ವಿಧಾನಪರಿಷತ್ನಲ್ಲಿ ಖಾಲಿ ಇದ್ದ ನಾಲ್ಕು ಸ್ಥಾನಗಳು ಭರ್ತಿಯಾಗಿದ್ದು, ಡಾ. ಆರತಿ ಕೃಷ್ಣ, ರಮೇಶ್ ಬಾಬು, ಎಫ್.ಎಚ್ ಜಕ್ಕಪ್ಪನವರ್ ಮತ್ತು ಶಿವಕುಮಾರ್ ಕೆ. ಅವರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಭಾನುವಾರ (ಸೆ.7) ಅಧಿಕೃತ ಆದೇಶ ಹೊರಡಿಸಿದೆ.
ನಾಲ್ಕು ಸ್ಥಾನಗಳ ನಾಮ ನಿರ್ದೇಶನಕ್ಕೆ ರಾಜ್ಯಪಾಲರು ಅಂಗೀಕಾರ ಹಾಕಿದ್ದರಿಂದಾಗಿ, 37 ಸದಸ್ಯರೊಂದಿಗೆ ಪರಿಷತ್ತಿನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದಂತಾಗಿದೆ. ಬಿಜೆಪಿ–ಜೆಡಿಎಸ್ ಸೇರಿ 37 ಸದಸ್ಯರ ಬಲ ಹೊಂದಿವೆ. ಮೇಲ್ನೋಟಕ್ಕೆ ಸಮಬಲ ಎನಿಸುವಂತಿದ್ದರೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ತಮ್ಮ ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿ ಮೇಲ್ಮನೆಯಲ್ಲಿದ್ದಾರೆ. ಹೀಗಾಗಿ, ಪರಿಷತ್ತಿನಲ್ಲಿ ಎದುರಿಸುತ್ತಿದ್ದ ಮುಜುಗರದಿಂದ ಪಾರಾಗುವ ದಾರಿ ಕಾಂಗ್ರೆಸ್ ಸಿಕ್ಕಂತಾಗಿದೆ.
ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ದಿನಾಂಕವನ್ನು ನೀಡಿದ ನಂತರ ಹೊಸದಾಗಿ ನಾಮನಿರ್ದೇನಗೊಂಡ ನಾಲ್ವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಕರ್ನಾಟಕ ಸರ್ಕಾರದ ಎನ್ಆರ್ಐ ಫೋರಂನ ಉಪಾಧ್ಯಕ್ಷೆ, ಎಐಸಿಸಿ ಎಸ್ಸಿ ಸೆಲ್ನ ಡಾ. ಅಂಬೇಡ್ಕರ್ ಫೌಂಡೇಶನ್ನ ಉಪಾಧ್ಯಕ್ಷೆ ಸೇರಿದಂತೆ ಕಾಂಗ್ರೆಸ್ನಲ್ಲಿ ವಿವಿಧ ಹುದ್ದೆಗಳನ್ನು ಹೊಂದಿರುವ ಡಾ. ಆರತಿ ಕೃಷ್ಣ, ಎಐಸಿಸಿ ಎಸ್ಸಿ ಸೆಲ್ನ ಎಫ್ಎಚ್ ಜಕ್ಕಪ್ಪನವರ್, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಹಿರಿಯ ಸಹಾಯಕ ಸಂಪಾದಕ ಶಿವಕುಮಾರ್ ಕೆ ಮತ್ತು ಕೆಪಿಸಿಸಿ ಮಾಧ್ಯಮ ಕೋಶದ ಅಧ್ಯಕ್ಷ ಮತ್ತು ಮಾಜಿ ಜೆಡಿಎಸ್ ಎಂಎಲ್ಸಿ ರಮೇಶ್ ಬಾಬು ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ವಿಧಾನ ಪರಿಷತ್ನಲ್ಲಿ ಬಹುಮತ ಇರಲಿಲ್ಲ. ಹಾಗಾಗಿ, ಮಸೂದೆಗಳಿಗೆ ಮೇಲ್ಮನೆಯ ಅಂಗೀಕಾರ ಪಡೆಯುವುದು ಸರ್ಕಾರಕ್ಕೆ ಸವಾಲಾಗಿತ್ತು. ಈ ನಾಮನಿರ್ದೇಶನದ ಮೂಲಕ ಪರಿಷತ್ನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಮಸೂದೆಗಳಿಗೆ ಅಂಗೀಕಾರ ಪಡೆಯುವ ಹಾದಿ ಸುಗಮವಾಗಿದೆ.