Homeಮುಖಪುಟತಮಿಳು ನಾಡು: ಕೋಮುವಾದ ಬಿತ್ತಿದರೂ ಫಲ ನೀಡದ ಬಿಜೆಪಿಗರ ಸಂಕಟ

ತಮಿಳು ನಾಡು: ಕೋಮುವಾದ ಬಿತ್ತಿದರೂ ಫಲ ನೀಡದ ಬಿಜೆಪಿಗರ ಸಂಕಟ

- Advertisement -
- Advertisement -

ಕೋಮವಾದವನ್ನು ಬಿತ್ತಿ ಕೋಮು ಧ್ರುವೀಕರಣದ ಬೆಳೆ ತೆಗೆವ ಬಿಜೆಪಿ ಪಕ್ಷ ಆ ಯೋಜನೆಗಳ ಮೂಲಕವೇ ದೇಶದ ಹಲವೆಡೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. 1990 ಸೆಪ್ಟೆಂಬರ್ 25ರಂದು ಲಾಲ್ ಕೃಷ್ಣ ಅಡ್ವಾನಿ ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ ಆರಂಭಿಸಿದ್ದರು. ಆ ರಥಯಾತ್ರೆ ನಡೆದ ದಾರಿಯಲ್ಲೆಲ್ಲ ರಕ್ತದ ಕಲೆಗಳಿವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರಥಯಾತ್ರೆಯ ಬೆನ್ನಿಗೆ 1992ರ ಬಾಬರಿ ಮಸೀದಿ ಧ್ವಂಸ ಹಾಗೂ ನಂತರ ನಡೆದ ಗಲಭೆಗಳ ರಕ್ತಪಾತದಲ್ಲಿ ಮೃತಪಟ್ಟವರ ಸಂಖ್ಯೆ 10,000ಕ್ಕೂ ಹೆಚ್ಚು ಎನ್ನುತ್ತವೆ ಹಲವು ವರದಿಗಳು. ಇನ್ನು ಗಾಯಗೊಂಡವರ ಮತ್ತು ಆಸ್ತಿಪಾಸ್ತಿ ಕಳೆದುಕೊಂಡವರ ಸಂಖ್ಯೆ ಅಸಂಖ್ಯಾತ.

2002ರ ಗುಜರಾತಿನ ಗೋದ್ರಾ ಹತ್ಯಾಕಾಂಡವನ್ನು ಈ ದೇಶ ಅಷ್ಟು ಸುಲಭಕ್ಕೆ ಮರೆಯಲು ಸಾಧ್ಯವೇ? ಈ ಎರಡೂ ಹತ್ಯಾಕಾಂಡಕ್ಕೆ ಕಾರಣವಾದದ್ದು ಬಿಜೆಪಿಯ ಕೋಮುವಾದ ಎಂಬ ಏಕೈಕ ಅಜೆಂಡ ಮತ್ತು ಈ ಅಜೆಂಡ ನೀಡಿದ ಫಲವೇ ಇಂದು ಉತ್ತರಪ್ರದೇಶ ಮತ್ತು ಗುಜರಾತಿನಲ್ಲಿ ದೀರ್ಘಾವಧಿಯ ಅಧಿಕಾರದ ಚುಕ್ಕಾಣಿ. 2017ರ ಉತ್ತರಪ್ರದೇಶ ಚುನಾವಣೆಗೆ ಪೂರ್ವಭಾವಿಯಾಗಿ 2013ರಲ್ಲೇ ಬಿಜೆಪಿಯಿಂದ ಪ್ರಯೋಜಿಸಲ್ಪಟ್ಟಿದ್ದ, 80 ಜನರ ಸಾವಿಗೆ ಕಾರಣವಾಗಿದ್ದ ಮುಜಫರ್ ನಗರದ ಕೋಮುಗಲಭೆಯನ್ನೂ ಇಲ್ಲಿ ಸ್ಮರಿಸಬಹುದು.

ಇನ್ನು ಕರ್ನಾಟಕದಲ್ಲೂ ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಾಟೆ, ಚಿಕ್ಕಮಗಳೂರಿನ ದತ್ತಪೀಠ ವಿವಾದ ಬಿಜೆಪಿ ಪಾಲಿಗೆ ಚಿನ್ನದ ಗಣಿ ಎನ್ನಲು ಅಡ್ಡಿ ಇಲ್ಲ. ಈ ವಿವಾದಗಳು ಹುಟ್ಟಿದ ವರ್ಷಗಳನ್ನೂ ಹಾಗೂ ಕರ್ನಾಟಕದಲ್ಲಿ ಬಿಜೆಪಿಯ ಅಧಿಕಾರದ ಹಿಡಿದು ಗಟ್ಟಿಯಾಗುತ್ತಾ ಸಾಗಿದ್ದನ್ನು ತುಲನೆ ಮಾಡಿ ಗಮನಿಸಿದರೆ ಕೋಮುಗಲಭೆ ಮತ್ತು ಅಧಿಕಾರದ ಜೊತೆಗಿನ ಬಿಜೆಪಿಯ ನಯವಾದ ಆಟ ಸ್ಪಷ್ಟವಾಗಿ ಅರ್ಥವಾಗುತ್ತದೆ. ಬಿಜೆಪಿಯ ಈ ತಂತ್ರಗಾರಿಕೆ ಹಲವು ರಾಜ್ಯಗಳಲ್ಲಿ ಅವರ ಕೈಹಿಡಿದಿದೆ ನಿಜ. ಆದರೆ, ತಮಿಳುನಾಡು ಮಾತ್ರ ಜಪ್ಪಯ್ಯ ಎಂದರೂ ಇವರ ಆಟಕ್ಕೆ ಜಗ್ಗುತ್ತಿಲ್ಲ.

2020ರಲ್ಲಿ ಅಣ್ಣಾಮಲೈ ಎಂಬ ಮಾಜಿ ಐಪಿಎಸ್ ಅಧಿಕಾರಿಯನ್ನು ತಮಿಳುನಾಡಿನ ಬಿಜೆಪಿಗೆ ರಾಜ್ಯಾದ್ಯಕ್ಷನನ್ನಾಗಿ ನೇಮಕ ಮಾಡಲಾಗಿತ್ತು. ಬಿಜೆಪಿಯ ಸಾಂಪ್ರದಾಯಿಕ ಅಸ್ತ್ರವನ್ನೇ ಅಲ್ಲೂ ಪ್ರಯೋಗಿಸಿದ್ದ ಅಣ್ಣಾಮಲೈ 2021ರಲ್ಲಿ ಕ್ರೈಸ್ತರ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನೇ ಮುಂದಿಟ್ಟು, ಇದೊಂದು ಕೊಲೆ ಎಂದು ಜನಾಭಿಪ್ರಾಯ ರೂಪಿಸಿ ಧ್ರುವೀಕರಣ ಮಾಡಲು ಮುಂದಾಗಿ ಕೊನೆಗೆ ಜನರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದರು. ಇದರ ಬೆನ್ನಿಗೆ ಸಾಲುಸಾಲು ಕೋಮುವಾದಿ ಗಲಭೆಗಳಿಗೆ ಅವರು ಬೀಜ ಬಿತ್ತಿದ್ದರೇನೋ ನಿಜ; ಆದರೆ, ಅದ್ಯಾವುದೂ ನಿರೀಕ್ಷಿತ ಫಲ ಕೊಡಲಿಲ್ಲ. ಪರಿಣಾಮ ಅಣ್ಣಾಮಲೈ ಇದೀಗ ಬಿಜೆಪಿಯ ಮತ್ತೊಂದು ಪ್ರಮುಖ ಅಸ್ತ್ರವಾದ ಸುಳ್ಳು ಸುದ್ದಿಯ ಮೊರೆ ಹೋಗಿದ್ದಾರೆ. ತಮಿಳರಿಂದ ಬಿಹಾರಿ ಕಾರ್ಮಿಕರ ಮೇಲೆ ದಾಳಿ ಎಂಬ ಬುರುಡೆ (ಸುಳ್ಸುದ್ದಿ) ಬಿಟ್ಟು ತಮಿಳರ ಸ್ವಾಭಿಮಾನವನ್ನು ಕೆಣಕಿ ಪೇಚಿಗೆ ಸಿಲುಕಿದ್ದಾರೆ. ಪರಿಣಾಮ ಇದೀಗ ಅವರ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗಿದೆ.

ಏನಿದು ಸುಳ್ಳು ಸುದ್ದಿ ಪ್ರಕರಣ?

ಮಾರ್ಚ್ 1 ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಹುಟ್ಟುಹಬ್ಬ. ಸ್ಟಾಲಿನ್ ಹುಟ್ಟುಹಬ್ಬಕ್ಕೆ ಶುಭ ಕೋರಲೆಂದು ಬಿಹಾರದ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ತಮಿಳುನಾಡಿಗೆ ಆಗಮಿಸಿದ್ದರು.

ಆದರೆ, ಇದೇ ದಿನ ಬಿಹಾರದ ಬಿಜೆಪಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ “ತಮಿಳುನಾಡಿನಲ್ಲಿ ಹಿಂದಿ ಮಾತನಾಡಿದ್ದಕ್ಕಾಗಿ 12 ಜನರನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ ನೇಣು ಬಿಗಿದು ಕೊಲ್ಲಲಾಗಿದೆ” ಎಂದು ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಇದರ ಬೆನ್ನಿಗೆ “ಮನೀಶ್ ಕಶ್ಯಪ್” (Manish Kashyap Son of Bihar) ಎಂಬ ವ್ಯಕ್ತಿಯಂತು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಅಕೌಂಟ್‌ನಲ್ಲಿ, ’ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರನ್ನು ಕಂಡಕಂಡಲ್ಲಿ ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗುತ್ತಿದೆ’ ಎಂದು ಬಾಯಿಗೆ ಬಂದಂತೆ ಬಡಬಡಿಸತೊಡಗಿದ. ಆತನ ವಿಡಿಯೋವನ್ನು 6 ಮಿಲಿಯನ್ ಜನ ವೀಕ್ಷಿಸಿದ್ದರು. ನೋಡನೋಡುತ್ತಿದ್ದಂತೆ ಆ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ‘ನಕಲಿ ಪ್ರಚಾರ’ ಆರೋಪ; ಅಣ್ಣಾಮಲೈ ವಿರುದ್ಧ ಎಫ್‌ಐಆರ್‌ ದಾಖಲು

ಬಿಹಾರದ ವಿಧಾನಸಭೆಯಲ್ಲೂ ಈ ವಿಚಾರವಾಗಿ ಭಾರಿ ಚರ್ಚೆಯಾಗಿತ್ತು. ಅಲ್ಲಿನ ವಿರೋಧ ಪಕ್ಷವಾದ ಬಿಜೆಪಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟುಹಿಡಿದಿತ್ತು. ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹ ಈ ಮನೀಶ್ ಕಶ್ಯಪ್ ಎಂಬ ವ್ಯಕ್ತಿಯ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದ ತೇಜಸ್ವಿ ಯಾದವ್ ಬಗ್ಗೆ ಅವಹೇಳನಕಾರಿಯಾದಂತಹ ಮಾತುಗಳನ್ನಾಗಿದ್ದರು. “ಇಂತವರ ಸರ್ಕಾರ ಬಿಹಾರಕ್ಕೆ ಬೇಕೆ? ತೇಜಸ್ವಿ ಯಾದವ್ ಸ್ಟಾಲಿನ್‌ಗೆ ಕೇಕ್ ತಿನ್ನಿಸುವ ದಿನದಲ್ಲೇ ನಮ್ಮ ಬಿಹಾರಿಗಳು ಕೊಲೆಯಾಗುತ್ತಿದ್ದಾರೆ” ಎಂದು ಜನರನ್ನು ಪ್ರಚೋದಿಸಿದ್ದರು.

ಇನ್ನೂ ಟಿಆರ್‌ಪಿ ಗೀಳಿಗೆ ಬಿದ್ದ ದೃಶ್ಯ ಮಾಧ್ಯಮಗಳ ಬಗ್ಗೆ ಕೇಳಬೇಕೆ! ಬಿಜೆಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿದ್ದೆ ತಡ ಇಡೀ ದಿನ ಹಿಂದಿ ಮತ್ತು ಆಂಗ್ಲ ದೃಶ್ಯ ಮಾಧ್ಯಮಗಳು ತಮಿಳುನಾಡಿನ ವಿರುದ್ಧ ಸಾಲುಸಾಲು ವರದಿಗಳನ್ನು ಬಿತ್ತರಿಸಿದವು. ತಮಿಳುನಾಡಿನಲ್ಲಿ ಬಿಹಾರಿ ಮತ್ತು ಉತ್ತರಪ್ರದೇಶ ಸೇರಿದಂತೆ ಹಿಂದಿ ಭಾಷಿಕರಿಗೆ ರಕ್ಷಣೆ ಇಲ್ಲ, ಅಲ್ಲಿನ ಸರ್ಕಾರವೇ ತಮಿಳು ಉಗ್ರಗಾಮಿಗಳ ಬೆನ್ನಿಗೆ ನಿಂತಿದೆ ಎಂದು ವಿಷಕಾರಲು ಆರಂಭಿಸಿದವು. ಪರಿಣಾಮ ಪ್ರಕರಣದ ತನಿಖೆಗೆ ಸಿಎಂ ನಿತೀಶ್ ಕುಮಾರ್ ಒಂದು ತಂಡವನ್ನು ರಚಿಸಿ ತಮಿಳುನಾಡಿಗೂ ಕಳಿಸಿದ್ದರು.

ವಿಡಿಯೋ ಅಸಲಿ ಕಥೆ, ಅಣ್ಣಾಮಲೈ ಎಂಬ ಮತಿಗೇಡಿ

ಈ ಸುಳ್ಳು ಸುದ್ದಿಯ ಬಿಸಿ ಬಿಹಾರದಿಂದ ಅಷ್ಟೇ ಶೀಘ್ರವಾಗಿ ತಮಿಳುನಾಡನ್ನೂ ಮುಟ್ಟಿತ್ತು. ಆದರೆ, ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸದ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಹಾರಿಗಳ ಮೇಲಿನ ದಾಳಿಯ ’ಸುಳ್ಳು’ ವಿಡಿಯೋವನ್ನು ಹಂಚಿಕೊಂಡಿದ್ದರು. ಅಲ್ಲದೆ, “ಹಿಂದಿ ಭಾಷಿಕರ ಮತ್ತು ಉತ್ತರ ಭಾರತೀಯರ ವಿರುದ್ಧ ತಮಿಳರಲ್ಲಿ ಆಕ್ರೋಶ ಮನೆಮಾಡಲು ಡಿಎಂಕೆ ಪಕ್ಷ ಕಾರಣ” ಎಂದು ಆರೋಪಿಸಿದ್ದರು. ಈ ಬಗ್ಗೆ ಸಾಲುಸಾಲು ಟ್ವೀಟ್ ಮಾಡುತ್ತಾ ಡಿಎಂಕೆ ಪಕ್ಷದ ವಿರುದ್ಧ ದ್ವೇಷ ಪ್ರಚಾರದಲ್ಲಿ ತೊಡಗಿದ್ದರು.

ಮನೀಶ್ ಕಶ್ಯಪ್

ಆದರೆ, ಘಟನೆಯ ಮರುದಿನವೇ ಫ್ಯಾಕ್ಟ್‌ಚೆಕ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸುಳ್ಳಿನ ಚರ್ಮ ಸುಲಿದಿದ್ದರು, “ಈ ಹಲ್ಲೆ ತಮಿಳುನಾಡಿನಲ್ಲಿ ನಡೆದದ್ದಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ತಮಿಳುನಾಡಿನಲ್ಲಿ ಯಾವುದೇ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆಯಾಗಿಲ್ಲ ಎಂದು ಸಾಕ್ಷಿ ಸಮೇತ ಸರಣಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಮೂಲಕ ಬಿಜೆಪಿಯ ಅಸಲಿ ತಂತ್ರಗಾರಿಕೆ ಜಗಜ್ಜಾಹೀರಾಗಿತ್ತು. ಒಂದೇ ಸುಳ್ಳು ಸುದ್ದಿಯ ಮೂಲಕ ಬಿಹಾರದಲ್ಲಿ ನಿತೀಶ್ ಕುಮಾರ್ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ಮತ್ತು ಬಿಜೆಪಿಯೇತರ ಸರ್ಕಾರವಿರುವ ತಮಿಳುನಾಡಿನ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡುವುದು ಬಿಜೆಪಿಯ ಗುರಿಯಾಗಿತ್ತು. ಇದಕ್ಕೆ ಅವರು ಸಿಎಂ ಸ್ಟಾಲಿನ್ ಹುಟ್ಟುದಿನ ಮತ್ತು ತೇಜಸ್ವಿ ಯಾದವ್ ಭೇಟಿಯನ್ನೇ ಬಳಸಿಕೊಂಡು ಒಂದು ಅದ್ಭುತವಾದ ಚಿತ್ರಕಥೆಯನ್ನು ಸಿದ್ಧಪಡಿಸಿದ್ದರು ಎಂಬ ಅಂಶ ಬಟಾಬಯಲಾಗಿತ್ತು.

ತಮಿಳುನಾಡಿನ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಿಜೆಪಿಯ ಈ ಸುಳ್ಳು ಸುದ್ದಿಯ ಬಗ್ಗೆ ಬಿಸಿಬಿಸಿ ಚರ್ಚೆ ಶುರು ಮಾಡುತ್ತಿದ್ದಂತೆ ಅಣ್ಣಾಮಲೈ ತನ್ನ ಖಾಸಗಿ ಟ್ವಿಟರ್ ಖಾತೆಯಿಂದ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರೇನೋ ನಿಜ. ಆದರೆ, “ಹಿಂದಿ ಭಾಷಿಕರ ವಿರುದ್ಧ ತಮಿಳರಲ್ಲಿ ಆಕ್ರೋಶ ಇದೆ, ಇದಕ್ಕೆ ಕಾರಣ ಡಿಎಂಕೆ ಪಕ್ಷ” ಎಂಬ ತಮ್ಮ ನಿಲುವನ್ನು ಮತ್ತೆ ಮತ್ತೆ ಸರಣಿ ಟ್ವೀಟ್ ಮೂಲಕ ಸಮರ್ಥಿಸಿಕೊಂಡಿದ್ದರು.

ಬಿಜೆಪಿ ಪ್ರಾಯೋಜಿತ ರಾಷ್ಟ್ರೀಯ ಮಾಧ್ಯಮಗಳು ತಮಿಳುನಾಡಿನ ವಿರುದ್ಧ ಹೀಗೆ ವಿಷಕಾರುವುದು ಹೊಸದೇನಲ್ಲ. ತಮಿಳರಿಗೆ ಅದು ಅಭ್ಯಾಸವಾಗಿಹೋಗಿದೆ. ಆದರೆ, ಈ ಸುಳ್ಳನ್ನೇ ಸತ್ಯ ಎಂದು ಅಲ್ಲಿನ ಜನರನ್ನು ನಂಬಿಸಲು ಸ್ವತಃ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮುಂದಾದದ್ದು ಮತ್ತು ತಮಿಳರ ವಿರುದ್ಧವೇ ಅಪಪ್ರಚಾರ ಮಾಡಿದ್ದು, ಇದೀಗ ತಮಿಳರ ಆಕ್ರೋಶಕ್ಕೆ ಕಾರಣವಾಗಿದೆ.

ಸುಳ್ಳು ಸುದ್ದಿಯ ಪರಿಣಾಮವೇನು?

ತಮಿಳುನಾಡು ಬಿಜೆಪಿಯಲ್ಲೇ ಅಣ್ಣಾಮಲೈ ಓರ್ವ ವಿವಾದಿತ ವ್ಯಕ್ತಿಯಾಗಿ ಛಾಪು ಮೂಡಿಸಿದ್ದಾರೆ. ಪಕ್ಷದಲ್ಲಿ ತನಗೆ ಪೈಪೋಟಿಯಾಗಿದ್ದ ಹಿರಿಯ ನಾಯಕ ಕೆ.ಟಿ ರಾಘವನ್ ಎಂಬುವವರನ್ನು ಅಶ್ಲೀಲ ಸಿಡಿ ಕೇಸ್‌ನಲ್ಲಿ ಸಿಲುಕಿಸಿ ಅವರ ರಾಜಕೀಯ ಜೀವನವನ್ನೇ ಮುಗಿಸಿದ ಆರೋಪ ಅಣ್ಣಾಮಲೈ ಮೇಲಿದೆ. ಇದಲ್ಲದೆ, ಪಕ್ಷದಲ್ಲಿ ತನಗೆ ಪೈಪೋಟಿಯಾಗಿರುವ ಇತರೆ ಹಿರಿಯ ನಾಯಕರದ್ದೂ ಅಶ್ಲೀಲ ವಿಡಿಯೋ ಮತ್ತು ಆಡಿಯೋ ಮಾಡಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

“ಅಣ್ಣಾಮಲೈ ತನ್ನ ವಿಡಿಯೋ ಮಾಡಿಟ್ಟುಕೊಂಡು ಸಾಮಾಜಿಕ ಜಾಲತಾಣ ಪಡೆಯ ಮೂಲಕ ನನ್ನ ಮೇಲೆ ವ್ಯಯಕ್ತಿಕ ದಾಳಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿ ಬಿಜೆಪಿ ಪಕ್ಷದ ಕಲೆ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಮಾಜಿ ನಟಿ ಗಾಯತ್ರಿ ರಘುರಾಮ್ ಕಳೆದ ವರ್ಷ ಪಕ್ಷದಿಂದಲೇ ಹೊರ ನಡೆದಿದ್ದರು. ಇದೇ ಆರೋಪವನ್ನು ಮುಂದಿಟ್ಟು ಸೂರ್ಯ ಶಿವ ಎಂಬ ಮತ್ತೊಬ್ಬ ಬಿಜೆಪಿ ನಾಯಕನೂ ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರೂ ಅಣ್ಣಾಮಲೈ ವಿರುದ್ಧ ಸಾರ್ವಜನಿಕವಾಗಿ ಕಿಡಿಕಾರಿದ್ದರು. ಅಂದಿನಿಂದ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು “ಆಡಿಯೋ ವಿಡಿಯೋ ಪಕ್ಷ” ಎಂದೇ ಕರೆಯಲಾಗುತ್ತಿದೆ.

ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಎನ್ನಲಾದ ನಕಲಿ ವಿಡಿಯೋ

ಈ ನಡುವೆ ಬಿಹಾರಿ ಕಾರ್ಮಿಕರ ಮೇಲಿನ ದಾಳಿ ಸಂಬಂಧಿಸಿದ ಸುದ್ದಿ ಸುಳ್ಳು ಎಂಬುದು ಜಗಜ್ಜಾಹೀರಾಗುತ್ತಿದ್ದಂತೆ ತಮಿಳುನಾಡಿನ ಬಿಜೆಪಿ ಐಟಿ ವಿಂಗ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಸೇರಿದಂತೆ 11 ಜನ ನಿರ್ವಾಹಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ “ಎಡಿಎಂಕೆ” ಪಕ್ಷಕ್ಕೆ ಸೇರಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ನಿರ್ಮಲ್ ಕುಮಾರ್ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಮಿಳುನಾಡು ರಾಜಕೀಯದಲ್ಲಿ ಪ್ರಸ್ತುತ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಬಿಜೆಪಿ ತೊರೆದ ತಮಿಳು ನಟಿ ಹೇಳಿಕೆ

“ಅಣ್ಣಾಮಲೈ ಪಕ್ಷದ ಅನೇಕ ಹಿರಿಯ ನಾಯಕರ ವಿರುದ್ಧ ಗೂಢಚರ್ಯೆ ನಡೆಸುತ್ತಿದ್ದಾರೆ. ಅಶ್ಲೀಲ ಆಡಿಯೋ ವಿಡಿಯೋ ಮೂಲಕ ಹಲವರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ತಾನೊಬ್ಬನೇ ಏಕಮೇವ ಬಿಜೆಪಿ ನಾಯಕನಾಗಲು ಅವರು ಹೊರಟಿದ್ದು, ಸುಳ್ಳು ಹರಡುವುದೊಂದೆ ಅಣ್ಣಾಮಲೈ ಹಾಗೂ ಬಿಜೆಪಿ ಪಕ್ಷದ ಅಜೆಂಡವಾಗಿದೆ. ಇಂತಹ ಪಕ್ಷ ತಮಿಳರಿಗೆ ಮತ್ತು ತಮಿಳುನಾಡಿಗೆ ಅಪಾಯಕಾರಿಯಾದದ್ದು” ಎಂಬ ಅಂಶಗಳು ನಿರ್ಮಲ್ ಕುಮಾರ್ ಹೇಳಿಕೆಯಲ್ಲಿದ್ದು, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಒಂದು ಪಕ್ಷದ ರಾಜ್ಯಾಧ್ಯಕ್ಷನ ವಿರುದ್ಧ ಅದೇ ಪಕ್ಷದವರು ಬಿಡುಗಡೆ ಮಾಡಿರುವ ಅತ್ಯಂತ ಆಘಾತಕಾರಿ ಹೇಳಿಕೆ ಇದಾಗಿದೆ ಎಂದು ತಮಿಳುನಾಡಿನ ಮಾಧ್ಯಮಗಳು ವಿಶ್ಲೇಷಿಸುತ್ತಿವೆ.

ಒಟ್ಟಿನಲ್ಲಿ ದೇಶದ ಹಲವೆಡೆ ಕೆಲಸ ಮಾಡುವ ಬಿಜೆಪಿ ಪಕ್ಷದ ಸುಳ್ಳಿನ ತಂತ್ರಗಾರಿಕೆ ತಮಿಳು ನಾಡಿನಲ್ಲಿ ಕೈಕೊಟ್ಟಿರುವುದು ದೇಶದಲ್ಲಿಂದು ಚರ್ಚೆಗೆ ಗ್ರಾಸವಾಗಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...