Homeಮುಖಪುಟಸಿನಿಮಾ ವಿಮರ್ಶೆ; ಪೊಲೀಸ್ ವ್ಯವಸ್ಥೆಯ ಅಂತರಂಗಕ್ಕೆ ಚಿಕಿತ್ಸೆಯ ಅಗತ್ಯವನ್ನು ಮನಗಾಣಿಸುವ ‘ರೈಟರ್’

ಸಿನಿಮಾ ವಿಮರ್ಶೆ; ಪೊಲೀಸ್ ವ್ಯವಸ್ಥೆಯ ಅಂತರಂಗಕ್ಕೆ ಚಿಕಿತ್ಸೆಯ ಅಗತ್ಯವನ್ನು ಮನಗಾಣಿಸುವ ‘ರೈಟರ್’

- Advertisement -
- Advertisement -

ಈ ದೇಶದ ನಾಗರಿಕರನ್ನು ಅತಿ ಹೆಚ್ಚು ಬಾಧಿಸುವ, ಅವರ ದಿನನಿತ್ಯ ಜೀವನಕ್ಕೆ ಹತ್ತಿರದ ಸಂಬಂಧವಿರುವ ಪೊಲೀಸ್ ವ್ಯವಸ್ಥೆಯನ್ನು ಭಾರತದ ಚಿತ್ರೋದ್ಯಮಗಳು ನೈಜ ರೀತಿಯಲ್ಲಿ ಪ್ರತಿನಿಧಿಸಿದ್ದು ಬಹಳ ಕಡಿಮೆ. ಇರುವ ಸಮಸ್ಯೆಗಳನ್ನೆಲ್ಲಾ ತೋಳುಬಲದಿಂದ ಪರಿಹರಿಸುವ ಏಕವ್ಯಕ್ತಿ ಮ್ಯಾಸ್ಕುಲೈನ್ ಶಕ್ತಿಯಾಗಿ (ಸೂಪರ್ ಹೀರೋ) ಪೊಲೀಸ್ ಅಧಿಕಾರಿಯನ್ನು ಅತಿ ಸಾಮಾನ್ಯವೇನೋ ಎಂಬಂತೆ ಚಿತ್ರೀಕರಿಸಿದ ಅವಾಸ್ತವ ಒಂದು ಕಡೆಯಾದರೆ, ಭ್ರಷ್ಟಾಚಾರ ಮತ್ತು ಲಂಚಗುಳಿತನಗಳಿಗೆ ಪ್ರತಿಬಿಂಬ ಪೊಲೀಸರು ಮತ್ತು ಪೊಲೀಸ್ ವ್ಯವಸ್ಥೆ ಎಂಬ ಚಿತ್ರಣವನ್ನು ಇಲ್ಲಿನ ಬಹುತೇಕ ಸಿನಿಮಾ ರಂಗಗಳು ಕಟ್ಟಿಕೊಟ್ಟಿವೆ. ಸೂಪರ್ ಹೀರೋ ಚಿತ್ರಣಕ್ಕಂತೂ ವಾಸ್ತವಕ್ಕಿಂತ ಹೆಚ್ಚಾಗಿ ಕಪೋಲ ಕಲ್ಪಿತ ಸಂಗತಿಗಳೇ ವಸ್ತುವಾದರೆ, ಎರಡನೆಯ ಬಗೆಯ ಚಿತ್ರಣ ವಾಸ್ತವಕ್ಕೆ ಹತ್ತಿರವಿದ್ದರೂ ಅದಕ್ಕೆ ಕಾರಣಗಳನ್ನು ಶೋಧಿಸಿರುವ, ಅವಲೋಕಿಸಿರುವ, ವಿಶಾಲ ನೆಲೆಯಲ್ಲಿ ವಿಶ್ಲೇಷಿಸಲು ಪ್ರಯತ್ನಿಸಿರುವ ಸಿನಿಮಾಗಳು ವಿರಳವೇ.

ಇನ್ನು ಪೊಲೀಸ್ ವ್ಯವಸ್ಥೆಯಲ್ಲಿರುವ ವಿವಿಧ ಶೇಡ್‌ಗಳನ್ನು ಚಿತ್ರಿಸುವ, ಒಂದೊಳ್ಳೆ ಅಧ್ಯಯನದ ಮಾದರಿಯಲ್ಲಿ ಪೊಲೀಸ್ ಕಥೆಗಳನ್ನು ಹೇಳಿದ ಸಿನಿಮಾಗಳೂ ಕೂಡ ಬೆರೆಳೆಣಿಕೆಯಷ್ಟೇ. 2015ರಲ್ಲಿ ಬಿಡುಗಡೆಯಾದ ತಮಿಳು ಚಿತ್ರರಂಗದ ‘ವಿಸಾರಣೈ’ ಪೊಲೀಸ್ ದೌರ್ಜನ್ಯವನ್ನು ನೈಜತೆಗೆ ಹತ್ತಿರವಾಗಿ ಕಟ್ಟಿಕೊಟ್ಟ ಸಿನಿಮಾವಾಗಿ ಮೂಡಿಬಂದಿತ್ತು. ಅದೇ ರೀತಿಯಲ್ಲಿ ಇತ್ತೀಚೆಗೆ ತೆರೆಕಂಡ ‘ಜೈಭೀಮ್’ ಕೂಡ ಅಂತಹುದೇ ಒಂದು ಥೀಮ್ ಹೊಂದಿತ್ತು. ಪೊಲೀಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಾಥಮಿಕ ಸಂಗತಿಗಳನ್ನೂ ತಿಳಿಯದೆ ಓತಪ್ರೇತವಾಗಿ ಪೊಲೀಸ್ ಪಾತ್ರಗಳನ್ನು ಮೂಡಿಸಿ, (ಫಿಕ್ಷನ್ ಕೂಡ ನಂಬಿಕೆಗೆ ಅರ್ಹವಾಗಿರಬೇಕು ಅಲ್ಲವೇ), ಅದನ್ನು ಪ್ರತಿನಿಧಿಸುವ ಸಿನಿಮಾಗಳೇ ಹೆಚ್ಚಿರುವಾಗ ಈ ಬೆರಳೆಣಿಕೆಯ ಪ್ರಯೋಗಗಳ ಮಹತ್ವ ನಮಗೆ ಅರ್ಥವಾದೀತು. ಹಾಗೆಯೇ ಮಲಯಾಳಂ ಸಿನಿಮಾ ‘ತೊಂಡಿಮುಥಾಲಂ ದೃಕ್‌ಸಾಕ್ಷಿಯಂ’ನಲ್ಲಿ ಕೂಡ (2017) ಪೊಲೀಸರನ್ನು ಕಟ್ಟಿಕೊಟ್ಟ ರೀತಿ ವಾಸ್ತವಕ್ಕೆ ಹತ್ತಿರವಾಗಿತ್ತು.

ಈಗ 2021 ಡಿಸೆಂಬರ್‌ನಲ್ಲಿ ಥಿಯೇಟರ್‌ಗಳಲ್ಲಿ ತೆರೆಕಂಡ (ಈಗ ‘ಆಹಾ’ ಒಟಿಟಿ ವೇದಿಕೆಯಲ್ಲಿದೆ) ಫ್ರಾಂಕ್ಲಿನ್ ಜಾಕೋಬ್ ಅವರ ಚೊಚ್ಚಲ ಸಿನಿಮಾ ‘ರೈಟರ್’, ಪೊಲೀಸ್ ವ್ಯವಸ್ಥೆಯನ್ನು ಹೊಸದೊಂದು ನೆಲೆಯಲ್ಲಿ ಶೋಧಿಸಲು ಮುಂದಾಗಿದೆ. ಬ್ರಿಟಿಷ್ ವಸಾಹತಶಾಹಿ ಕಾಲದ, ಸಾಮಾನ್ಯ ಜನರ ‘ನಿಯಂತ್ರಣ ಮತ್ತು ದಮನ’ ಕಲ್ಪನೆಯನ್ನು ಉಳಿಸಿಕೊಂಡಿರುವ ಇಂದಿನ ಪೊಲೀಸ್ ವ್ಯವಸ್ಥೆ, ಇಲ್ಲಿನ ಸಮಾಜದ ಎಲ್ಲಾ ಪೂರ್ವಾಗ್ರಹಗಳನ್ನು ತನ್ನೊಳಗೆ ಸೇರಿಸಿಕೊಂಡು, ಜನಸ್ನೇಹಿಯಾಗದೆ, ಆಂತರಿಕವಾಗಿ ವಿಧೇಯತೆ-ಶ್ರೇಣೀಕರಣದ ಹಿಡಿತದಲ್ಲಿ ಬಳಲುತ್ತಿರುವುದರಿಂದ ಆಗುತ್ತಿರುವ ಅಪಾಯಗಳನ್ನು, ಈ ಸಿನಿಮಾ ತಂಗರಾಜು ಪಾತ್ರದ ಮೂಲಕ ಎಳೆಎಳೆಯಾಗಿ ಬಿಡಿಸುತ್ತಾ ಚಿತ್ರಿಸುತ್ತದೆ. ಕಥಾ ಸಂವಿಧಾನದ ರೋಚಕತೆಯ-ಕುತೂಹಲತೆಯ ಅವಶ್ಯಕತೆಯನ್ನು ಎಲ್ಲಿಯೂ ಬಿಟ್ಟುಕೊಡದೆ, ಸಮಾಜದ ಅವಿಭಾಜ್ಯ ಅಂಗವಾಗಿರುವ ಪೊಲೀಸ್ ವ್ಯವಸ್ಥೆ, ಅಧಿಕಾರವನ್ನು-ಅಧಿಕಾರಸ್ಥರನ್ನು ಕಾಯುವ ಸಂಸ್ಥೆಯಾಗಿಹೋಗಿರುವುದರ ವಿರುದ್ಧ ಬೋಲ್ಡ್ ಆದ ಸ್ಟೇಟ್‌ಮೆಂಟ್ ಮಾಡತ್ತೆ ರೈಟರ್.

ಪಾತ್ರವೊಂದನ್ನು ಗಹನವಾಗಿ ಕಟ್ಟಿಕೊಡುವ ಮೂಲಕವೇ ಒಂದು ಕಥೆ ಹೇಳುವುದನ್ನು ಫ್ರಾಂಕ್ಲಿನ್ ಜಾಕೋಬ್ ಅದ್ಭುತವಾಗಿ ನಿರ್ವಹಿಸಿದ್ದಾರೆ. ತಮಿಳುನಾಡಿನ ತ್ರಿಚಿಯ ಪೊಲೀಸ್ ಠಾಣೆಯೊಂದರಲ್ಲಿ ರೈಟರ್ ಕೆಲಸ ಮಾಡುತ್ತಿರುವ ತಂಗರಾಜು (ಸಮುದ್ರಕಣಿ) ಸಂಕೀರ್ಣ ಸ್ವಭಾವದ (ವೃತ್ತಿ ಮತ್ತು ವೈಯಕ್ತಿಕವಾಗಿ) ವ್ಯಕ್ತಿ. ತಾನು ಕೆಲಸ ಮಾಡುತ್ತಿರುವ ಪೊಲೀಸ್ ಠಾಣೆಯಲ್ಲಿ ಕ್ರೈಮ್ ರೇಟ್ 98%ಕ್ಕಿಂತಲೂ ಹೆಚ್ಚಾಗಲು ಬಿಡದಂತೆ, ಮೇಲಧಿಕಾರಿಯ ಆದೇಶವನ್ನು ಶಿರಸಾವಹಿಸಿ ಪಾಲಿಸಿ, ಪ್ರಕರಣಗಳನ್ನು (ಚಿನ್ನದ ಸರ-ಮೋಟಾರ್ ವೆಹಿಕಲ್ ಕಳ್ಳತನದ ತರಹದವು) ಸುಳ್ಳುಸುಳ್ಳೇ ಕ್ಲೋಸ್ ಮಾಡುವ, ಅದಕ್ಕಾಗಿ ದೂರುದಾರರನ್ನು ಕನ್ವಿನ್ಸ್ ಮಾಡುವ ಪ್ರಾಬ್ಲಂ ಸಾಲ್ವರ್ ಈತ. ಆದರೆ ಅದೇ ಸಮಯದಲ್ಲಿ ತನ್ನ ಸಹೋದ್ಯೋಗಿ ಪೊಲೀಸರನ್ನು ಅದರಲ್ಲೂ ತನ್ನ ಕೆಳಗಿನ ರ‍್ಯಾಂಕ್‌ನ ಪೊಲೀಸರನ್ನೂ ಪ್ರೀತಿಯಿಂದ ಕಾಣುವ ಅಂತಃಕರಣದ ವ್ಯಕ್ತಿ. ಅಲ್ಲದೆ ಎರಡು ದಶಕಗಳ ಕಾಲ ಪೊಲೀಸ್ ಯೂನಿಯನ್‌ಗಾಗಿ ಹೋರಾಟ ಮಾಡುತ್ತಿರುವ, ಅದಕ್ಕಾಗಿ ಪೊಲೀಸ್ ಇಲಾಖೆ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿರುವ ಮತ್ತು ಮೇಲಿನ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ವ್ಯಕ್ತಿ. ತನ್ನ ಈ ಪ್ರಾಬ್ಲಂ ಸಾಲ್ವಿಂಗ್, ಕೆಲಸದಲ್ಲಿನ ದಕ್ಷತೆ ಹಾಗೂ ತನ್ನ ಆತ್ಮಸಾಕ್ಷಿಗೆ ಒಪ್ಪದೆ ಇದ್ದರೂ ವ್ಯವಸ್ಥೆಯ ಜೊತೆಗೆ ಹೊಂದಿಕೊಂಡು ಹೋಗುವ ಗುಣದ-ಕೆಲಸದ ಕಾರಣದಿಂದ, ಒಬ್ಬ ಯುವಕನನ್ನು ತಾನೂ ಊಹಿಸಲೂ ಇರದ ಸಂಕಷ್ಟಕ್ಕೆ ನೂಕಿದಾಗ, ತಂಗರಾಜುವಿನಲ್ಲಾಗುವ ಬದಲಾವಣೆಯೇ ಚಿತ್ರದ ಪ್ರಧಾನ ಕಥಾವಸ್ತು. ಇದರಿಂದ ತಂಗರಾಜುಗೆ ವಿಮೋಚನೆ ಸಾಧ್ಯವೇ? ಸಮಯ ಮೀರಿದ ಮೇಲೆ ಆ ವಿಮೋಚನೆ ರೂಪ ಯಾವುದಾಗಿರುತ್ತದೆ ಎಂಬುದು ಸಿನಿಮಾದ ಕ್ಲೈಮ್ಯಾಕ್ಸ್.

ತಂಗರಾಜು ಪಾತ್ರದ ವೃತ್ತಿ ಜೀವನದ ಚಿತ್ರಣದ ಜೊತೆಗೆ ಆತನ ವೈಯಕ್ತಿಕ ಜೀವನವನ್ನು ಕಟ್ಟಿಕೊಟ್ಟಿರುವುದು ಕೂಡ ಅಷ್ಟೇ ಸಂಕೀರ್ಣವಾಗಿದೆ. ಮೊದಲನೆಯ ಹೆಂಡತಿಯ ಜೊತೆಗೆ ಮಗುವಾಗಿಲ್ಲ ಎಂಬ ಕಾರಣಕ್ಕೆ ಎರಡನೇ ಮದುವೆಯಾಗಿದ್ದಾನೆ. ಮಗ, ಇಬ್ಬರು ಹೆಂಡತಿಯರ ಜೊತೆಗೆ ಒಟ್ಟಿಗೆ ಇದ್ದರೂ ತನಗಿಂತ ತುಂಬಾ ಕಿರಿಯಳಾದವಳನ್ನು ಮದುವೆಯಾದ ಬಗ್ಗೆ ಪಾಶ್ಚಾತ್ತಾಪದವಿದೆ. ‘ಯಾರೋ ಹೇಳಿದರು ಎಂದು ಯೋಚಿಸದೆ ಮದುವೆಯಾದೆ’ ಎಂಬ ಆತ್ಮನಿವೇದನೆ ಮಾಡಿಕೊಳ್ಳುತ್ತಾನೆ. ವೃತ್ತಿಯ ಜೀವನದಲ್ಲಿರುವಂತೆಯೇ ವೈಯಕ್ತಿಕ ಜೀವನದಲ್ಲಿಯೂ ವ್ಯವಸ್ಥೆಯ ಜೊತೆಗೆ ರಾಜಿ ಮಾಡಿಕೊಂಡು ಹೇಗೋ ಹೊಂದಿಕೊಂಡು ಹೋಗುವ ತಂಗರಾಜು ಗುಣವನ್ನು ಮುಖ್ಯ ಕತೆಗೆ ಬೆಸೆಯಲು ನಿರ್ದೇಶಕ ಪರಿಣಾಮಕಾರಿಯಾಗಿದ್ದಾರೆ.

ಸಿನಿಮಾದ ಎರಡನೇ ಮುಖ್ಯ ಎಳೆ ಮದ್ರಾಸ್ ಯೂನಿವರ್ಸಿಟಿಯಲ್ಲಿ ಕಲಿಯುತ್ತಿರುವ, ಪೊಲೀಸ್ ವ್ಯವಸ್ಥೆಯಲ್ಲಿ ಆತ್ಮಹತ್ಯೆಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ದೇವಕುಮಾರ್ (ಹರಿ ಕೃಷ್ಣನ್) ಕಥೆ. ಪೊಲೀಸ್ ವ್ಯವಸ್ಥೆ ಹೇಗೆ ದಮನಿತ ಸಮುದಾಯದ ವ್ಯಕ್ತಿಗಳನ್ನು ‘ಫಿಕ್ಸ್’ ಮಾಡುತ್ತದೆಂಬ ಕಥೆಯನ್ನು ಸ್ಕಿಲ್‌ಫುಲ್ ಆಗಿ ಪ್ರಧಾನ ಎಳೆಗೆ ಜೋಡಿಸುತ್ತಾರೆ ಜಾಕೋಬ್. ಕ್ರಿಶ್ಚಿಯನ್ ದಲಿತ ಸಮುದಾಯದ ಮೊದಲ ಪೀಳಿಗೆಯ ಅಕ್ಷರಸ್ಥ, ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕಲಿಯಲು ಈಗ ಸಾಧ್ಯವಾಗಿದ್ದರೂ, ಹೇಗೆ ಪೊಲೀಸ್ ದೌರ್ಜನ್ಯದ ಎದುರು ಅಸಹಾಯಕನಾಗಿ ಒಬ್ಬಂಟಿಯಾಗುತ್ತಾನೆ ಎಂಬುದನ್ನು ಯಾರಿಗಾದರೂ ಕಾಡುವಂತೆ ಚಿತ್ರಿಸಲಾಗಿದೆ. ಅಧಿಕಾರಶಾಹಿ, ದಲಿತರನ್ನು ಕಾಣುವ ರೀತಿ, ಅದರಲ್ಲಿ ತಂಗರಾಜು ಅಂತಹವರು ದಾಳವಾಗುವುದು ಈ ಎಲ್ಲಾ ಅಂಶಗಳಿಂದ ಕಥೆ ಕುತೂಹಲವನ್ನು ಉಳಿಸಿಕೊಂಡು ಮುಂದುವರಿಯುತ್ತದೆ. ದೇವಕುಮಾರ್ ಊರಿನ ದೃಶ್ಯಗಳು, ತನ್ನ ಅಣ್ಣ ಕ್ಸೇವಿಯರ್ ಪ್ರೀತಿ, ಅತ್ತಿಗೆಯ ಹತಾಶೆ, ಅಣ್ಣ ಇಬ್ಬರನ್ನೂ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುವುದೆಲ್ಲಾ ಕಥೆಗೆ ಇನ್ನಷ್ಟು ತೀವ್ರತೆಯನ್ನು ತಂದುಕೊಡುತ್ತವೆ.

ಸುಮಾರು 15 ನಿಮಿಷಗಳ ಸಣ್ಣ ಅವಧಿಯಲ್ಲಿ ಮೂಡಿ ಬಂದಿದ್ದರೂ, ಅಷ್ಟೇ ಸಶಕ್ತವಾಗಿರುವ ಮೂರನೇ ಎಳೆ, ಪೊಲೀಸ್ ವ್ಯವಸ್ಥೆಯ ಶ್ರೇಣೀಕರಣದ ಸಮಸ್ಯೆ ಕೇವಲ ಆಫೀಸರ್ ರ‍್ಯಾಂಕಿಂಗ್‌ನ ಪ್ರತಿಷ್ಠೆಯಲ್ಲಿ ಮಾತ್ರ ಇರದೆ, ಅದರೊಳಗೆ ಅಸಹ್ಯಕರ ಜಾತಿ ವ್ಯವಸ್ಥೆ ಕೂಡ ಅಂತರ್ಗತವಾಗಿರುವುದನ್ನು ಪರಿಣಾಮಕಾರಿಯಾಗಿ ತೋರಿಸಿ ಮುಖ್ಯ ಕಥೆಗೆ ಜೋಡಿಸಲಾಗಿದೆ. ತಂದೆ ಜಟಕಾ ಗಾಡಿ ಹೊಂದಿದ್ದ ಕಾರಣದಿಂದ ಕುದುರೆ ಓಡಿಸುವುದನ್ನು ಕಲಿತಿರುವ ಶರಣ್ಯ (ಇನೆಯ) ಅಶ್ವಾರೋಹಿ ದಳಕ್ಕೆ ಅರ್ಜಿ ಹಾಕಿದರೂ ಜಾತಿಯ ಕಾರಣಕ್ಕಾಗಿ ಡಿಸಿ ತ್ರಿವೇದಿ ಶರ್ಮ (ಕವಿನ್ ಜೇ ಬಾಬು) ಆಕೆಯನ್ನು ತಿರಸ್ಕರಿಸುತ್ತಾನೆ. ‘ಪೊಲೀಸ್ ಇಲಾಖೆ ನನ್ನ ಅಪ್ಪನ ಕಾಲದಿಂದಲೂ ಇರುವುದೇ ಹೀಗೆ, ನಿನ್ನ ಕೋಪವನ್ನು ಕಡಿಮೆ ಮಾಡಿಕೋ’ ಎಂದು ತನ್ನ ಸಹೋದ್ಯೋಗಿ ತಿಳಿಹೇಳಿದರೂ ಕೇಳದೆ, ಡಿಸಿ ಕಾರು ಬರುವಾಗ ಕುದುರೆ ಏರಿ ಆತನ ಕಾರಿನ ಮುಂದೆ ಕುದುರೆಯನ್ನು ಜಿಗಿದು ನಿಲ್ಲಿಸುವ ದೃಶ್ಯ ಮೈನವಿರೇಳಿಸುವಂತಿದೆ. ಘನತೆಯ ಪ್ರತೀಕವಾಗಿದೆ. ನಂತರ ಅದು ಡಿಸಿಯ ಕ್ರೌರ್ಯಕ್ಕೆ ಕಾರಣವಾಗುತ್ತದೆ.

ಹೀಗೆ ಜಾತಿಯ ಕಾರಣದಿಂದ, ಅಧಿಕಾರದ ಮದದ ಕಾರಣದಿಂದ, ಸಾಮಾನ್ಯರ ಶೋಷಣೆಗೆ ನಿಂತು ಅಂತರಂಗ ಶಿಥಿಲವಾಗಿರುವ ಪೊಲೀಸ್ ವ್ಯವಸ್ಥೆಗೆ ಅಗತ್ಯವಿರುವ ಚಿಕಿತ್ಸೆಯನ್ನು ಮನಗಾಣಿಸಲೇನೋ ಎಂಬಂತೆ ಬಹಳ ‘ಕ್ರಿಟಿಕಲ್’ ಆದ ಸಮಯದಲ್ಲಿ ಜಾಕೋಬ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ತಂಗರಾಜು ಮಗನಿಗೆ ಊಟಕೊಡಲು ಹೆಂಡತಿಯ ಜೊತೆಗೆ ಶಾಲೆಗೆ ಹೋದಾಗ ಮಗ ಅಸಹನೆಯಿಂದ ಇವರನ್ನು ಏಕೆ ಕರೆದುಕೊಂಡು ಬಂದೆ ಎನ್ನುವ ದೃಶ್ಯ, ತಂಗರಾಜುವಿನ ಪಶ್ಚಾತಾಪವನ್ನು ತೋರಿಸಲು ಮಾಡಿದ್ದರೂ, ಇಡೀ ಸಿನಿಮಾದಲ್ಲಿ ಇದೊಂದೆ ಬಹಳ ಕ್ಲೀಷೆಯಾದ ಮತ್ತು ವೀಕ್ ಆದ ದೃಶ್ಯ ಅನ್ನಿಸುವುದು. ಅದೊಂದನ್ನು ಬಿಟ್ಟರೆ ಪ್ರತಿ ದೃಶ್ಯವನ್ನೂ, ಪ್ರತಿ ಸಂಭಾಷಣೆಯನ್ನು ಸಮಚಿತ್ತದಿಂದ ಬರೆದು, ನೋಡುಗನ ಮನಸ್ಸಿನೊಳಗೆ ನಿಧಾನಕ್ಕೆ ಇಳಿಯುವಂತೆ ಚಿತ್ರೀಕರಿಸುವ ಬಗೆ ಅಪ್ಯಾಯಮಾನವಾಗಿದೆ. ಜೈಲಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವ ರಾಜನ ಪಾತ್ರ (ಹಿಂದೆ ಸಣ್ಣಪುಟ್ಟ ಕಳ್ಳತನ ಮಾಡಿ ಬದುಕುತ್ತಿದ್ದ) ಕೂಡ ಇಡೀ ಸಿನಿಮಾಕ್ಕೆ ಮುಖ್ಯವಾಗುತ್ತದೆ. ಸಿನಿಮಾ ನೋಡುಗರ ಅಂತಃಕರಣವನ್ನು ಬಡಿದೆಬ್ಬಿಸಿ ಇಡೀ ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಬೇಕಿರುವ, ಸಾಮಾನ್ಯ ಜನರನ್ನು ಪ್ರೀತಿಯಿಂದ ಕಾಣಬೇಕಿರುವೆಡೆಗೆ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಕೊನೆಗೆ ಒಂದು ದುರಂತದ ಅಂತ್ಯವಿದ್ದರೂ, ಸಿನಿಮಾದ ಮೊದಲ ದೃಶ್ಯದಲ್ಲಿ ತಂಗರಾಜುವಿನ ಸಹಾಯಕನಾಗಿ ಪೊಲೀಸ್ ಠಾಣೆ ಸೇರಿಕೊಳ್ಳುವ ಅರಿವು (ದಿಲೀಪ್), ಕಟ್ಟಕಡೆಯ ದೃಶ್ಯದಲ್ಲಿ ತಂಗರಾಜುವಿನ ಯೂನಿಯನ್ ಪ್ರಕರಣವನ್ನು ಪ್ರತಿನಿಧಿಸಲು ಕೋರ್ಟ್‌ಗೆ ಹೋಗುವುದರಿಂದ ಪಾಸಿಟಿವ್ ನೋಟ್‌ನಲ್ಲಿ ಮುಗಿಯುತ್ತದೆೆ. ನಮ್ಮ ದಿನನಿತ್ಯದ ಜೀವನವನ್ನು ಬಾಧಿಸುವ ವ್ಯವಸ್ಥೆಗಳ ಜೊತೆಗೆ ಕೇವಲ ಹೊಂದಾಣಿಕೆ-ರಾಜಿ ಮಾಡಿಕೊಂಡಿರಷ್ಟೇ ಸಾಲದು, ಆ ವ್ಯವಸ್ಥೆಯ ಅನ್ಯಾಯಗಳ ಎದುರು ಹೋರಾಡಬೇಕಾದ ಅಗತ್ಯದ ಅರಿವನ್ನು ಬಡಿದೆಬ್ಬಿಸುವ ರೀತಿಯಲ್ಲಿ ಆ ದೃಶ್ಯ ಭಾಸವಾಗುತ್ತದೆ.

– ಗುರುಪ್ರಸಾದ್ ಡಿ ಎನ್
ನ್ಯಾಯಪಥ-ನಾನುಗೌರಿ ಸಂಪಾದಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...