ಪೋಸ್ಟ್ಕಾರ್ಡ್ ನ್ಯೂಸ್ ಎಂಬ ಫೇಕ್ನ್ಯೂಸ್ ಪೋರ್ಟಲ್ನ ಸಂಸ್ಥಾಪಕ ಮಹೇಶ ವಿಕ್ರಮ ಹೆಗಡೆಯನ್ನು ಸಿಐಡಿ ಪೊಲೀಸರು ಫೇಕ್ ಪತ್ರದ ಸೃಷ್ಟಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ. ಈ ಸುದ್ದಿ ರಾಜ್ಯಾದ್ಯಂತ ತಲುಪುವ ಮೊದಲೇ ಬಿಜೆಪಿಯ ಒಂದಿಬ್ಬರು ನಾಯಕರು ಟ್ವೀಟ್ ಮಾಡಿ, ಮಹೇಶ ಬಂಧನ ಖಂಡನೀಯ ಎಂದಿದ್ದರು!! ಪೋಸ್ಟ್ಕಾರ್ಡ್ ಎನ್ನುವುದು ಬಿಜೆಪಿ ಪ್ರಾಯೋಜಿತ ಪೋರ್ಟಲ್ ಎಂಬುದಂತೂ ಹೊಸ ವಿಷಯವೇನಲ್ಲ ಬಿಡಿ…
ಸಚಿವ ಎಂಬಿ, .ಪಾಟೀಲರ ಹೆಸರಿನಲ್ಲಿ ಫೋರ್ಜರಿ ಪತ್ರವನ್ನು ಸೃಷ್ಟಿಸಿದ ಪ್ರಕರಣದ ವಿಚಾರಣೆ ತೀವ್ರಗೊಂಡಿದ್ದು, ಅದರ ಭಾಗವಾಗಿ ನಿನ್ನೆ ಏಪ್ರಿಲ್ 24ರಂದು ಧಾರವಾಡ ಪೊಲೀಸರು ಶೃತಿ ಬೆಳ್ಳಕ್ಕಿ ಎಂಬ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಶೃತಿ ಧಾರವಾಡ ಬಿಜೆಪಿ ಗ್ರಾಮೀಣ ವಿಭಾಗದ ಅಧ್ಯಕ್ಷ ಪರಮೇಶ ಉಳವಣ್ಣವರ್ ಪತ್ನಿಯಾಗಿದ್ದು, ಸೋನಿಯಾರಿಗೆ ಎಂ. ಬಿ. ಪಾಟೀಲರು ಬರೆದಿದ್ದ ‘ಫೇಕ್’ ಪತ್ರವನ್ನು ಉಲ್ಲೇಖಿಸಿ, ಕಾಂಗ್ರೆಸ್ ವಿರುದ್ಧ ಚುನಾವಣಾ ಭಾಷಣ ಮಾಡುವ ಸಂದರ್ಭದಲ್ಲಿ ಸಮುದಾಯಗಳಿಗೆ ಅವಮಾನವಾಗುವಂತೆ ಮಾತಾಡಿದ್ದರು. ತಮ್ಮ ಆ ಭಾಷಣವನ್ನು ಫೇಸ್ಬುಕ್ನಲ್ಲಿ ಹರಿಬಿಟ್ಟಿದ್ದರು. ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ವಿರುದ್ಧ ಪುತೂರಿ ನಡೆಸಲು ಬಿಜೆಪಿ ನಾಯಕರು ಈ ಕಾರ್ಯಕರ್ತೆಯನ್ನು ಬಳಸಿಕೊಂಡು, ವಿಜಯವಾಣಿಯಲ್ಲಿ ಬಂದಿದ್ದ ಫೇಕ್ ಪತ್ರದ ಕುರಿತು ಸುದ್ದಿ ಹರಡಲು ಯತ್ನಿಸಿದ್ದರು.
ಹಾಗೆಯೇ ನಿನ್ನೆ ‘ಫೇಕ್’ ಪತ್ರದ ರೂವಾರಿ ಎನ್ನಲಾದ ಪೋಸ್ಟ್ಕಾರ್ಡ್ನ ಮಹೇಶ ಹೆಗಡೆಯ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.
ಹಿನ್ನೆಲೆ ಕೆದಕುತ್ತ….
ಈ ಫೇಕ್ ಪತ್ರ ಮೊದಲ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತಕ್ಕೆ ಬಂದಿದ್ದು 2017ರಲ್ಲಿ ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ
ಚಳವಳಿ ಜೋರಾಗಿದ್ದ ಸಂದರ್ಭದಲ್ಲಿ. ನಂತರ ಕಳೆದ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ. ಕಾಂಗ್ರೆಸ್ ಅಧ್ಯಕ್ಷೆಗೆ ಅಂದಿನ ಜಲ ಸಂಪನ್ಮೂಲ ಸಚಿವ (ಈಗಿನ ಗೃಹ ಸಚಿವ) ಬರೆದ ಪತ್ರ ಇದೆಂದು ಸೃಷ್ಟಿಸಲಾಗಿತ್ತು. ಜಾಗತಿಕ ಕ್ಯಾಥೋಲಿಕ್ ಸಂಘಟನೆಗಳ ಆಶಯದಂತೆ ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಉದ್ದೇಶಕ್ಕಾಗಿ ಎಂ.ಬಿ. ಪಾಟೀಲರು ಸೋನಿಯಾ ಗಾಂಧಿಯವರಿಗೆ ಭಿನ್ನವಿಸುವ
ರೀತಿಯಲ್ಲಿ ಪತ್ರವನ್ನು ಸೃಷ್ಟಿಸಲಾಗಿತ್ತು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಹಿಂದೆ ಸೋನಿಯಾ ಗಾಂಧಿ ಮತ್ತು ಕ್ಯಾಥೊಲಿಕ್ ಸಂಘಟನೆಗಳ ಕೈವಾಡ ಇದೆ ಎಂದೂ, ಹಿಂದೂ ಧರ್ಮಕ್ಕೆ ಅಪಾಯ ಕಾದಿದೆ ಎಂದೂ ಸುಳ್ಳು ಹರಡಲಾಗಿತ್ತು. ಇದನ್ನು ಮುಂಚೂಣಿಗೆ ತಂದಿದ್ದು ಪೋಸ್ಟ್ಕಾರ್ಡ್ ನ್ಯೂಸ್ ಎಂಬ ಫೇಕು ಖ್ಯಾತಿಯ ಪೋರ್ಟಲ್.
ಆಗಲೇ ಅನೇಕ ಫ್ಯಾಕ್ಟ್ ಚೆಕಿಂಗ್ ಪೋರ್ಟಲ್ಗಳು ಈ ಪತ್ರ ನಕಲಿ ಎಂದು ಪ್ರೂವ್ ಮಾಡಿದ್ದವು. ಬಿಎಲ್ಡಿಇಎ ಸಂಸ್ಥೆಯ ಲೆಟರ್ಹೆಡ್ನ ಫೋರ್ಜರಿ ಮಾಡಲಾಗಿತ್ತಲ್ಲದೇ, ಎಂ.ಬಿ. ಪಾಟೀಲರ ಸಹಿಯನ್ನೂ ಫೋರ್ಜರಿ ಮಾಡಲಾಗಿತ್ತು. ಆಗ ಚುನಾವಣೆ ಗದ್ದಲದಲ್ಲಿ ಪೊಲೀಸರೂ ಬಹಳ ತಲೆ ಕೆಡಿಸಿಕೊಂಡಿರಲಿಲ್ಲ. ರಾಜ್ಯ ಬಿಜೆಪಿ ಘಟಕವೂ ಅದೇ ಪತ್ರ ಬಳಸಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿತ್ತು.
ಈಗ ಅದೇ ಪತ್ರವನ್ನು ಕಳೆದ ವಾರ ಏಪ್ರಿಲ್ 16ರಂದು ಮತ್ತೆ ವಿಜಯವಾಣಿ ಪ್ರಕಟಿಸಿ ಎಂ.ಬಿ. ಪಾಟೀಲರ ಆಕ್ರೋಶಕ್ಕೆ ಗುರಿಯಾಗಿತ್ತು. ಇದನ್ನು ನಾನುಗೌರಿ.ಕಾಮ್ ಸವಿವರವಾಗಿ ವರದಿ ಮಾಡಿ, ಫೇಕ್ನ್ಯೂಸ್ ಎಂಬುದನ್ನು ಜನರ ಗಮನಕ್ಕೆ ತಂದಿತ್ತು.
ಈಗ ಎಂ.ಬಿ. ಪಾಟೀಲರೇ ಗೃಹ ಸಚಿವರಾಗಿರುವುದರಿಂದ ಪೊಲೀಸರು ತನಿಖೆಯನ್ನು ಕ್ಷಿಪ್ರವಾಗಿ ನಡೆಸುತ್ತಿರುವಂತೆ ಕಾಣುತ್ತಿದೆ. ತನಿಖೆ ಫೇಕುವೀರರ ಬುಡಕ್ಕೆ ತಲುಪಿದರಷ್ಟೇ ಹಿಂದಿರುವ ‘ನಾಯಕರ’ ಬಣ್ಣ ಬಯಲಾದೀತು.