ಹಣ ಪಡೆದು ಬಿಜೆಪಿ ಟಿಕೆಟ್ ಕೊಟ್ಟಿರುವ ಬಗ್ಗೆ ಊಹಾಪೋಹ ಇದೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಗೆ ಐದು ಕೋಟಿ ವಂಚಿಸಿದ ಪ್ರಕರಣದ ಬಗ್ಗೆ ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಹಣ ಪಡೆದ ಬಗ್ಗೆ ಕೆಲವು ಕಡೆ ಸುದ್ದಿ ಹೊರಗೆ ಬರುತ್ತಿವೆ, ಇನ್ನೂ ಕೆಲವೆಡೆ ಹೊರಗೆ ಬರುತ್ತಿಲ್ಲ. ಟಿಕೆಟ್ ಕೊಡಿಸಲು ಇಂಥದ್ದೊಂದು ಟೀಮ್ ರೆಡಿಯಾಗಿದೆ ಅಂದರೆ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕು. ಮಾಹಿತಿ ಪ್ರಕಾರ ಹಿಂದೂ ಕಾರ್ಯಕರ್ತರೇ ಪ್ರಕರಣದಲ್ಲಿದ್ದಾರೆ. ಕನಕಗಿರಿಯಲ್ಲಿ ಟಿಕೆಟ್ ಡೀಲ್ ವಿಷಯಕ್ಕೆ ದೂರು ದಾಖಲಾಗಿದೆ. ದೂರು ಕೊಡದೆ ಇರುವವರು ಇನ್ನೂ ಸಾಕಷ್ಟು ಜನ ಇರಬಹುದು?” ಎಂದು ಕೇಳಿದರು.
”ಕೆಲವೇ ವ್ಯಕ್ತಿಗಳ ಕೈಯಲ್ಲಿ ಬಿಜೆಪಿ ಇದೆ ಎಂದು ನಾನು ಹೇಳಿದ್ದೆ. ಅದು ಈಗ ಪ್ರೂವ್ ಆಗುತ್ತಿದೆ. ವ್ಯಕ್ತಿಯನ್ನು ನೋಡಿ ಟಿಕೆಟ್ ಕೊಡುವ ಪ್ರಕ್ರಿಯೆ ಮೊದಲು ಇತ್ತು. ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೆಟ್ ಕೊಡಿಸಿದ್ದೇನೆ. ರಾಮದುರ್ಗದಲ್ಲಿ ರಿಯಲ್ ಎಸ್ಟೇಟ್ ವ್ಯಕ್ತಿಗೆ ಟಿಕೆಟ್ ಕೊಡುತ್ತಾರೆ. ಏನೋ ವ್ಯವಹಾರ ನಡೆದಿದೆ ಅನ್ನೋದಂತೂ ಸತ್ಯ” ಎಂದು ಹೇಳಿದರು.
”ಪ್ರಾಥಮಿಕ ಹಂತದಲ್ಲಿ ವ್ಯವಹಾರ ನಡೆದಿರುವ ಬಗ್ಗೆ ಸಾಬೀತಾಗಿದೆ. ಚೈತ್ರಾ ಕುಂದಾಪೂರ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಚೈತ್ರಾ ಕುಂದಾಪೂರ ಪ್ರಕರಣ ಹೊರಬರುತ್ತಿದ್ದಂತೆ ಕೆಲವರಿಗೆ ಧೈರ್ಯ ಬಂದಿದೆ” ಎಂದರು.
ಈದ್ಗಾ ಮೈದಾನದ ಹೋರಾಟದಲ್ಲಿ ಜಗದೀಶ್ ಶೆಟ್ಟರ್ ವಿರುದ್ದವೂ ಬಿಜೆಪಿ ಕಾರ್ಯಕರ್ತರು ದಿಕ್ಕಾರ ಕೂಗಿದ ವಿಚಾರವಾಗಿ ಮಾತನಾಡಿದ ಅವರು, ”ಬಿಜೆಪಿಗೆ ನಾನು ಅಂದರೆ ಭಯ. ನಾನು ಪಕ್ಷ ಬಿಟ್ಟು ಹೋದ ಮೇಲೆ ಏನಾಗಿದೆ ಅನ್ನೋದು ಗೊತ್ತಾಗಿದೆ. ಅದನ್ನು ಇನ್ನೂ ಬಿಜೆಪಿ ನಾಯಕರಿಗೆ ಅರಗಿಸಿಕೊಳ್ಳಲು ಆಗಿಲ್ಲ” ಎಂದು ಹೇಳಿದರು..
”ಜಗದೀಶ್ ಶೆಟ್ಟರ್ ಅವರನ್ನ ವಿಧಾನಸಭೆ ಚುನಾವಣೆಯಲ್ಲಿ ಟಾರ್ಗೆಟ್ ಮಾಡಿದ್ದೀರಿ. ಇವಾಗಲೂ ಟಾರ್ಗೆಟ್ ಯಾಕೆ? ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ನನ್ನ ಭಯ ಆರಂಭವಾಗಿದೆ. ಭಯ ಇರುವ ಕಾರಣಕ್ಕೆ ಪದೇಪದೆ ನನ್ನ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ಬಿಜೆಪಿಗೆ ನಷ್ಟ ಹೊರತು ಲಾಭ ಅಲ್ಲ. ಪದೇಪದೆ ಶೆಟ್ಟರ್ ಹೆಸರು ಹೇಳಿದರೆ ನೀವು ಉದ್ಧಾರವೂ ಆಗುವುದಿಲ್ಲ” ಎಂದರು.
”ಈದ್ಗಾ ಮೈದಾನದಲ್ಲಿ ಗಣೇಶ ಆಚರಣೆ ಮಾಡಿ, ಯಾರು ಬೇಡಾ ಅಂತಾರೆ? ನಾನು ಪ್ರತಿ ವರ್ಷ ಮನೆಯಲ್ಲಿ ಗಣೇಶ ಕೂರಿಸುತ್ತೇನೆ. ಕೆಲವರು ಮನೆಯಲ್ಲಿ ಗಣೇಶ ಕೂರಿಸಲ್ಲ. ತೋರಿಕೆಗೆ ಮಾಡುತ್ತಾರೆ” ಎಂದರು.
”ಮಹಾದಾಯಿ ಬಗ್ಗೆ ಹೋರಾಟ ಮಾಡಿ, ಮೋದಿ ಬಂದು ಒಂಬತ್ತು ವರ್ಷ ಆಯ್ತು. ಹನಿ ನೀರು ಕೊಡಲು ಇಷ್ಟು ವರ್ಷ ಬೇಕಾ? ಮಹದಾಯಿ ನೀರು ಕೊಡಿ… ನಿಮ್ಮ ಜನ್ಮ ಸಾರ್ಥಕ ಆಗತ್ತದೆ. ಅಲ್ಲದೆ, ಪ್ರತಿ ವರ್ಷ ಕಳಸಾ ಬಂಡೂರಿ ಹೆಸರಲ್ಲಿ ವೋಟ್ ತೆಗೆದುಕೊಳ್ಳುವುದಾ? ಮೋದಿ ಅವರಿದ್ದಾಗಲೇ ಕಳಸಾ ಬಂಡೂರಿ ಮುಕ್ತಾಯ ಮಾಡಿ” ಎಂದರು.
ಇದನ್ನೂ ಓದಿ: ಕರ್ನಾಟಕ ಮಾದರಿಯಲ್ಲಿ ತೆಲಂಗಾಣ ಚುನಾವಣೆಗೆ 6 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್