ಸಾರ್ವಜನಿಕ ಭಾವನೆ, ನೈರ್ಮಲ್ಯ, ಸಂಚಾರ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಕಳವಳಗಳನ್ನು ಉಲ್ಲೇಖಿಸಿ, ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದ 100 ಮೀಟರ್ ಒಳಗೆ ಮಾಂಸ ಮತ್ತು ಮಾಂಸಾಹಾರಿ ಆಹಾರ ಮಾರಾಟವನ್ನು ನಿಯಂತ್ರಿಸುವ ಏಕರೂಪ ನೀತಿಯನ್ನು ರೂಪಿಸುವಂತೆ ತೆಲಂಗಾಣ ಹೈಕೋರ್ಟ್ ಮಂಗಳವಾರ, ಫೆಬ್ರವರಿ 3 ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಮತ್ತು ಪೊಲೀಸ್ ಅಧಿಕಾರಿಗಳಿಂದ ಕಿರುಕುಳ ಆರೋಪದ ಮೇಲೆ ಹೈದರಾಬಾದ್ ಮೂಲದ ರೆಸ್ಟೋರೆಂಟ್ ಉದ್ಯಮಿ ಬಿಪಿನ್ ರಾಮದಾಸ್ ಸಲ್ಲಿಸಿದ ರಿಟ್ ಅರ್ಜಿಯನ್ನು ಆಲಿಸುವಾಗ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಈ ನಿರ್ದೇಶನಗಳನ್ನು ನೀಡಿದ್ದಾರೆ.
ಒಂದೇ ಪ್ರದೇಶದಲ್ಲಿ ಹಲವಾರು ರೀತಿಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೂ ತಮ್ಮ ರೆಸ್ಟೋರೆಂಟ್ ಅನ್ನು ಮಾತ್ರ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ರೆಸ್ಟೋರೆಂಟ್ ಸರಿಯಾದ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂಬ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ರೆಸ್ಟೋರೆಂಟ್ನಲ್ಲಿ ಕಾರ್ಮಿಕರನ್ನು ಬಂಧಿಸಿದ್ದಾರೆ ಎಂದು ಅರ್ಜಿದಾರರ ಪರವಾಗಿ ಸಲ್ಲಿಸಲಾಯಿತು.
ಅರ್ಜಿ ವಿರೋಧಿಸಿದ ಸರ್ಕಾರ, ಮಾಂಸಾಹಾರಿ ಹೋಟೆಲ್ ಹನುಮಾನ್ ದೇವಸ್ಥಾನದ ಸಮೀಪದಲ್ಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತು. ಈ ಬಗ್ಗೆ ಸ್ಥಳೀಯ ನಿವಾಸಿಗಳಿಂದ ಆಕ್ಷೇಪಣೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ಜಿಎಚ್ಎಂಸಿ ಈ ಪ್ರದೇಶದಲ್ಲಿ ಸಂಚಾರ ಸಂಬಂಧಿತ ಸಮಸ್ಯೆಗಳನ್ನು ಸಹ ವರದಿ ಮಾಡಿದೆ, ಹೋಟೆಲ್ಗೆ ಶಾಶ್ವತ ಪರವಾನಗಿ ನೀಡಲು ಶಿಫಾರಸು ಮಾಡಿಲ್ಲ ಎಂದು ಹೇಳಿದೆ.
ರೆಸ್ಟೋರೆಂಟ್ ತಾತ್ಕಾಲಿಕ ಪರವಾನಗಿಯ ಮೇಲೆ ಕಾರ್ಯನಿರ್ವಹಿಸುತ್ತಿದೆ, ಮಾಂಸಾಹಾರ ಆಹಾರವನ್ನು ನೀಡುತ್ತಿದೆ ಎಂದು ನಾಗರಿಕ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
4 ವಾರಗಳಲ್ಲಿ ಸಮಗ್ರ ಮಾರ್ಗಸೂಚಿ ಕೋರಿದ ನ್ಯಾಯಾಲಯ
ವಾದ ಆಅಲಿಸಿದ ನ್ಯಾಯಮೂರ್ತಿ ರೆಡ್ಡಿ, ಪುರಸಭೆ ಆಡಳಿತ ಮತ್ತು ಗೃಹ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ನಾಲ್ಕು ವಾರಗಳಲ್ಲಿ ಸಮಗ್ರ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ನಿರ್ದೇಶಿಸಿದರು.
ಸೂಕ್ಷ್ಮ ಸ್ಥಳಗಳಲ್ಲಿ ಮಾಂಸ ಮಾರಾಟ ಮಳಿಗೆಗಳನ್ನು ಅನುಮತಿಸುವ ಮೊದಲು ಸ್ಥಳೀಯ ಪೊಲೀಸ್ ಠಾಣೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯುವ ಅವಶ್ಯಕತೆಯನ್ನು ನೀತಿಯು ಒಳಗೊಂಡಿರಬಹುದು ಎಂದು ನ್ಯಾಯಾಲಯ ಗಮನಿಸಿದೆ.
ಅಂತಹ ಮಾರ್ಗಸೂಚಿಗಳನ್ನು ರೂಪಿಸುವವರೆಗೆ, ಅರ್ಜಿದಾರರು ಮಾಂಸಾಹಾರಿ ರೆಸ್ಟೋರೆಂಟ್ ಅನ್ನು ನಡೆಸಬಾರದು ಎಂದು ನ್ಯಾಯಾಲಯ ಆದೇಶಿಸಿತು.


