ಬೆಳಗಾವಿಯಿಂದ ಕೊಡಗಿನ ತುದಿಯವರೆಗೆ ವಾರವಿಡಿ ಇನ್ನಿಲ್ಲದ ಮಳೆ. ಗುಡುಗು, ಸಿಡಿಲು, ಮಳೆ ಬಿಲ್ಲುಗಳ ಜೂಟಾಟ. ಘಟ್ಟದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಆರ್ಭಟಕ್ಕೆ ನದಿಗಳು ತುಂಬಿಹರಿಯುತ್ತಿವೆ. ಅಣೆಕಟ್ಟೆಗಳಿಗೆ ಒಳ ಹರಿವು ಹೆಚ್ಚಿದೆ. ಕೃಷ್ಣಾ ಕಾವೇರಿ ಕೊಳ್ಳದ ನದಿಗಳೆಲ್ಲ ಕೆಂಪು ಸಮುದ್ರದಂತೆ ರಭಸದಿಂದ ಭೋರ್ಗರೆಯತೊಡಗಿವೆ. ಆದರೆ, ಕೊರೊನಾ ಸಾಂಕ್ರಾಮಿಕದಿಂದ ಮಲೆನಾಡಿನ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ.
ಹೌದು, ರಾಜ್ಯದೆಲ್ಲೆಡೆ ರೈತರ ಮೊಗದಲ್ಲಿ ಸಂತಸ ಅರಳಿದೆ. ಹಳ್ಳಿ ಹಳ್ಲಿಯಲ್ಲೂ ಜನರು ಗೊಬ್ಬರ, ಭತ್ತ, ಟ್ರಿಲ್ಲರ್, ನಾಟಿಗಳ ಅವಸರದ ಓಡಾಟದಲ್ಲಿ ಮುಳುಗಿದ್ದಾರೆ. ಜೂನ್ ತಿಂಗಳು ಬಂದರೆ ಎಲ್ಲರಿಗೂ ಆತಂಕ, ಸಂತಸ, ಚಿಂತೆ ಪ್ರಾರಂಭವಾಗಿ ಬಿಡುತ್ತದೆ. ಸಮಯಕ್ಕೆ ಸರಿಯಾಗಿ ಮಳೆ ಬಂದರೆ ಸರಿ, ಬರದಿದ್ದರೆ ಏನು ಎತ್ತ ಎಂಬ ನಿರಾಶೆ, ಅನಿಶ್ಚಿತತೆ. ಮುಂಗಾರು ಕೈಕೊಟ್ಟರೆ ವರ್ಷದ ಕೂಳಿನ ಕತೆ ಏನೆಂಬ ಚಿಂತೆ.. ಈ ವರ್ಷ ಜನರಲ್ಲಿ ಯಾವುದೇ ಆತಂಕಗಳಿಲ್ಲ. ಏಕೆಂದರೆ ಮುಂಗಾರು ಸರಿಯಾದ ಸಮಯಕ್ಕೆ ಬಂದಿದೆ, ವರುಣ ಆರ್ಭಟಿಸೊಡಗಿದ್ದಾನೆ. ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಎತ್ತು ಕೋಣಗಳನ್ನು ಗದ್ದೆಗೆ ಹೊಡೆದುಕೊಂಡು ಜನರು ಪದಗಳನ್ನು ಹಾಡುತ್ತಿದ್ದಾರೆ.
ಕೃಷಿಯ ಕತೆ ಹಾಗಾದರೆ ಮಳೆಗಾಲದಲ್ಲಿ ಮಲೆನಾಡಿನ ಚಿತ್ರವೇ ಬೇರೆ. ದಿನವಿಡೀ ಬಿಡುವಿರದೇ ಸುರಿಯುವ ಜಡಿ ಮಳೆ. ಬೇಸಿಗೆಯ ಬಿರು ಬಿಸಿಲಿಗೆ ಬತ್ತಿ ಬಸವಳಿದು ಒಣಗಿದ್ದ ಹಳ್ಳ ಕೊಳ್ಲಗಳೆಲ್ಲ ಮರು ಹುಟ್ಟು ಪಡೆದು ಧುಮ್ಮಿಕ್ಕುವ ಕಲರವ. ಪ್ರಕೃತಿ ಹಚ್ಚ ಹಸಿರಾಗಿ ನಳ ನಳಿಸುವ ಸಂಭೃಮ. ನಡುವೆ ಮಾರು ಮಾರಿಗೆ ಬೆಟ್ಟದಿಂದ ಧುಮ್ಮಿಕ್ಕುವ ಝರಿಗಳು. ರಭಸದಿಂದ ಭೋರ್ಗರೆಯುವ ಜಲಪಾತಗಳು. ಮಲೆನಾಡಿನ ಮಳೆಗಾಲವೇ ಹಾಗೆ..! ದೇಶದ ಮೂಲೆ ಮೂಲೆಯಿಂದ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಜಿಟಿ ಜಿಟಿ ಮಳೆಯ ನಡುವೆ ಆ ಬೆಟ್ಟದಿಂದ ಈ ಗುಡ್ಡದಿಂದ ಇಳಿಯುವ ಜಲಧಾರೆಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಪ್ರವಾಸಿಗರ ದಂಡು ಮುಗಿ ಬೀಳುತ್ತದೆ. ಮಲೆನಾಡಿನ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಲ್ಲಿ ಹೊಟೇಲು, ಲಾಡ್ಜು, ಟೀ, ತಿಂಡಿ ತಿನಿಸು ಮಾರುವವರು, ಬಾಡಿಗೆ ವಾಹನ ನಡೆಸುವವರು ಎಲ್ಲರ ಬದುಕು ಈ ಮಳೆಗಾಲದ ಮೇಲೆಯೇ ನಿಂತಿದೆ.
ಇದನ್ನೂ ಓದಿ : ಪಶ್ಚಿಮ ಘಟ್ಟದಲ್ಲಿ ಮುಂದುವರೆದ ಮಳೆ : ಮುಳುಗಡೆ ಭೀತಿಯಲ್ಲಿ ಬೆಳಗಾವಿ ಜಿಲ್ಲೆಯ ಗ್ರಾಮಗಳು

ಸುಪ್ರಸಿದ್ದ ಜೋಗ ಜಲಪಾತ, ಚಿಕ್ಕಮಗಳೂರಿನ ಬೆಟ್ಟಗಳ ಸಾಲು, ಕೊಡಗಿನ ಕಾಡು ಬೆಟ್ಟಗಳು ಎಲ್ಲೆಡೆ ಮಳೆಗಾಲದ ಜೂನ್ ಜುಲೈ ತಿಂಗಳಲ್ಲಿ ಪ್ರತಿ ವರ್ಷ ಪ್ರವಾಸಿಗರ ಜನ ಜಾತ್ರೆ ನೆರೆಯುತ್ತಿತ್ತು. ಆದರೆ ಈ ವರ್ಷ ಕೊರೊನಾ ಕಾರಣದಿಂದ ಮಲೆನಾಡಿನ ಯಾವ ಪ್ರವಾಸಿ ತಾಣಗಳೂ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿಲ್ಲ. ಎಲ್ಲೆಡೆ ಸಂಚಾರ ನಿರ್ಬಂಧವಿದೆ. ವಾರಾಂತ್ಯದ ರಜೆ ಕಳೆಯಲು ಬರುತ್ತಿದ್ದ ಐಟಿ ಉದ್ಯೋಗಿಗಳೂ ಈ ವರ್ಷ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮ ಮಲೆನಾಡಿನ ಪ್ರವಾಸಿ ತಾಣಗಳು ಜನರಿಲ್ಲದೇ ಬಣಗುಡುವಂತಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಫಾಲ್ಸ್, ತೀರ್ಥಕೆರೆ ಫಾಲ್ಸ್, ಸಗೀರ್ ಫಾಲ್ಸ್, ಸಿರಿಮನೆ ಫಾಲ್ಸ್, ಕಲ್ಲತ್ತಿಗರಿ ಫಾಲ್ಸ್, ಶಂಕರ್ ಫಾಲ್ಸ್ ಸೇರಿದಂತೆ ಜಿಲ್ಲೆಯ ದಶದಿಕ್ಕುಗಳಲ್ಲೂ ಜಲಪಾತಗಳು ಮೈದುಂಬಿ ಧುಮುಕುತ್ತಿವೆ. ಚಿಕ್ಕಮಗಳೂರು-ಮಂಗಳೂರು ಮಾರ್ಗದ ಚಾರ್ಮಡಿ ಘಾಟಿಯ ಫಾಲ್ಸ್ಗಳು ನೋಡುಗರ ಕಣ್ಣು ಕೋರೈಸುವಂತೆ ಧುಮ್ಮಿಕ್ಕುತ್ತಿವೆ. ಯಾವಾಗಲೂ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಶಿವಮೊಗ್ಗ-ಮಂಗಳೂರು ಸಂಪರ್ಕಿಸುವ ಚಾರ್ಮಾಡಿಯ ರಸ್ತೆ ಜನರಿಲ್ಲದೇ ಬಿಕೋ ಎನ್ನುತ್ತಿದೆ.

ಉತ್ತರ ಕನ್ನಡ, ಶಿವಮೊಗ್ಗ, ಕೊಡಗಿನಲ್ಲೂ ಇದೇ ಕತೆ. ಸಸ್ಯ ಸಂಪದ್ಭರಿತವಾದ ಉತ್ತರ ಕನ್ನಡ ಜಿಲ್ಲೆ ತನ್ನ ಕಾಡಿನ ಗರ್ಭದಲ್ಲಿ ನೂರಾರು ಪ್ರಾಕೃತಿಕ ಕೌತುಕವನ್ನು ಅಡಗಿಸಿಟ್ಟುಕೊಂಡಿದೆ. ಇಲ್ಲಿನ ಕಾಡು ಕಣಿವೆಗಳಲ್ಲಿ ಪ್ರತಿ ವರ್ಷವೂ ಒಂದೊಂದು ಹೊಸ ಜಲಪಾತ ಸಂಶೋಧನೆಯಾಗುತ್ತದೆ. ಜನಾಕರ್ಷಣೆಯ ತಾಣವಾಗಿ ಮಾರ್ಪಡುತ್ತಿದೆ. ಮಾಗೋಡ್ ಫಾಲ್ಸ್, ಉಂಚಳ್ಳಿ ಫಾಲ್ಸ್, ಶಿರ್ಲೆ ಫಾಲ್ಸ್, ಸಾತೊಡ್ಡಿ ಫಾಲ್ಸ್, ಶಿವಗಂಗಾ ಫಾಲ್ಸ್, ವಾಗಳ್ಳಿ ಫಾಲ್ಸ್ ಹೀಗೆ ಹಲವು ಫಾಲ್ಸ್ಗಳಿವೆ. ಪಕ್ಕದಲ್ಲಿ ಜೋಗ, ಕಾಳಿ ಅಘನಾಶಿನಿ, ಬೇಡ್ತಿ, ಶರಾವತಿಯ ಕಣಿವೆಯಲ್ಲಿ ಹೇಳ ಹೆಸರಿಲ್ಲದ ಮಳೆಗಾಲದಲ್ಲಿ ಮಾತ್ರ ಕಾಣುವ ಅಪರೂಪದ ಇನ್ನೆಷ್ಟೊ ಅದ್ಭುತ ಜಲಪಾತಗಳು. ಇವನ್ನೆಲ್ಲ ನೋಡಲು ಸದ್ಯ ಯಾವ ಪ್ರವಾಸಿಗರಿಗೂ ಅವಕಾಶವಿಲ್ಲ.
ಕೊರೊನಾ ಸಾಂಕ್ರಾಮಿಕ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬದುಕುತ್ತಿರುವ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಜನರ ಪರಿಸ್ಥಿತಿಯನ್ನು ಕೇಳುವವರೂ ಯಾರೂ ಇಲ್ಲ. ಭೋರ್ಗರೆಯುವ ಜಲಪಾತಗಳ ಮುಂದಿನ ಖಾಲಿತನದಲ್ಲಿ ಇವರೆಲ್ಲರ ಹಸಿವು ಸಂಕಟ ಮಡುಗಟ್ಟುತ್ತಿದೆ.
ವಿಶ್ವ ವಿಖ್ಯಾತ ಜೋಗ ಜಲಪಾತದ ಸುತ್ತಮುತ್ತ ಪ್ರವಾಸಿಗರನ್ನೇ ನಂಬಿ ಸರಿಸುಮಾರು 500 ಕುಟುಂಬಗಳು ಜೀವನ ನಡೆಸುತ್ತಿವೆ. ಜೀವನೋಪಾಯಕ್ಕಾಗಿ, ಹೋಮ್ ಸ್ಟೇ, ಲಾಡ್ಜು, ಟೀ ಅಂಗಡಿ, ಹೊಟೇಲ್, ಜೀಪು ಕಾರು ಬಾಡಿಗೆ, ಫೊಟೋಗ್ರಫಿ, ಅಡ್ವೆಂಚರ್ ಟೂರಿಸ್ಟ್ ಗೈಡ್, ಟ್ರಕ್ಕಿಂಗ್ ಪಾರ್ಟನರ್ ಹೀಗೆ ಇಲ್ಲಿನ ಜನರು ಬೆಂಗಳೂರಿನಿಂದ ಬರುವ ಪ್ರವಾಸಿಗರನ್ನೇ ನಂಬಿ ಕುಳಿತಿದ್ದಾರೆ.

ಈ ವರ್ಷ ಮುಂಗಾರು ಕೈಹಿಡಿದಿದೆ. ಆದರೆ ಕೊರೊನಾ ಕೈಕೊಟ್ಟಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್, ಶಿವಮೊಗ್ಗದ ಆಗುಂಬೆ, ಕೊಡಚಾದ್ರಿ, ಸಕಲೇಶಪುರ, ಮಡಿಕೇರಿ, ವಿರಾಜಪೇಟೆ, ಸುಬ್ರಹ್ಮಣ್ಯದ ಸುತ್ತ ಮುತ್ತದ ಜಲಪಾತಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಪ್ರವಾಸಿಗರು ಮಾತ್ರ ಎಲ್ಲಿಗೂ ಹೋಗುವಂತಿಲ್ಲ. ಒಟ್ಟಿನಲ್ಲಿ ಸಾಂಕ್ರಾಮಿಕದಿಂದಾಗಿ ಈ ವರ್ಷ ಮಲೆನಾಡಿನಲ್ಲಿ ಮುಂಗಾರಿನ ಕಲರವವಿಲ್ಲ. ಪ್ರತಿವರ್ಷದಂತೆ ಮುಂಗಾರು ಈ ವರ್ಷವೂ ಮಲೆನಾಡಿನ ಪ್ರಾಕೃತಿಕ ಸೌಂದರ್ಯಕ್ಕೆ ಮೆರಗು ನೀಡಿದೆ. ಶಿವಮೊಗ್ಗ, ಮಡಿಕೇರಿ, ಚಿಕ್ಕಮಗಳೂರು ನಗರಗಳು ಪ್ರವಾಸಿಗರಿಲ್ಲದೇ ನೀರವ ಮೌನದಲ್ಲಿ ಮುಳುಗಿವೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ಮಹಿಳೆಯರು, ಬ್ರಾಹ್ಮಣೇತರಿಗೆ ಅರ್ಚಕ ಹುದ್ದೆ, ರಾಜ್ಯದಲ್ಲಿಯೂ ಚರ್ಚೆ ಆರಂಭ


