Homeಕರ್ನಾಟಕಬಿಜೆಪಿ ಸೃಷ್ಟಿಸಿದ ನಕಲಿ ಇತಿಹಾಸ: ಇಲ್ಲಿ ಉರಿಗೌಡ, ನಂಜೇಗೌಡ; ಉತ್ತರ ಭಾರತದಲ್ಲಿ ಗುರ್ಜರ್‌ ರಾಣಿ

ಬಿಜೆಪಿ ಸೃಷ್ಟಿಸಿದ ನಕಲಿ ಇತಿಹಾಸ: ಇಲ್ಲಿ ಉರಿಗೌಡ, ನಂಜೇಗೌಡ; ಉತ್ತರ ಭಾರತದಲ್ಲಿ ಗುರ್ಜರ್‌ ರಾಣಿ

- Advertisement -
- Advertisement -

“ಟಿಪ್ಪು ಸುಲ್ತಾನರನ್ನು ಕೊಂದಿದ್ದು ಉರಿಗೌಡ, ದೊಡ್ಡ ನಂಜೇಗೌಡ” ಎಂದು ಕರ್ನಾಟಕದಲ್ಲಿ ನಕಲಿ ಇತಿಹಾಸವನ್ನು ಸೃಷ್ಟಿಸುತ್ತಿರುವಂತೆಯೇ, ಉತ್ತರಭಾರತದಲ್ಲಿ ಗುರ್ಜರ್ ಸಮುದಾಯವನ್ನು ಮುಖ್ಯವಾಗಿಟ್ಟುಕೊಂಡು ನಕಲಿ ಇತಿಹಾಸ ಕಟ್ಟುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವ ಕುರಿತು ‘ದಿ ಸ್ಕ್ರಾಲ್‌.ಇನ್‌’ ವರದಿ ಮಾಡಿದೆ.

ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಒಕ್ಕಲಿಗ ಸಮುದಾಯವನ್ನು ವೋಟ್‌ಬ್ಯಾಂಕ್ ಮಾಡಿಕೊಳ್ಳಲು ಕರ್ನಾಟಕದಲ್ಲಿ ವಿಫಲ ಯತ್ನ ಮಾಡುತ್ತಿರುವಂತೆಯೇ ಉತ್ತರದಲ್ಲಿ ಗುರ್ಜರ್‌‌ ಸಮುದಾಯವನ್ನು ಟಾರ್ಗೆಟ್‌ ಮಾಡಿಕೊಂಡು ನಕಲಿ ಇತಿಹಾಸ ಸೃಷ್ಟಿಸಲು ಪ್ರಯತ್ನಿಸಲಾಗಿದೆ. ಇತಿಹಾಸವನ್ನು ತಿರುಚಿ ನಿರ್ದಿಷ್ಟ ಸಮುದಾಯವನ್ನು ಸೆಳೆಯುವ ಹೊಸ ತಂತ್ರಗಾರಿಕೆಯನ್ನು ಸಂಘಪರಿವಾರ ಮಾಡುತ್ತಿದೆ.

ಕರ್ನಾಟಕದಲ್ಲಿ ಉರಿಗೌಡ, ದೊಡ್ಡನಂಜೇಗೌಡರನ್ನು ಪ್ರಸ್ತಾಪಿಸುತ್ತಿರುವಂತೆಯೇ ಉತ್ತರ ಭಾರತದಲ್ಲಿ ರಾಜಾ ಸುಹೇಲ್‌ದೇವ್ ಮತ್ತು ಗುರ್ಜರ್ ವೀರ ಮಹಿಳೆ ರಾಮ್‌ಪ್ಯಾರಿ ಗುರ್ಜರ್‌ ಎಂಬ ಪಾತ್ರಗಳನ್ನು ಚುನಾವಣಾ ರಂಗಕ್ಕೆ ಎಳೆದು ತರಲಾಗಿದೆ.

ಈ ಹಲವು ಪ್ರಕರಣಗಳಲ್ಲಿ ಬಿಜೆಪಿ ಹೇಳುವಂತೆ ಈ ವೀರರು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಆದಾಗ್ಯೂ ಹಿಂದುತ್ವ ಪಕ್ಷವು ಅಂತಹ ವಾಸ್ತವಿಕ ಸತ್ಯಗಳನ್ನು ಅಲ್ಲಗಳೆಯುತ್ತಲೇ ಬಂದಿದೆ.

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಗೆ ಮೋದಿ ಆಗಮಿಸಲಿದ್ದ ಹಿನ್ನೆಲೆಯಲ್ಲಿ ‘ಕಾಲ್ಪನಿಕ ವ್ಯಕ್ತಿ’ಗಳಾದ ಉರಿಗೌಡ, ನಂಜೇಗೌಡರ ಹೆಸರಿನ ಮಹಾದ್ವಾರವನ್ನು ತೆರೆದು ನಗೆಪಾಟಲಿಗೀಡಾಯಿತು. ಸ್ಥಳೀಯರು, ವಿರೋಧ ಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಹಾದ್ವಾರವನ್ನು ತೆರವು ಮಾಡಲಾಯಿತು. ಇಷ್ಟೆಲ್ಲ ಆದರೂ ಬಿಜೆಪಿ ನಾಯಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, “ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು” ಎಂದು ಬಿಂಬಿಸುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ‘ಟಿಪ್ಪು ನಿಜಕನಸುಗಳು’ ಎಂಬ ನಾಟಕವನ್ನು ರಚಿಸಿ, ಅಲ್ಲಿ ಜಾತಿ ಜಾತಿಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಯಾವುದೇ ದಾಖಲೆಗಳಿಲ್ಲದೆ, ಸುಳ್ಳಿನ ನಾಟಕ ಕಟ್ಟಿ ಜಾತಿ ರಾಜಕಾರಣ ಮಾಡಲು ಮುಂದಾಗಿರುವುದನ್ನು ಜನರು ಗುರುತಿಸಲಾರಂಭಿಸಿದ್ದಾರೆ.

ಒಬ್ಬ ರಾಜಪ್ರಭುತ್ವ ಕಾಲದ ಮುಸ್ಲಿಂ ಸುಲ್ತಾನನನ್ನು ವರ್ತಮಾನದಲ್ಲಿ ನಿಲ್ಲಿಸಿ ಆತ ಹಿಂದೂ ವಿರೋಧಿಯಾಗಿದ್ದ, ಒಕ್ಕಲಿಗರ, ಚಿತ್ರದುರ್ಗದ ನಾಯಕರ, ಕ್ರಿಶ್ಚಿಯನ್ನರ, ಕೊಡವರ, ಬ್ರಾಹ್ಮಣರ ಹಾಗೂ ಕನ್ನಡದ ವಿರೋಧಿಯಾಗಿದ್ದ. ಟಿಪ್ಪುವನ್ನು ಬೆಂಬಲಿಸುವವರು ಇವರೆಲ್ಲರ ವಿರೋಧಿ ಎಂಬುದನ್ನು ಸುಳ್ಳುಸುಳ್ಳೇ ಸಾಧಿಸುವುದು ಇಲ್ಲಿನ ಉದ್ದೇಶ. ಕೃತಿಯಲ್ಲಿ ಮತ್ತೆಮತ್ತೆ ಪುನರಾವರ್ತಿತವಾಗುವ ಜಾತಿ ಉದ್ದೇಶಿತ ಸಾಲುಗಳೇ ಇದನ್ನು ಮಾರ್ದನಿಸುತ್ತದೆ. ಇದು ಹಿಂದೂ ರಾಷ್ಟ್ರ, ಮುಸ್ಲಿಮರು ದ್ವಿತೀಯ ದರ್ಜೆಯಲ್ಲಿ ಬದುಕಬೇಕು ಎಂಬ ಸಂವಿಧಾನ ವಿರೋಧಿ ಆಶಯವನ್ನು ಅಡ್ಡಂಡ ಕಾರ್ಯಪ್ಪ ಇಲ್ಲಿ ಪ್ರತಿಪಾದಿಸಿದ್ದರು. ಉರಿಗೌಡ, ದೊಡ್ಡ ನಂಜೇಗೌಡ ಎಂಬವರು ಟಿಪ್ಪುವನ್ನು ಕೊಂದರು ಎಂದು ನಾಟಕದ ಮೂಲಕ ಪ್ರಚಾರ ಮಾಡಿದರು. (ನಾಟಕದ ವಿಮರ್ಶೆಯನ್ನು ಓದಲು ‘ಇಲ್ಲಿ’ ಕ್ಲಿಕ್ ಮಾಡಿರಿ.)

ಆದರೆ, ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳು ನಿಜವಾಗಿಯೂ ಅಸ್ತಿತ್ವದಲ್ಲಿ ಇಲ್ಲ. ಒಕ್ಕಲಿಗ ಮತದಾರರನ್ನು ಸೆಳೆಯಲು ಬಿಜೆಪಿಯು ಅವರನ್ನು ಸೃಷ್ಟಿಸಿದೆ ಎಂದು ಐತಿಹಾಸ ತಜ್ಞರು ಹೇಳುತ್ತಾರೆ. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷರೊಂದಿಗೆ ಹೋರಾಡುವಾಗ ಟಿಪ್ಪುವಿನ ಮರಣವಾಗಿದೆ ಎಂದು ಇತಿಹಾಸ ಕೃತಿಗಳು ಹೇಳುತ್ತವೆ.

“ಬಿಜೆಪಿಯು ಸಮುದಾಯ ಆಧಾರಿತ ಪ್ರಚಾರ ಮಾಡಿ ಮತಗಳನ್ನು ಪಡೆಯಲು ಈ ಎರಡು ಪಾತ್ರಗಳು ಮತ್ತು ಹೆಸರುಗಳನ್ನು ಸೃಷ್ಟಿಸಿದೆ ಎಂದು ನನಗೆ 100% ಖಚಿತವಾಗಿದೆ” ಎಂದು ಇತಿಹಾಸಕಾರ ಪ್ರೊ.ಪಿ.ವಿ.ನಂಜರಾಜ ಅರಸ್ ಹೇಳುತ್ತಾರೆ.

ಗುರ್ಜರ್‌ ಟಾರ್ಗೆಟ್‌

ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳ ರೀತಿಯಲ್ಲಿಯೇ ಬಿಜೆಪಿಯು ಉತ್ತರ ಭಾರತದಲ್ಲಿ ನಿರ್ದಿಷ್ಟ ಜಾತಿಗಳಿಗೆ ಸೇರಿದ ಮಧ್ಯಕಾಲೀನ ವ್ಯಕ್ತಿಗಳನ್ನು ಮುನ್ನೆಲೆಗೆ ತಂದಿದೆ.

ಬಿಜೆಪಿಯ ಮಾಜಿ ನಾಯಕ, ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರು, “ಗುರ್ಜರ್ ಹೋರಾಟಗಾರ್ತಿ ರಾಮ್‌ಪ್ಯಾರಿ ಗುರ್ಜರ್‌ ಮತ್ತು ಟರ್ಕಿಯ ಆಕ್ರಮಣಕಾರ ತೈಮೂರ್ ವಿರುದ್ಧದ ಹೋರಾಟ”ದ ಬಗ್ಗೆ ಪ್ರಸ್ತಾಪಿಸಿದ್ದಾರೆ.

“ಮಧ್ಯಕಾಲೀನ ಭಾರತದಲ್ಲಿ ಮೀರತ್ ಮತ್ತು ಹರಿದ್ವಾರದ ನಡುವಿನ ಪ್ರದೇಶದಲ್ಲಿ, ಧೈರ್ಯಶಾಲಿ ಮಹಿಳೆ ರಾಂಪ್ಯಾರಿ ಗುರ್ಜರ್ 40,000 ಜನರ ಸೈನ್ಯವನ್ನು ಕಟ್ಟಿದರು. ತೈಮೂರ್ ವಿರುದ್ಧ ಹೋರಾಡಿದರು” ಎಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದನಕರ್‌ ಹೇಳಿದ್ದಾರೆ.

ಜನವರಿಯಲ್ಲಿ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ರಾಮಪ್ಯಾರಿ ಗುರ್ಜರ್‌ ಶೌರ್ಯವನ್ನು ಹೊಗಳಿದ್ದರು. ಅನೇಕ ರಾಜ್ಯಗಳಲ್ಲಿ ಇತರ ಹಿಂದುಳಿದ ವರ್ಗದಲ್ಲಿನ ಗುರ್ಜರ್ ಸಮುದಾಯವನ್ನು ಗುರಿಯಾಗಿಸಿಕೊಂಡು ರಾಮಪ್ಯಾರಿ ಗುರ್ಜರ್‌ ಕುರಿತು ಮಾತನಾಡಲಾರಂಭಿಸಿದ್ದಾರೆ.

“ರಾಷ್ಟ್ರ ಮತ್ತು ಸಂಸ್ಕೃತಿಯ ಸೇವೆಯಲ್ಲಿ ಗುರ್ಜರ್ ಸಮುದಾಯದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಅಪಾರ ಕೊಡುಗೆಯನ್ನು ಈ ಇತಿಹಾಸ ನಮಗೆ ತಿಳಿಸುತ್ತದೆ” ಎಂದು ಮೋದಿ ಬಣ್ಣಿಸಿದ್ದರು.

“ಇಂತಹ ಅಸಂಖ್ಯಾತ ಹೋರಾಟಗಾರರು ನಮ್ಮ ಇತಿಹಾಸದಲ್ಲಿ ಅರ್ಹವಾದ ಸ್ಥಾನವನ್ನು ಪಡೆಯಲು ಸಾಧ್ಯವಾಗದಿರುವುದು ದೇಶದ ದೌರ್ಭಾಗ್ಯ. ಆದರೆ ಹೊಸ ಭಾರತವು ಕಳೆದ ದಶಕಗಳ ಈ ತಪ್ಪುಗಳನ್ನು ಸರಿಪಡಿಸುತ್ತಿದೆ” ಎಂದು ತಿಳಿಸಿದ್ದರು.

ರಾಮ್‌ಪ್ಯಾರಿ ಗುರ್ಜರ್‌ ಅವರ ಶೌರ್ಯದ ಬಗ್ಗೆ ಬಂದಿರುವ ಈ ಕತೆಯು 1398ರ ಯುದ್ಧದ ಬಗ್ಗೆ ಉಲ್ಲೇಖಿಸುತ್ತವೆ. ರಾಮ್‌ಪ್ಯಾರಿ ಗುರ್ಜರ್ ಅವರಿಗೆ ಸೇರಿದ್ದ ಮಹಾಪಂಚಾಯತ್‌ ಸೈನ್ಯದ ಡೆಪ್ಯುಟಿ ಜನರಲ್ ಹರ್ವೀರ್ ಸಿಂಗ್ ಗುಲಿಯಾ ಎಂಬವರು, ತೈಮೂರ್ ಅನ್ನು ಈಟಿಯಿಂದ ಹೊಡೆದನೆಂದು ಪ್ರತಿಪಾದಿಸಲಾಗಿದೆ. ಆ ಹೋರಾಟದಲ್ಲಿ ತೈಮೂರ್‌ ಹತನಾದನು ಎಂದು ಈ ಕಥೆಯ ಮೂಲಕ ಹೇಳಲಾಗುತ್ತಿದೆ.

ಇದನ್ನೂ ಓದಿರಿ: ಟಿಪ್ಪು ಹಾಸನಕ್ಕೆ ”ಕೈಮಾಬಾದ್” ಹೆಸರಿಟ್ಟಿದ್ದ: ಉರಿಗೌಡ, ನಂಜೇಗೌಡ ಬಳಿಕ ಮತ್ತೊಂದು ವಿವಾದ ಹುಟ್ಟುಹಾಕಿದ ಸಿಟಿ ರವಿ

ಆದರೆ ಇತಿಹಾಸಕಾರರು ತಿಳಿಸುವುದೇ ಬೇರೆ. “1405ರಲ್ಲಿ ಚೀನಾದ ಮಿಂಗ್ ಸಾಮ್ರಾಜ್ಯದ ವಿರುದ್ಧ ಮಿಲಿಟರಿ ಕಾರ್ಯಾಚರಣೆಯಲ್ಲಿದ್ದಾಗ ತೈಮೂರ್‌‌, ಕಠಿಣ ಚಳಿಗಾಲದ ನಡುವೆ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದನು” ಎಂದು ಇತಿಹಾಸಕಾರರು ಹೇಳುತ್ತಾರೆ.

“[1398] ಯುದ್ಧದಲ್ಲಿ ತೈಮೂರ್ ಗಾಯಗೊಂಡನು. ವಾತಾವರಣದ ಪರಿಸ್ಥಿತಿ, ಆಯಾಸಗೊಂಡ ಸೈನ್ಯ ಮತ್ತು ಸೈನ್ಯದಲ್ಲಾದ ಅನೇಕ ಸಾವುಗಳ ಕಾರಣ ಈ ಪ್ರದೇಶದಿಂದ ಹೊರಗೆ ಹೊರಟನು ಎಂದು ನಮಗೆ ‘ಜಾಫರ್-ನಮಾ’ ಜೀವನ ಚರಿತ್ರೆಯಿಂದ ತಿಳಿಯುತ್ತದೆ” ಎಂದು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಮಧ್ಯಕಾಲೀನ ಭಾರತೀಯ ಇತಿಹಾಸ ಬೋಧಿಸುವ ಸಹಾಯಕ ಪ್ರಾಧ್ಯಾಪಕರಾದ ಮನಿಶಾ ಚೌಧರಿ ಸ್ಪಷ್ಟಪಡಿಸಿದ್ದಾರೆ.

“ಆದರೆ, ಆ ಯುದ್ಧದಲ್ಲಿ ಗಾಯಗೊಂಡು ತೈಮೂರ್‌ ಸಾವಿಗೀಡಾಗಿದ್ದಾನೆ ಎಂಬುದು ಅಸಂಭವವಾಗಿದೆ. ಏಕೆಂದರೆ ಅವರು ಮಧ್ಯಂತರ ಅವಧಿಯಲ್ಲಿ ತುಂಬಾ ಸಕ್ರಿಯರಾಗಿದ್ದನು ಎಂದು ನಮಗೆ ತಿಳಿದಿದೆ” ಎಂದಿದ್ದಾರೆ.

“ರಾಂಪ್ಯಾರಿ ಗುರ್ಜರ್ ಯುದ್ಧದಲ್ಲಿ ಹೋರಾಡಿದ್ದಾರೆ ಎಂಬುದರ ಕುರಿತು ಉಲ್ಲೇಖಗಳಿಲ್ಲ. ನಾವು ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಘಟನೆಗಳು ಮಾತ್ರ ಮುಖ್ಯ” ಎಂದು ಚೌದರಿ ತಿಳಿಸಿದ್ದಾರೆ.

(ಟಿಪ್ಪಣಿ: ಈ ವರದಿಯಲ್ಲಿ ಅನೇಕ ಅಂಶಗಳನ್ನು ‘ಸ್ಕ್ರಾಲ್‌.ಇನ್‌’ನಲ್ಲಿ ಪ್ರಕಟವಾಗಿರುವ ಲೇಖನದಿಂದ ಆಯ್ದು ಬಳಸಿಕೊಳ್ಳಲಾಗಿದೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...