Homeಮುಖಪುಟಸನಾತನ ನಿರ್ಮೂಲನೆಯ ಬಗ್ಗೆ ಉದಯನಿಧಿ ಎಬ್ಬಿಸಿದ ಬಿರುಗಾಳಿ ಮತ್ತು ಪೆರಿಯಾರ್ ಪರಂಪರೆ

ಸನಾತನ ನಿರ್ಮೂಲನೆಯ ಬಗ್ಗೆ ಉದಯನಿಧಿ ಎಬ್ಬಿಸಿದ ಬಿರುಗಾಳಿ ಮತ್ತು ಪೆರಿಯಾರ್ ಪರಂಪರೆ

- Advertisement -
- Advertisement -

History Repeat Itself ಎಂಬುದು ಇತಿಹಾಸ ಪ್ರಖ್ಯಾತ ನಾಣ್ನುಡಿ. ಅಂದರೆ ಇತಿಹಾಸ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ. ಈ ಮಾತಿನಂತೆ ತಮಿಳುನಾಡಿನಲ್ಲಿ ಪೆರಿಯಾರ್ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿದ್ದ “ಸನಾತನ ನಿರ್ಮೂಲನಾ” ಚಳವಳಿ ಇದೀಗ ಸ್ಟಾಲಿನ್ ಮತ್ತು ಉದಯನಿಧಿ ಕಾಲದಲ್ಲಿ Upgarde Version 2.0 ಸ್ಥಿತಿ ಮುಟ್ಟಿದೆ. ಪರಿಣಾಮ ಯುವ ಸಚಿವ ಉದಯನಿಧಿ ಅವರ ಆ ಒಂದೇಒಂದು ಹೇಳಿಕೆ ಇದೀಗ ದೇಶದ ಪ್ರಧಾನಿ ಮೋದಿಯಿಂದ ಹಿಡಿದು ಸನಾತನ ಪರಿಪಾಲಕರವರೆಗೆ ಎಲ್ಲರಿಗೂ ಬಿಸಿ ಮುಟ್ಟಿಸಿಬಿಟ್ಟಿದೆ. ಸುಳ್ಳನ್ನೇ ಸಂಭ್ರಮಿಸುವ ಮಾಧ್ಯಮಗಳಂತೂ ಎಡೆಬಿಡದ ಕರ್ಣ ಕರ್ಕಶ ಕಾಯಕವನ್ನು ಮುಂದುವರಿಸಿವೆ.

“ಸನಾತನ ಎಂಬುದು ಡೆಂಗ್ಯೂ-ಚಿಕನ್ ಗುನ್ಯಾ ಇದ್ದಂತೆ. ಇದರ ನಿರ್ಮೂಲನೆ ನಮ್ಮೆಲ್ಲರ ಹೊಣೆ” ಎಂಬ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಇದ್ದಕ್ಕಿದ್ದಂತೆ ನಿರ್ವಾತದಲ್ಲಿ ಹುಟ್ಟಿದ ಹೊಸ ಹೇಳಿಕೆ ಏನಲ್ಲ. ಬದಲಾಗಿ ಈ ಹೇಳಿಕೆಯೂ ಸೇರಿದಂತೆ ಸನಾತನವನ್ನು ವಿರೋಧಿಸುವ ಇಂತಹ ಸಾವಿರ ಸಾವಿರ ಹೇಳಿಕೆಗಳ ನಿಜ ವಾರಸುದಾರ ದ್ರಾವಿಡ ಮಣ್ಣಿನ ಸಾಕ್ಷಿ ಪ್ರಜ್ಞೆಯಾದ ತಂದೈ ಪೆರಿಯಾರ್. ಸನಾತನದ ಕುರಿತ ಪೆರಿಯಾರ್ ಅವರ ಎಲ್ಲಾ ಹೇಳಿಕೆಗಳಿಗೂ ಪ್ರತಿಕ್ರಿಯಿಸುತ್ತಾ ಹೋದರೆ ಸನಾತನಿಗಳಿಗೆ ಬಹುಶಃ ಈ ಜನ್ಮ ಸಾಲದು.

ಹೀಗಾಗಿ ಉದಯನಿಧಿ ಸ್ಟಾಲಿನ್ ಹೇಳಿಕೆಯ ವಾದ-ವಿವಾದ ವಿಮರ್ಶೆಗೂ ಮುನ್ನ ತಮಿಳುನಾಡಿನಲ್ಲಿ ಡಿಎಂಕೆ ಎಂಬ ಪಕ್ಷಕ್ಕೆ ಬೀಜ ಬಿತ್ತಿದ್ದ, ಜಾತಿ ವಿನಾಶಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದ ದ್ರಾವಿಡ ಚಳುವಳಿಯ ಹರಿಕಾರ ಪೆರಿಯಾರ್ ಅವರ, ಸನಾತನ ಬಗೆಗಿನ ನಿಲುವು ಮತ್ತು ಹೇಳಿಕೆಗಳನ್ನು ಗಮನಿಸುವುದು ಈ ಹೊತ್ತಿನಲ್ಲಿ ಅತೀ ಮುಖ್ಯವಾದದ್ದು.

ಪೆರಿಯಾರ್ ವರ್ಸಸ್ ಸನಾತನ

ಬಹುಶಃ ಈ ದೇಶದಲ್ಲಿ ಸನಾತನದ ಬಗ್ಗೆ ಪೆರಿಯಾರ್ ಮತ್ತು ಅಂಬೇಡ್ಕರ್ ಮಾಡಿದಷ್ಟು ವಾಗ್ದಾಳಿಯನ್ನು ಮತ್ತ್ಯಾರು ಮಾಡಿರಲಾರರು. ಸನಾತನದ ವಿರುದ್ಧ ಪೆರಿಯಾರ್ ಅದೆಷ್ಟು ಆಕ್ರೋಶ ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳಬೇಕಾದರೆ, ಅವರೇ ಬರೆದಿರುವ “ಮಹಾಭಾರತ ಸಂಶೋಧನೆ” “ರಾಮಾಯಣ” “ಧರ್ಮ ಅಥವಾ ವಿಶ್ವದೃಷ್ಟಿ” ಸೇರಿದಂತೆ ಅವರ ಕೆಲವಾದರೂ ಪ್ರಮುಖ ಪುಸ್ತಕಗಳನ್ನು ಓದಬೇಕು.

ಈ ಪುಸ್ತಕಗಳಲ್ಲಿ ಪಂಡಿತ್ ರಮಾಬಾಯಿ ಸರಸ್ವತಿ ಎಂಬ ಓರ್ವ ಚಿತ್ಪಾವನ ಬ್ರಾಹ್ಮಣ ಹೆಣ್ಣುಮಗಳ ಜೀವನ ಚರಿತ್ರೆಯ ಬಗ್ಗೆ ಉಲ್ಲೇಖಿಸುತ್ತಾ ಪೆರಿಯಾರ್ ಅಕ್ಷರಶಃ ಬ್ರಾಹ್ಮಣವಾದದ ಸನಾತನದ ಚರ್ಮ ಸುಲಿಯುವ ಕೆಲಸ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. (ಗೂಗಲ್‌ನಲ್ಲಿ ಕೂಡ ಹುಡುಕಿ ಓದಿಕೊಳ್ಳಬಹುದು – Pandita Ramabai Sarasvati)

ರಮಾಬಾಯಿ ಸರಸ್ವತಿ

ಪಂಡಿತ್ ರಮಾಬಾಯಿ ಸರಸ್ವತಿ ಅವರ ತಂದೆ ಅನಂತಶಾಸ್ತ್ರಿ ಡೋಂಗ್ರೆ ವೇದ-ಸಂಸ್ಕೃತದಲ್ಲಿ ಪ್ರಖ್ಯಾತ ಪಂಡಿತರು. ತಮ್ಮ ಮಗಳು ಹಾಗೂ ಪತ್ನಿ ಲಕ್ಷ್ಮಿ ಅವರಿಗೆ ವೇದಗಳನ್ನು ಬೋಧಿಸಲು ಇಚ್ಛಿಸಿದ್ದರು. ಆದರೆ, ಹೆಣ್ಣುಮಕ್ಕಳಿಗೆ ವೇದಗಳನ್ನು ಕಲಿಸಲು ಸನಾತನಿಗಳ ತೀವ್ರ ಪ್ರತಿರೋಧ ಇತ್ತು. ತಮ್ಮ ಸಮಾಜದ ವಿರೋಧದ ನಡುವೆಯೂ ಅವರು ತಮ್ಮ ಮಗಳಿಗೆ ಶತಾಯಗತಾಯ ವೇದಗಳನ್ನು ಕಲಿಸುವ ಪಣತೊಟ್ಟಿದ್ದರು. ಪರಿಣಾಮ ಸನಾತನಿಗಳಿಗೆ ಹೆದರಿ ಊರನ್ನು ಬಿಟ್ಟು ಕಾಡು ಸೇರುವ ಸ್ಥಿತಿ ಎದುರಾಗಿತ್ತು. ಸನಾತನಿಗಳು ಏನೇ ಕಷ್ಟಪಟ್ಟರೂ ರಮಾಬಾಯಿ ವೇದ ಕಲಿಯುವುದನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕೊನೆಗೆ ರಮಾಬಾಯಿ ಅವರ ಪತಿ ತೀರಿಕೊಂಡ ನಂತರ ವಿಧವೆಯರು ವೇದ ಕಲಿಯುವಂತಿಲ್ಲ ಎಂದು ಆಕೆಗೆ ಸಮಾಜದಿಂದಲೇ ಬಹಿಷ್ಕಾರ ಹಾಕಲಾಗಿತ್ತು.

ಸನಾತನಿಗಳ ಕ್ರೌರ್ಯಕ್ಕೆ ಬೇಸತ್ತಿದ್ದ ಬ್ರಾಹ್ಮಣ ಮಹಿಳೆ ರಮಾಬಾಯಿ ಕೊನೆಗೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಇಂಗ್ಲೆಂಡ್‌ಗೆ ತೆರಳಿ ಶಿಕ್ಷಣ ಪಡೆದು ಭಾರತಕ್ಕೆ ಮರಳಿ ಜ್ಯೋತಿಬಾ ಫುಲೆ ಅವರ ಜೊತೆಗೂಡಿ ಸಮಾಜ ಸುಧಾರಣಾ ಕೆಲಸಕ್ಕೆ ಮುಂದಾಗಿದ್ದರು. 1890ರಲ್ಲಿ ಪುಣೆಯ ಕಿಡಗಾಂ (Kedgaon) ಎಂಬಲ್ಲಿ ಸ್ಥಾಪಿಸಲಾಗಿದ್ದ “ಮುಕ್ತಿ ಮಿಷನ್” ಕೇಂದ್ರ ಈಗಲೂ ಕಾರ್ಯನಿರ್ವಹಿಸುತ್ತಿದೆ.

ಎಂದೂ ಬದಲಾಗದ ಸನಾತನಿಗಳ ಮೌಢ್ಯಾಚರಣೆಯ ಕಾರಣಕ್ಕೆ ಬ್ರಾಹ್ಮಣ ಮಹಿಳೆಯಾಗಿದ್ದರೂ ರಮಾಬಾಯಿ ತಮ್ಮ ಜೀವಮಾನವಿಡೀ ಸಾಕಷ್ಟು ಕಷ್ಟಕೋಟಲೆಗಳನ್ನು ಎದುರಿಸಿದ್ದರು. ಇವರ ಜೀವನ ಕಥೆಯನ್ನು ಮುಂದಿಟ್ಟು ಮಾತನಾಡುವ ಪೆರಿಯಾರ್ “ಬ್ರಾಹ್ಮಣರಾಗಿದ್ದರೂ ಮಹಿಳೆ ಎಂಬ ಕಾರಣಕ್ಕೆ ಸನಾತನಿಗಳು ಇಷ್ಟೊಂದು ಹಿಂಸೆ ಕೊಡುತ್ತಾರೆ ಎಂದಾದರೆ ಸಾವಿರಾರು ವರ್ಷಗಳಿಂದ ನನ್ನ ದಲಿತ-ಹಿಂದುಳಿದ ಸಮಾಜದ ಜನರಿಗೆ ಇವರು ಎಷ್ಟೊಂದು ಹಿಂಸೆ ನೀಡಿರಬೇಡ?” ಎಂಬ ಪ್ರಶ್ನೆ ಎತ್ತುತ್ತಾರೆ.

ಇದನ್ನೂ ಓದಿ: ಮೂಢನಂಬಿಕೆಗಳಿಗೆ ಸವಾಲು ಹಾಕಬೇಕು, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಬೇಕು: ಮತ್ತೆ ಗುಡುಗಿದ ಉದಯನಿಧಿ ಸ್ಟಾಲಿನ್

ತಮ್ಮ ಬರವಣಿಗೆಗಳಲ್ಲಿ ಸನಾತನ ಪ್ರಣೀತ ಮಹಾಭಾರತದ ವಿರುದ್ಧವೂ ಕಿಡಿಕಾರಿರುವ ಪೆರಿಯಾರ್, “ದ್ರೌಪದಿಯ ಸೀರೆ ಎಳೆಸಿದ ದುರ್ಯೋಧನ ಸನಾತನಿಗಳ ದೃಷ್ಟಿಯಲ್ಲಿ ಅಧರ್ಮಿಯಾದರೆ, ಅದೇ ದ್ರೌಪದಿಯನ್ನು ಪಣಕ್ಕಿಟ್ಟ ಜೂಜಾಡಿದ್ದ ಪಾಂಡವರೇನು? ಧರ್ಮವಂತರೇ? ಸನಾತನದಲ್ಲಿ ಜೂಜಾಟವೇನು ಮೋಕ್ಷದ ದಾರಿಯೇ? ಇದೇ ಕಾರಣಕ್ಕೆ ಶಿಕ್ಷೆ ಕೊಡುವುದಾದರೆ ಕೃಷ್ಣ ಮೊದಲು ಶಿಕ್ಷೆ ಕೊಡಬೇಕಾದ್ದು ಪಾಂಡವರಿಗಲ್ಲವೇ? ಎಂದು ಪ್ರಶ್ನಿಸಿದ್ದರು. ಕುಲದ ಕಾರಣಕ್ಕೆ ಕರ್ಣನನ್ನು ಅಪಮಾನಿಸಿದ್ದ ಪಾಂಡವರಿಗಿಂತ ಕರ್ಣನ ಯೋಗ್ಯತೆಯನ್ನು ಗುರುತಿಸಿದ್ದ ದುರ್ಯೋಧನ ನಮ್ಮ ಆದರ್ಶ. ಕುತಂತ್ರದಿಂದ ಏಕಲವ್ಯನ ಬೆರಳ ಕೊಯ್ದವರು ನಿಜದ ಅಧರ್ಮಿಗಳು” ಎಂಬುದು ಪೆರಿಯಾರ್ ವಾದ.

ರಾಮಾಯಣದ ಬಗ್ಗೆಯೂ ಕಿಡಿಕಾರುವ ಪೆರಿಯಾರ್, “ಯಾರೋ ಒಬ್ಬ ಸೀತೆಯ ಬಗ್ಗೆ ಏನೋ ಹೇಳಿದ ಎಂಬ ಕಾರಣಕ್ಕೆ ರಾಮ ಸೀತೆಯನ್ನು ಬೆಂಕಿಗೆ ನೂಕಿದ. ಇದು ರಾಮಧರ್ಮವಂತೆ..! ಯಾರೋ ಒಬ್ಬ ರಾಮನ ಬಗ್ಗೆಯೂ ಏನಾದರೂ ಹೇಳಿದ್ದರೆ, ಆತನೂ ಬೆಂಕಿಗೆ ಬೀಳುತ್ತಿದ್ದನೇನು? ರಾಮನ ಅವತಾರವೇ ರಾವಣ ವಧೆಗಾಗಿ. ಸನಾತನಿಗಳ ಪ್ರಕಾರ ರಾವಣ ವಧೆ ಮುಂಚಿತವಾಗಿಯೇ ನಿರ್ಧರಿತವಾಗಿತ್ತು ಎಂಬುದಾದರೆ, ಸೀತೆಯ ಅಪಹರಣವೇನು ನಾಟಕವೇ? ಶೂದ್ರ ಎಂಬ ಕಾರಣಕ್ಕೆ ಶಂಭೂಕನನ್ನು ವಧೆ ಮಾಡಿದ ರಾಮ ನಮಗೆ ಆದರ್ಶವಾಗಲು ಸಾಧ್ಯವೇ?” ಎಂಬ ಪೆರಿಯಾರ್ ಅವರ ಕಟು ಟೀಕೆಗಳಿಗೆ ಉತ್ತರಿಸಲು ಸನಾತನಿಗಳು ಈವರೆಗೆ ತಡವರಿಸುತ್ತಿದ್ದಾರೆ.

ಕ್ರಿಸ್ತಪೂರ್ವ 2500ರಲ್ಲೇ ತಿರುವಳ್ಳುವರ್ ಬರೆದಿರುವ ವಚನವೊಂದರಲ್ಲಿ “ಪಿರಪ್ಪಿಕುಂ ಎಲ್ಲಾ ಉಯಿರುಕ್ಕುಂ ಸಿರಪ್ಪೊವ್ವ ಸೆಯ್ದೊಳಿಲ್ ವೇಟ್ರುಮಯ್ ಯಾನ್” ಎಂದು ಉಲ್ಲೇಖಿಸಲಾಗಿದೆ. ಅಂದರೆ ಹುಟ್ಟಿನಿಂದ ಎಲ್ಲಾ ಜೀವಿಗಳೂ ಸಮ. ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬುದೇ ಈ ವಚನದ ಸಾರ. ಈ ಮೂಲಕ ತಮಿಳು ಸಮುದಾಯ ತನ್ನ ಹುಟ್ಟಿನ ಕಾಲದಿಂದಲೂ ಸಮಾನತೆಯನ್ನು ಪರಿಪಾಲಿಸುತ್ತಿದೆ. ಆತ್ಮಾಭಿಮಾನದ ದಾರಿಯಲ್ಲಿ ದೇವರೇ ಅಡ್ಡಬಂದರೂ ಆತನನ್ನು ಪಕ್ಕಕ್ಕೆ ಸರಿಸಿ ಮುಂದೆ ನಡೆಯಬೇಕು ಎಂಬುದು ತಮಿಳರ ಬದುಕಿನ ಸಾರ. ಆದರೆ, ಕಂಚಿ ಶ್ರೀಗಳನ್ನೋ, ಪೇಜಾವರರನ್ನೋ ಕಂಡಕೂಡಲೇ ಕಾಲಿಗೆ ಬೀಳುವುದು ಸನಾತನ. ಮನುಷ್ಯನ ಕಾಲಿಗೆ ಮನುಷ್ಯ ಬೀಳುವುದು ಆತ್ಮಗೌರವಕ್ಕೆ ಕುತ್ತು ಎಂಬ ನಿಲುವಿನಲ್ಲಿ ಪೆರಿಯಾರ್ ಸ್ಪಷ್ಟವಾಗಿದ್ದರು.

ಸನಾತನ ಮತ್ತು ಹಿಂದೂ ಧರ್ಮದ ನಡುವಿನ ವ್ಯತ್ಯಾಸದ ಬಗ್ಗೆಯೂ ಪೆರಿಯಾರ್ ಸಾಕಷ್ಟು ಬರೆದಿದ್ಧಾರೆ. “ನಾಲ್ಕು ಜನ ಹಿಂದೂಗಳ ಬಳಿ ನೀನೇಕೆ ಹಿಂದೂ? ಎಂದು ಪ್ರಶ್ನೆ ಮಾಡಿದರೆ ನಾಲ್ಕು ರೀತಿಯ ಉತ್ತರ ಬರುತ್ತದೆಯೇ ವಿನಃ ಹಿಂದೂ ಎಂದರೆ ಏನೆಂಬುದರ ಕುರಿತು ಅವರಿಗೊಂದು ಸ್ಪಷ್ಟತೆಯೇ ಇರುವುದಿಲ್ಲ. ಆದರೆ, ಓರ್ವ ಬ್ರಾಹ್ಮಣನ ಬಳಿ ನೀನೇಕೆ ಸನಾತನಿ? ಎಂಬ ಪ್ರಶ್ನೆಯನ್ನು ಮುಂದಿಟ್ಟು ನೋಡಿ ಮನುಧರ್ಮ ಶಾಸ್ತ್ರದಿಂದ ವೇದಗಳವರೆಗೆ ಬದಲಾವಣೆ ಒಪ್ಪದ ಬ್ರಾಹ್ಮಣ್ಯವನ್ನಷ್ಟೇ ಕೊಂಡಾಡುವ, ಶೂದ್ರ-ದಲಿತ ಜೀವವಿರೋಧಿಯಾಗಿರುವ ಸನಾತನದ ಬಗ್ಗೆ ಖಚಿತ ಮಾಹಿತಿ ನೀಡುತ್ತಾನೆ. ಆ ಮಾಹಿತಿಯಲ್ಲೇ ಹಿಂದೂ ಮತ್ತು ಸನಾತನಿಗಳ ನಡುವಿನ ವ್ಯತ್ಯಾಸ ಅರ್ಥವಾಗಿಬಿಡುತ್ತದೆ.

“ಸನಾತನ ಅಥವಾ ಹಿಂದೂ ಧರ್ಮದ ಅಡಿಪಾಯವೇ ಜಾತಿ, ಜಾತಿಗಳ ಸಂಕೋಲೆಯ ಗುಚ್ಚವೇ ಸನಾತನ/ಹಿಂದೂ ಧರ್ಮ. ಸಮಾನತೆಯನ್ನು ಬೋಧಿಸದ ಯಾವುದೇ ಧರ್ಮ ಧರ್ಮವೇ ಅಲ್ಲ, ರಾಮಾಯಣ ಮಹಾಭಾರತವೆಲ್ಲ ದಕ್ಷಿಣದ ರಾಜರುಗಳನ್ನು ರಾಕ್ಷಸರು ಎಂಬ ನೆಲೆಯಲ್ಲಿ ಉತ್ತರ ಭಾರತೀಯರು ಸೃಷ್ಟಿಸಿರುವ ದುಷ್ಟ ಕಾವ್ಯಗಳು. ಇವೆಲ್ಲ ಶೈವ ಪರಂಪರೆಯ ವಿರುದ್ಧ ವೈಷ್ಣವರು ಹೆಣೆದಿರುವ ಪ್ರೊಪಗಾಂಡ” ಎಂಬುದು ಪೆರಿಯಾರ್ ಅವರ ಸ್ಪಷ್ಟ ನಿಲುವಾಗಿತ್ತು. ‘Riddles of Hinduism’ ಎಂಬ ಪುಸ್ತಕದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಹ ಇದೇ ವಿಚಾರಗಳನ್ನು ಉಲ್ಲೇಖಿಸಿದ್ದಾರೆ.

ದ್ರಾವಿಡ ಚಳವಳಿ ಕಟ್ಟಿ ಶತಮಾನಗಳೇ ಕಳೆದರೂ ಹಿಂದಿ ಮತ್ತು ಕೋಮುವಾದ ತಮಿಳುನಾಡಿನಲ್ಲಿ ಕಾಲಿಡದಂತೆ ನೋಡಿಕೊಂಡಿರುವ ಪೆರಿಯಾರ್ ಪ್ರಣೀತ ಹೇಳಿಕೆಯೇ ಇದೀಗ ಉದಯನಿಧಿ ಬಾಯಿಂದ ಹೊರಬಂದಿದೆ. “ದೇವರನ್ನು ಕಂಡುಹಿಡಿದವನು ಅಯೋಗ್ಯ, ಧರ್ಮವನ್ನು ನಂಬುವವನು ಮುಠ್ಠಾಳ” ಎಂಬ ಪೆರಿಯಾರ್ ಅವರ ಮತ್ತೊಂದು ಹೇಳಿಕೆಗಿಂತ ಇದು ಕಟುವೇನಲ್ಲ. ಮತ್ತು ಇಂತಹ ಹೇಳಿಕೆಗಳನ್ನು ಕೇಳುತ್ತಿರುವುದು ತಮಿಳರಿಗೂ ಹೊಸತೇನಲ್ಲ. ಇಂತಹ ಹೇಳಿಕೆಯಿಂದ ನಮ್ಮ ಧರ್ಮಕ್ಕೆ, ಮನಸ್ಸಿಗೆ ಘಾಸಿಯಾಗಿದೆ ಎಂದು ಹೇಳಿಕೊಳ್ಳುವವರನ್ನು ದುರ್ಬೀನು ಹಾಕಿ ಹುಡುಕಿದರೂ ತಮಿಳುನಾಡಿನಲ್ಲಿ ಒಬ್ಬನೂ ಸಿಗುವುದಕ್ಕೆ ಕಷ್ಟವೇನೋ.

ಸೂಕ್ಷ್ಮವಾಗಿ ಗಮನಿಸಿದರೆ, ಉದಯನಿಧಿ ಹೇಳಿಕೆಗೆ ಕಟು ವಿಮರ್ಶೆಗಳು ಎದುರಾಗುತ್ತಿರುವುದು ಉತ್ತರ ಭಾರತದಿಂದಲೇ ವಿನಃ ದಕ್ಷಿಣ ಭಾರತದಿಂದಲ್ಲ. ತಮಿಳುನಾಡು ಕೇರಳ, ಆಂಧ್ರಪ್ರದೇಶ, ತೆಲಂಗಾಣ ಜನ ಹೆಚ್ಚಾಗಿ ಈ ಹೇಳಿಕೆಗೆ ಪ್ರತಿಕ್ರಿಯಿಸಿಯೇ ಇಲ್ಲ. ಇನ್ನೂ ಬಿಜೆಪಿ ತೆಕ್ಕೆಯಿಂದ ಸಂಪೂರ್ಣ ಬಿಡಿಸಿಕೊಳ್ಳುವ ತವಕದಲ್ಲಿರುವ ಕರ್ನಾಟಕದಲ್ಲಿ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆಯೇ ವಿನಃ ಜನರಂತೂ ಕೋಮು ಮತ್ತು ದ್ವೇಷ ರಾಜಕಾರಣದ ವಿರುದ್ಧ ಸಾಕಷ್ಟು ಎಚ್ಚೆತ್ತುಕೊಂಡಿದ್ದಾರೆಂದೇ ಹೇಳಬಹುದು.

ಆದರೆ, ಜನರ ಈ ಎಚ್ಚರಿಕೆ ಬಿಜೆಪಿ ಮತಬೇಟೆಗೆ ತಡೆಗೋಡೆಯಾಗಲಿದೆ, 2024ರ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಲಿದೆ. ಹೊಸದಾಗಿ ಸೃಷ್ಟಿಯಾಗಿರುವ ವಿರೋಧ ಪಕ್ಷಗಳ INDIA ಒಕ್ಕೂಟವೂ ಸಹ ಬಿಜೆಪಿಗೆ ದೊಡ್ಡ ಮಟ್ಟದ ಬೆದರಿಕೆಯನ್ನೊಡ್ಡಿರುವುದು ಸುಳ್ಳಲ್ಲ. ಅಲ್ಲದೆ, ಜನರ ಎದುರು ತಾವು ಮಾಡಿರುವ ಕೆಲಸಗಳನ್ನು ಇಟ್ಟುಕೊಂಡು ಮತಕೇಳುವ ಪರಿಸ್ಥಿತಿಯಲ್ಲಿರದ ಮೋದಿ ಅಂಡ್ ಟೀಮ್ ತನ್ನ ಎಂದಿನ ಭಾವನಾತ್ಮಕ ವಿಚಾರದೊಂದಿಗೆ ಈ ಚುನಾವಣೆಯನ್ನೂ ಎದುರುಗೊಳ್ಳಲು ನಿಶ್ಚಯಿಸಿದ್ದು, ರಾಜಕೀಯವಾಗಿ ಉದಯನಿಧಿ ಹೇಳಿಕೆಯನ್ನು ಬಳಸಿಕೊಳ್ಳುತ್ತಿದೆಯಷ್ಟೆ.

ಹಾಗೆ ನೋಡಿದರೆ ಈಗ ತುರ್ತು ಚರ್ಚೆಯಾಗಬೇಕಿರುವುದು “ಹಿಂದೂಗಳೆಲ್ಲರೂ ಕುಲಕಸುಬನ್ನೇ ಪಾಲಿಸಬೇಕು, ಹೆಣ್ಣಿನ ಶೀಲವನ್ನು ಉಳಿಸುವ ಸತಿ ಸಹಗಮನ ಪದ್ಧತಿಯೇ ಹಿಂದೂ ಧರ್ಮದ ಆತ್ಮ” ಎಂಬ ಅಯೋಗ್ಯ ಹೇಳಿಕೆ ನೀಡಿರು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ಬಗ್ಗೆಯೇ ವಿನಃ ಉದಯನಿಧಿ ಬಗ್ಗೆಯಲ್ಲ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...