Homeಮುಖಪುಟತಮಿಳು ನಾಡು: ಕೋಮುವಾದ ಬಿತ್ತಿದರೂ ಫಲ ನೀಡದ ಬಿಜೆಪಿಗರ ಸಂಕಟ

ತಮಿಳು ನಾಡು: ಕೋಮುವಾದ ಬಿತ್ತಿದರೂ ಫಲ ನೀಡದ ಬಿಜೆಪಿಗರ ಸಂಕಟ

- Advertisement -
- Advertisement -

ಕೋಮವಾದವನ್ನು ಬಿತ್ತಿ ಕೋಮು ಧ್ರುವೀಕರಣದ ಬೆಳೆ ತೆಗೆವ ಬಿಜೆಪಿ ಪಕ್ಷ ಆ ಯೋಜನೆಗಳ ಮೂಲಕವೇ ದೇಶದ ಹಲವೆಡೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. 1990 ಸೆಪ್ಟೆಂಬರ್ 25ರಂದು ಲಾಲ್ ಕೃಷ್ಣ ಅಡ್ವಾನಿ ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ ಆರಂಭಿಸಿದ್ದರು. ಆ ರಥಯಾತ್ರೆ ನಡೆದ ದಾರಿಯಲ್ಲೆಲ್ಲ ರಕ್ತದ ಕಲೆಗಳಿವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ರಥಯಾತ್ರೆಯ ಬೆನ್ನಿಗೆ 1992ರ ಬಾಬರಿ ಮಸೀದಿ ಧ್ವಂಸ ಹಾಗೂ ನಂತರ ನಡೆದ ಗಲಭೆಗಳ ರಕ್ತಪಾತದಲ್ಲಿ ಮೃತಪಟ್ಟವರ ಸಂಖ್ಯೆ 10,000ಕ್ಕೂ ಹೆಚ್ಚು ಎನ್ನುತ್ತವೆ ಹಲವು ವರದಿಗಳು. ಇನ್ನು ಗಾಯಗೊಂಡವರ ಮತ್ತು ಆಸ್ತಿಪಾಸ್ತಿ ಕಳೆದುಕೊಂಡವರ ಸಂಖ್ಯೆ ಅಸಂಖ್ಯಾತ.

2002ರ ಗುಜರಾತಿನ ಗೋದ್ರಾ ಹತ್ಯಾಕಾಂಡವನ್ನು ಈ ದೇಶ ಅಷ್ಟು ಸುಲಭಕ್ಕೆ ಮರೆಯಲು ಸಾಧ್ಯವೇ? ಈ ಎರಡೂ ಹತ್ಯಾಕಾಂಡಕ್ಕೆ ಕಾರಣವಾದದ್ದು ಬಿಜೆಪಿಯ ಕೋಮುವಾದ ಎಂಬ ಏಕೈಕ ಅಜೆಂಡ ಮತ್ತು ಈ ಅಜೆಂಡ ನೀಡಿದ ಫಲವೇ ಇಂದು ಉತ್ತರಪ್ರದೇಶ ಮತ್ತು ಗುಜರಾತಿನಲ್ಲಿ ದೀರ್ಘಾವಧಿಯ ಅಧಿಕಾರದ ಚುಕ್ಕಾಣಿ. 2017ರ ಉತ್ತರಪ್ರದೇಶ ಚುನಾವಣೆಗೆ ಪೂರ್ವಭಾವಿಯಾಗಿ 2013ರಲ್ಲೇ ಬಿಜೆಪಿಯಿಂದ ಪ್ರಯೋಜಿಸಲ್ಪಟ್ಟಿದ್ದ, 80 ಜನರ ಸಾವಿಗೆ ಕಾರಣವಾಗಿದ್ದ ಮುಜಫರ್ ನಗರದ ಕೋಮುಗಲಭೆಯನ್ನೂ ಇಲ್ಲಿ ಸ್ಮರಿಸಬಹುದು.

ಇನ್ನು ಕರ್ನಾಟಕದಲ್ಲೂ ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಾಟೆ, ಚಿಕ್ಕಮಗಳೂರಿನ ದತ್ತಪೀಠ ವಿವಾದ ಬಿಜೆಪಿ ಪಾಲಿಗೆ ಚಿನ್ನದ ಗಣಿ ಎನ್ನಲು ಅಡ್ಡಿ ಇಲ್ಲ. ಈ ವಿವಾದಗಳು ಹುಟ್ಟಿದ ವರ್ಷಗಳನ್ನೂ ಹಾಗೂ ಕರ್ನಾಟಕದಲ್ಲಿ ಬಿಜೆಪಿಯ ಅಧಿಕಾರದ ಹಿಡಿದು ಗಟ್ಟಿಯಾಗುತ್ತಾ ಸಾಗಿದ್ದನ್ನು ತುಲನೆ ಮಾಡಿ ಗಮನಿಸಿದರೆ ಕೋಮುಗಲಭೆ ಮತ್ತು ಅಧಿಕಾರದ ಜೊತೆಗಿನ ಬಿಜೆಪಿಯ ನಯವಾದ ಆಟ ಸ್ಪಷ್ಟವಾಗಿ ಅರ್ಥವಾಗುತ್ತದೆ. ಬಿಜೆಪಿಯ ಈ ತಂತ್ರಗಾರಿಕೆ ಹಲವು ರಾಜ್ಯಗಳಲ್ಲಿ ಅವರ ಕೈಹಿಡಿದಿದೆ ನಿಜ. ಆದರೆ, ತಮಿಳುನಾಡು ಮಾತ್ರ ಜಪ್ಪಯ್ಯ ಎಂದರೂ ಇವರ ಆಟಕ್ಕೆ ಜಗ್ಗುತ್ತಿಲ್ಲ.

2020ರಲ್ಲಿ ಅಣ್ಣಾಮಲೈ ಎಂಬ ಮಾಜಿ ಐಪಿಎಸ್ ಅಧಿಕಾರಿಯನ್ನು ತಮಿಳುನಾಡಿನ ಬಿಜೆಪಿಗೆ ರಾಜ್ಯಾದ್ಯಕ್ಷನನ್ನಾಗಿ ನೇಮಕ ಮಾಡಲಾಗಿತ್ತು. ಬಿಜೆಪಿಯ ಸಾಂಪ್ರದಾಯಿಕ ಅಸ್ತ್ರವನ್ನೇ ಅಲ್ಲೂ ಪ್ರಯೋಗಿಸಿದ್ದ ಅಣ್ಣಾಮಲೈ 2021ರಲ್ಲಿ ಕ್ರೈಸ್ತರ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನೇ ಮುಂದಿಟ್ಟು, ಇದೊಂದು ಕೊಲೆ ಎಂದು ಜನಾಭಿಪ್ರಾಯ ರೂಪಿಸಿ ಧ್ರುವೀಕರಣ ಮಾಡಲು ಮುಂದಾಗಿ ಕೊನೆಗೆ ಜನರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದರು. ಇದರ ಬೆನ್ನಿಗೆ ಸಾಲುಸಾಲು ಕೋಮುವಾದಿ ಗಲಭೆಗಳಿಗೆ ಅವರು ಬೀಜ ಬಿತ್ತಿದ್ದರೇನೋ ನಿಜ; ಆದರೆ, ಅದ್ಯಾವುದೂ ನಿರೀಕ್ಷಿತ ಫಲ ಕೊಡಲಿಲ್ಲ. ಪರಿಣಾಮ ಅಣ್ಣಾಮಲೈ ಇದೀಗ ಬಿಜೆಪಿಯ ಮತ್ತೊಂದು ಪ್ರಮುಖ ಅಸ್ತ್ರವಾದ ಸುಳ್ಳು ಸುದ್ದಿಯ ಮೊರೆ ಹೋಗಿದ್ದಾರೆ. ತಮಿಳರಿಂದ ಬಿಹಾರಿ ಕಾರ್ಮಿಕರ ಮೇಲೆ ದಾಳಿ ಎಂಬ ಬುರುಡೆ (ಸುಳ್ಸುದ್ದಿ) ಬಿಟ್ಟು ತಮಿಳರ ಸ್ವಾಭಿಮಾನವನ್ನು ಕೆಣಕಿ ಪೇಚಿಗೆ ಸಿಲುಕಿದ್ದಾರೆ. ಪರಿಣಾಮ ಇದೀಗ ಅವರ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗಿದೆ.

ಏನಿದು ಸುಳ್ಳು ಸುದ್ದಿ ಪ್ರಕರಣ?

ಮಾರ್ಚ್ 1 ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಹುಟ್ಟುಹಬ್ಬ. ಸ್ಟಾಲಿನ್ ಹುಟ್ಟುಹಬ್ಬಕ್ಕೆ ಶುಭ ಕೋರಲೆಂದು ಬಿಹಾರದ ಉಪಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ತಮಿಳುನಾಡಿಗೆ ಆಗಮಿಸಿದ್ದರು.

ಆದರೆ, ಇದೇ ದಿನ ಬಿಹಾರದ ಬಿಜೆಪಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ “ತಮಿಳುನಾಡಿನಲ್ಲಿ ಹಿಂದಿ ಮಾತನಾಡಿದ್ದಕ್ಕಾಗಿ 12 ಜನರನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ ನೇಣು ಬಿಗಿದು ಕೊಲ್ಲಲಾಗಿದೆ” ಎಂದು ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಇದರ ಬೆನ್ನಿಗೆ “ಮನೀಶ್ ಕಶ್ಯಪ್” (Manish Kashyap Son of Bihar) ಎಂಬ ವ್ಯಕ್ತಿಯಂತು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಅಕೌಂಟ್‌ನಲ್ಲಿ, ’ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರನ್ನು ಕಂಡಕಂಡಲ್ಲಿ ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗುತ್ತಿದೆ’ ಎಂದು ಬಾಯಿಗೆ ಬಂದಂತೆ ಬಡಬಡಿಸತೊಡಗಿದ. ಆತನ ವಿಡಿಯೋವನ್ನು 6 ಮಿಲಿಯನ್ ಜನ ವೀಕ್ಷಿಸಿದ್ದರು. ನೋಡನೋಡುತ್ತಿದ್ದಂತೆ ಆ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ‘ನಕಲಿ ಪ್ರಚಾರ’ ಆರೋಪ; ಅಣ್ಣಾಮಲೈ ವಿರುದ್ಧ ಎಫ್‌ಐಆರ್‌ ದಾಖಲು

ಬಿಹಾರದ ವಿಧಾನಸಭೆಯಲ್ಲೂ ಈ ವಿಚಾರವಾಗಿ ಭಾರಿ ಚರ್ಚೆಯಾಗಿತ್ತು. ಅಲ್ಲಿನ ವಿರೋಧ ಪಕ್ಷವಾದ ಬಿಜೆಪಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟುಹಿಡಿದಿತ್ತು. ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹ ಈ ಮನೀಶ್ ಕಶ್ಯಪ್ ಎಂಬ ವ್ಯಕ್ತಿಯ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದ ತೇಜಸ್ವಿ ಯಾದವ್ ಬಗ್ಗೆ ಅವಹೇಳನಕಾರಿಯಾದಂತಹ ಮಾತುಗಳನ್ನಾಗಿದ್ದರು. “ಇಂತವರ ಸರ್ಕಾರ ಬಿಹಾರಕ್ಕೆ ಬೇಕೆ? ತೇಜಸ್ವಿ ಯಾದವ್ ಸ್ಟಾಲಿನ್‌ಗೆ ಕೇಕ್ ತಿನ್ನಿಸುವ ದಿನದಲ್ಲೇ ನಮ್ಮ ಬಿಹಾರಿಗಳು ಕೊಲೆಯಾಗುತ್ತಿದ್ದಾರೆ” ಎಂದು ಜನರನ್ನು ಪ್ರಚೋದಿಸಿದ್ದರು.

ಇನ್ನೂ ಟಿಆರ್‌ಪಿ ಗೀಳಿಗೆ ಬಿದ್ದ ದೃಶ್ಯ ಮಾಧ್ಯಮಗಳ ಬಗ್ಗೆ ಕೇಳಬೇಕೆ! ಬಿಜೆಪಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗಿದ್ದೆ ತಡ ಇಡೀ ದಿನ ಹಿಂದಿ ಮತ್ತು ಆಂಗ್ಲ ದೃಶ್ಯ ಮಾಧ್ಯಮಗಳು ತಮಿಳುನಾಡಿನ ವಿರುದ್ಧ ಸಾಲುಸಾಲು ವರದಿಗಳನ್ನು ಬಿತ್ತರಿಸಿದವು. ತಮಿಳುನಾಡಿನಲ್ಲಿ ಬಿಹಾರಿ ಮತ್ತು ಉತ್ತರಪ್ರದೇಶ ಸೇರಿದಂತೆ ಹಿಂದಿ ಭಾಷಿಕರಿಗೆ ರಕ್ಷಣೆ ಇಲ್ಲ, ಅಲ್ಲಿನ ಸರ್ಕಾರವೇ ತಮಿಳು ಉಗ್ರಗಾಮಿಗಳ ಬೆನ್ನಿಗೆ ನಿಂತಿದೆ ಎಂದು ವಿಷಕಾರಲು ಆರಂಭಿಸಿದವು. ಪರಿಣಾಮ ಪ್ರಕರಣದ ತನಿಖೆಗೆ ಸಿಎಂ ನಿತೀಶ್ ಕುಮಾರ್ ಒಂದು ತಂಡವನ್ನು ರಚಿಸಿ ತಮಿಳುನಾಡಿಗೂ ಕಳಿಸಿದ್ದರು.

ವಿಡಿಯೋ ಅಸಲಿ ಕಥೆ, ಅಣ್ಣಾಮಲೈ ಎಂಬ ಮತಿಗೇಡಿ

ಈ ಸುಳ್ಳು ಸುದ್ದಿಯ ಬಿಸಿ ಬಿಹಾರದಿಂದ ಅಷ್ಟೇ ಶೀಘ್ರವಾಗಿ ತಮಿಳುನಾಡನ್ನೂ ಮುಟ್ಟಿತ್ತು. ಆದರೆ, ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸದ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಹಾರಿಗಳ ಮೇಲಿನ ದಾಳಿಯ ’ಸುಳ್ಳು’ ವಿಡಿಯೋವನ್ನು ಹಂಚಿಕೊಂಡಿದ್ದರು. ಅಲ್ಲದೆ, “ಹಿಂದಿ ಭಾಷಿಕರ ಮತ್ತು ಉತ್ತರ ಭಾರತೀಯರ ವಿರುದ್ಧ ತಮಿಳರಲ್ಲಿ ಆಕ್ರೋಶ ಮನೆಮಾಡಲು ಡಿಎಂಕೆ ಪಕ್ಷ ಕಾರಣ” ಎಂದು ಆರೋಪಿಸಿದ್ದರು. ಈ ಬಗ್ಗೆ ಸಾಲುಸಾಲು ಟ್ವೀಟ್ ಮಾಡುತ್ತಾ ಡಿಎಂಕೆ ಪಕ್ಷದ ವಿರುದ್ಧ ದ್ವೇಷ ಪ್ರಚಾರದಲ್ಲಿ ತೊಡಗಿದ್ದರು.

ಮನೀಶ್ ಕಶ್ಯಪ್

ಆದರೆ, ಘಟನೆಯ ಮರುದಿನವೇ ಫ್ಯಾಕ್ಟ್‌ಚೆಕ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸುಳ್ಳಿನ ಚರ್ಮ ಸುಲಿದಿದ್ದರು, “ಈ ಹಲ್ಲೆ ತಮಿಳುನಾಡಿನಲ್ಲಿ ನಡೆದದ್ದಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ತಮಿಳುನಾಡಿನಲ್ಲಿ ಯಾವುದೇ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆಯಾಗಿಲ್ಲ ಎಂದು ಸಾಕ್ಷಿ ಸಮೇತ ಸರಣಿ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಮೂಲಕ ಬಿಜೆಪಿಯ ಅಸಲಿ ತಂತ್ರಗಾರಿಕೆ ಜಗಜ್ಜಾಹೀರಾಗಿತ್ತು. ಒಂದೇ ಸುಳ್ಳು ಸುದ್ದಿಯ ಮೂಲಕ ಬಿಹಾರದಲ್ಲಿ ನಿತೀಶ್ ಕುಮಾರ್ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ಮತ್ತು ಬಿಜೆಪಿಯೇತರ ಸರ್ಕಾರವಿರುವ ತಮಿಳುನಾಡಿನ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡುವುದು ಬಿಜೆಪಿಯ ಗುರಿಯಾಗಿತ್ತು. ಇದಕ್ಕೆ ಅವರು ಸಿಎಂ ಸ್ಟಾಲಿನ್ ಹುಟ್ಟುದಿನ ಮತ್ತು ತೇಜಸ್ವಿ ಯಾದವ್ ಭೇಟಿಯನ್ನೇ ಬಳಸಿಕೊಂಡು ಒಂದು ಅದ್ಭುತವಾದ ಚಿತ್ರಕಥೆಯನ್ನು ಸಿದ್ಧಪಡಿಸಿದ್ದರು ಎಂಬ ಅಂಶ ಬಟಾಬಯಲಾಗಿತ್ತು.

ತಮಿಳುನಾಡಿನ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಿಜೆಪಿಯ ಈ ಸುಳ್ಳು ಸುದ್ದಿಯ ಬಗ್ಗೆ ಬಿಸಿಬಿಸಿ ಚರ್ಚೆ ಶುರು ಮಾಡುತ್ತಿದ್ದಂತೆ ಅಣ್ಣಾಮಲೈ ತನ್ನ ಖಾಸಗಿ ಟ್ವಿಟರ್ ಖಾತೆಯಿಂದ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರೇನೋ ನಿಜ. ಆದರೆ, “ಹಿಂದಿ ಭಾಷಿಕರ ವಿರುದ್ಧ ತಮಿಳರಲ್ಲಿ ಆಕ್ರೋಶ ಇದೆ, ಇದಕ್ಕೆ ಕಾರಣ ಡಿಎಂಕೆ ಪಕ್ಷ” ಎಂಬ ತಮ್ಮ ನಿಲುವನ್ನು ಮತ್ತೆ ಮತ್ತೆ ಸರಣಿ ಟ್ವೀಟ್ ಮೂಲಕ ಸಮರ್ಥಿಸಿಕೊಂಡಿದ್ದರು.

ಬಿಜೆಪಿ ಪ್ರಾಯೋಜಿತ ರಾಷ್ಟ್ರೀಯ ಮಾಧ್ಯಮಗಳು ತಮಿಳುನಾಡಿನ ವಿರುದ್ಧ ಹೀಗೆ ವಿಷಕಾರುವುದು ಹೊಸದೇನಲ್ಲ. ತಮಿಳರಿಗೆ ಅದು ಅಭ್ಯಾಸವಾಗಿಹೋಗಿದೆ. ಆದರೆ, ಈ ಸುಳ್ಳನ್ನೇ ಸತ್ಯ ಎಂದು ಅಲ್ಲಿನ ಜನರನ್ನು ನಂಬಿಸಲು ಸ್ವತಃ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮುಂದಾದದ್ದು ಮತ್ತು ತಮಿಳರ ವಿರುದ್ಧವೇ ಅಪಪ್ರಚಾರ ಮಾಡಿದ್ದು, ಇದೀಗ ತಮಿಳರ ಆಕ್ರೋಶಕ್ಕೆ ಕಾರಣವಾಗಿದೆ.

ಸುಳ್ಳು ಸುದ್ದಿಯ ಪರಿಣಾಮವೇನು?

ತಮಿಳುನಾಡು ಬಿಜೆಪಿಯಲ್ಲೇ ಅಣ್ಣಾಮಲೈ ಓರ್ವ ವಿವಾದಿತ ವ್ಯಕ್ತಿಯಾಗಿ ಛಾಪು ಮೂಡಿಸಿದ್ದಾರೆ. ಪಕ್ಷದಲ್ಲಿ ತನಗೆ ಪೈಪೋಟಿಯಾಗಿದ್ದ ಹಿರಿಯ ನಾಯಕ ಕೆ.ಟಿ ರಾಘವನ್ ಎಂಬುವವರನ್ನು ಅಶ್ಲೀಲ ಸಿಡಿ ಕೇಸ್‌ನಲ್ಲಿ ಸಿಲುಕಿಸಿ ಅವರ ರಾಜಕೀಯ ಜೀವನವನ್ನೇ ಮುಗಿಸಿದ ಆರೋಪ ಅಣ್ಣಾಮಲೈ ಮೇಲಿದೆ. ಇದಲ್ಲದೆ, ಪಕ್ಷದಲ್ಲಿ ತನಗೆ ಪೈಪೋಟಿಯಾಗಿರುವ ಇತರೆ ಹಿರಿಯ ನಾಯಕರದ್ದೂ ಅಶ್ಲೀಲ ವಿಡಿಯೋ ಮತ್ತು ಆಡಿಯೋ ಮಾಡಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

“ಅಣ್ಣಾಮಲೈ ತನ್ನ ವಿಡಿಯೋ ಮಾಡಿಟ್ಟುಕೊಂಡು ಸಾಮಾಜಿಕ ಜಾಲತಾಣ ಪಡೆಯ ಮೂಲಕ ನನ್ನ ಮೇಲೆ ವ್ಯಯಕ್ತಿಕ ದಾಳಿ ನಡೆಸುತ್ತಿದ್ದಾರೆ” ಎಂದು ಆರೋಪಿಸಿ ಬಿಜೆಪಿ ಪಕ್ಷದ ಕಲೆ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷೆ ಮಾಜಿ ನಟಿ ಗಾಯತ್ರಿ ರಘುರಾಮ್ ಕಳೆದ ವರ್ಷ ಪಕ್ಷದಿಂದಲೇ ಹೊರ ನಡೆದಿದ್ದರು. ಇದೇ ಆರೋಪವನ್ನು ಮುಂದಿಟ್ಟು ಸೂರ್ಯ ಶಿವ ಎಂಬ ಮತ್ತೊಬ್ಬ ಬಿಜೆಪಿ ನಾಯಕನೂ ಇತ್ತೀಚೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರೂ ಅಣ್ಣಾಮಲೈ ವಿರುದ್ಧ ಸಾರ್ವಜನಿಕವಾಗಿ ಕಿಡಿಕಾರಿದ್ದರು. ಅಂದಿನಿಂದ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು “ಆಡಿಯೋ ವಿಡಿಯೋ ಪಕ್ಷ” ಎಂದೇ ಕರೆಯಲಾಗುತ್ತಿದೆ.

ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಎನ್ನಲಾದ ನಕಲಿ ವಿಡಿಯೋ

ಈ ನಡುವೆ ಬಿಹಾರಿ ಕಾರ್ಮಿಕರ ಮೇಲಿನ ದಾಳಿ ಸಂಬಂಧಿಸಿದ ಸುದ್ದಿ ಸುಳ್ಳು ಎಂಬುದು ಜಗಜ್ಜಾಹೀರಾಗುತ್ತಿದ್ದಂತೆ ತಮಿಳುನಾಡಿನ ಬಿಜೆಪಿ ಐಟಿ ವಿಂಗ್ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಸೇರಿದಂತೆ 11 ಜನ ನಿರ್ವಾಹಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ “ಎಡಿಎಂಕೆ” ಪಕ್ಷಕ್ಕೆ ಸೇರಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ನಿರ್ಮಲ್ ಕುಮಾರ್ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಮಿಳುನಾಡು ರಾಜಕೀಯದಲ್ಲಿ ಪ್ರಸ್ತುತ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಬಿಜೆಪಿ ತೊರೆದ ತಮಿಳು ನಟಿ ಹೇಳಿಕೆ

“ಅಣ್ಣಾಮಲೈ ಪಕ್ಷದ ಅನೇಕ ಹಿರಿಯ ನಾಯಕರ ವಿರುದ್ಧ ಗೂಢಚರ್ಯೆ ನಡೆಸುತ್ತಿದ್ದಾರೆ. ಅಶ್ಲೀಲ ಆಡಿಯೋ ವಿಡಿಯೋ ಮೂಲಕ ಹಲವರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ತಾನೊಬ್ಬನೇ ಏಕಮೇವ ಬಿಜೆಪಿ ನಾಯಕನಾಗಲು ಅವರು ಹೊರಟಿದ್ದು, ಸುಳ್ಳು ಹರಡುವುದೊಂದೆ ಅಣ್ಣಾಮಲೈ ಹಾಗೂ ಬಿಜೆಪಿ ಪಕ್ಷದ ಅಜೆಂಡವಾಗಿದೆ. ಇಂತಹ ಪಕ್ಷ ತಮಿಳರಿಗೆ ಮತ್ತು ತಮಿಳುನಾಡಿಗೆ ಅಪಾಯಕಾರಿಯಾದದ್ದು” ಎಂಬ ಅಂಶಗಳು ನಿರ್ಮಲ್ ಕುಮಾರ್ ಹೇಳಿಕೆಯಲ್ಲಿದ್ದು, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಒಂದು ಪಕ್ಷದ ರಾಜ್ಯಾಧ್ಯಕ್ಷನ ವಿರುದ್ಧ ಅದೇ ಪಕ್ಷದವರು ಬಿಡುಗಡೆ ಮಾಡಿರುವ ಅತ್ಯಂತ ಆಘಾತಕಾರಿ ಹೇಳಿಕೆ ಇದಾಗಿದೆ ಎಂದು ತಮಿಳುನಾಡಿನ ಮಾಧ್ಯಮಗಳು ವಿಶ್ಲೇಷಿಸುತ್ತಿವೆ.

ಒಟ್ಟಿನಲ್ಲಿ ದೇಶದ ಹಲವೆಡೆ ಕೆಲಸ ಮಾಡುವ ಬಿಜೆಪಿ ಪಕ್ಷದ ಸುಳ್ಳಿನ ತಂತ್ರಗಾರಿಕೆ ತಮಿಳು ನಾಡಿನಲ್ಲಿ ಕೈಕೊಟ್ಟಿರುವುದು ದೇಶದಲ್ಲಿಂದು ಚರ್ಚೆಗೆ ಗ್ರಾಸವಾಗಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...