ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಕನ್ನಡದ ಹೆಸರಾಂತ ಲೇಖಕ, ನಾಟಕಕಾರ, ಜಾತ್ಯಾತೀತವಾದಿ ಗಿರೀಶ್ ಕಾರ್ನಾಡ್ ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಹಲವಾರು ತಿಂಗಳುಗಳಿಂದ ಉಸಿರಾಟ ಮತ್ತು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ.
81 ವರ್ಷದ ಗಿರೀಶ್ ಕಾರ್ನಾಡ್ ರವರು ತಮ್ಮ ಜೀವಿತದ ಕೊನೆಯವರೆಗು ತಾವು ನಂಬಿದ ತತ್ವಗಳ ಪರವಾಗಿ ದನಿ ಎತ್ತಿದವರು. 2018ರ ಸೆಪ್ಟಂಬರ್ 05ರಂದು ಗೌರಿ ಹತ್ಯೆ ವಿರೋಧಿ ಒಕ್ಕೂಟದಿಂದ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನಾರೋಗ್ಯದ ನಡುವೆಯೂ ‘ಮೀ ಟೂ ಅರ್ಬನ್ ನಕ್ಸಲ್’ ಫಲಕವನ್ನು ತಮ್ಮ ಕೊರಳಿಗೆ ಹಾಕಿಕೊಂಡು ಭಾಗವಹಿಸಿ ಗಮನ ಸೆಳೆದಿದ್ದರು.
ತಲೆದಂಡ, ಯಾಯಾತಿ, ತುಘಲಕ್, ಟಿಪ್ಪು ಕಂಡ ಕನಸು ಸೇರಿದಂತೆ ಹಲವು ಅತ್ಯುತ್ತಮ ನಾಟಕಗಳನ್ನು ರಚಿಸಿ ಪ್ರಸಿದ್ದರಾಗಿದ್ದ ಇವರು ಕನ್ನಡದ ಮಹತ್ವದ ಚಿಂತಕರಾಗಿದ್ದರು. ಗಿರೀಶ್ ಕಾರ್ನಾಡ್ ರ ನಿಧನದ ಹಿನ್ನೆಲೆಯಲ್ಲಿ ಹಲವು ಗಣ್ಯರು, ಲೇಖಕರು ಸಂತಾಪ ವ್ಯಕ್ತಪಡಿಸಿದ್ದಾರೆ.