ಕನ್ವರ್ ಯಾತ್ರಿಗಳು ಸಾಗುವ ಮಾರ್ಗದಲ್ಲಿ ಬರುವ ಎಲ್ಲಾ ಹೋಟೆಲ್ ಮತ್ತು ಅಂಗಡಿಗಳು ತಮ್ಮ ಮಾಲೀಕರು ಮತ್ತು ಸಿಬ್ಬಂದಿಯ ಹೆಸರುಗಳನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಇತ್ತೀಚೆಗೆ ಆದೇಶಿಸಿತ್ತು. ಈ ಆದೇಶ ಭಾರೀ ವಿರೋಧಕ್ಕೆ ಕಾರಣವಾಗಿತ್ತು.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಹೊರಡಿಸಲಾಗಿದೆ ಎಂಬ ಎರಡೂ ರಾಜ್ಯ ಸರ್ಕಾರಗಳ ಆದೇಶ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಮತ್ತು ಇತರರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠವು, ಜುಲೈ 22ರಂದು ಸರ್ಕಾರಗಳ ಆದೇಶವನ್ನು ತಡೆ ಹಿಡಿದಿತ್ತು.
ಎಪಿಸಿಆರ್ ಅರ್ಜಿಗೆ ಸಂಬಂಧಿಸಿ ಮಧ್ಯಂತರ ಆದೇಶ ನೀಡುವ ವೇಳೆ ನ್ಯಾಯಮೂರ್ತಿ ಎಸ್ವಿಎನ್ ಭಟ್ಟಿ ಅವರು ಮೌಖಿಕವಾಗಿ ತನ್ನ ಅನುಭವೊಂದನ್ನು ಬಿಚ್ಚಿಟ್ಟಿದ್ದರು. ಕೆಲ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ನ್ಯಾಯಮೂರ್ತಿಗಳ ಹೇಳಿಕೆಯನ್ನು ತಿರುಚಿ, ಅದಕ್ಕೆ ಕೋಮು ಬಣ್ಣ ಬಳಿದಿದ್ದಾರೆ.
ಕಾನೂನು ಸಂಬಂಧಿತ ಸುದ್ದಿಗಳ ವೆಬ್ಸೈಟ್ಗಳಾದ ಲೈವ್ ಲಾ ಮತ್ತು ಬಾರ್ & ಬೆಂಚ್ ನ್ಯಾಯಮೂರ್ತಿಗಳ ಹೇಳಿಕೆಯನ್ನು ವರದಿ ಮಾಡಿತ್ತು. ಅದರಲ್ಲಿ “ಕೇರಳದ ಒಂದು ನಗರದಲ್ಲಿ ಹಿಂದೂಗಳು ನಡೆಸುವ ವೆಜ್ ಹೋಟೆಲ್ ಒಂದಿದೆ, ಮುಸ್ಲಿಮರ ನಡೆಸುವ ವೆಜ್ ಹೋಟೆಲ್ ಒಂದಿದೆ. ಆ ರಾಜ್ಯದ ನ್ಯಾಯಾಧೀಶನಾಗಿದ್ದಾಗ ನಾನು, ಮುಸಲ್ಮಾನರು ನಡೆಸುತ್ತಿದ್ದ ಹೋಟೆಲ್ಗೆ ಹೋಗುತ್ತಿದ್ದೆ. ಅಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಸ್ವಚ್ಚತೆಯನ್ನು ಕಾಯ್ದುಕೊಳ್ಳುತ್ತಿದ್ದರು” ಎಂದು ನ್ಯಾಯಮೂರ್ತಿ ಹೇಳಿದ್ದರು.
ಈ ಹೇಳಿಕೆಯನ್ನು ತಿರುಚಿದ ಕೆಲ ಬಲಂಥೀಯ ಎಕ್ಸ್ ಬಳಕೆದಾರರು ” ಹಾಗಾದರೆ, ಮುಸ್ಲಿಂ ಮಾಲೀಕತ್ವದ ರೆಸ್ಟೋರೆಂಟ್ಗಳು ಮಾತ್ರ ಉತ್ತಮ ಸ್ವಚ್ಚತೆ ಹೊಂದಿದೆ. ಹಿಂದೂಗಳು ಸ್ವಚ್ಚ ಇಲ್ಲ ಎಂದರ್ಥವೇ?” ಎಂದು ಬರೆದುಕೊಂಡಿದ್ದರು.
ಸದಾ ಕೋಮುದ್ವೇಷದ ಸುದ್ದಿಗಳನ್ನು ಹಂಚಿಕೊಳ್ಳುವ ಮಿ.ಸಿನ್ಹಾ (@MrSinha_) ಎಂಬ ಎಕ್ಸ್ ಬಳಕೆದಾರ ಲೈವ್ ಲಾ ಸುದ್ದಿಯ ಸ್ಕ್ರೀನ್ ಶಾಟ್ ಹಂಚಿಕೊಂಡು “ಹಾಗಾದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪ್ರಕಾರ, ಹಿಂದೂಗಳು ತಮ್ಮ ರೆಸ್ಟೋರೆಂಟ್ಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು (ಬಹುಶಃ ನೈರ್ಮಲ್ಯ) ಕಾಪಾಡುತ್ತಿಲ್ಲ.. ಮುಸ್ಲಿಮರು ಕಾಪಾಡುತ್ತಿದ್ದಾರಾ?”

“ಅಲ್ಲದೆ, ಅವರು ಮುಸ್ಲಿಮರ ರೆಸ್ಟೋರೆಂಟ್ಗಳಿಗೆ ಆದ್ಯತೆ ನೀಡುವುದರಿಂದ, ಎಲ್ಲಾ ಹಿಂದೂಗಳು ಅದೇ ರೀತಿ ಮಾಡಬೇಕೆಂದು ಬಯಸುತ್ತಿದ್ದಾರಾ? ಇದು ಎಲ್ಲಾ ಹಿಂದೂಗಳನ್ನು ಅನೈರ್ಮಲ್ಯ ಎಂದು ಘೋಷಿಸಿ ಅವರ ವಿರುದ್ಧ ಬಹಿಷ್ಕಾರದ ಕರೆ ಕೊಟ್ಟಂತೆ ಅಲ್ಲವೇ?” ಎಂದು ಬರೆದುಕೊಂಡಿದ್ದರು.
ಅಜೀತ್ ಬಾರ್ತಿ (@ajeetbharti) ಎಂಬ ಮತ್ತೊಬ್ಬ ಎಕ್ಸ್ ಬಳಕೆದಾರ ಕೂಡ ಲೈವ್ ಲಾ ಸುದ್ದಿಯ ಸ್ಕ್ರೀನ್ ಶಾಟ್ ಹಂಚಿಕೊಂಡು ” ವಾವ್ ಭಟ್ಟಿ ಜೀ! ಅವರ ವೈಯಕ್ತಿಕ ದೃಷ್ಟಿಕೋನಗಳು ಮುಸ್ಲಿಮರು ನಡೆಸುತ್ತಿರುವ ಪ್ರಪಂಚದ ಪ್ರತಿಯೊಂದು ರೆಸ್ಟೋರೆಂಟ್ ಅನ್ನು ಪ್ರತಿನಿಧಿಸುತ್ತವೆ. ಅಂತಹ ನ್ಯಾಯಾಧೀಶರು ಇದ್ದಾಗ ತೀರ್ಪು ಕೂಡ ಅಂತರಾಷ್ಟ್ರೀಯ ಗುಣಮಟ್ಟದಿಂದ ಕೂಡಿರುತ್ತದೆ. ನಾಲ್ಕು ವಿನಾಯಿತಿಗಳನ್ನು ತನ್ನಿ, ಅದನ್ನು ಪೀಠದಿಂದ ಹೇಳಿ, ಅಲ್ಲಿಗೆ ಮುಗೀತು” ಎಂದು ಬರೆದುಕೊಂಡಿದ್ದರು.
ಇವರಿಬ್ಬರೇ ಅಲ್ಲದೆ ಇನ್ನೂ ಅನೇಕರು ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದರು.
ಫ್ಯಾಕ್ಟ್ಚೆಕ್ : ಅಸಲಿಗೆ ನ್ಯಾಯಮೂರ್ತಿಗಳು ಕೇರಳದ ಮುಸ್ಲಿಂ ಮಾಲೀಕತ್ವದ ರೆಸ್ಟೋರೆಂಟ್ ಒಂದರ ತಮ್ಮ ಅನುಭವವನ್ನು ಉದಾಹರಣೆಯಾಗಿ ಹೇಳಿದ್ದರು ಅಷ್ಟೆ. “ನಾನು ಹೋಗುತ್ತಿದ್ದ ಹೋಟೆಲ್ ಮಾಲೀಕ ದುಬೈನಿಂದ ಹಿಂದಿರುಗಿದವರು. ಆದ್ದರಿಂದ ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಸ್ವಚ್ಚತೆಯನ್ನು ಅವರು ಕಾಪಾಡಿಕೊಂಡಿದ್ದರು” ಎಂದಿದ್ದರು. ಈ ಮೂಲಕ ಮುಸ್ಲಿಂ ಮಾಲೀಕತ್ವದ ಹೋಟೆಲ್, ರೆಸ್ಟೋರೆಂಟ್ಗಳ ಬಗ್ಗೆ ಜನರಿಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದರು.
ನ್ಯಾಯಮೂರ್ತಿಗಳು ಎಲ್ಲೂ “ಮುಸ್ಲಿಮರ ರೆಸ್ಟೋರೆಂಟ್, ಹೋಟೆಲ್ಗಳು ಮಾತ್ರ ಸ್ವಚ್ಚತೆ ಮತ್ತು ಗುಣಮಟ್ಟದಿಂದ ಕೂಡಿರುತ್ತದೆ. ಹಿಂದೂಗಳು ಆ ರೀತಿ ಇರುವುದಿಲ್ಲ” ಎಂದು ಹೇಳಿಲ್ಲ. ಹಿಂದೂಗಳ ಹೋಟೆಲ್ಗಳನ್ನು ಬಹಿಷ್ಕರಿಸುವ ಹೇಳಿಕೆಯನ್ನೂ ಅವರು ನೀಡಿಲ್ಲ.
ಈ ಕುರಿತು ಜುಲೈ 22ರಂದು ವಾರ್ತಾಭಾರತಿ ವೆಬ್ಸೈಟ್ ಪ್ರಕಟಿಸಿದ ಸುದ್ದಿಯ ಸ್ಕ್ರೀನ್ ಶಾಟ್ ಕೆಳಗಿದೆ

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕನ್ವರ್ ಯಾತ್ರೆ ಮಾರ್ಗದ ಹೋಟೆಲ್ ಮತ್ತು ಅಂಗಡಿಗಳು ತಮ್ಮ ಮಾಲೀಕರು ಮತ್ತು ಸಿಬ್ಬಂದಿಯ ಹೆಸರು ಪ್ರದರ್ಶಿಸಬೇಕು ಎಂಬ ಆದೇಶ ನೀಡಿರುವುದರ ಹಿಂದೆ ಮುಸ್ಲಿಮರನ್ನು ಗುರಿಯಾಗಿಸುವ ಉದ್ದೇಶ ಇದೆ ಎಂಬ ಆರೋಪ ಕೇಳಿ ಬಂದಿತ್ತು.
ಹೆಸರು ಪ್ರದರ್ಶಿಸಿದರೆ ಹೋಟೆಲ್ ಮಾಲೀಕರು ಮತ್ತು ಸಿಬ್ಬಂದಿ ಹಿಂದೂಗಳೋ? ಮುಸ್ಲಿಮರೋ ಎಂದು ಗೊತ್ತಾಗುತ್ತದೆ. ಈ ಮೂಲಕ ಕನ್ವರ್ ಯಾತ್ರಿಗಳು ಹಿಂದೂ ಹೋಟೆಲ್ಗಳನ್ನು ಗುರುತಿಸಿ ಅಲ್ಲಿಗೆ ಹೋಗುತ್ತಾರೆ. ಮುಸ್ಲಿಮರನ್ನು ಬಹಿಷ್ಕರಿಸುತ್ತಾರೆ ಎಂಬ ಕೆಟ್ಟ ಉದ್ದೇಶ ಸರ್ಕಾರದ ಆದೇಶದ ಹಿಂದೆ ಎಂದು ಅನೇಕರು ದೂರಿದ್ದರು.
ಹಾಗಾಗಿ, ವಿಚಾರಣೆ ವೇಳೆ “ಮುಸ್ಲಿಮರ ಹೋಟೆಲ್ ಅಂಗಡಿಗಳಲ್ಲಿ ಸ್ವಚ್ಚತೆ, ಗುಣಮಟ್ಟ ಎಲ್ಲವೂ ಇದೆ. ನಾನೂ ಮುಸ್ಲಿಮರ ವೆಜ್ ಹೋಟೆಲ್ಗಳಿಗೆ ಹೋಗುತ್ತಿದ್ದೆ” ಎಂದು ನ್ಯಾಯಮೂರ್ತಿ ಭಟ್ಟಿ ಅವರು ಸಾಂಧರ್ಬಿಕವಾಗಿ ಹೇಳಿದ್ದರು. ಆದರೆ, ಅದನ್ನು ತಿರುಚಿ, “ಮುಸ್ಲಿಮರ ಹೋಟೆಲ್ ಮಾತ್ರ ಸ್ವಚ್ಚತೆ ಮತ್ತು ಗುಣಮಟ್ಟದಿಂದ ಕೂಡಿದೆ. ಹಿಂದೂಗಳ ಹೋಟೆಲ್ ಸ್ವಚ್ಚತೆಯಿಂದ ಕೂಡಿಲ್ಲ ಎಂಬರ್ಥದಲ್ಲಿ ನ್ಯಾಯಮೂರ್ತಿಗಳು ಹೇಳಿಕೆ ನೀಡಿದ್ದಾರೆ” ಎಂದು ತಪ್ಪು ದಾರಿಗೆಳೆಯುವ ಸುದ್ದಿ ಹಬ್ಬಿಸಲಾಗಿದೆ.


