ರಾಜಕೀಯವನ್ನೇ ತ್ಯಜಿಸುವಾಗಿ ಹೇಳಿದ್ದ ಕೇಂದ್ರದ ಮಾಜಿ ಸಚಿವ, ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅಚ್ಚರಿಯ ಬೆಳವಣಿಗೆಯಲ್ಲಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿಯವರ ಕಟು ಟೀಕಾಕಾರರಲ್ಲಿ ಸುಪ್ರಿಯೊ ಒಬ್ಬರಾಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಾಜಕೀಯ ತ್ಯಜಿಸುವುದಾಗಿ ಹೇಳಿದ್ದ ಅವರು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದಿದ್ದರು.
ಪಶ್ಚಿಮ ಬಂಗಾಳದ ಅಸಾನ್ಸೋಲ್ ಕ್ಷೇತ್ರದ ಸಂಸದರಾದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಬಳಿಕ ನಡೆದಿದ್ದ ಕೇಂದ್ರ ಸಚಿವ ಸಂಪುಟ ಪುನರ್ರಚನೆಯಲ್ಲಿ ಗ್ರಾಮೀಣ ಅಭಿವೃದ್ದಿ ಖಾತೆಯಿಂದ ಅವರನ್ನು ಬದಲಾಯಿಸಲಾಗಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ “ನಾನು ನಿರ್ಗಮಿಸುತ್ತೇನೆ.. ಧನ್ಯವಾದಗಳು” ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಈಗ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯಿಂದ ಗೆದ್ದು, ಲೋಕಸಭಾ ಸದಸ್ಯರಾಗಿರುವ ಬಾಬುಲ್, ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿಲ್ಲ.
ಇದು ಆರಂಭ ಅಷ್ಟೇ ಎಂದಿರುವ ಟಿಎಂಸಿ, “ಇನ್ನೂ ಅನೇಕ ಬಿಜೆಪಿ ನಾಯಕರು ಟಿಎಂಸಿಯೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದಿದೆ. “ಅವರು ಯಾರೂ ಬಿಜೆಪಿಯ ಜೊತೆ ಇರಲು ಬಯಸುತ್ತಿಲ್ಲ. ಒಬ್ಬರು (ಬಾಬುಲ್ ಸುಪ್ರಿಯೋ) ಇಂದು ಟಿಎಂಸಿ ಸೇರಿದ್ದಾರೆ. ನಾಳೆ ಮತ್ತೊಬ್ಬರು ಸೇರಲು ಬಯಸಿದ್ದಾರೆ. ಈ ಪ್ರಕ್ರಿಯೆ ಮುಂದುವರಿಯಲಿದೆ. ಕಾಯಿರಿ ಮತ್ತು ನೋಡಿರಿ” ಎಂದು ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ ತಿಳಿಸಿದ್ದಾರೆ.
ಬಾಬನಿಪುರ್ ಉಪಚುನಾವಣೆ ಹಿನ್ನೆಲೆಯಲ್ಲಿ ಸುಪ್ರಿಯೋ ಅವರ ಸೇರ್ಪಣೆ ಟಿಎಂಸಿಗೆ ವರದಾನವಾಗಿದೆ. ಗಾಯಕರೂ ಆಗಿರುವ ಸುಪ್ರಿಯೋ 2014ರಲ್ಲಿ ಬಿಜೆಪಿ ಸೇರಿ ಅಸನ್ಸೋಲ್ ಲೋಕ ಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದರು. 2014ರಿಂದ 2021ರ ಅವಧಿಯಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ರಾಜಕೀಯ ತ್ಯಜಿಸುತ್ತೇನೆ..: ಕೇಂದ್ರ ಸಚಿವ ಬಬುಲ್ ಸುಪ್ರಿಯೋ ಘೋಷಣೆ