿದ್ದಾ ನೀನು. ನಾವು ಏನ್ ಮಾಡ್ತಿದಿವಿ ಅನ್ನೋದೇನಾದ್ರು ಅರಿವಿದೆಯಾ ನಿನಗೆ. ದಾಂಧಲೆ ಮಾಡೋಕೆ ಬಂದಿದಿವಾ ನಾವು. ಟಿ.ಸಿ. ಸುಟ್ಟು ರೈತರ ಬೆಳೆಗೆ ನೀರು ಇಲ್ದ ಒಣಗಾಕ ಹತ್ಯಾವು. ಬೆಳಿ ಬರದಿದ್ರೆ ನಾಳೆ ಏನು ಊಟ ಮಾಡ್ತಿರಿ. ರೈತರೇನು ಶ್ರೀಮಂತರಲ್ಲ. ಅವ್ರಿಗೆ ನಿಮ್ಮಂಗ ತಿಂಗಳಾ ತಿಂಗಳ ತಪ್ಪದ ಪಗಾರ ಬರೋದಿಲ್ಲ. ನೀವೆಲ್ಲ ತಿಳಿವಳಿಕೆ ಇರೋರು. ಇದ್ನೆಲ್ಲಾ ನಿಮಗ ಹೇಳಬೇಕೇನು..’ ಅಂತ ಮುಖಕ್ಕೆ ಹೊಡೆದಂಗೆ ಹೇಳಿದರು.

ಇವರ ಮಾತುಗಳಿಂದ ಸಿಪಿಐಗೆ ಜ್ಞಾನೋದಯವಾಗಿರಬೇಕು. ಮರು ಮಾತಾಡದೇ ಅಲ್ಲಿಂದ ಕಾಲ್ಕಿತ್ತು ತಾಸು ಎರಡು ತಾಸು ಆಫೀಸಿನಲ್ಲಿ ಕುಳಿತವರು ಮತ್ತೆ ಹೊರಗೆ ಬರಲೇ ಇಲ್ಲ. ಬದಲಾಗಿ ರೈತರಿಗೆಲ್ಲ ಸಪೋರ್ಟ್ ಮಾಡುತ್ತ, ಅವರಿಗೆಲ್ಲ ನಾಲ್ಕೈದು ದಿನ ಊಟಕ್ಕೆ ವ್ಯವಸ್ಥೆ ಮಾಡಿದ. ರೈತರು ಅಲ್ಲೇ ಕೆಇಬಿ ಆವರಣದಲ್ಲಿ ಮೇವು ಹಾಕಿ ಎತ್ತುಗಳನ್ನು ಕಟ್ಟಿದ್ದರು.

ಕೊನೆಗೆ ರೈತರೊಂದಿಗೆ ಮಾತಾಡಲು ಎಸ್‌ಪಿ ಬರಬೇಕಾಯಿತು. ರಾಜೀ ಮಾಡಲು ನೋಡಿದರು. ’ಎಲ್ಲ ರೈತರು ನೂರು ರೂಪಾಯಿ ತುಂಬ್ರಿ. ಟಿಸಿ ಕೊಡಿಸೋ ವ್ಯವಸ್ಥೆ ಮಾಡೋಣು..’ ಅಂದ್ರು.

ಕೂಡ್ಲೆಪ್ಪನವರು ’ಒಂದು ರೂಪಾಯಿ ತುಂಬೋದಿಲ್ಲ. ರೈತರು ಕಷ್ಟದಾಗಿದಾರ. ನಯಾಪೈಸೆ ಬೆಳೆ ಬಂದಿಲ್ಲ. ರೈತರು ರೊಕ್ಕ ಎಲ್ಲಿಂದ ಕೊಡಬೇಕು. ಅವ್ರಿಗೆಲ್ಲ ಊಟುದ್ದ ಚಿಂತಿ ಆಗೇತಿ. ಇಂತಾದ್ರಾಗ ಟಿಸಿ ಕೊಡ್ಲಿಲ್ಲಂದ್ರ ಹೆಂಗ. ಟಿಸಿ ಕೊಡೋವರೆಗೂ ನಾವು ಪ್ರತಿಭಟನೆ ಮಾಡ್ತಿವಿ..’ ಅಂದರು.

ಆಗ ರೈತರೆಲ್ಲ ’ರೈತ ವಿರೋಧಿ ಸರಕಾರಕ್ಕೆ ಧಿಕ್ಕಾರ’, ’ರೈತ ವಿರೋಧಿ ಅಧಿಕಾರಿಗಳಿಗೆ ಧಿಕ್ಕಾರ’, ಅಂತ ಘೋಷಣೆ ಹಾಕತೊಡಗಿದರು. ಹೋರಾಟಕ್ಕೆ ಮಣಿದ ಎಸ್‌ಪಿ ಕೆಇಬಿ ಅಧಿಕಾರಿಗಳ ಜೊತೆ ಚರ್ಚಿಸಿ ಟಿಸಿ ಕಳಿಸಲು ಒಪ್ಪಿಸಿದರು. ರೈತರು ಹೋರಾಟ ಹಿಂತೆಗೆದುಕೊಂಡರು. ಮರುದಿನವೇ ಬಳಗೋಡಕ್ಕೆ ಟಿಸಿ ಬಂತು.

ಟಿ.ಎಸ್.ಗೊರವರ

ಟಿ.ಎಸ್. ಗೊರವರ
ಗದಗ ಜಿಲ್ಲೆಯವರಾದ ಟಿ.ಎಸ್. ಗೊರವರ, ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಹೊರತಂದಿದ್ದಾರೆ. ಸದ್ಯ ’ಸಂಗಾತ’ ತೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...