ಫೆಬ್ರವರಿ 01 ರಂದು ಕೇಂದ್ರ ಬಜೆಟ್ ಮಂಡನೆಯ ದಿನ ನಡೆಸಲು ಉದ್ದೇಶಿಸಿದ್ದ ಕಿಸಾನ್ ಪಾರ್ಲಿಮೆಂಟ್ ಚಲೋ ಪಾದಾಯಾತ್ರೆಯನ್ನು ಮೂಂದೂಡಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ರೈತ ಮುಖಂಡರು ತಿಳಿಸಿದ್ದಾರೆ. ಬದಲಿಗೆ ಗಾಂಧಿ ಹುತಾತ್ಮ ದಿನದಂದು (ಜನವರಿ 30) ಉಪವಾಸ ಸತ್ಯಾಗ್ರಹ ಮತ್ತು ದೇಶದೆಲ್ಲೆಡೆ ಸಾರ್ವಜನಿಕ ರ್ಯಾಲಿ ನಡೆಸಲು ರೈತ ಮುಖಂಡರು ಕರೆ ನೀಡಿದ್ದಾರೆ.
ಇಂದು ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಬಲ್ ಬೀರ್ ಎಸ್ ರಾಜೇವಾಲಾ, “ಗಣರಾಜ್ಯೋತ್ಸವದಂದು ನಡೆದ ಅಹಿತಕರ ಘಟನೆಗಳಿಗೆ ಸರ್ಕಾರವೇ ಹೊಣೆ. ಹಾಗಾಗಿ ನಮ್ಮ ಶಾಂತಿಯುತ ಹೋರಾಟ ಮುಂದುವರೆಸುತ್ತೇವೆ. ಪಾರ್ಲಿಮೆಂಟ್ ಚಲೋ ಮುಂದೂಡುತ್ತಿದ್ದೇವೆ” ಎಂದು ತಿಳಿಸಿದರು.
ಇದನ್ನೂ ಓದಿ: ‘ನನಗೆ ಕುರ್ಚಿ ಬೇಡ, ನನ್ನ ದೇಶದ ರೈತನಿಗೆ ಸಂತೋಷ ಬೇಕು’ – ಮತ್ತೋರ್ವ ಶಾಸಕ ರಾಜೀನಾಮೆ
ಸರ್ಕಾರದ ಇಂತಹ ಕೆಲಸಗಳಿಂದ ಪ್ರತಿಭಟನೆ ಮೇಲೆ ಯಾವುದೇ ಪ್ರಭಾವ ಬಿರುವುದಿಲ್ಲ. ಮೂರು ಕಾನೂನುಗಳನ್ನು ವಾಪಸ್ ಪಡೆಯುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ. ಈ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ ಎಂದು ಅಸಿಶ್ ಮಿತ್ತಲ್ ತಿಳಿಸಿದರು.
ಯೋಗೇಂದ್ರ ಯಾದವ್ ಮಾತನಾಡಿ “ಕೆಂಪು ಕೋಟೆಯ ಘಟನೆ ನಡೆದ ನಂತರ 6.30 ಕ್ಕೆ ರ್ಯಾಲಿ ವಾಪಸ್ ಪಡೆಯಲಾಗಿತ್ತು. ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮತ್ತು ದೀಪ್ ಸಿಧು ಮಾಡಿದ ಕೃತ್ಯಕ್ಕೆ ನಮ್ಮನ್ನು ಬಲಿ ಮಾಡಲಾಗುತ್ತಿದೆ. ದೀಪ್ ಸಿಧು ಬಗ್ಗೆ ಈ ದೇಶದ ಜನ ಈಗಾಗಲೇ ಎಲ್ಲಾ ತಿಳಿದುಕೊಂಡಿದ್ದಾರೆ. ಅವರ ಚಿತ್ರಗಳು, ಯಾರ ಯಾರ ಜೊತೆಗೆ ಇದ್ದಾರೆ ಎಂಬುದು ಗೊತ್ತಿದೆ. ನಿನ್ನೆ ನಡೆದ ಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ನಡೆಸಿದ್ದು ಅಲ್ಲ. ಆದರೂ ನಾವು ಅದರ ನೈತಿಕ ಹೊಣೆ ಹೊರುತ್ತೇವೆ. ಹೀಗಾಗಿ ನಾವು ಸಂಸತ್ ಚಲೋ ಮುಂದಕ್ಕೆ ಹಾಕಿದ್ದೇವೆ. ಆದರೆ ಈ ಪ್ರತಿಭಟನೆ ಮುಂದುವರೆಯಲಿದೆ. ಇನ್ನೂ ದೇಶದ ಜನರು ಬಂದು ಸೇರಿಕೊಳ್ಳಲಿದ್ದಾರೆ” ಎಂದಿದ್ದಾರೆ.
ರಾಕೇಶ್ ಟಿಕಾಯಟ್ ಮಾತನಾಡಿ “ಇದು ಪಂಜಾಬ್ ಅನ್ನು ದೇಶದಿಂದ ಹೊರಗಿಡಲು ಮತ್ತು ಪಂಜಾಬ್ ಹೆಸರನ್ನು ಹಾಳು ಮಾಡಲು ಸರ್ಕಾರ ಮಾಡಿದ ಕೆಲಸ. ಆದರೆ ಅದು ಸಾಧ್ಯವಾಗುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಕೆಂಪುಕೋಟೆ ಅಹಿತಕರ ಘಟನೆಯ ರೂವಾರಿ – ಯಾರು ಈ ದೀಪ್ ಸಿಧು?