Homeಕರ್ನಾಟಕಹಳತು-ವಿವೇಕ; ದೇವರಾಜ ಅರಸು ಭಾಷಣದಿಂದ ಆಯ್ದ ಭಾಗ; ಗೇಣಿದಾರರ ಹಿತಸಾಧನೆ

ಹಳತು-ವಿವೇಕ; ದೇವರಾಜ ಅರಸು ಭಾಷಣದಿಂದ ಆಯ್ದ ಭಾಗ; ಗೇಣಿದಾರರ ಹಿತಸಾಧನೆ

- Advertisement -
- Advertisement -

ಇವತ್ತು ಮುಖ್ಯವಾಗಿ ನಾವು ನೀವು ಎಲ್ಲರೂ ಸೇರಿರತಕ್ಕದ್ದು ಭೂಸುಧಾರಣೆಯ ವಿಚಾರವಾಗಿ ಮಾತನಾಡುವುದಕ್ಕೋಸ್ಕರ. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಭೂಮಿ ಒಂದು ಕಾಲಕ್ಕೆ ಪಾಳೇಗಾರರ ಹಾಗೂ ರಾಜರ ಕೈಯಲ್ಲಿತ್ತು. ಅಲ್ಲಿಂದ ಮುಂದೆ ಜಮೀನುದಾರರ ಮತ್ತು ಜಹಗೀರುದಾರರ ಕೈಗೆ ಹೋಗಿ, ಅನಂತರ ಪಟೇಲರ ಹಾಗೂ ಶಾನುಭೋಗರ ಕೈಯಲ್ಲಿ ಸೇರಿತು. ಇದರ ಫಲವಾಗಿ ಇಲ್ಲಿ ಗೇಣಿದಾರರ ಅಂದರೆ ಕೆಲಸಮಾಡತಕ್ಕ ಜನರ ಅಥವಾ ಉಳುಮೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಬಹುಭಾಗ ಈ ಗೇಣಿದಾರರೇ ಇದ್ದಾರೆ. ಈ ಗೇಣಿದಾರರ ಪರವಾಗಿ ಹಿಂದೆಲ್ಲಾ ನಾನಾ ರೀತಿ ಹೋರಾಟ ನಡೆದಿತ್ತು. ಅದನ್ನೆಲ್ಲಾ ಈಗತಾನೆ ವಿವರಿಸಿದ್ದಾರೆ. ಭೂಮಿಯಲ್ಲಿ ಕೆಲಸಮಾಡಿ ಎಷ್ಟೇ ಶ್ರಮಪಟ್ಟು ಅಹಾರ ಧಾನ್ಯಗಳನ್ನು ಬೆಳೆದರೂ ಅದರಲ್ಲಿ ಅವರಿಗೆ ನ್ಯಾಯವಾಗಿ ಸಲ್ಲತಕ್ಕ ಭಾಗ ದೊರೆಯದೇ ಇರತಕ್ಕ ವಿಚಾರದ ಬಗ್ಗೆ ಏನು ಹೋರಾಟ ನಡೆದಿತ್ತು, ಇದು ಕೇವಲ ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿರಲಿಲ್ಲ; ಇಡೀ ಮೈಸೂರು ರಾಜ್ಯದಲ್ಲೇ ಆ ರೀತಿ ನಡೆದಿತ್ತು. ಶೋಷಣೆ ತಪ್ಪಬೇಕು ಎಂದು ಈ ದೇಶದಲ್ಲಿ ಯಾವ ಒಂದು ಹೋರಾಟ ನಡೆದುಕೊಂಡು ಬಂದಿತ್ತೋ ಆ ಶೋಷಣೆ ತಪ್ಪುವಂತಹ ಕಾಲ ನಮ್ಮ ಮುಂದಿದೆ. ಅದಕ್ಕೆ ಈ ಸಭೆಯಲ್ಲಿ ನಾವು ಇಂದು ನಾಂದಿ ಹಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ನಮ್ಮ ಮೈಸೂರು ರಾಜ್ಯದ ವಿಧಾನಸಭೆಯಲ್ಲಿ ಈ ಭೂಸುಧಾರಣೆ ಕಾನೂನು ಇನ್ನು ಐದಾರು ದಿವಸಗಳಲ್ಲಿ ಪಾಸ್ ಆಗುವುದಿದೆ. ಆ ಕಾನೂನು ಪಾಸಾಗಬೇಕಾದರೆ ಕೇಂದ್ರ ಸರ್ಕಾರದಲ್ಲಿ ಅದು ಒಪ್ಪಿಗೆ ಪಡೆಯಬೇಕು ಎಂದು ಇದೆ. ಅದಾದನಂತರ ಅದನ್ನು ಜಾರಿಗೆ ಕೊಡಲು ನಮಗೆ ಸಾಧ್ಯವಾಗುತ್ತದೆ. ಆಗ ಈ ಕಾನೂನಿನರೀತ್ಯಾ ನಿಮ್ಮಲ್ಲಿ, ಊರುಗಳಲ್ಲಿ, ಇರತಕ್ಕ ಗೇಣಿದಾರರು ತಾವು ಉಳುತ್ತಿರುವ ಭೂಮಿಗೆ ಒಡೆಯರಾಗುತ್ತಾರೆ. ಅಂದರೆ ನಾವು ಉಳುಮೆ ಮಾಡುತ್ತಿರತಕ್ಕಂಥ ಭೂಮಿ ತಮ್ಮ ಸ್ವಂತ ಭೂಮಿಯೆಂದು ತಿಳಿಯಬೇಕು. ಇದೇ ಕಾನೂನು ನಾವು ಇಂದು ತರುತ್ತಿರುವುದು. ಈ ವಿಷಯವನ್ನು ತಿಳಿದು ನೀವೆಲ್ಲರೂ ಬಹಳ ಸಂತೋಷಪಡುತ್ತಿದ್ದೀರಿ.

ಆದರೆ ನಾನು ಈ ವಿಷಯವನ್ನು ತಿಳಿಸಿ ಈ ಹರ್ಷವನ್ನುಂಟುಮಾಡಿದ್ದರೂ, ಇದನ್ನು ಜಾರಿಗೆ ಕೊಡುವಲ್ಲಿ ಎಷ್ಟು ಕಷ್ಟವಿದೆ ಎಂಬುದು ನನಗೆ ತಿಳಿದಿದೆ. ಇದಕ್ಕೆ ಕಾರಣವೇನೆಂದರೆ, ಮೊದಲನೆಯದಾಗಿ ಈ ಭೂಮಿಯನ್ನು ಮಾಡತಕ್ಕ ಜನರಿಗೆ ಅಷ್ಟಾಗಿ ತಿಳಿವಳಿಕೆ ಇರಲಿಲ್ಲ; ಅನೇಕರು ವಿದ್ಯಾವಂತರೂ ಅಲ್ಲ ಹಾಗೂ ಒಗ್ಗಟ್ಟಿನಿಂದ ಹೋರಾಟ ಮಾಡುವ ಶಕ್ತಿಯೂ ಅವರಲ್ಲಿ ಇಲ್ಲ. ಆದರೆ ಈ ಭೂಮಾಲೀಕರು ತುಂಬ ತಿಳಿವಳಿಕಸ್ಥರಾಗಿದ್ದಾರೆ ಹಾಗೂ ಅವರಿಗೆ ಕಾನೂನುಗಳನ್ನು ಸುಲಭವಾಗಿ ತಿಳಿದುಕೊಳ್ಳುವ ಶಕ್ತಿ ಇದೆ; ಕೋರ್ಟುಕಚೇರಿಗಳಿಗೆ ಹೋಗಿ ತಮಗೆ ಒಪ್ಪಿಗೆಯಾದ ರೀತಿಯಲ್ಲೇ ಕೆಲಸ ಮಾಡಿಸಿಕೊಳ್ಳಬಲ್ಲರು; ಶಾನುಭೋಗರು ಶೇಕದಾರರಿಂದ ತಮ್ಮ ಇಷ್ಟದಂತೆ ಅವರು ಬರೆಸಬಲ್ಲರು. ಆದ್ದರಿಂದ ಈಗ ನಿಮಗೆ ಭೂಮಿಯನ್ನು ಕೊಡುತ್ತೇವೆಂದರೆ ಅದು “ಮಕ್ಕಳ ಕೈಯಲ್ಲಿ ಕಜ್ಜಾಯ ಕೊಟ್ಟರೆ, ಅದನ್ನು ರಸ್ತೆಯಲ್ಲಿ ಹೋಗುವ ಕಾಗೆ ಹಾರಿಸಿಕೊಂಡು ಹೋಯಿತು” ಎನ್ನುವಂತೆ ಆಗುತ್ತದೆಂದು ನನ್ನ ಭಾವನೆ. ಇದನ್ನು ತಪ್ಪಿಸುವ ಮಾರ್ಗ ಹೇಗೆ ಹಾಗೂ ನಿಮಗೆ ರಕ್ಷಣೆ ಕೊಡುವುದು ಹೇಗೆ ಎನ್ನುವ ಚಿಂತನೆ ನನ್ನ ಮನಸ್ಸಿನಲ್ಲಿ ಪ್ರಬಲವಾಗಿ ಉಳಿದಿದೆ. ಇಂಥ ಅನ್ಯಾಯವನ್ನು ಬಗೆಹರಿಸುವುದಕ್ಕೆ ಈಗ ಇರತಕ್ಕಂತಹ ಕಾನೂನುರೀತ್ಯಾ ಮುನ್ಸಿಫ್ ಕೋರ್ಟ್, ಸಬ್ ಡಿವಿಷನ್ ಕೋರ್ಟ್, ರೆವೆನ್ಯೂ ಕೋರ್ಟ್, ಹೈಕೋರ್ಟ್, ಸುಪ್ರೀಂ ಕೋರ್ಟ್- ಹೀಗೆ ಗೇಣಿದಾರರು ಅಲೆಯುವಂತಾದರೆ ಅವರು ರಕ್ಷಣೆಯನ್ನಾದರೂ ಎಲ್ಲಿ ಪಡೆಯಲು ಸಾಧ್ಯ? ಆತನ ಜೀವಮಾನವೆಲ್ಲಾ ಕೋರ್ಟು ಕಚೇರಿ ಅಲೆಯುವಂತಾಗಬಹುದು. ಇದನ್ನು ತಪ್ಪಿಸುವುದಕ್ಕೋಸ್ಕರವೇ ಈ ಕಾನೂನಿನಲ್ಲಿ ಕೋರ್ಟುಗಳು ಅಂದರೆ ತಾಲ್ಲೂಕು ಮಟ್ಟದಿಂದ ಮುಂದಕ್ಕೆ ಹೋಗಬಾರದು ಎಂದು ಆಯಾ ಸ್ಥಳದಲ್ಲಿರತಕ್ಕ ರೈತರ ಒಂದು ಪಂಚಾಯಿತಿ ಮಾಡಿದಂತೆ ಮಾಡಿ ಅದರಲ್ಲಿ ಸಾರ್ವಜನಿಕರ ಮುಖಂಡರನ್ನು ಸೇರಿಸಿ ಈ ವಿಚಾರಗಳೆಲ್ಲ ಅಲ್ಲಿಯೇ ಇತ್ಯರ್ಥವಾಗುವಂತೆ ಮಾಡಬೇಕು. ಇದು ಹೆಚ್ಚುಕಡಿಮೆ ನಮ್ಮ ಹಳ್ಳಿ ಪಂಚಾಯಿತಿ ಇದ್ದ ಹಾಗೆ. ಹೀಗೆ ಮಾಡಿದರೆ ಜಮೀನುದಾರರ ಕೈವಾಡದಿಂದ ಗೇಣಿದಾರರು ತಪ್ಪಿಸಿಕೊಂಡು ಸುಗಮವಾಗಿ ಅವರ ಗೇಣಿ ಜಮೀನುಗಳನ್ನು ಪಡೆಯಲು ಅನುಕೂಲವಾಗುತ್ತದೆ ಹಾಗೂ ಇವರಿಬ್ಬರ ನಡುವೆಯೇನಾದರೂ ತಕರಾರುಗಳು ಬಂದರೆ ಈ ಪಂಚಾಯಿತಿಗಳು ನ್ಯಾಯವಾಗಿ ಪರಿಹರಿಸಬಲ್ಲವು.

ಆದ್ದರಿಂದ ಈ ರೀತಿ ಮಾಡಿ ಗೇಣಿದಾರರಿಗೆ ರಕ್ಷಣೆ ಕೊಡುವುದು ಒಳ್ಳೆಯದೆಂದು ಕಾನೂನನ್ನು ಆಳವಡಿಸುವುದಕ್ಕೆ ಪ್ರಯತ್ನ ಮಾಡಿದ್ದೇವೆ. ಒಟ್ಟಿನಲ್ಲಿ ಈ ಭೂಸುಧಾರಣೆ ಕಾನೂನಿನಿಂದ ನಾವು ಯಾರ ಹಿತವನ್ನು ಸಾಧನೆ ಮಾಡುವುದಕ್ಕೆ ಹೊರಟಿದ್ದೇವೋ ಆ ಜನರಿಗೆ ಕಾನೂನಿನ ಮೂಲಕ ರಕ್ಷಣೆ ದೊರಕಿಸಿಕೊಡಬೇಕು ಎಂಬುದು ನಮ್ಮ ಉದ್ದೇಶ. ಇದರಲ್ಲಿ ನಮ್ಮ ತಾಲ್ಲೂಕಿನ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಇರತಕ್ಕ ಎಲ್ಲ ಮುಖಂಡರು ಸಹಕಾರ ನೀಡಬೇಕೆಂದು ತನ್ನ ಇಚ್ಛೆ. ಬೇರೆ ಪಕ್ಷದವರು ಏನು ಹೇಳುತ್ತಾರೋ ತಿಳಿದಿಲ್ಲ. ನಮ್ಮ ಪಕ್ಷದಲ್ಲಿ ಕೆಲಸಮಾಡತಕ್ಕ ಮುಖಂಡರು ಕಾರ್ಯಕರ್ತರು ಪ್ರಾಮಾಣಿಕವಾಗಿ ನಾವು ಏನು ಕಾನೂನು ಮಾಡಿದ್ದೇವೆ ಆ ಕಾನೂನಿನಂತೆ ವ್ಯವಹಾರಗಳು ನಡೆಯುವಂತೆ ಏರ್ಪಾಡು ಮಾಡುವುದು ತಮ್ಮ ಕರ್ತವ್ಯವೆಂದು ಭಾವಿಸಬೇಕು. ನಮ್ಮಲ್ಲಿ ಭೂಮಾಲೀಕರ ಪರ ಇರುವ ಜನ ಇದ್ದರೆ, ಕಾನೂನಿನಂತೆ ನಡೆಯಲು ಅವರಿಗೆ ಇಷ್ಟವಿಲ್ಲದಿದ್ದರೆ, ಅಂಥವರು ನಮ್ಮ ಪಕ್ಷವನ್ನು ಬಿಟ್ಟುಹೋಗಬೇಕು. ಇದಕ್ಕೆ ಬೇರೆ ದಾರಿಯೇ ಇಲ್ಲ. ಪಕ್ಷದಲ್ಲೂ ಇರುತ್ತೇವೆ ಹಾಗೂ ಜಮೀನನ್ನು ಉಳಿಸಿಕೊಳ್ಳುತ್ತೇವೆ ಅನ್ನುವುದಾದರೆ ಇಂದಲ್ಲ ನಾಳೆಯಾದರೂ ನೀವು ಹೊರಗೆ ಹೋಗಲೇಬೇಕಾಗುತ್ತದೆ. ಇದಕ್ಕೆ ಒಂದು ಭೂಮಿಕೆಯನ್ನು ಮೊದಲು ನಾವು ತಯಾರು ಮಾಡಿಕೊಳ್ಳಬೇಕು. ನಿಮ್ಮ ಭೂಮಿಯನ್ನು ಸ್ವಂತ ಸಾಗುವಳಿಗೆ ತೆಗೆದುಕೊಳ್ಳುವುದಕ್ಕೆ ಕಾನೂನು ಇತ್ತು. ಇಡೀ ಕರ್ನಾಟಕ ರಾಜ್ಯದಲ್ಲಿ ಆ ಅಧಿಕಾರವನ್ನು ಪಡೆಯುವುದಕ್ಕಾಗಿ ಒಂದು ಲಕ್ಷ ಜನ ಅರ್ಜಿ ಹಾಕಿದ್ದರು. ಈಗ ಅದು 7-8 ವರ್ಷಗಳ ಮೇಲಾಗಿರಬಹುದು. ಆದರೆ ಎಲ್ಲಾ ಅರ್ಜಿಗಳನ್ನು ತೀರ್ಮಾನ ಮಾಡುವುದಕ್ಕಾಗಲಿಲ್ಲ. ಇನ್ನೂ 50 ಸಾವಿರ ಅರ್ಜಿಗಳು ತೀರ್ಮಾನವಾಗದೆ ಹಾಗೆ ಇವೆ. ಅದಕ್ಕೆ ಆ ಅರ್ಜಿಗಳನ್ನು ಈ ಕಾನೂನುಪ್ರಕಾರ ರದ್ದು ಮಾಡಿದ್ದು ಆಯಿತು. ಯಾರು ಗೇಣಿದಾರರಿದ್ದಾರೆ ಅವರಿಗೆ ಭೂಮಿಯನ್ನು ಕೊಡುವಂತೆ ಹಾಗೂ ಅದನ್ನು ಹಿಂದಕ್ಕೆ ಮಾಲೀಕರಿಗೆ ಕೊಡದಂತೆ ಈಗ ಕಾನೂನು ಮಾಡಿದ್ದೇವೆ. ಇದನ್ನು ಜನರು ಅರ್ಥಮಾಡಿಕೊಳ್ಳಬೇಕು. ಈ ಸಭೆ ಏರ್ಪಾಡು ಮಾಡಿರುವುದು ಬಹಿರಂಗವಾಗಿ ಜನರಿಗೆ ಈ ವಿಷಯವನ್ನು ತಿಳಿಯುವಂತೆ ಹೇಳಬೇಕೆಂಬ ಉದ್ದೇಶದಿಂದಲೆ.

ಹಾಗಿಲ್ಲದಿದ್ದರೆ, ಹಾಗೆಹೀಗೆ ಎಂದು ಜನರಿಗೂ, ಗೇಣಿದಾರರಿಗೂ ಮಾಲೀಕರು ಮೋಸಮಾಡುವ ಸಂಭವ ಇದೆ. ಆದ್ದರಿಂದ ಈಗಲೇ ನಿಮ್ಮ ಮನಸ್ಸಿಗೆ ಸ್ಪಷ್ಟವಾಗುವಂತೆ ಹೇಳುತ್ತೇನೆ. ಯಾರು ಗೇಣಿದಾರರಾಗಿದ್ದಾರೋ ಅವರಿಂದ ಭೂಮಿಯನ್ನು ಮಾಲೀಕರು ಹಿಂದಕ್ಕೆ ಪಡೆಯುವಂತೆ ಇಲ್ಲ. ನೀವು ಭೂಮಿಯನ್ನು ಖಂಡಿತ ಕೊಡಬೇಡಿ. ಆದರೆ ಯಾರು ಮಿಲಿಟರಿಗೆ ಹೋಗಿರುವವರು ಇರುತ್ತಾರೆ ಅವರ ಭೂಮಿ ಒಂದು ಬಿಟ್ಟು ಮಿಕ್ಕವರಿಗೆಲ್ಲಾ ಈ ಕಾನೂನು ಅನ್ವಯಿಸುತ್ತದೆ. ಮತ್ತೆ ಈ ಭೂಮಿಗೆ ನೀವು ಕೊಡಬೇಕಾದ ಕಂದಾಯದ ಹಣದ ಬಗ್ಗೆ ನಿಮಗೆ ಅನುಕೂಲ ಮಾಡಿಕೊಡಲಾಗಿದೆ. ಏಕೆಂದರೆ ನಿಮ್ಮಲ್ಲಿ ಪೂರ್ಣವಾಗಿ ಬಡವರೇ ಇರುವುದರಿಂದ ಕಂದಾಯವನ್ನು ಕಂತಿನ ರೂಪದಲ್ಲಿ ತೀರಿಸುವದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಅನಂತರ ಯಾರು ದೇವಸ್ಥಾನಗಳಿಗೆ ಸಂಬಂಧಪಟ್ಟ ಭೂಮಿಯನ್ನು ಗೇಣಿಮಾಡುತ್ತಿದ್ದಾರೆ ಅವರಿಗೂ ಈ ಕಾನೂನು ಅನ್ವಯಿಸುತ್ತದೆ, ಕೆಲವರು ಸರ್ಕಾರ ಕಾನೂನನ್ನು ದೇವರಿಗೂ ತಂದಿದೆ ಎಂದು ಹೇಳುತ್ತಿದ್ದಾರೆ. ದೇವರ ಹೆಸರಿನಲ್ಲಿದ್ದ ಭೂಮಿಯನ್ನು ಇಟ್ಟುಕೊಂಡು ಅದರಲ್ಲಿ ಬರತಕ್ಕ ಉತ್ಪತ್ತಿಯನ್ನು ಯಾರು ಸ್ವಾಹಾ ಮಾಡುತ್ತಿದ್ದಾರೋ ಅವರೇ ಈ ಮಾತನ್ನು ಹೇಳುತ್ತಿರುವುದು. ಆನೇಕ ಪೂಜಾರಿಗಳು ದೇವರ ಹೆಸರಿನಲ್ಲಿರತಕ್ಕ ಜಮೀನನ್ನು ಕ್ರಮೇಣ ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಂಡು ತಮ್ಮದೇ ಭೂಮಿಯೆಂದು ಆದರ ಆದಾಯವನ್ನೆಲ್ಲಾ ತಾವೇ ಪಡೆಯುತ್ತಿದ್ದಾರೆ ಹಾಗೂ ಗೇಣಿದಾರರಿಗೆ ದೇವರ ಹೆಸರಿನಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇದು ಸರಿಯಲ್ಲ. ದೇವಸ್ಥಾನದ ಹೆಸರಿನಲ್ಲಿದ್ದು ಆ ಭೂಮಿಯನ್ನು ಅದಕ್ಕೆ ಸಂಬಂಧಪಟ್ಟ ಪೂಜಾರಿಯೇ ಗೇಣಿಮಾಡುತ್ತಿದ್ದರೆ ಆ ಭೂಮಿಯನ್ನು ಅವನಿಗೆ ಈ ಕಾನೂನಿನ ಪ್ರಕಾರ ಕೊಡಲಾಗುತ್ತದೆ, ಹಾಗಿಲ್ಲದೆ ಬೇರೆಯವರಿಗೆ ಗೇಣಿಗೆ ಕೊಟ್ಟಿದ್ದರೆ ಅದು ಗೇಣಿದಾರನಿಗೆ ಸೇರುತ್ತದೆ. ಇದರಿಂದ ದೇವಸ್ಥಾನದ ಪೂಜೆ ಪುನಸ್ಕಾರಗಳನ್ನು ನಿಲ್ಲಿಸುವಂತಾಗುತ್ತದೆಂದು ಅನೇಕ ವಿಧವಾಗಿ ಚರ್ಚೆ ಕೂಡ ನಡೆಯಿತು; ಆ ದೇವಸ್ಥಾನಗಳಲ್ಲಿ ಹಿಂದಿನಂತೆ ಪೂಜಾಕಾರ್ಯಕ್ರಮಗಳು ನಡೆದುಕೊಂಡು ಬರಲು ಸಹಾಯಕವಾಗುವಂತೆ ಸರ್ಕಾರದಿಂದ ಅದಕ್ಕಾಗಿ ಒಂದು ಕಾಯಂ ಆದ ಮೊಬಲಗನ್ನು ಕೊಡಿಸಲಾಗುತ್ತದೆ. ಆದ್ದರಿಂದ ಇದರ ಬಗ್ಗೆ ಯಾರೂ ಹೆಚ್ಚಿಗೆ ಯೋಚನೆ ಮಾಡಬೇಕಾಗಿಲ್ಲ.

ಒಟ್ಟಿನಲ್ಲಿ, ಈ ಎಲ್ಲದರ ಹಿನ್ನೆಲೆಯೇನೆಂದರೆ ನಮ್ಮ ದೇಶದಲ್ಲಿ ಬಡತನ ಬಹಳ ಇದೆ; ಈ ಬಡತನ ಹೋಗಲಾಡಿಸುವ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಜನ ಹೊರಿಸಿದ್ದಾರೆ. ಸರ್ಕಾರ ಬಡತನ ಹೋಗಲಾಡಿಸತಕ್ಕಂತಹ ಮಾರ್ಗಗಳನ್ನು ಕಂಡುಹಿಡಿಯಬೇಕು; ಜನರಿಗೂ ಮಾರ್ಗದರ್ಶನ ಮಾಡಬೇಕು. ಕಾನೂನುಗಳನ್ನು ಮಾಡಬೇಕು; ನಮ್ಮ ಈ ಒಂದು ಕೆಲಸಕಾರ್ಯಗಳಿಗೆ ಅಡಚಣೆಗಳು ಇದ್ದರೆ ಅದನ್ನು ತೆಗೆಯಬೇಕು; ಇದೆಲ್ಲಾ ಜವಾಬ್ದಾರಿಯನ್ನು ಜನತೆ ಸರ್ಕಾರಕ್ಕೆ ಕೊಟ್ಟಿದೆ. ಅದೇ ಪ್ರಜಾಪ್ರಭುತ್ವ ಅನ್ನತಕ್ಕಂತಹದ್ದು. ನಾವು ನಿರ್ಭಯವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸತಕ್ಕದ್ದು ನಮ್ಮ ಕೆಲಸವಾಗಿದೆ. ನಾವು ಹೇಳುವ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕಾದ್ದು ನಿಮ್ಮ ಜವಾಬ್ದಾರಿ. ಸರ್ಕಾರ ಯಾವುದೇ ಕೆಲಸ ಮಾಡಬೇಕಾದರೆ, ಸರ್ಕಾರಕ್ಕೆ ಸಹಾಯವಾಗಿ ನಡೆಯುವ, ಸರ್ಕಾರ ಮಾಡಿದ ಕಾನೂನಿನಂತೆ ನಡೆಯುವ ಮನೋಭಾವ ಸಾರ್ವಜನಿಕರಲ್ಲಿ ಬೆಳೆದರೆ ಆಗ ನಮ್ಮ ಕೆಲಸಕಾರ್ಯಗಳು ಸುಲಭವಾಗಿ ಆಗುತ್ತವೆ ಹಾಗೂ ನಮಗೆ ಇರತಕ್ಕ ಕಷ್ಟಗಳನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ನಮ್ಮಲ್ಲಿ ಕಾನೂನುಗಳನ್ನು ರಕ್ಷಣೆ ಮಾಡತಕ್ಕ ಮನೋಭಾವ ಎಲ್ಲರಲ್ಲೂ ಬೆಳೆಯಬೇಕಾದ್ದು ಬಹಳ ಅಗತ್ಯ. ನಾವು ಈ ಭೂಸುಧಾರಣಾ ಕಾನೂನು ತಂದಿದ್ದೇವೆ. ಉತ್ಪಾದನೆ ಮಾಡುವುದಕ್ಕೆ ಸಾಧನ ಯಾವುದಿದೆ ಅದು ನಿಮಗೆ ಸೇರಬೇಕೆಂಬುದು ಇದರ ಅರ್ಥ. ಧಾನ್ಯ, ಧವಸ, ಮರ, ಗಿಡಗಳೆಲ್ಲ ಉತ್ಪಾದನೆಯೆ. ಇವೆಲ್ಲವೂ ಮನುಷ್ಯನಿಗೆ ಉಪಯೋಗಕ್ಕೆ ಬೇಕಾದುವು. ಈ ಉತ್ಪಾದನೆಗಳು ನಮಗೆ ಬರುವುದು ಭೂಮಿಯಿಂದ. ಆದ್ದರಿಂದ ನಮಗೆ ಬೇಕಾದ ಆಹಾರಪದಾರ್ಥಗಳನ್ನು ಭೂಮಿಯಿಂದ ಪಡೆಯುವುದರಿಂದ ಈ ಭೂಮಿ ಒಂದು ಸಾಧನ. ಈ ಸಾಧನದ ಮಾಲೀಕತ್ವ ಯಾರಿಗೆ ಸಲ್ಲಬೇಕು ಎನ್ನುವ ತತ್ವವನ್ನು ನಾವು ಕಂಡುಕೊಂಡಿದ್ದೇವೆ. ಯಾರು ಭೂಮಿಯ ಮೇಲೆ ಇದುವರೆಗೆ ಸ್ವತಃ ನಿಂತು ಬೆವರು ಸುರಿಸಿ ಅದರಿಂದ ಉತ್ಪಾದನೆಯನ್ನು ಮಾಡುತ್ತಿದ್ದಾರೋ ಅವರಿಗೆ ಆ ಭೂಮಿಯು ಮಾಲೀಕತ್ವ ಸಲ್ಲಬೇಕು ಎಂಬುದೇ ಇದರ ಮುಖ್ಯ ತತ್ವ. ಇದಕ್ಕೆ ವಿರುದ್ಧವಾಗಿರುವ ಜನ ನಾನಾ ರೀತಿಯಲ್ಲಿ ಸಂಕಟಪಡುತ್ತಿದ್ದಾರೆ. ಯಾರು ಬೇರೆಯವರಿಂದ ದುಡಿಮೆ ಮಾಡಿಸಿಕೊಂಡು, ಅದರಿಂದ ಬಂದಂಥ ಉತ್ಪತ್ತಿಯ ಹೆಚ್ಚು ಭಾಗವನ್ನು ಊಟ ಮಾಡುತ್ತಿದ್ದರೋ ಆ ಜನರಿಗೆ ಈಗ ಸಂಕಟ ಬಂದಿದೆ. ಅದೇನೆಂದರೆ ಇಷ್ಟು ದಿವಸ ಕೂತಕಡೆ ಊಟ ಮಾಡುತ್ತಿದ್ದ ಈ ಜನ ಇನ್ನು ಮುಂದೆ ಅದಕ್ಕೆ ಅವಕಾಶವಿಲ್ಲವೆಂದೂ ಹಾಗೂ ಭೂಮಿಯನ್ನು ಕಳೆದುಕೊಳ್ಳುತ್ತೇವೆಂದೂ ಸಂಕಟಪಡುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಯಾರು ಇದುವರೆಗೆ ಈ ಗೇಣಿದಾರರನ್ನು ಶೋಷಣೆ ಮಾಡಿ ಸುಖಪಡುತ್ತಿದ್ದರೋ ಆ ಜನ ತಮ್ಮ ಕಾಲ ಮುಗಿಯಿತೆಂದು ತಿಳಿಯಬೇಕು. ಇದುವರೆಗೆ ಅವರು ಅನುಭವಿಸಿದ ಸುಖ ಸಾಕು. ಇನ್ನು ಮುಂದೆ ದುಡಿಮೆಗಾರರ ಯುಗ. ಆದ್ದರಿಂದ ದುಡಿಯುವವರಿಗೆ ಈಗ ನೀವು ಅವಕಾಶ ಮಾಡಿಕೊಡಬೇಕು. ಮಾಡಿಕೊಡಿ. ಹಾಗೆ ಮಾಡಿ ಕೊಡುವುದರಿಂದ ನಿಮಗೆ ಯಾವ ರೀತಿಯ ತೊಂದರೆಗಳೂ ಆಗುವುದಿಲ್ಲ. ಏಕೆಂದರೆ ನಿಮಗೆ ಹಣ ಸಂಪಾದನೆ ಮಾಡಲು ಅನೇಕ ಮಾರ್ಗಗಳಿವೆ. ಅದರಲ್ಲಿ ನೀವು ಹೋಗಿ. ಈಗ ಭೂಮಿಯ ಮೇಲೆ ಕೆಲಸ ಮಾಡುವವರಿಗೆ ಅದರ ಮೇಲೆ ಮಾಲೀಕತ್ವ ಉಳಿಯಲಿ. ಅದರಲ್ಲಿ ನಿಮಗೆ ದೊರೆಯುತ್ತಿದ್ದ ಪಾಲು ತಪ್ಪಬೇಕು. ಇದು ನಾವು ಹಾಕಿಕೊಂಡು ಹೊರಟಿರತಕ್ಕ ನೀತಿ.

(ಭೂ ಸುಧಾರಣೆ ಕಾಯ್ದೆ ಜಾರಿ ಮಾಡುವುದಕ್ಕಿಂತಲೂ ಮುಂಚಿತವಾಗಿ, 12.05.1973ರಂದು ಶಿವಮೊಗ್ಗ ಜಿಲ್ಲೆಯ ವ್ಯವಸಾಯಗಾರರ ಸಭೆಯನ್ನು ಉದ್ದೇಶಿಸಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮಾಡಿದ ಭಾಷಣದ ಆಯ್ದ ಭಾಗವಿದು. ಇದನ್ನು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಸಂಸ್ಥೆ ಪ್ರಕಟಿಸಿರುವ ’ಪ್ರಗತಿಪಥ – ಅರಸು ಅವರ ಆಯ್ದ ಐವತ್ತು ಭಾಷಣಗಳು’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರ ಹಿಂಸಾಚಾರ: ಸೋರಿಕೆಯಾದ ಸಂಪೂರ್ಣ ಆಡಿಯೋ ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪಾತ್ರವನ್ನು ಸೂಚಿಸಿರುವ ಅರ್ಜಿಯಲ್ಲಿ ಲಭ್ಯವಿರುವ ಸಂಪೂರ್ಣ ಸೋರಿಕೆಯಾದ ಆಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ ಎಂದು...

ಎಸ್‌ಐಆರ್‌ ಭಯಕ್ಕೆ ಮತ್ತೊಂದು ಬಲಿ: ಬಂಗಾಳದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದ ಭಯದಿಂದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ರಣಘಾಟ್‌ನ...

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ...

ಕೇರಳ: ಕೊಲ್ಲಂ ಕಾರ್ಪೊರೇಷನ್‌ನಲ್ಲಿ 25 ವರ್ಷಗಳ ಎಲ್‌ಡಿಎಫ್‌ ಆಳ್ವಿಕೆ ಕೊನೆಗೊಳಿಸಿದ ಯುಡಿಎಫ್

2025 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಅತ್ಯಂತ ಅಚ್ಚರಿಯ ರಾಜಕೀಯ ಫಲಿತಾಂಶಳನ್ನು ನೀಡಿವೆ. ಅದರಲ್ಲಿ, ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ನಿರಂತರ 25 ವರ್ಷಗಳ ನಿಯಂತ್ರಣವನ್ನು ಯುನೈಟೆಡ್...

‘ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’: ಕಾಂಗ್ರೆಸ್‌ನ ‘ವೋಟ್ ಚೋರಿ’ ಅಭಿಯಾನದ ಬಗ್ಗೆ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್‌ನ "ಮತ ಚೋರಿ" ಅಭಿಯಾನದಿಂದ ದೂರ ಉಳಿದಿದ್ದಾರೆ, ಈ ವಿಷಯವು ಒಟ್ಟಾರೆಯಾಗಿ ವಿರೋಧ ಪಕ್ಷದ ಇಂಡಿಯಾ ಬಣದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ...

ಇಂಡಿಗೋ ವಿಮಾನ ರದ್ದತಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನೂರಾರು ಇಂಡಿಗೋ ವಿಮಾನಗಳ ರದ್ದತಿಗೆ ನ್ಯಾಯಾಂಗ ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸೋಮವಾರ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿದಾರರು ತಮ್ಮ ದೂರುಗಳೊಂದಿಗೆ ದೆಹಲಿ ಹೈಕೋರ್ಟ್ ಅನ್ನು...

ಹಣ ಅಕ್ರಮ ವರ್ಗಾವಣೆ ಪ್ರಕರಣ : ಪತ್ರಕರ್ತ ಮಹೇಶ್ ಲಾಂಗಾಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ವಂಚನೆ ಆರೋಪದ ಮೇಲೆ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾ ಅವರಿಗೆ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.15) ಮಧ್ಯಂತರ ಜಾಮೀನು ನೀಡಿದೆ. ಜಿಎಸ್‌ಟಿ ವಂಚನೆ...

‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’: ಸಿಪಿಎಂ ನಾಯಕನ ಅಸೂಕ್ಷ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ

ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕ ಸಯೀದ್ ಅಲಿ ಮಜೀದ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  ಸಯೀದ್ ಅಲಿ ಮಜೀದ್, ತೆನ್ನೆಲಾ ಪಂಚಾಯತ್ ವಾರ್ಡ್ ಅನ್ನು...

ಅಖ್ಲಾಕ್ ಹತ್ಯೆ ಪ್ರಕರಣ ಹಿಂತೆಗೆದುಕೊಳ್ಳುವುದು ನ್ಯಾಯಾಂಗ ಪ್ರಕ್ರಿಯೆ ಹಳಿತಪ್ಪಿಸುವ ಪ್ರಯತ್ನ: ಬೃಂದಾ ಕಾರಟ್

ರಾಜ್ಯಪಾಲರ ಅನುಮತಿಯೊಂದಿಗೆ ಮೊಹಮ್ಮದ್ ಅಖ್ಲಾಕ್ ಅವರ ಕೊಲೆ ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಖಂಡಿಸಿ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ಬೃಂದಾ ಕಾರಟ್...

ಮತ್ತೆ ಮುನ್ನೆಲೆಗೆ ಬಂದ ‘Avalkoppam’: ದಿಲೀಪ್ ಖುಲಾಸೆ ಬಳಿಕ ಕೇರಳದಾದ್ಯಂತ ಪ್ರತಿಭಟನೆ

ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಕೇರಳದಾದ್ಯಂತ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. 2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆದಾಗ...