ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ನ ಮನ್ಸಾದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಅಲ್ಲಿನ ಹಲವಾರು ರಿಲಯನ್ಸ್ ಜಿಯೋ ಟವರ್ಗಳ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ರಾಜ್ಯದ ಕೆಲವು ಭಾಗಗಳಲ್ಲಿ ಟೆಲಿಕಾಂ ಸೇವೆಗಳಿಗೆ ಅಡ್ಡಿಯುಂಟಾಗಿದೆ.
ಪ್ರತಿಭಟನಾಕಾರರಲ್ಲಿ ಒಬ್ಬರಾದ ಅವತಾರ್ ಸಿಂಗ್ ಈ ಕುರಿತು ಮಾತನಾಡಿ, “ಈ ಕರಾಳ ಕಾನೂನುಗಳನ್ನು ರದ್ದುಗೊಳಿಸುವವರೆಗೆ ವಿದ್ಯುತ್ ಸರಬರಾಜಿಗೆ ಅನುಮತಿಸುವುದಿಲ್ಲ” ಎಂದು ಹೇಳಿದರು.
“ನಾವು ಜಿಯೋ ಟವರ್ಗಳ ವಿದ್ಯುತ್ ಸರಬರಾಜನ್ನು ನಿಲ್ಲಿಸಿದ್ದೇವೆ. ರೈತರ ವಿರುದ್ಧದ ಕರಾಳ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಜಿಯೋ ಮತ್ತು ರಿಲಯನ್ಸ್ ಅನ್ನು ಬಹಿಷ್ಕರಿಸುತ್ತೇವೆ. ಇದನ್ನು ನಡೆಸಲು ನಾವು ಬಿಡುವುದಿಲ್ಲ. ಎಲ್ಲರೂ ಇದನ್ನು ಬೆಂಬಲಿಸುತ್ತಿದ್ದಾರೆ. ಮೋದಿ ಸರ್ಕಾರ ಈ ಕಾನೂನುಗಳನ್ನು ಕಾರ್ಪೊರೇಟ್ಗಳ ಲಾಭಕ್ಕಾಗಿ ತಂದಿದೆ” ಎಂದು ಅವತಾರ್ ಸಿಂಗ್ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ: ಜಿಯೋದಿಂದ ಹೊರನಡೆದ 26 ಲಕ್ಷ ಗ್ರಾಹಕರು: ರೈತರ ಬಾಯ್ಕಾಟ್ ಕರೆಗೆ Jio ಕಂಗಾಲು!
ಈ ಹಿಂದೆ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ರೈತರು ಜಿಯೋ ಸಿಮ್ ಅನ್ನು ತಿರಸ್ಕರಿಸಿರುವುದರ ಹಿಂದೆ ಏರ್ಟೆಲ್ ಮತ್ತು ವೊಡಾಫೋನ್ ಕಂಪನಿಗಳ ಕೈವಾಡವಿದೆ ಎಂದು ಅಂಬಾನಿಯ ಜಿಯೋ ಕಂಪನಿ ಆರೋಪಿಸಿತ್ತು. ಜೊತೆಗೆ ಈ ಎರಡು ನೆಟ್ವರ್ಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆಫ್ ಇಂಡಿಯಾ (TRAI)ಗೆ ಡಿಸಂಬರ್ 10 ರಂದು ದೂರು ನೀಡಿತ್ತು.
ಜಿಯೋ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ಏರ್ಟೆಲ್, “ಏರ್ಟೆಲ್, ಟೆಲಿಕಾಂ ಉದ್ಯಮದಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಅವಧಿಯಲ್ಲಿ, ನಾವು ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಶ್ರಮಿಸಿದ್ದೇವೆ. ಅದೇ ಸಮಯದಲ್ಲಿ ನಮ್ಮ ಸ್ಪರ್ಧಿಗಳು ಮತ್ತು ಪಾಲುದಾರರನ್ನೂ ಗೌರವದಿಂದ ನಡೆಸಿಕೊಂಡಿದ್ದೇವೆ. ನಾವು ನಮ್ಮ ವ್ಯವಹಾರವನ್ನು ಪಾರದರ್ಶಕವಾಗಿ ನಡೆಸಿದ್ದೇವೆ. ಇದಕ್ಕೆ ನಮಗೆ ಬಹಳ ಹೆಮ್ಮೆಯಿದೆ” ಎಂದು ಹೇಳಿತ್ತು.
ಇದನ್ನೂ ಓದಿ: ಬಾಯ್ಕಾಟ್ ಅಭಿಯಾನ: ಏರ್ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದ ಜಿಯೋ!
ಅಂಬಾನಿ ಮತ್ತು ಅವರ ಕಂಪನಿಗಳ ಉತ್ಪನ್ನಗಳಾದ ಪೆಟ್ರೋಲ್ ಪಂಪ್, ಜಿಯೋ ಸಿಮ್, ರಿಲಯನ್ಸ್ ಸೇರಿದಂತೆ ಇತರೆ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವಂತೆ ಪ್ರತಿಭಟನಾ ನಿರತ ರೈತರು ಇತ್ತೀಚೆಗೆ ಕರೆ ನೀಡಿದ್ದರು. ಕರ್ನಾಟಕದಲ್ಲಿಯೂ ಯುವಕರು ಜಿಯೋ ಸಿಮ್ ಇಂದ ಪೋರ್ಟಿಂಗ್ ಅಭಿಯಾನವನ್ನು ಕೈಗೊಂಡಿದ್ದರು.
ಕೇಂದ್ರ ಸರ್ಕಾರ ತನ್ನ ಕೃಷಿ ಕಾನೂನುಗಳನ್ನು ಹಿಂಪಡೆಯಲಿ ಎಂದು ಒತ್ತಾಯಿಸಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕೃಷಿ ಕಾನೂನುಗಳು ಪರೋಕ್ಷವಾಗಿ ಅಂಬಾನಿಗೆ ಸಹಕಾರಿಯಾಗುತ್ತದೆ ಎಂಬ ಕಾರಣಕ್ಕೆ ಅಂಬಾನಿ ಕಂಪನಿಯ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಬೇಕು ಎಂದು ಕರೆ ನೀಡಲಾಗಿತ್ತು.
ಇದನ್ನೂ ಓದಿ: ನಮಗೆ ಜಿಯೋ ಬೇಡ, BSNLಗೆ ಪೋರ್ಟ್ ಆಗಲು 4G ಸೇವೆ ಕೊಡಿ: KVS ಒತ್ತಾಯ


