ಕಳೆದ ತಿಂಗಳು ಸಂಸತ್ತು ಅಂಗೀಕರಿಸಿದ ಕೃಷಿ ಮಸೂದೆಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತು ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರಕ್ಕೆ ನೋಟಿಸ್ ನೀಡಿದೆ. ತೀವ್ರ ವಿರೋಧದ ನಡುವೆಯೂ ಈ ಮಸೂದೆಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಒಪ್ಪಿಗೆಯನ್ನು ಪಡೆದು ಕಾನೂನುಗಳಾಗಿವೆ.
ಛತ್ತಿಸ್ಗಢ ಕಿಸಾನ್ ಕಾಂಗ್ರೆಸ್ ಪ್ರತಿನಿಧಿಸುವ ರಾಕೇಶ್ ವೈಷ್ಣವ್ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ನೋಟಿಸ್ ನೀಡಲಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, ಎಎಸ್ ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರ ತ್ರಿಸದಸ್ಯ ಪೀಠ ನೋಟಿಸ್ ನೀಡಿ, ಅಟಾರ್ನಿ ಜನರಲ್ (ಎಜಿ) ಕೆ.ಕೆ.ವೇಣುಗೋಪಾಲ್ ಅವರಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೋರಿದೆ.
ಛತ್ತಿಸ್ಗಢದಲ್ಲಿ ಸ್ಥಳೀಯ ಕಾನೂನುಗಳನ್ನು ರಹಸ್ಯವಾಗಿ ರದ್ದುಗೊಳಿಸಿ, ಹೊಸ ಕೃಷಿ ಮಸೂದೆಗಳು ಜಾರಿ ಮಾಡಿದ್ದಾರೆ ಹಾಗಾಗಿ ಇವುಗಳನ್ನು ತಡೆಯಬೇಕು. ನನ್ನ ಕಕ್ಷಿದಾರ ರಾಕೇಶ್ ವೈಷ್ಣವ್ ಈ ಆದೇಶವನ್ನು ಪ್ರಶ್ನಿಸಿ ಛತ್ತಿಸ್ಗಢ ಹೈಕೋರ್ಟ್ನಲ್ಲೂ ಅರ್ಜಿ ಸಲ್ಲಿಸಿದ್ದರು ಎಂದು ಅರ್ಜಿದಾರರ ಪರ ವಕೀಲ ಪಿ.ಪರಮೇಶ್ವರನ್ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?
ನ್ಯಾಯಪೀಠವು “ಈ ವಿಷಯದಿಂದ ಬೇರೆಲ್ಲೋ ಅಥವಾ ಇನ್ನೊಂದು ಸಮಸ್ಯೆ ಉದ್ಭವಿಸುವ ಕಾರಣದಿಂದ ನಾವು ನೋಟಿಸ್ ನೀಡುತ್ತೇವೆ” ಎಂದು ಹೇಳಿದೆ. ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ನಾಲ್ಕು ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ (ಎಜಿ) ಕೆ.ಕೆ.ವೇಣುಗೋಪಾಲ್ ಜೊತೆಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಎಎಸ್ಜಿ ಕೆಎಂ ನಟರಾಜ್ ಹಾಜರಿದ್ದರು.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಕರ್ಯ) ಮಸೂದೆ ಮತ್ತು ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಆಶ್ವಾಸನೆ ಮತ್ತು ಕೃಷಿ ಸೇವಾ ಒಪ್ಪಂದ ಮಸೂದೆ, ಅವಶ್ಯ ವಸ್ತು/ಪದಾರ್ಥಗಳ (ತಿದ್ದುಪಡಿ) ಕಾಯ್ದೆ ಮಸೂದೆಗಳನ್ನು ಸಂಸತ್ತು ಅಂಗೀಕರಿಸಿದೆ.
ವಿವಾದಿತ ಕೃಷಿ ಮಸೂದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು, ಭಾರತ್ ಬಂದ್, ಪಂಜಾಬ್ ಬಂದ್, ಕರ್ನಾಟಕ ಬಂದ್ ಮಾಡಲಾಯಿತು. ಮಸೂದೆಗಳ ವಾಪಾಸಾತಿಗೆ ಆಗ್ರಹಿಸಿ ಪ್ರತಿಭಟನೆಗಳು ಇನ್ನು ಜೋರಾಗಿವೆ. ಪ್ರತಿಪಕ್ಷಗಳು, ರೈತ ಸಂಘಟನೆಗಳು, ಕೂಲಿ ಕಾರ್ಮಿಕರ ಸಂಘಟನೆಗಳು, ವಿದ್ಯಾರ್ಥಿ ಸಮೂಹಗಳು ಪ್ರತಿಭಟನೆಯಲ್ಲಿ ಭಾಗವಹಿಸಿವೆ.
ವಿಪಕ್ಷಗಳು ಮಸೂದೆ ಕುರಿತು ರೈತರಿಗೆ ಸುಳ್ಳು ವದಂತಿಗಳನ್ನು ನಂಬಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಮಸೂದೆಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿರುವ ಪಂಜಾಬ್, ಹರಿಯಾಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದರು.