ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಮೇರೆಗೆ ದೇಶಾದ್ಯಂತ ರೈತ ಸಂಘಟನೆಗಳು ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸವನ್ನು ಆಚರಿಸಿದ್ದಾರೆ. ದೆಹಲಿಯ ಹೋರಾಟದ ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದು ಜಾಥಾ ನಡೆಸಿದ್ದಾರೆ.
“ಮಹಾ ಪರಿನಿರ್ವಾಣ ದಿವಸ ಆಚರಣೆ ಮಾಡಿ, ಭಾರತ ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದೆವು. ಬಾಬಾ ಸಾಹೇಬರ ನೇತೃತ್ವದಲ್ಲಿ ರಚಿತವಾದ ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ, ಅದಕ್ಕಾಗಿಯೇ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಡುತ್ತಿದೆ” ಎಂದು ಎಸ್ಕೆಎಂ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬಾಬಾಸಾಹೇಬರ ಪುಸ್ತಕಗಳ ಪ್ರಕಟಣೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!
26 ನವೆಂಬರ್ 2020 ರಿಂದ ರೈತ ಚಳವಳಿಯನ್ನು ನಿರಂತರವಾಗಿ ಬೆಂಬಲಿಸುತ್ತಿರುವ ದೆಹಲಿಯ ಗಡಿಯ ಸಮೀಪದ ನಾಗರಿಕರಿಗೆ ಎಸ್ಕೆಎಂ ಧನ್ಯವಾದ ಅರ್ಪಿಸಿದೆ. ಪ್ರತಿಭಟನಾ ಸ್ಥಳಗಳ ಬಳಿ ವಾಸಿಸುವ ನಾಗರಿಕರನ್ನು ರೈತರ ವಿರುದ್ಧ ಆಡಳಿತ ಪಕ್ಷ ಮತ್ತು ಮಾಧ್ಯಮಗಳು ನಿರಂತರವಾಗಿ ಪ್ರಚೋದಿಸುತ್ತಿದ್ದವು. ಆದರೆ, ಅವರು ನಮ್ಮ ಪರವಾಗಿಯೇ ಇದ್ದು, ರೈತ ಚಳವಳಿಗೆ ಸಹಾಯ ಮಾಡಿದ್ದಾರೆ. ಇದು ರೈತರಿಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಎಸ್ಕೆಎಂ ತಿಳಿಸಿದೆ.
ಇನ್ನು, ವಿವಾದಿತ ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರದ ನಂತರ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ರೈತ ಚಳವಳಿ ಪ್ರಭಾವ ಬೀರುವುದಿಲ್ಲ ಎಂದು ಹಲವಾರು ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡಿದ್ದಾರೆ. ಇದು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ರೈತ ಸಂಘಟನೆ ತಿಳಿಸಿದೆ.
’ಎಂಎಸ್ಪಿಯ ಕಾನೂನು, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವಿಕೆ, ವಾಯುಮಾಲಿನ್ಯ ಮಸೂದೆಯಿಂದ ರೈತರಿಗೆ ದಂಡ ವಿಧಿಸುವ ಷರತ್ತನ್ನು ತೆಗೆದುಹಾಕುವುದು, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರ ಬಂಧನ ಮತ್ತು ವಜಾ, ರೈತರ ಮೇಲೆ ಹೇರಲಾಗಿರುವ ನಕಲಿ ಪ್ರಕರಣಗಳನ್ನು ಹಿಂಪಡೆಯುವುದು. ಹುತಾತ್ಮ ರೈತರ ಕುಟುಂಬಗಳ ಪುನರ್ವಸತಿ ಮತ್ತು ಹುತಾತ್ಮರ ಸ್ಮಾರಕ ಇತ್ಯಾದಿ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. ಹೀಗಾಗಿ ಈ ಸಮಸ್ಯೆಗಳು ಮಿಷನ್ ಯುಪಿ ಮತ್ತು ಉತ್ತರಾಖಂಡದ ಮೇಲೆ ಪ್ರಭಾವ ಬೀರುತ್ತವೆ ಎಂದು ಎಸ್ಕೆಎಂ ತಿಳಿಸಿದೆ.