Homeಮುಖಪುಟಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಇಡಿ ಒತ್ತಡ : ತನ್ನ ಹೊಸ...

ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ಹಿಂದೆ ಇಡಿ ಒತ್ತಡ : ತನ್ನ ಹೊಸ ಪುಸ್ತಕದಲ್ಲಿ ಸಂಜಯ್ ರಾವುತ್ ಆರೋಪ

- Advertisement -
- Advertisement -

ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಮೋದಿ ಸರ್ಕಾರದ ವಿರುದ್ಧ ಕೈಗೊಂಡ ಸ್ವತಂತ್ರ ರಾಜಕೀಯ ನಡೆಗಳಿಗೆ ಪ್ರತಿಯಾಗಿ, ಜಾರಿ ನಿರ್ದೇಶನಾಲಯದ (ಇಡಿ) ಒತ್ತಡಕ್ಕೆ ಮಣಿದು 2025ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಜೈಲಿನಲ್ಲಿದ್ದ ಅವಧಿಯಲ್ಲಿ ಬರೆದ ‘ಅನ್‌ಲೈಕ್ಲಿ ಪ್ಯಾರಡೈಸ್’ (Unlikely Paradise) ಪುಸ್ತಕದಲ್ಲಿ ಹೇಳಿರುವುದಾಗಿ timesofindia.indiatimes.com ವರದಿ ಮಾಡಿದೆ.

ಅನ್‌ಲೈಕ್ಲಿ ಪ್ಯಾರಡೈಸ್ ಮರಾಠಿ ಪುಸ್ತಕವು 2025ರಲ್ಲಿ ಹೊರಬಂದಿದ್ದು, ಹೆಚ್ಚಿನ ವಿಷಯಗಳನ್ನು ಒಳಗೊಂಡಿರುವ ಇದರ ಇಂಗ್ಲಿಷ್ ಆವೃತ್ತಿಯು ಇದೇ ಸೋಮವಾರ ಬಿಡುಗಡೆಯಾಗಲು ಸಿದ್ಧವಾಗಿದೆ.

ಧನ್ಕರ್ ಮತ್ತು ಅವರ ಪತ್ನಿ ತಮ್ಮ ಜೈಪುರದ ಮನೆಯನ್ನು ಮಾರಾಟ ಮಾಡಿ, ಬಂದ ಹಣದ ಒಂದು ಭಾಗವನ್ನು ವಿದೇಶಕ್ಕೆ ವರ್ಗಾಯಿಸಿದ್ದಾರೆ ಎಂಬ ವದಂತಿಗಳು ಹರಡಿದ್ದವು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇಡಿ ಮತ್ತು ಇತರ ತನಿಖಾ ಸಂಸ್ಥೆಗಳು ಅವರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲು ಫೈಲ್ ಒಂದನ್ನು ಸಿದ್ಧಪಡಿಸಿದ್ದವು ಎಂಬುವುದಾಗಿ ಈ ಪುಸ್ತಕವು ಪ್ರತಿಪಾದಿಸಿದೆ ಎಂದು ವರದಿ ಉಲ್ಲೇಖಿಸಿದೆ.

“ಮೋದಿ ಸರ್ಕಾರದ ವಿರುದ್ಧ ಧನ್ಕರ್ ಅವರು ಸ್ವತಂತ್ರ ರಾಜಕೀಯ ನಡೆಗಳನ್ನು ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಾಗ, ಇಡಿ ಅವರ ಮುಂದೆಯೇ ಆ ಕಡತವನ್ನು (ಫೈಲ್) ಪ್ರಸ್ತುತಪಡಿಸಿತು ಮತ್ತು ರಾಜೀನಾಮೆ ನೀಡುವಂತೆ ಅವರ ಮೇಲೆ ಒತ್ತಡ ಹೇರಿತು.”

“ಅವರು (ಧನ್ಕರ್) ಆರಂಭದಲ್ಲಿ ಈ ಒತ್ತಡಕ್ಕೆ ಮಣಿಯಲು ನಿರಾಕರಿಸಿದಾಗ ತನಿಖೆಯು ಮತ್ತಷ್ಟು ತೀವ್ರಗೊಂಡಿತು, ಇದರಿಂದಾಗಿ ಅವರು ಬಹಿರಂಗವಾಗಿಯೇ ಅಸಮಾಧಾನಗೊಂಡಿದ್ದರು” ಎಂಬುವುದಾಗಿ ಪುಸ್ತಕದಲ್ಲಿ ಹೇಳಲಾಗಿದೆ ಎಂದು ವರದಿ ವಿವರಿಸಿದೆ.

“ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮಾಡಿದ್ದರೆನ್ನಲಾದ ಚುನಾವಣಾ ನಿಯಮಗಳ ಉಲ್ಲಂಘನೆಯ ವಿರುದ್ಧ ಅಶೋಕ್ ಲಾವಾಸಾ ಅವರು ಭಿನ್ನ ನಿಲುವು ತಳೆದಿದ್ದರು. ಈ ಕಾರಣಕ್ಕಾಗಿಯೇ ಮಾಜಿ ಚುನಾವಣಾ ಆಯುಕ್ತರಾದ ಲಾವಾಸಾ ಅವರ ಮನೆಯ ಮೇಲೆ ದಾಳಿ ನಡೆಸಲಾಯಿತು ಮತ್ತು ಅವರ ಕುಟುಂಬದವರು ಇಡಿ ಸಮನ್ಸ್ ಎದುರಿಸಬೇಕಾಯಿತು ಎಂದು ರಾವುತ್ ಆರೋಪಿಸಿದ್ದಾರೆ.”

“ಭಾರತೀಯ ಚುನಾವಣಾ ನೀತಿ ಸಂಹಿತೆಯ ಎಂಟು ಉಲ್ಲಂಘನೆಗಳನ್ನು ಉಲ್ಲೇಖಿಸಿ ಬಂದ ದೂರುಗಳ ಆಧಾರದ ಮೇಲೆ, ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಅವರು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮೇಲಿನ ಸಾರ್ವಜನಿಕ ನಂಬಿಕೆಯನ್ನು ಮರುಸ್ಥಾಪಿಸಲು ಕ್ರಮಗಳನ್ನು ಕೈಗೊಂಡಿದ್ದರು.”

“ಮೌನವಾಗಿರುವಂತೆ ಸಲಹೆ ನೀಡಲಾಗಿದ್ದರೂ, ಅವರು ಒತ್ತಡಕ್ಕೆ ಮಣಿಯಲು ನಿರಾಕರಿಸಿದರು. ನಿರೀಕ್ಷೆಯಂತೆಯೇ, ತಮ್ಮ ಭಿನ್ನ ನಿಲುವಿಗಾಗಿ ಲಾವಾಸಾ ಮತ್ತು ಅವರ ಕುಟುಂಬದವರು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಯಿತು” ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ತಮ್ಮ ಪುಸ್ತಕದಲ್ಲಿ ಆರೋಪಿಸಿದ್ದಾರೆ. ಅವರ (ಲಾವಾಸ) ಮನೆಯ ಮೇಲೆ ನಡೆದ ಇಡಿ ದಾಳಿಯು 2020ರಲ್ಲಿ ಅವರು ರಾಜೀನಾಮೆ ನೀಡುವಂತೆ ಮಾಡಿತು ಮತ್ತು ಅದರ ನಂತರವೂ ಅವರು ತನಿಖಾ ಸಂಸ್ಥೆಯ ಕಣ್ಗಾವಲಿನಲ್ಲಿದ್ದರು ಎಂಬುವುದಾಗಿ ಪುಸ್ತಕದಲ್ಲಿ ಹೇಳಲಾಗಿದೆ” ಎಂದು timesofindia.indiatimes.com ವರದಿ ತಿಳಿಸಿದೆ.

“ಯುಪಿಎ ಸರ್ಕಾರದ ಅವಧಿಯಲ್ಲಿ, ಗುಜರಾತ್‌ನ ಅಂದಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಗುಜರಾತ್ ದಂಗೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ ಎಂಬ ವದಂತಿಗಳಿದ್ದವು ಎಂದು ಪುಸ್ತಕವು ಪ್ರತಿಪಾದಿಸಿದೆ. ಆದಾಗ್ಯೂ, ಅಂದಿನ ಕೇಂದ್ರ ಸಚಿವರಾಗಿದ್ದ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಈ ನಡೆಯ ಬಗ್ಗೆ ಅಸಮಾಧಾನ ಹೊಂದಿದ್ದರು. ‘ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸುವುದು ಸರಿಯಲ್ಲ’ ಎಂದು ಪವಾರ್ ಸಚಿವ ಸಂಪುಟ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ.”

“ಈ ಅಭಿಪ್ರಾಯವು ಅನೇಕರ ಮನ ಗೆದ್ದಿತು, ಇದರಿಂದಾಗಿ ಮೋದಿ ಅವರು ಜೈಲುವಾಸದಿಂದ ಪಾರಾದರು. ಆದರೆ, ಮೋದಿ ಅವರು ರಾಜಕೀಯದಲ್ಲಿನ ಈ ಉಪಕಾರಗಳನ್ನು ಮತ್ತು ನೈತಿಕತೆಯನ್ನು ನೆನಪಿಸಿಕೊಳ್ಳುತ್ತಾರೆಯೇ?” ಎಂದು ಪುಸ್ತಕವು ಪ್ರಶ್ನಿಸಿದೆ.”

“ಅಮಿತ್ ಶಾ ಅವರು ಹಲವು ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾಗ ಮತ್ತು ಸಿಬಿಐ ಅವರ ಜಾಮೀನನ್ನು ವಿರೋಧಿಸುತ್ತಿದ್ದ ಸಂದರ್ಭದಲ್ಲಿ, ಅವರಿಗೆ ಜಾಮೀನು ಸಿಗುವಂತೆ ಮಾಡಲು ಶರದ್ ಪವಾರ್ ಮತ್ತು ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಇಬ್ಬರೂ ಸಹಾಯ ಮಾಡಿದ್ದರು ಎಂದು ಪುಸ್ತಕವು ಪ್ರತಿಪಾದಿಸಿದೆ.”

“ಸಿಬಿಐ ಘಟಕದಲ್ಲಿದ್ದ ಮಹಾರಾಷ್ಟ್ರ ಕೇಡರ್‌ನ ಅಧಿಕಾರಿಯೊಬ್ಬರು ಅಮಿತ್ ಶಾ ಅವರಿಗೆ ಜಾಮೀನು ನೀಡುವುದನ್ನು ವಿಶೇಷವಾಗಿ ವಿರೋಧಿಸುತ್ತಿದ್ದರು. ಆಗ ಮೋದಿಯವರು ಶರದ್ ಪವಾರ್ ಅವರ ಮಧ್ಯಸ್ಥಿಕೆಯನ್ನು ಕೋರಿದರು ಮತ್ತು ಪವಾರ್ ಅವರು ತಮ್ಮ ಸ್ವಭಾವದಂತೆ ಅವರಿಗೆ ಸಹಾಯ ಮಾಡಿದರು, ಇದರಿಂದಾಗಿ ಶಾ ಜಾಮೀನಿನ ಮೇಲೆ ಬಿಡುಗಡೆಯಾದರು. ಆದರೆ, ನಂತರದ ದಿನಗಳಲ್ಲಿ ಅಮಿತ್ ಶಾ ಅವರು ಪವಾರ್ ಮತ್ತು ಮಹಾರಾಷ್ಟ್ರವನ್ನು ಹೇಗೆ ನಡೆಸಿಕೊಂಡರು ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದು ಪುಸ್ತಕವು ಪ್ರತಿಪಾದಿಸಿದೆ.”

“ಗುಜರಾತ್ ದಂಗೆಯ ನಂತರ ಅಮಿತ್ ಶಾ ಅವರು ‘ಗಂಭೀರ ಅಪಾಯ’ವನ್ನು ಎದುರಿಸುತ್ತಿದ್ದರು ಮತ್ತು ದಂಗೆಯ ತನಿಖೆಯು ಸಿಬಿಐ ನಿಯಂತ್ರಣದಲ್ಲಿದ್ದ ಕಾರಣ ಮೋದಿಯವರಿಗೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪುಸ್ತಕವು ಪ್ರತಿಪಾದಿಸಿದೆ. ಆ ಸಮಯದಲ್ಲಿ ಅಮಿತ್ ಶಾ ಅವರು ತಮ್ಮ ಮಗನೊಂದಿಗೆ ಕಪ್ಪು ಮತ್ತು ಹಳದಿ ಬಣ್ಣದ ಟ್ಯಾಕ್ಸಿಯಲ್ಲಿ ಠಾಕ್ರೆ ಅವರ ನಿವಾಸಕ್ಕೆ ಆಗಮಿಸಿದ್ದರು ಮತ್ತು ತಮ್ಮ ಪ್ರಕರಣದ ನ್ಯಾಯಾಧೀಶರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ವಿನಂತಿಸಿದ್ದರು ಎಂದು ಪುಸ್ತಕವು ಹೇಳಿದೆ.”

“ನೀವು ನ್ಯಾಯಾಧೀಶರೊಂದಿಗೆ ಮಾತನಾಡಿದರೆ, ಅವರು ಕೇಳುತ್ತಾರೆ ಮತ್ತು ನಿಮ್ಮ ಮಾತನ್ನು ಮೀರುವುದಿಲ್ಲ ಎಂದು ಶಾ ಅವರು ಠಾಕ್ರೆಯವರಿಗೆ ತಿಳಿಸಿದರು ಎಂದು ಪುಸ್ತಕವು ಪ್ರತಿಪಾದಿಸಿದೆ. ಆನಂತರ ಏನಾಯಿತು ಎಂಬುದನ್ನು ಬಹಿರಂಗಪಡಿಸುವುದು ನೈತಿಕವಾಗಿ ಸರಿಯಲ್ಲ. ಆದರೆ, ಅಂದು ಬಾಳಾಸಾಹೇಬರು ಮನೋಹರ್ ಜೋಶಿಯವರನ್ನು ಕರೆಸಿ, ನ್ಯಾಯಾಧೀಶರ ಹೆಸರನ್ನು ನೀಡಿ ಈ ಬಗ್ಗೆ ಚರ್ಚಿಸುವಂತೆ ಸೂಚಿಸಿದರು. ಮಾತು ಮುಗಿಸುವಾಗ, ‘ನೀವು ಯಾವುದೇ ಉನ್ನತ ಸ್ಥಾನದಲ್ಲಿರಬಹುದು, ಆದರೆ ನೀವು ಕೂಡ ಒಬ್ಬ ಹಿಂದೂ ಎಂಬುದನ್ನು ನೆನಪಿಡಿ’ ಎಂದು ಠಾಕ್ರೆ ಹೇಳಿದ್ದರು ಎಂದು ಈ ಪುಸ್ತಕವು ವಿವರಿಸಿದೆ”

“ಆ ಒಂದು ಕರೆ ಅಮಿತ್ ಶಾ ಅವರ ರಾಜಕೀಯ ಪಥವನ್ನೇ ಬದಲಿಸಿತು. ಆದರೂ, ಅವರು ಶಿವಸೇನೆ ಮತ್ತು ಠಾಕ್ರೆ ಕುಟುಂಬದ ಮೇಲೆ ತೋರಿಸಿದ ಕೃತಘ್ನತೆಯನ್ನು ಇಡೀ ಜಗತ್ತೇ ನೋಡಿದೆ ಎಂಬುವುದಾಗಿ ಪುಸ್ತಕವು ಪ್ರತಿಪಾದಿಸಿದೆ” ಎಂದು timesofindia.indiatimes.com ಭಾನುವಾರ (ಮಾ.22) ವರದಿ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...