ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ), ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಸೇರಿದಂತೆ ಹಲವಾರು ರೈತ ಸಂಘಟನೆಗಳು ಶನಿವಾರ (ಫೆ.7) ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ವಿರೋಧಿಸಿದ್ದು, ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ಘೋಷಿಸಿವೆ.
ಈ ಕುರಿತು ಹೇಳಿಕ ಬಿಡುಗಡೆ ಮಾಡಿರುವ ಎಸ್ಕೆಎಂ, ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟು ಭಾರತೀಯ ಕೃಷಿಯನ್ನು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾಡುವ ‘ಸಂಪೂರ್ಣ ಶರಣಾಗತಿ’ಯಾಗಿದೆ. ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್ಕೆಎಂ ನಾಯಕರು, ದೇಶದಾದ್ಯಂತ ಹಳ್ಳಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುವುದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಗಳನ್ನು ಸುಡಲಾಗುವುದು ಎಂದು ಹೇಳಿದ್ದಾರೆ. ಫೆಬ್ರವರಿ 12ರಂದು ನಡೆಯಲಿರುವ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಎಐಕೆಎಸ್ ನಾಯಕ ಕೃಷ್ಣ ಪ್ರಸಾದ್ ಮಾತನಾಡಿ, ಈ ಒಪ್ಪಂದವು ಕೃಷಿ ಕ್ಷೇತ್ರದ ಮೇಲೆ ಆಳವಾದ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. ಈ ಒಪ್ಪಂದದಿಂದಾಗಿ ವಿದೇಶಿ ಮಾರುಕಟ್ಟೆಯಿಂದ ಒಣಗಿದ ಡಿಸ್ಟಿಲರ್ಸ್ ಧಾನ್ಯಗಳು, ಪ್ರಾಣಿ ಆಹಾರಕ್ಕಾಗಿ ಬಳಸುವ ಕೆಂಪು ಜೋಳ ಮತ್ತು ಸೋಯಾಬೀನ್ ಎಣ್ಣೆಯಂತಹ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಮುಕ್ತವಾಗಿ ಪ್ರವೇಶ ಪಡೆಯಲಿವೆ. ಇದು ಸ್ಥಳೀಯ ರೈತರ ಮೇಲೆ ಒತ್ತಡ ಹೇರುವುದಲ್ಲದೆ, ಅಂತಿಮವಾಗಿ ದೇಶದ ಹೈನುಗಾರಿಕೆ ವಲಯದ ಮೇಲೂ ಗಂಭೀರವಾದ ಹೊಡೆತ ನೀಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದಗಳು ಅವರ “ಸ್ಥಗಿತ” ಆರ್ಥಿಕತೆಗಳಿಗೆ ಲಾಭ ತರುವ ಉದ್ದೇಶವನ್ನು ಹೊಂದಿವೆಯೇ ಹೊರತು, ಭಾರತದ ಹಿತಾಸಕ್ತಿ ಅಲ್ಲ ಎಂದು ಕೃಷ್ಣ ಪ್ರಸಾದ್ ಹೇಳಿದ್ದಾರೆ.
ಕ್ರಾಂತಿಕಾರಿ ಕಿಸಾನ್ ಯೂನಿಯನ್ (ಪಂಜಾಬ್) ನ ನಾಯಕ ದರ್ಶನ್ ಪಾಲ್ ಮಾತನಾಡಿ, ತಮ್ಮ ಸಂಘಟನೆಯು ಟ್ರಂಪ್ ಮತ್ತು ಮೋದಿ ಅವರ ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದ್ದಾರೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಈಗಾಗಲೇ ಕಡಿಮೆ ಆದಾಯ ಮತ್ತು ಸಾಲದಿಂದ ಬಳಲುತ್ತಿರುವ ರೈತರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ಭಾರತ ಮತ್ತು ಅಮೆರಿಕ ನಡುವಿನ ಹೊಸ ವ್ಯಾಪಾರ ಒಪ್ಪಂದಗಳು ತಮ್ಮ ಜೀವನದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ಹಳ್ಳಿಗರು ಆತಂಕದಿಂದ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಒಪ್ಪಂದದಿಂದ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳು ಅಪಾಯಕ್ಕೆ ಸಿಲುಕಲಿವೆ ಹಾಗೂ ಅಮೆರಿಕದ ದೊಡ್ಡ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲಿವೆ ಎಂದು ಅವರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ರೈತರು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಒಗ್ಗೂಡಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
“ಕೃಷಿ ಮತ್ತು ಡೈರಿ ವಲಯಗಳು ಮುಕ್ತ ವ್ಯಾಪಾರ ಒಪ್ಪಂದಗಳಿಂದ ಹೊರಗಿವೆ. ಭಾರತ ಸರ್ಕಾರ ಕೃಷಿಯ ಹಿತಾಸಕ್ತಿಗಳ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಕೈಗಾರಿಕೆ ಮತ್ತು ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಯನ್ನು ‘ಮಧ್ಯಂತರ ಚೌಕಟ್ಟು’ ತೀವ್ರವಾಗಿ ತಿರಸ್ಕರಿಸುತ್ತದೆ” ಎಂದು ಎಸ್ಕೆಎಂ ಹೇಳಿಕೆಯಲ್ಲಿ ತಿಳಿಸಿದೆ.
“ಕೈಗಾರಿಕೆ ವಾಣಿಜ್ಯ ಸಚಿವರು ಪ್ರಜ್ಞಾಪೂರ್ವಕವಾಗಿ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ. ರೈತರು ಮತ್ತು ಇಡೀ ಜನ ಸಮುದಾಯಕ್ಕೆ ದ್ರೋಹ ಮಾಡುತ್ತಿದ್ದಾರೆ. ಎಸ್ಕೆಎಂ ಸಚಿವರ ನಡೆಯನ್ನು ‘ದೇಶದ್ರೋಹ’ ಎಂದು ಪರಿಗಣಿಸುತ್ತದೆ ಮತ್ತು ಅವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸುತ್ತದೆ” ಎಂದು ಎಸ್ಕೆಎಂ ಹೇಳಿದೆ.
“ಪ್ರಧಾನ ಮಂತ್ರಿಯವರು ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಬೃಹತ್ ಅಖಿಲ ಭಾರತ ಮಟ್ಟದ ಸಾಮೂಹಿಕ ಹೋರಾಟಗಳನ್ನು ಎದುರಿಸಲಿ ಸಿದ್ದರಾಗಲಿ” ಎಂದು ಎಸ್ಕೆಎಂ ಎಚ್ಚರಿಸಿದೆ.
ಫೆಬ್ರವರಿ 12ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಮುಷ್ಕರ ಮತ್ತು ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಎಲ್ಲಾ ರಾಜಕೀಯ ಪಕ್ಷಗಳು, ರೈತ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು, ಕಾರ್ಮಿಕ ಸಂಘಗಳು ಹಾಗೂ ಎಲ್ಲಾ ಜನಸಾಮಾನ್ಯರ ಮತ್ತು ವರ್ಗ ಸಂಘಟನೆಗಳಿಗೆ ಎಸ್ಕೆಎಂ ಮನವಿ ಮಾಡಿದೆ. ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರಗಳು ಮತ್ತು ವ್ಯಾಪಾರ ಒಪ್ಪಂದಗಳು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿವೆ ಎಂದು ಆರೋಪಿಸಿರುವ ಎಸ್ಕೆಎಂ, ಈ ಹೋರಾಟವನ್ನು ಬಲಪಡಿಸಲು ಸಮಾಜದ ಎಲ್ಲಾ ವರ್ಗದವರು ಒಂದಾಗಬೇಕು ಎಂದು ಕರೆ ನೀಡಿದೆ.
ಭಾರತ-ಯುಎಸ್ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಶೀಘ್ರದಲ್ಲೇ ಸಭೆ ನಡೆಸಿ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ಘೋಷಿಸುವುದಾಗಿ ಎಸ್ಕೆಎಂ (ರಾಜಕೀಯೇತರ) ಹೇಳಿಕೆಯಲ್ಲಿ ತಿಳಿಸಿದೆ. ಭಾರತೀಯ ರೈತರು ಅಂತಹ ಯಾವುದೇ ಒಪ್ಪಂದವನ್ನು ಸಹಿಸುವುದಿಲ್ಲ ಎಂದಿದೆ.
ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಭಾರತದ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳನ್ನು ಈ ಒಪ್ಪಂದದಿಂದ ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಆದರೆ, ಭಾರತ ಮತ್ತು ಅಮೆರಿಕ ಬಿಡುಗಡೆ ಮಾಡಿರುವ ಅಧಿಕೃತ ಜಂಟಿ ಹೇಳಿಕೆಯು ಇದಕ್ಕೆ ವಿರುದ್ಧವಾದ ಅಂಶಗಳನ್ನು ಹೊಂದಿದೆ. ಅಮೆರಿಕದ ಕೃಷಿ ಮತ್ತು ಆಹಾರ ಉತ್ಪನ್ನಗಳ ಮೇಲೆ ಭಾರತ ಹೇರಿರುವ ‘ಸುಂಕ ರಹಿತ ಅಡೆತಡೆಗಳನ್ನು’ಚರ್ಚಿಸಿ ಪರಿಹರಿಸಲು ಭಾರತ ಒಪ್ಪಿಕೊಂಡಿದೆ ಎಂದು ಆ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ಎರಡು ನಿಲುವುಗಳು ಪರಸ್ಪರ ವಿರೋಧಾಭಾಸದಿಂದ ಕೂಡಿವೆ ಎಂದು ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಟೀಕಿಸಿದ್ದಾರೆ.


