ಹಿಂದಿನ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತುಪ್ಪ ಬಳಸಿ ತಯಾರಿಸಲಾಗುತ್ತಿತ್ತು, ಅದರಲ್ಲಿ ಬಾತ್ ರೂಂ(ಸ್ನಾನಗೃಹಗಳನ್ನು) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬೆರೆಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಆರೋಪಿಸಿದ್ದಾರೆ.
ಕರ್ನೂಲು ಜಿಲ್ಲೆಯ ಕಲುಗೋಟ್ಲಾ ಗ್ರಾಮದಲ್ಲಿ ನಡೆದ ಗ್ರಾಮ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಹಿಂದಿನ ಸರ್ಕಾರವು ಕಲಬೆರಕೆ ಪ್ರಸಾದ (ಪವಿತ್ರ ಆಹಾರ)ದ ಮೂಲಕ ವೆಂಕಟೇಶ್ವರ ಸ್ವಾಮಿಯ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.
“ಹಿಂದಿನ ವೈಎಸ್ಆರ್ಸಿಪಿ ಸರ್ಕಾರವು ಸ್ನಾನಗೃಹ ಸ್ವಚ್ಛಗೊಳಿಸುವ ರಾಸಾಯನಿಕಗಳಿಂದ ತಯಾರಿಸಿದ ತುಪ್ಪವನ್ನು ಲಡ್ಡುಗಳಲ್ಲಿ ಬಳಸುತ್ತಿತ್ತು” ಎಂದು ಯಮ್ಮಿಗನೂರು ಕ್ಷೇತ್ರದಲ್ಲಿ ನಡೆದ ಪಟ್ಟದಾರ್ ಪಾಸ್ಬುಕ್ (ಭೂ ದಾಖಲೆಗಳು) ವಿತರಣಾ ಕಾರ್ಯಕ್ರಮದ ಸಂದರ್ಭದಲ್ಲಿ ನಾಯ್ಡು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಪ್ರಕಾರ, ಐದು ವರ್ಷಗಳ ಕಾಲ ಲಡ್ಡು ತಯಾರಿಸಲು “ರಾಸಾಯನಿಕಗಳಿಂದ” ತಯಾರಿಸಿದ ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿತ್ತು. ಇವುಗಳಲ್ಲಿ ಎರಡು ರೀತಿಯ ರಾಸಾಯನಿಕಗಳಿವೆ ಎಂದು ಅವರು ಹೇಳಿದ್ದು, ಇವುಗಳಲ್ಲಿ ಕೆಲವು ತರಕಾರಿ ಮೂಲದವುಗಳಾಗಿದ್ದು, ಅವು ಹೆಚ್ಚು ದುಬಾರಿಯಾಗಿದ್ದವು, ಆದರೆ ಪ್ರಾಣಿಗಳ ಕೊಬ್ಬಿನ ಬೆಲೆ ಕಡಿಮೆ ಎಂದು ಅವರು ಗಮನಿಸಿದ್ದರು ಎಂದು ಆರೋಪಿಸಿದ್ದಾರೆ.
ಜೊತೆಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್ಡಿಡಿಬಿ) ವರದಿಯು ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳುತ್ತದೆ ಎಂದು ನಾಯ್ಡು ಪುನರುಚ್ಚರಿಸಿದ್ದಾರೆ.
ಒಬ್ಬ ಭಕ್ತನಾಗಿ, ವೆಂಕಟೇಶ್ವರ ಸ್ವಾಮಿಯ ಪಾವಿತ್ರ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಹೆಚ್ಚು ಮಾತನಾಡಬಾರದು. ಆದರೆ ವೈಎಸ್ಆರ್ಸಿಪಿ ನಾಯಕರು ಸಿಬಿಐ ನೇತೃತ್ವದ ಎಸ್ಐಟಿ ಕಲಬೆರಕೆ ನಡೆದಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ ಎಂದು ವಾದಿಸುತ್ತಿದ್ದರೆ, ಟಿಡಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈವಿ ಸುಬ್ಬಾ ರೆಡ್ಡಿ ಕಲಬೆರಕೆ ನಡೆದಿದೆ ಎಂದು ಹೇಳಿದ್ದರು ಎಂದು ನೆನಪಿಸಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಗಳನ್ನು (ಟಿಟಿಡಿ) ಕಲಬೆರಕೆ ಪ್ರಸಾದದಿಂದ ಅಪವಿತ್ರಗೊಳಿಸಿದ ತಪ್ಪನ್ನು ಸರಿಪಡಿಸಲು ಪ್ರಯತ್ನಿಸಿದೆ ಎಂದು ನಾಯ್ಡು ಹೇಳಿದ್ದು, ಪ್ರಸ್ತುತ ಲಡ್ಡು ಮತ್ತು ಹಿಂದಿನದಕ್ಕೆ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ, ನಾಯ್ಡು ಅವರು ತಿರುಪತಿ ಲಡ್ಡು ಕಲಬೆರಕೆ ಪ್ರಕರಣದಲ್ಲಿ ಯಾರನ್ನೂ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದು, ಈ ವಿಷಯದ ಬಗ್ಗೆ ಎಸ್ಐಟಿ ವರದಿಯ ನಂತರ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಏಕವ್ಯಕ್ತಿ ಸಮಿತಿಯನ್ನು ರಚಿಸಿದ್ದಾರೆ.
ತಿರುಮಲ ಲಡ್ಡು ಪ್ರಸಾದದ ಕಲಬೆರಕೆ ಭಕ್ತರ ನಂಬಿಕೆಯ ವಿರುದ್ಧದ ಗಂಭೀರ ಅಪರಾಧವಾಗಿದೆ ಎಂದು ಹೇಳಿರುವ ಅವರು ಈ ವಿಷಯದಲ್ಲಿ ಯಾವುದೇ ವರದಿಯು ವೈಎಸ್ಆರ್ಸಿಪಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ತುಪ್ಪ ಕಲಬೆರಕೆಯನ್ನು “ದೇವರ ವಿರುದ್ಧದ ಅತ್ಯಂತ ದೊಡ್ಡ ಪಾಪ” ಎಂದು ಕರೆದ ನಾಯ್ಡು, ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ 2022 ರ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ವರದಿಯು “ಕಲಬೆರೆಕೆ ಇದೆ ಎಂದು ಸ್ಪಷ್ಟವಾಗಿ ಹೇಳಿದೆ” ಎಂದು ಆರೋಪಿಸಿದ್ದಾರೆ.
ಗುರುವಾರ ಟಿಡಿಪಿ ವಿರುದ್ಧ ವಾಗ್ದಾಳಿ ನಡೆಸಿರುವ ವೈಎಸ್ಆರ್ಸಿಪಿ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ, 2022 ರ ಸಿಎಫ್ಟಿಆರ್ಐ ವರದಿಯು ಪವಿತ್ರ ಸಿಹಿತಿಂಡಿ ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರಕೆಯನ್ನು ಉಲ್ಲೇಖಿಸಿಲ್ಲ, ಆದರೆ ತುಪ್ಪವನ್ನು ಕಲಬೆರಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ.
ಆ ವರದಿಯನ್ನು ಅವರು ಮುಚ್ಚಿಟ್ಟಿದ್ದಾರೆ ಎಂಬ ಟಿಡಿಪಿ ನೇತೃತ್ವದ ಎನ್ಡಿಎ ಸರ್ಕಾರದ ಆರೋಪವನ್ನು ಅವರು ತಿರಸ್ಕರಿಸಿದ್ದು, “ಒಂದು ವೇಳೆ ಅದನ್ನು ನಿಗ್ರಹಿಸಿದ್ದರೆ, ನಾನು ಮಾದರಿಗಳನ್ನು ಪರೀಕ್ಷಿಸಲು ಸಿಎಫ್ಟಿಆರ್ಐಗೆ ಏಕೆ ಬರೆಯಬೇಕು” ಎಂದು ಸುಬ್ಬಾ ರೆಡ್ಡಿ ಪ್ರಶ್ನಿಸಿದ್ದಾರೆ.
“ಎಸ್ಐಟಿ ವರದಿಯು ಸಮಸ್ಯೆಯನ್ನು ಸ್ಪಷ್ಟಪಡಿಸಿದ್ದರೂ, ರಾಜ್ಯ ಸರ್ಕಾರವು ಸುಳ್ಳು ಹೇಳಿಕೆಗಳನ್ನು ಹರಡುವುದನ್ನು ಮತ್ತು ವೈಎಸ್ಆರ್ಸಿಪಿಯನ್ನು ದೂಷಿಸಲು ಹೋರ್ಡಿಂಗ್ಗಳನ್ನು ನಿರ್ಮಿಸುವುದನ್ನು ಮುಂದುವರೆಸಿದೆ” ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.


