Homeಮುಖಪುಟಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಮೊದಲಾರ್ಧ ಮನುಷ್ಯನ ಕ್ರಿಯೆಯಾದರೆ, ದ್ವಿತೀಯಾರ್ಧ ಪ್ರಕೃತಿಯ ಪ್ರತಿಕ್ರಿಯೆ ಎನ್ನಬಹುದೇನೋ.

- Advertisement -
- Advertisement -

ತಮಿಳು ಸಿನಿಮಾಗಳಂತೆ ಮಲಯಾಳಂ ಸಿನಿಮಾಗಳು ಜಾತಿ ವ್ಯವಸ್ಥೆಯ ವಾಸ್ತವಗಳ ಕುರಿತು ಗಂಭೀರವಾಗಿ ಚರ್ಚಿಸಿಲ್ಲ ಎಂಬುದು ಮಲಯಾಳಂ ಚಲನಚಿತ್ರಗಳ ಮೇಲಿನ ಸಾಮಾನ್ಯ ಆರೋಪ. ಧರ್ಮಾಧಾರಿತ ರಾಜಕಾರಣದ ಕುರಿತು ಇಲ್ಲಿ ಸಾಕಷ್ಟು ಕಥೆಗಳು ಮೂಡಿಬರುತ್ತಿದ್ದರೂ ಜಾತಿ ವ್ಯವಸ್ಥೆಯ ಕುರಿತು ಗಂಭೀರ ಪ್ರಯೋಗಗಳಾಗಿಲ್ಲ; ಜಾತಿ ಕೇಂದ್ರಿತ ಆಲೋಚನೆಗಳಿಂದ ಮಲಯಾಳಿಗರು ಅಂತರ ಕಾಯ್ದುಕೊಂಡಿದ್ದಾರೆ ಎಂಬ ಆರೋಪಗಳನ್ನು ಅನೇಕರು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ರಾಷ್ಟ್ರಮಟ್ಟದ ಚರ್ಚೆಯಲ್ಲಿ ಮಲಯಾಳಂ ಸಿನಿಮಾಗಳು ಗಮನ ಸೆಳೆಯುತ್ತಿದ್ದರೂ ಈ ಅಪವಾದವನ್ನು ತಳ್ಳಿ ಹಾಕುವಂತಿಲ್ಲ.

ಜಾತಿ ಕೇಂದ್ರಿತ ಸಿನಿಮಾಗಳು ಮಲಯಾಳಂನಲ್ಲಿ ಬಂದೇ ಇಲ್ಲವೆಂದಲ್ಲ. ದಲಿತರು ಭೂಮಿಯನ್ನು ಕಳೆದುಕೊಳ್ಳುವ ಕಥೆಯನ್ನು ತೆರೆಗೆ ತಂದ ‘ಕಮ್ಮಟಿಪಾಡಂ’ ಸಿನಿಮಾ ಈ ನೆಲೆಯಲ್ಲಿ ಗಂಭೀರ ಚಿಂತನೆಗೆ ಅವಕಾಶ ನೀಡಿತ್ತು. ಕೆಲವು ತಿಂಗಳ ಹಿಂದೆ ಬಂದ ‘ಪಡ’- ಆದಿವಾಸಿಗಳ ನೈಜ ಹೋರಾಟದ ಕುರಿತು ಮೂಡಿಬಂದಿತ್ತು. ತಮಿಳು ಚಿತ್ರರಂಗದಲ್ಲಿ ಜಾತಿ ಕೇಂದ್ರಿತವಾಗಿ ಆಗುತ್ತಿರುವ ಪ್ರಯೋಗಗಳಂತೆಯೇ ಮಲಯಾಳಂ ಚಿತ್ರರಂಗ ಕೂಡ ಹೆಜ್ಜೆ ಇಡುತ್ತಿದೆ ಎಂದು ಕೆಲವರು ಅಭಿಪ್ರಾಯಪಟ್ಟರು. ಈ ಚರ್ಚೆಯ ಮುಂದುವರಿದ ಭಾಗವಾಗಿ ಫಹಾದ್ ಫಾಸಿಲ್ ನಟನೆಯ ‘ಮಲಯನ್‌ಕುಂಜು’ ನೋಡಬೇಕಾಗುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮಹೇಶ್‌ ನಾರಾಯಣನ್‌ ಕತೆ, ಚಿತ್ರಕಥೆ ಬರೆದು, ಅದ್ಭುತವಾಗಿ ಛಾಯಾಗ್ರಹಣ ಮಾಡಿರುವ, ಸಾಜಿಮನ್ ಪ್ರಭಾಕರ್ ನಿರ್ದೇಶಿಸುವ ‘ಮಲಯನ್‌ಕುಂಜು’ ಸಿನಿಮಾದಲ್ಲಿ ಜಾತಿ ಮನಸ್ಥಿತಿಯನ್ನು ತೋರಿಸಿರುವ ರೀತಿಯ ಕುರಿತು ಭಿನ್ನ ಅಭಿಪ್ರಾಯಗಳು ಮೂಡಿಬರುತ್ತಿವೆ. ಇಲ್ಲಿ ಕಥಾನಾಯಕ ಅನಿಕುಟ್ಟನ್‌ (ಫಾಸಿಲ್‌) ಮೇಲೆ ಅನುಕಂಪ ಸೃಷ್ಟಿಸಿ, ಆತನೊಳಗಿನ ಜಾತಿ ಮನಸ್ಥಿತಿಯನ್ನು ಮರೆಮಾಚಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.

ಶೋಷಿತ ಸಮುದಾಯದ ಬಗ್ಗೆ ಅಸಹನೆಯನ್ನು ಹೊಂದಿರುವ, ದಲಿತರು ಮುಟ್ಟಿದ ಪಾತ್ರೆಯಲ್ಲಿನ ಆಹಾರವನ್ನೂ ತಿನ್ನಲೂ ಬಯಸದ, ಶೋಷಿತ ಸಮುದಾಯದ ಮಗು ಅಳುವ ಸದ್ದು ಕೇಳಿದೊಡನೆ ಕೆರಳುವ ಅನಿಕುಟ್ಟನ್‌ ಮಹಾ ಮಡಿವಂತ. ಮುಂಜಾನೆಯೇ ಎದ್ದು ತಣ್ಣೀರು ಸ್ನಾನ ಮಾಡಿ, ತಾವು ಮಾಡುತ್ತಿರುವ ಎಲೆಕ್ಟ್ರಾನಿಕ್‌ ರೆಪೇರಿ ಕೆಲಸದಲ್ಲಿ ಕಳೆದು ಹೋಗುವ ಆತ ಮಹಾ ಜಾತಿವಾದಿ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಆತನ ತಂಗಿಯು ಮದುವೆ ಮನೆಯಿಂದ ಓಡಿ ಹೋಗಿ ತಾನು ಪ್ರೀತಿಸಿದ ದಲಿತ ಸಮುದಾಯದ ಹುಡುಗನೊಬ್ಬನ ಜೊತೆ ಮದುವೆಯಾದ ಬಳಿಕ ಆತ ಜಾತಿ ವಿಚಾರದಲ್ಲಿ ಮತ್ತಷ್ಟು ಕುಬ್ಜನಾಗುತ್ತಾನೆ. ಆದರೆ ಆತನ ಜಾತಿ ಮನಸ್ಥಿತಿ ಗಟ್ಟಿಯಾಗಲು, ತಂಗಿಯ ನಿರ್ಧಾರವೇ ಪ್ರಮುಖವೆಂದು ತೋರಿಸಿದಂತೆ ಭಾಸವಾಗುತ್ತದೆ. ಇದು ಅಪಾಯಕಾರಿ ಸಂಗತಿ. ಅನಿಕುಟ್ಟನ್ ಹಾಗೂ ಆತನ ತಂದೆ ಮೋಸ ಹೋದರು ಎಂಬಂತೆ ಚಿತ್ರಿಸಿ, ಅವಮಾನ ಸಹಿಸಲಾಗದೆ ಅನಿಕುಟ್ಟನ್‌ ತಂದೆ ಆತ್ಮಹತ್ಯೆಗೆ ಶರಣಾದರು ಎಂಬಂತೆ ಚಿತ್ರಿಸಲಾಗಿದೆ.

ಪ್ರಸನ್ನವಾಗಿದ್ದ ಅನಿಕುಟ್ಟನ್ ಮುಖ ಆ ನಂತರದಲ್ಲಿ ಸಿಡುಕುತನವನ್ನು ತುಂಬಿಕೊಳ್ಳುತ್ತದೆ. ತಂಗಿಯ ಮುಖವನ್ನೂ ನೋಡಲು ಇಚ್ಛಿಸದ, ಆಕೆಯ ಗಂಡ ಮೀಸಲಾತಿ ಅಡಿಯಲ್ಲಿ ಕೆಲಸ ಗಿಟ್ಟಿಸಿದ್ದಾನೆಂದು ಲಘುವಾಗಿ ಮಾತನಾಡುವ ಅನಿಕುಟ್ಟನ್ ಪಾತ್ರವನ್ನು ವೈಭವೀಕರಿಸಲಾಗಿದೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಮೊದಲಾರ್ಧವನ್ನಷ್ಟೇ ಗಂಭೀರವಾಗಿ ಪರಿಗಣಿಸಿದರೆ ಈ ಪ್ರಶ್ನೆ ದೀರ್ಘ ಚರ್ಚೆಗೆ ಒಳಪಡುವುದು ಖಚಿತ. ಆದರೆ ‘ಮಲಯನ್‌ಕುಂಜು’ ಸಿನಿಮಾವನ್ನು ಎರಡು ಭಾಗಗಳಾಗಿ ನೋಡುವ ಅಗತ್ಯವಿದೆ. ಮೊದಲಾರ್ಧ ಮನುಷ್ಯನ ಕ್ರಿಯೆಯಾದರೆ, ದ್ವಿತೀಯಾರ್ಧ ಪ್ರಕೃತಿಯ ಪ್ರತಿಕ್ರಿಯೆ ಎನ್ನಬಹುದೇನೋ. ಕಥಾನಾಯಕನ ಸಂಕುಚಿತತೆ, ಮಡಿವಂತಿಕೆ, ದಲಿತರ ಬಗೆಗಿನ ಅಸಹನೆ ಎಲ್ಲವೂ ಪ್ರಕೃತಿಯ ವಿರಾಟ್ ರೂಪದ ಮುಂದೆ ಕ್ಷುಲ್ಲಕ ಎಂಬ ಸಂದೇಶವನ್ನು ದ್ವಿತೀಯಾರ್ಧದಲ್ಲಿ ನಿರೂಪಿಸಲಾಗಿದೆ.

ಮೊದಲಾರ್ಧದಲ್ಲೂ ಅನಿಕುಟ್ಟನ್‌ನ ಜಾತೀಯತೆಯನ್ನು ಅತಿರೇಕವೆಂಬಂತೆಯೇ ಚಿತ್ರಿಸಿರುವ ದೃಶ್ಯಗಳನ್ನೂ ಅಲ್ಲಗಳೆಯಲಾಗದು. ನೆರೆಮನೆಯಲ್ಲಿರುವ ಹೊಲೆಯ ಜಾತಿಯ ಹಾಲ್ಗೂಸು (ಹುಟ್ಟಿ ಒಂದು ತಿಂಗಳು ಕೂಡ ಆಗಿಲ್ಲ) ಅಳುವ ಸದ್ದು ಕೇಳಿದರೆ ಕುದಿದು ಹೋಗುವ ಅನಿಕುಟ್ಟನ್‌ ನಿಜಕ್ಕೂ ಮನುಷ್ಯನೆ? ಮಗುವಿನ ಮೇಲೆ ಸಿಡಿದು ಬೀಳುವುದಕ್ಕೆ ತಂಗಿಯ ಘಟನೆ ಕಾರಣವೆಂದು ಭಾವಿಸುವುದು ಸರಿಯೇ? ಎಂಬ ಪ್ರಶ್ನೆಯನ್ನು ನೋಡುಗರ ಮುಂದೆ ಇಡಲಾಗಿದೆ. ಅನಿಕುಟ್ಟನ್‌ನ ಅತಿರೇಕವನ್ನು, “ನಮ್ಮ ಸುತ್ತ ಯಾರಿದ್ದಾರೆಂದು ಆ ಮಗುವಿಗೇನು ಗೊತ್ತು?” ಎಂಬ ಸಂಭಾಷಣೆಯ ಮೂಲಕ ಅಣಕಿಸಲಾಗಿದೆ. ಅನಿಕಟ್ಟನ್‌ ತೋರುವ ಸಣ್ಣತನಗಳನ್ನು ಆತನ ಸುತ್ತಲಿನ ಪಾತ್ರಗಳು ವ್ಯಂಗ್ಯದ ದಾಟಿಯಲ್ಲೋ, ಅತಿರೇಕವಾಯಿತೆಂಬ ನೋಟದಲ್ಲೋ ವ್ಯಕ್ತಪಡಿಸುವುದನ್ನು ಗಮನಿಸಬಹುದು. ಇಷ್ಟಾಗಿಯೂ ಅನಿಕುಟ್ಟನ್‌ ಮನೋಭಾವಕ್ಕೆ ಒಪ್ಪಿತ ಮುದ್ರೆಯೊತ್ತುವ ಸನ್ನಿವೇಶಗಳು ಬರುವ ಹೊತ್ತಿಗೆ ಪ್ರಕೃತಿಯ ವಿರಾಟ್ ದರ್ಶನವಾಗುತ್ತದೆ. ಅಲ್ಲಿಂದೀಚೆಗೆ ಕಟ್ಟಿಕೊಡಲಾಗಿರುವ ಜಿಜ್ಞಾಸೆಯೇ ಇಡೀ ಸಿನಿಮಾದ ಒಟ್ಟು ತಾತ್ವಿಕತೆ ಎನ್ನಬಹುದು.

ಭೀಕರ ಮಳೆಗಾಲ. ಗುಡ್ಡ ಕುಸಿಯುತ್ತದೆ. ಮಡಿವಂತಿಕೆಯ ಅನಿಕುಟ್ಟನ್‌ ಕೆಸರು, ನೀರು, ಬೇರು, ಮಣ್ಣಿನ ಅಡಿಯಲ್ಲಿ ಬಿದ್ದು ಸಾವಿನ ದವಡೆಯಲ್ಲಿ ಸಿಲುಕಿರುವಾಗ ಕಟ್ಟಿಕೊಡಲಾಗಿರುವ ಸನ್ನಿವೇಶಗಳು ಆತನ ಆತ್ಮಾವಲೋಕನಕ್ಕೂ, ಸಾವಿನ ಮುಂದೆ ಮನುಷ್ಯನ ಎಲ್ಲ ಅಹಂಕಾರವು ನಿಶ್ವರವೆಂಬ ವಿನಯದ ಅನ್ವೇಷಣೆಗೂ ಅವಕಾಶ ಮಾಡಿಕೊಡುತ್ತವೆ. ಮಣ್ಣು ಮತ್ತು ನೀರಿನಾಳದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಅನಿಕುಟ್ಟನ್‌ಗೆ, ಆತ್ಮಹತ್ಯೆ ಮಾಡಿಕೊಂಡ ಆತನ ತಂದೆ ಬಂದು ಬುದ್ಧಿ ಹೇಳುವಂತೆ ಒಂದು ದೃಶ್ಯವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಮಗಳ ಘಟನೆಯಿಂದ ಅವಮಾನಿತವಾಗಿ ಆತ್ಮಹತ್ಯೆ ಮಾಡಿಕೊಂಡ ತಂದೆಯ ಪಾತ್ರವು ಅಮೂರ್ತವಾಗಿ ಬಂದು ಬುದ್ಧಿಹೇಳುವಂತೆ ಚಿತ್ರಿಸಲಾಗಿರುವ ಈ ದೃಶ್ಯವೇ ದ್ವಿತೀಯಾರ್ಧದ ಜೀವಾಳ ಎನ್ನಬಹುದೇನೋ.

ಆ ದೃಶ್ಯ ಹೀಗಿದೆ:

ನೀರಿನಾಳದಲ್ಲಿ ಬಿದ್ದಿರುವ ಮಗನನ್ನು ತಂದೆ ಮೇಲಕ್ಕೆತ್ತಿ ತರುತ್ತಾನೆ.

ತಂದೆ: ಮಗನೇ, ಎದ್ದೇಳು ಮಗನೇ.

ಅನಿಕುಟ್ಟ: ಏನಾಯ್ತಪ್ಪ, ಎಲ್ಲಿದ್ದೀವಿ ನಾವು?

ತಂದೆ: ನೀರು ಬೇಕಾ ಮಗನೇ (ಅಲ್ಲೇ ನೀರು ಸೋಸಿ ಕುಡಿಸುತ್ತಾನೆ.) ಮಣ್ಣಿನ ಕೊಳೆತ ವಾಸನೆ ಗೊತ್ತಾಗುತ್ತಿಲ್ಲವೇ ಮಗನೆ? ಗುಡ್ಡ ಕುಸಿದಿದೆ. ನಮ್ಮ ಮನೆ ಈಗ ಮಣ್ಣಿನಾಳದಲ್ಲಿದೆ. 

ಅನಿಕುಟ್ಟ: ಅಮ್ಮ ಎಲ್ಲಿದ್ದಾರೆ ಅಪ್ಪ?

ತಂದೆ: ಶಾಂತಾಳ ಯಾವುದೇ ಸದ್ದು ನನಗೆ ಕೇಳಿಸುತ್ತಿಲ್ಲ. ಇದೆಲ್ಲದರ ಬಗ್ಗೆ ಆಕೆ ಎಚ್ಚರಿಕೆಯಿಂದ ಇರುತ್ತಾಳೆ. ನಾವಿಬ್ಬರೂ ಬಹಳ ಕಾಲದ ಹಿಂದೆ ಇಲ್ಲಿಗೆ ಬಂದವರಲ್ಲವೇ? ಬಹುಶಃ ಅವಳು ಅಲ್ಲಿದ್ದಾಳೆ. ಆಕೆ ತುಂಬಾ ಸೂಕ್ಷ್ಮಳು. ಈ ರೀತಿಯ ಘಟನೆಗಳನ್ನು ಊಹಿಸಬಲ್ಲಳು. (ಮಗುವಿನ ಅಳು ಕೇಳಿಸುತ್ತದೆ). ಯಾರ ಮಗುವಿನ ಅಳು ಅದು? 

(ತಂದೆಯ ತೊಡೆಯ ಮೇಲೆ ಮಲಗಿರುವ ಅನಿಕುಟ್ಟ ಮಾತನಾಡುತ್ತಾನೆ)

ಅನಿಕುಟ್ಟ: ಅದು ಸುನಿಯ ಮಗು. (ನೆರೆಮನೆಯ ಹೊಲೆಯ ಜಾತಿಯವನು)

ತಂದೆ: ಸುನಿ ಮದುವೆಯಾದನಾ? ತುಂಬಾ ಸಂತೋಷ. ಮಗುವಿಗೆ ಎಷ್ಟು ವಯಸ್ಸು?

ಅನಿಕುಟ್ಟ: ಆ ಮಗುವಿಗೆ ಇವತ್ತಿಗೆ 28 ದಿನ. 

ತಂದೆ: ಓ ಬಡಪಾಯಿ ಮಗು. ಉಸಿರಾಡಲೂ ಕಷ್ಟಪಡುತ್ತಿದೆ ಅನಿಸುತ್ತಿದೆ. ಎದ್ದೇಳು ಬೇಗ. ಆ ಮಗು ಎಲ್ಲೋ ಇದ್ದಿರುವಂತಿದೆ. ಯಾರೂ ಕಾಪಾಡುವವರು ಇಲ್ಲ ಅನಿಸುತ್ತಿದೆ. ಆ ಮಗುವನ್ನು ಕಾಪಾಡಿ, ಕುಟುಂಬಕ್ಕೆ ಹಸ್ತಾಂತರಿಸು. ನಿಜಕ್ಕೂ ಅವರು ಆತಂಕಿತರಾಗಿರುತ್ತಾರೆ. ಮಗನೇ, ಎದ್ದೇಳು. ಅನಿಕುಟ್ಟ ಎದ್ದೇಳು. ಮಗುವನ್ನು ಕಾಪಾಡು. ಅನಿಕುಟ್ಟ, ಜನರು ಜಾತಿಗಳಿಂದಾಗಿ ಒಡೆದುಹೋಗಿದ್ದಾರೆ. ಆದರೆ ಇದೆಲ್ಲ ಸಾಯುವತನಕವಷ್ಟೇ. ಸತ್ತು ಹೋದ ಮೇಲೆ ಎಲ್ಲರೂ ಸಮಾನರು ಮಗನೇ.

ಹೀಗೆ ಅಮೂರ್ತವಾಗಿ ಬರುವ ದೃಶ್ಯವು ಅನಿಕುಟ್ಟನ ಆತ್ಮಾವಲೋಕನವೂ ಹೌದು. ಆ ನಂತರದಲ್ಲಿ ಅನಿಕುಟ್ಟ ಸಾವನ್ನು ಜಯಿಸಲು ಹೊರಡುವ ದಿಕ್ಕೂ ಕೂಡ ‘ಮಲಯನ್‌ಕುಂಜು’ ಕಥೆಯ ತಾತ್ವಿಕತೆಯ ಶೋಧವೂ ಆಗಿದೆ. ಯಾವ ಮಗುವಿನ ದನಿಯನ್ನು ಕೇಳಿ ಕೆರಳುತ್ತಿದ್ದನೋ ಅದೇ ಮಗುವಿನ ದನಿ ಈತನನ್ನು ಬದುಕುಳಿಸುವ ದಿಕ್ಸೂಚಿಯಾಗುತ್ತದೆ. ಈ ಮಲೆಯ ಕುಡಿಯ ದನಿಯನ್ನು ಆಲಿಸುತ್ತಾ ಹೊರಟ ಅನಿಕುಟ್ಟನ ಮುಂದೆ ಶವಗಳು ತೇಲಿಬರುತ್ತವೆ. ಆತನ ಎಲ್ಲ ಅಹಂಕಾರ, ಜಾತಿ ವ್ಯಸನವನ್ನು ಆ ಮಲಯ ಕುಡಿ/ಹೊಲೆಯ ಕುಡಿ (ಪೊನ್ನಿ) ಛಿದ್ರ ಮಾಡುತ್ತದೆ. ಪ್ರಕೃತಿ ಕಲಿಸುವ ಸಮಾನತೆಯ ಪಾಠದ ಎದುರು ಆತನೂ ಒಂದು ಮಗುವಷ್ಟೇ. ದುರಂತಗಳಿಗೆ ಎದುರಾದವನು ಮಗುವಾಗುವ ಪರಿ ಇದು.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಯಾವ ಮಗುವಿನ ಕೈಯಲ್ಲಿ ತನ್ನ ತಾಯಿ ಹಾಕಿದ ಚಿನ್ನದ ಆಭರಣವನ್ನು ನೋಡಿ ಕುದಿದು ಹೋಗಿರುತ್ತಾನೋ ಅದೇ ಅನಿಕುಟ್ಟನಿಗೆ ಈ ಮಗುವೇ ಚಿನ್ನವಾಗಿ ಕೈ ಸೇರುತ್ತದೆ. ಹೀಗೆ ಜಾತಿ ವ್ಯವಸ್ಥೆಯನ್ನು ವಿಶಿಷ್ಟವಾಗಿ, ಆತ್ಮಾವಲೋಕನದ ಮಾದರಿಯಲ್ಲಿ ತರ್ಕಕ್ಕೆ ಒಳಪಡಿಸಿರುವುದು ‘ಮಲಯನ್‌ಕುಂಜು’ ಸಿನಿಮಾದ ಹೆಚ್ಚುಗಾರಿಕೆ.

ಎ.ಆರ್‌.ರೆಹಮಾನ್‌ ಅವರ ಮ್ಯೂಸಿಕ್‌, ಇಂಪಾದ ಹಾಡುಗಳು, ಪ್ರಕೃತಿಯ ವಿರಾಟ್ ರೂಪಕ್ಕೆ ನೀಡಲಾಗಿರುವ ಹಿನ್ನೆಲೆ ಸಂಗೀತ- ಎಲ್ಲವೂ ಕಥೆಯ ತೀವ್ರತೆಯನ್ನು ಹೆಚ್ಚಿಸಿವೆ. ಮಲಯಾಳಂ ಸಿನಿಮಾಗಳು ಜಾತಿ ಕೇಂದ್ರಿತ ಜಿಜ್ಞಾಸೆಗಳತ್ತ ಗಂಭೀರತೆಯನ್ನು ಪಡೆಯುತ್ತಿರುವ ಸೂಚನೆಯಾಗಿಯೂ ಈ ಸಿನಿಮಾವನ್ನು ಪರಿಗಣಿಸಬಹುದು. (ಅಮೆಜಾನ್‌ ಪ್ರೈಮ್ ವಿಡಿಯೊದಲ್ಲಿ ‘ಮಲಯನ್‌ಕುಂಜು’ ಲಭ್ಯವಿದೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಮಸ್ಕಾರ.
    ಈ ಸಿನಿಮಾ ವಿಮರ್ಶೆ ಬರೆದ ಯತಿರಾಜರು ಮಲಯಾಳಂ ಸಿನಿಮಾಗಳಲ್ಲಿ ಜಾತಿ ಕುರಿತು ಗಂಭೀರ ಚರ್ಚೆ ಇಲ್ಲ ಎಂದು ಬೀಸು ಹೇಳಿಕೆ ಕೊಡುವ ಮೊದಲು ದಯವಿಟ್ಟು ಜಯನ್ ಕೆ ಚೆರಿಯನ್ ನಿರ್ದೇಶಿಸಿದ ಪ್ಯಾಪಿಲಿಯೋ ಬುದ್ಧ ಸಿನಿಮಾ ನೋಡಲಿ. ಹಾಗೆಯೇ ವಿನೋದ್ ನಾರಾಯಣ್ ಈ ಸಿನಿಮಾದ ಕುರಿತು ಬರೆದ ಲೇಖನವನ್ನೂ ಓದಲಿಎಂದು ಪ್ರೀತಿಯಿಂದಲೇ ಕೇಳಿಕೊಳ್ಳುವೆ.
    ಲೇಖನ. ಗೂಗಲ್ ಮಾಡಿದರೆ ಸಿಗುತ್ತದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...