‘ಪಂಚೆ ಮಾತ್ರವೇ ತನ್ನ ಉಡುಗೆಯೆಂದು ಗಾಂಧೀಜಿಯವರು ಘೋಷಿಸಿ ನೂರು ವರ್ಷಗಳಾಯಿತು’ ಎಂದು ರಾಮ್ರಾಜ್ ಕಾಟನ್ ಸಂಸ್ಥೆ ನೀಡಿರುವ ಜಾಹೀರಾತು (ಸೆ.22, ಬುಧವಾರ) ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.
‘ಪ್ರಜಾವಾಣಿ’ ದಿನಪತ್ರಿಕೆಯ ಮುಖಮುಖಪುಟದಲ್ಲಿ ಪ್ರಕಟವಾಗಿರುವ ಜಾಹೀರಾತನ್ನುಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕ ಓದುಗರು, ಜಾಹೀರಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಅನೇಕರು ಇದು ಬಂಡವಾಳಶಾಹಿ ವ್ಯವಸ್ಥೆಯ ವ್ಯಾಪಾರಿ ಗುಣವಷ್ಟೇ ಎಂದು ಟೀಕಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ಬಳಿಯ ಜವಳಿ ನಗರವೆಂದೇ ಖ್ಯಾತವಾದ ತಿರುಪುರದಲ್ಲಿ 1983ರಲ್ಲಿ ಸ್ಥಾಪನೆಯಾದ ರಾಮ್ರಾಜ್, ಇಂದು ಭಾರತದಲ್ಲಿ ಮನೆಮಾತಾಗಿರುವ ಬ್ರಾಂಡ್ಗಳಲ್ಲಿ ಒಂದಾಗಿದೆ. ದೋತಿ, ಅಂಗಿಗಳು, ಒಳ ಉಡುಪುಗಳು ಇತ್ಯಾದಿ ಉತ್ಪನ್ನಗಳಿಗೆ ರಾಮ್ರಾಜ್ ಅಚ್ಚುಮೆಚ್ಚಾಗಿದೆ. ಇಂದು ನೀಡಿರುವ ಜಾಹೀರಾತಿನಲ್ಲಿ ಗಾಂಧೀಜಿಯವರ ‘ಪಂಚೆ ಪ್ರೀತಿ’ಯನ್ನು ಸ್ಮರಿಸಲಾಗಿದೆ.
ಜಾಹೀರಾತಿನಲ್ಲಿ ಇರುವುದೇನು?
“ಕಳೆದ 100 ವರ್ಷಗಳ ಹಿಂದೆ ಇದೇ ದಿನದಂದು ತಮಿಳುನಾಡಿನ ಮಧುರೈ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಪಂಚೆ ಮಾತ್ರವೇ ಇನ್ನು ತನ್ನ ಉಡುಗೆಯೆಂದು ನಿರ್ಧರಿಸಿದ, ಮಾನವೀಯತೆ ತುಂಬಿದ ಮಹಾನ್ ವ್ಯಕ್ತಿ ಮಹಾತ್ಮಾ ಗಾಂಧೀಜಿಯರಿಗೆ ರಾಮ್ರಾಜ್ನ ಹೆಮ್ಮೆಯ ಸೆಲ್ಯೂಟ್”
ನನ್ನ ಜೀವನದ ಹಾದಿಯಲ್ಲಿ ನಾನು ತೆಗೆದುಕೊಂಡ ಎಲ್ಲಾ ಬದಲಾವಣೆಗಳೂ ಮುಖ್ಯವಾದ ಘಟನೆಳಿಂದಲೇ ನಡೆದಿವೆ. ಈ ನಿರ್ಣಯಗಳು ಆಳವಾದ ಆಲೋಚನೆಯ ನಂತರ ತೆಗೆದುಕೊಂಡವುಗಳು. ಆದುದರಿಂದ ನಾನು ಬೇಸರಗೊಳ್ಳ ಬೇಕಾದುದೇನೂ ಇಲ್ಲ. ನನ್ನಿಂದ ಮಾಡಲು ಸಾಧ್ಯವಾದ ಒಂದೇ ಒಂದು ಸಹಾಯ ನಾನು ತೆಗೆದುಕೊಂಡ ಈ ನಿರ್ಧಾರವೇ. ಮಧುರೈಯಲ್ಲಿ ನನ್ನ ಉಡುಪಿನಲ್ಲಿ ನಾನು ತೆಗೆದುಕೊಂಡ ಈ ಬದಲಾವಣೆಯ ಪರಿಣಾಮವಾಗಿ ನಂತರ ಪಂಚೆ ನನ್ನ ಗುರುತಾಗಿಯೇ ಪರಿಣಮಿಸಿತು.
– ಗಾಂಧೀಜಿ
‘ಪಂಚೆ ನನ್ನ ಗುರುತು’ ಎಂದು ನೀವು ಹೇಳಿದ ನುಡಿಯನ್ನೇ ವೇದವಾಕ್ಯದಂತೆ ಅನುಸರಿಸಿ, 40 ವರ್ಷಗಳಿಂದಲೂ ಪಂಚೆಯನ್ನು ಭಾರತದ ಗುರುತನ್ನಾಗಿಸಿದ್ದು ಮಾತ್ರವಲ್ಲದೆ, ಸಾವಿರಾರು ನೇಕಾರರ ಜೀವನಾಧಾರವನ್ನೂ ಉನ್ನತಮಟ್ಟಕ್ಕೇರಿಸಿದ, ‘ರಾಮ್ರಾಜ್’ ಎನ್ನುವ ಹೆಮ್ಮೆಯನ್ನು ನಿಮ್ಮ ಪಾದಕಮಲಗಳಿಗೆ ಅರ್ಪಿಸುತ್ತೇವೆ.
– ಇದು ‘ಪ್ರಜಾವಾಣಿ’ಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಸಾರಾಂಶ.

ಜನರ ಪ್ರತಿಕ್ರಿಯೆ
ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತಿನ ಪೋಟೋ ಹಂಚಿಕೊಂಡು, “ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಜಾಹೀರಾತು
ಯಾಕೋ ನನಗಿಷ್ಟವಾಯಿತು” ಎಂದು ಚಿಂತಕ, ಕಲಾವಿದ ಗಿರಿಧರ್ ಕಾರ್ಕಳ ಅವರು ತಮ್ಮ ಎಫ್.ಬಿ. ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ನನಗೂ ಖಷಿಯಾಯಿತು ಗಿರಿಧರ್. ಅದರೇ ಸಲ್ಪ ಭಯವೂ ಆಯಿತು, ಎಲ್ಲದರೂ ಗಡ್ಡಪ್ಪನ ಪೋಟೋ ಇರಬಹುದೋ ಎಂದು, ಆದರೆ ಇರಲಿಲ್ಲ ಬಚಾವ್’ ಎಂದು ಉದ್ಯಾವರ ನಾಗೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಲಿಂಗ ಸಮಾನತೆ ಸಾರಿದ ಕ್ಯಾಡ್ಬರಿ ಡೈರಿಮಿಲ್ಕ್ ಜಾಹೀರಾತಿಗೆ ಭರಪೂರ ಮೆಚ್ಚುಗೆ
“ಎಲ್ಲಿ ಸ್ವಲ್ಪ ಸುಳ್ಳು ಕೂಡಾ ಇದೆ . ಅದು 100% ಖಾದಿ ಅಲ್ವಾ? ರಾಮ್ರಾಜ್ ಆ ಬಗೆಯದ್ದೇ?” ಎಂದು ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ ಪ್ರತಿಕ್ರಿಯಿಸಿದ್ದು, “ಪಂಚೆ ಎಂದಷ್ಟೇ ಉಲ್ಲೇಖಿಸಿರೋದ್ರಿಂದ ನಾವೂ ಪಂಚೆಯ ಕುರಿತೇ ಪಂಚಾತಿಕೆ ಮಾಡೋಣ ಅಲ್ವಾ?” ಎಂದು ಗಿರಿಧರ್ ಪ್ರತಿಕ್ರಿಯಿಸಿದ್ದಾರೆ.
ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರ ಸಂತತಿ ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದಾರೆ. ಹೀಗಾಗಿ ರಾಮ್ರಾಮ್ ಜಾಹೀರಾತು ದುರಿತ ಕಾಲದ ಹೊಸ ಭರವಸೆ ಎಂಬುದು ಅನೇಕರ ಮನದಾಳ.
ಜಾಹೀರಾತಿನ ಕುರಿತು ಆಕ್ಷೇಪಗಳೂ ವ್ಯಕ್ತವಾಗಿವೆ. “ಬಂಡವಾಳಶಾಹಿ ಗುಣ ಅದು. ಚಾಲ್ತಿಯಲ್ಲಿರುವ ಎಲ್ಲ ಸಾಂಕೇತಿಕ ಭಾಷೆಗಳನ್ನು, ಸಂಕೇತಗಳನ್ನು ಮತ್ತು ರೂಪಕಗಳನ್ನು ತನ್ನದಾಗಿಸಿಕೊಳ್ಳುತ್ತಾ ವಿಸ್ತರಿಸಿಕೊಳ್ಳುವುದು ಬಂಡವಾಳದ ಲಕ್ಷಣ. ರಾಮರಾಜ್ ಅದನ್ನೇ ಮಾಡಿದೆ ನಾಳೆ ಅದಾನಿ ಅಂಬಾನಿ ಸಹ ಇದನ್ನೇ ಅನುಕರಿಸುತ್ತಾರೆ” ಎಂದು ಚಿಂತಕ ನಾ.ದಿವಾಕರ್ ಅಭಿಪ್ರಾಯ ತಾಳಿದ್ದಾರೆ.
ಲೈಂಗಿಕ ರೋಗಗಳ ತಜ್ಞರಾದ ನಡಹಳ್ಳಿ ವಸಂತ್ ಪ್ರತಿಕ್ರಿಯಿಸಿದ್ದು, “ವಿಪರ್ಯಾಸವೆಂದರೆ ಗಾಂಧೀಜಿಯೂ ಕಾರ್ಪೋರೇಟ್ ಆಸ್ತಿಯಾಗುತ್ತಿದ್ದಾರೆ. ಕೈಮಗ್ಗವನ್ನು ಸ್ವಾಭಿಮಾನದ ಆರ್ಥಿಕ ಸ್ವಾವಲಂಬನೆಯ ಗುರುತಾಗಿ ಪ್ರಾರಂಭಿಸಿದ್ದರು ಗಾಂಧೀಜಿ. ಇವರ ಹೆಸರನ್ನು ಯಂತ್ರಗಳಿಂದ ತಯಾರಿಸುವ ಕಾರ್ಪೋರೇಟ್ಗಳು ಬಳಸುತ್ತಿದ್ದಾರೆ. ಎಲ್ಲರೂ ದುರಪಯೋಗ ಪಡಿಸಿಕೊಂಡಮೇಲೂ ಗಾಂಧಿ ಎನ್ನುವ ಹೆಸರು ಪರಿಶುದ್ಧವಾಗಿಯೇ ಉಳಿಯುತ್ತದೆ’ ಎಂದಿದ್ದಾರೆ.
ಒಟ್ಟಾರೆ ಜಾಹೀರಾತಿಯ ಸಂದೇಶ ತಾತ್ವಿಕವಾಗಿ ಒಳ್ಳೆಯದಿದ್ದರೂ ವ್ಯಾಪಾರಿ ಮನೋಭಾವದ ಆಯಾಮಗಳನ್ನು ಅಲ್ಲಗಳೆಯುವಂತಿಲ್ಲ. ಗ್ರಾಮಸ್ವರಾಜ್ಯದ ಕಲ್ಪನೆಯಲ್ಲಿ ಕಾರ್ಪೊರೇಟ್ ವ್ಯವಸ್ಥೆಯನ್ನು ಗಾಂಧಿ ಒಪ್ಪುವುದಿಲ್ಲ ಎನ್ನುವವರ ವಾದದಲ್ಲಿ ಉರುಳಿದೆ.
ಇದನ್ನೂ ಓದಿ: ಸರಕಾರಿ ಜಾಹೀರಾತು 100% ಕಡಿತ: ಸಿಎಎ ಪ್ರತಿಭಟನೆಗಳ ವರದಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆಯೇ ವಾರ್ತಾಭಾರತಿ ಕನ್ನಡ ದೈನಿಕ?


