”ಟಿಪ್ಪು ಹಾಸನಕ್ಕೆ ‘ಕೈಮಾಬಾದ್’ ಅಂತ ಹೆಸರು ಇಟ್ಟಿದ್ದನು” ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮತ್ತೊಂದು ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಇಂದು (ಮಾರ್ಚ್ 17) ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮಾತನಾಡಿದ ಸಿಟಿ ರವಿ, ”ಉರಿಗೌಡ, ನಂಜೇಗೌಡರು ಟಿಪ್ಪುನನ್ನು ಕೊಂದಿರುವುದು ಐತಿಹಾಸಿಕ ಸತ್ಯ. ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ”ಕೈಮಾಬಾದ್”, ಹಾಸನಕ್ಕೆ ಕೈಮಾಬಾತ್ ಎಂದು ಕರೆಯುವುದಕ್ಕೆ ಕುಮಾರಸ್ವಾಮಿಗೆ ಇಷ್ಟ ಇರಬಹುದು” ಎಂದು ಟಾಂಗ್ ಕೊಟ್ಟಿದ್ದಾರೆ.
”ಉರಿಗೌಡ ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಟಿಪ್ಪುವನ್ನು ಉರಿಗೌಡ ನಂಜೇಗೌಡ ಕೊಂದಿದ್ದು ಐತಿಹಾಸಿಕ ಸತ್ಯ. ಟಿಪ್ಪು ಹಾಸನವನ್ನ ಕೈಮಾಬಾದ್ ಎಂದು ಕರೆದಿದ್ದನು. ಕುಮಾರಸ್ವಾಮಿಗೂ ಹಾಸನವನ್ನು ಕೈಮಾಬಾದ್ ಎಂದು ಕರೆಯಲು ಇಷ್ಟವೇನು…?” ಎಂದು ಪ್ರಶ್ನೆ ಮಾಡಿದ್ದಾರೆ.
”ಈಗ ಒಂದುವೇಳೆ ಟಿಪ್ಪು ಮತ್ತು ಆತನ ಸಿದ್ದಾಂತ ಬದುಕಿದ್ದರೆ ಹಾಸನ ಕೈಮಾಬಾತ್ ಆಗಿರುತ್ತಿತ್ತು. ಟಿಪ್ಪು ಬದುಕಿದ್ದರೇ ಯಾರ್ಯಾರ ಕತೆ ಏನಾಗುತ್ತಿತ್ತೋ ಏನೋ..? ಎಂದು ಸಿ.ಟಿ ರವಿ ಹೇಳಿದ್ದಾರೆ.
ಟಿಪ್ಪು ಸುಲ್ತಾನ್ನನ್ನು ಮಂಡ್ಯದ ಒಕ್ಕಲಿಗ ಸಮುದಾಯದ ಉರಿಗೌಡ, ನಂಜೇಗೌಡ ಎನ್ನುವವರು ಕೊಂದಿದ್ದಾರೆ ಎಂದು ಸಿಟಿ ರವಿ ಅವರು ಈ ಹಿಂದೆ ಒಂದು ಸುಳ್ಳು ಹರಿಬಿಟ್ಟಿದ್ದರು. ಆ ಸುಳ್ಳನ್ನು ಬಿಜೆಪಿಯ ಅನೇಕ ನಾಯಕರು ಸತ್ಯ ಎಂದು ವಾದಿಸುತ್ತಿದ್ದಾರೆ. ಇದು ರಾಜ್ಯದಲ್ಲಿ ಭಾರೀ ಚರ್ಚಗೆ ಗ್ರಾಸವಾಗಿದ್ದು, ರಾಜಕೀಯ ನಾಯಕರ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಎಲ್ಲಿಯಾದರೂ ಕಂಡರೆ ‘ಕಿತ್ತೋದ ಸಿ.ಟಿ. ರವಿ’ ಎಂದು ಘೋಷಣೆ ಕೂಗಿ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕರೆ
ಅಷ್ಟೇ ಅಲ್ಲದೇ ಮೋದಿ ಮಂಡ್ಯಕ್ಕೆ ಬರುವ ಸಂದರ್ಭದಲ್ಲಿ ತಮಿಳುನಾಡಿನ ಹೋರಾಟಗಾರ ಚಿತ್ರ ಬಳಸಿಕೊಂಡು ಅವರೇ ಉರಿಗೌಡ, ನಂಜೇಗೌಡ ಎಂದು ಸೂಚಿಸಿ ಅವರ ಹೆಸರಲ್ಲೇ ಮಹಾದ್ವಾರವನ್ನೇ ನಿರ್ಮಾಣ ಮಾಡಿದ್ದರು. ಇದಕ್ಕೆ ಮಂಡ್ಯದ ಜನರೇ ವಿರೋಧ ವ್ಯಕ್ತಪಡಿಸಿದ ನಂತರ ರಾತ್ರೋರಾತ್ರಿ ಮಹಾದ್ವಾರ ತೆರುವು ಮಾಡಿ ಬೇರೆ ಹೆಸರಿನ ಮಹಾದ್ವಾರ ನಿರ್ಮಾಣ ಮಾಡಿದ್ದರು.
ಈ ವಿಚಾರವಾಗಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ”ಟಿಪ್ಪು ಕೊಂದವರು ಉರಿಗೌಡ ನಂಜೇಗೌಡ ಎಂದು ಪ್ರಚಾರ ಮಾಡುವ ಮೂಲಕ ಬಿಜೆಪಿಯವರು ಒಕ್ಕಲಿಗ ಸಮಾಜದ ಗೌರವ ಹಾಳು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
”ಉರಿಗೌಡ ಮತ್ತು ನಂಜೇಗೌಡ ಅವರೇ ಟಿಪ್ಪುವನ್ನು ಕೊಂದಿದ್ದಾರೆ ಎಂಬುದಕ್ಕೆ ಇತಿಹಾಸದಲ್ಲಿ ಯಾವುದೇ ರೀತಿಯ ದಾಖಲೆಗಳಿಲ್ಲ. ಕುತಂತ್ರದಿಂದ ಕೊಂದಿದ್ದಾರೆ ಎನ್ನುವುದಕ್ಕೆ ಇತಿಹಾಸ ಇದೆ. ಉರಿಗೌಡ ಮತ್ತು ನಂಜೇಗೌಡ ಅವರೇ ಟಿಪ್ಪುವನ್ನು ಕೊಂದಿದ್ದಾರೆ ಎಂಬ ಇತಿಹಾಸವನ್ನು ನಿರ್ಮಿಸಿದವರು ಬಿಜೆಪಿಯವರು. ಈ ಇತಿಹಾಸ ಸೃಷ್ಟಿ ಮಾಡಿ ಅದಕ್ಕೆ ನಮ್ಮ ಸಮುದಾಯದ ಇಬ್ಬರ ಹೆಸರು ಇಟ್ಟಿದ್ದಾರೆ. ಆ ಮೂಲಕ ಒಕ್ಕಲಿಗರ ಸಮುದಾಯಕ್ಕೆ ಇವರು ಅಗೌರವ ತೋರಿದ್ದಾರೆ. ಹೀಗಾಗಿ ಒಕ್ಕಲಿಗರು ಇದರ ವಿರುದ್ಧ ಹೋರಾಟ ಮಾಡಿ ದಿಕ್ಕರಿಸಬೇಕು. ಬಿಜೆಪಿ ಪಕ್ಷದವರನ್ನ ಎಚ್ಚರಿಸಬೇಕು” ಎಂದು ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಸಿಟಿ ರವಿ ಅವರು, ಮತ್ತೊಂದು ಹೊಸ ವಿಷಯವನ್ನು ತೇಲಿಬಿಟ್ಟಿದ್ದಾರೆ. ಟಿಪ್ಪು ಹಾಸನಕ್ಕೆ ಇಟ್ಟ ಹೆಸರು ಕೈಮಾಬಾದ್ ಎಂದು ಸಿಟಿ ರವಿ ಹೇಳಿದ್ದಾರೆ.