ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಭಾನುವಾರ (ಜ.18) ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಬಳ್ಳಾರಿಯಲ್ಲಿ ಜ. 1ರಂದು ನಡೆದಿದ್ದ ಘರ್ಷಣೆ, ಕೊಲೆ ಖಂಡಿಸಿ ಬಿಜೆಪಿಯು ನಗರದ ಎಪಿಎಂಸಿ ಪ್ರಾಂಗಣದಲ್ಲಿ ಶನಿವಾರ (ಜ.17) ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು ಲೈಂಗಿಕ ದೌರ್ಜನ್ಯ ಸಂತ್ರಸ್ತೆಯೊಬ್ಬರ ಗುರುತು ಬಹಿರಂಗಪಡಿಸಿದ್ದರು.
“ಶಾಸಕ ಭರತ್ ರೆಡ್ಡಿ ಯುವಕರನ್ನು ಯಾವ ಹಂತಕ್ಕೆ ಮಾದಕ ವ್ಯಸನಿಗಳನ್ನಾಗಿ ಮಾಡಿದ್ದಾರೆ ಎಂದರೆ, ನಾಲ್ಕೈದು ಮಂದಿ ವಿದ್ಯಾರ್ಥಿಗಳು ಡ್ರಗ್ಸ್ ತೆಗೆದುಕೊಂಡು ನಗರದ ಶಾಲೆಯೊಂದರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾರೆ” ಎಂದಿದ್ದರು. ಮುಂದುವರಿದು, ಸಂತ್ರಸ್ತ ವಿದ್ಯಾರ್ಥಿನಿಯ ಹೆಸರು, ಶಾಲೆ, ತರಗತಿ ಮತ್ತು ಜಾತಿಯನ್ನೂ ಬಹಿರಂಗಪಡಿಸಿದ್ದರು.
ಈ ಹಿನ್ನೆಲೆ, ಭಾನುವಾರ ನಗರದ ಎಪಿಎಂಸಿ ಠಾಣೆ ಇನ್ಸ್ಪೆಕ್ಟರ್ ನೀಡಿದ ದೂರು ಆಧರಿಸಿ ಮಹಿಳಾ ಠಾಣೆ ಪೊಲೀಸರು ಪೊಕ್ಸೊ ಕಾಯ್ದೆಯ ಕಲಂ 23(1) (2) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 74ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.


