Homeಮುಖಪುಟತಮಿಳುನಾಡಿನಲ್ಲಿ ಮಹಿಳೆಯರು, ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ, ರಾಜ್ಯದಲ್ಲಿಯೂ ಚರ್ಚೆ ಆರಂಭ

ತಮಿಳುನಾಡಿನಲ್ಲಿ ಮಹಿಳೆಯರು, ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ, ರಾಜ್ಯದಲ್ಲಿಯೂ ಚರ್ಚೆ ಆರಂಭ

’ಆಗಮ ಶಾಸ್ತ್ರ, ಶ್ಲೋಕಗಳ ಟ್ರೈನಿಂಗ್ ಮುಖಾಂತರ ನಾವುಗಳು ಅಬ್ರಾಹ್ಮಣರ ಮೆದುಳಿಗೆ ಬ್ರಾಹ್ಮಣ್ಯವನ್ನೆ ತುಂಬುತ್ತಿದ್ದೇವೆ ಹೊರತು ಬೇರೆ ಏನನ್ನೂ ಸಾಧಿಸುತ್ತಿಲ್ಲ’

- Advertisement -
- Advertisement -

ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿರುವ 36,000 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಮಹಿಳೆಯರು ಮತ್ತು ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಹೊಸದಾಗಿ ರಚನೆಯಾಗಿರುವ ಡಿಎಂಕೆ ಸರ್ಕಾರ ನೂರು ದಿನಗಳನನ್ನು ಪೂರೈಸುವ ಮೊದಲೇ ಅರ್ಹರನ್ನು ಅರ್ಚಕರಾಗಿ ನೇಮಿಸುವುದಾಗಿ ತಿಳಿಸಿದೆ.

ತಮಿಳುನಾಡಿನ ಸ್ಟಾಲಿನ ನೇತೃತ್ವದ ಡಿಎಂಕೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ರಾಜ್ಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಈ ವಿಷಯ ಪ್ರಸ್ತುತ ರಾಜ್ಯದಲ್ಲಿ ಇಷ್ಟೊಂದು ಮುನ್ನಲೆಗೆ ಬರಲು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರ ಬ್ರಾಹ್ಮಣ್ಯದ ವಿಚಾರ ವಿವಾದ ಮತ್ತು ದೂರಿಗೆ ಕಾರಣವಾಗಿರುವುದು.

ಆಗಮಾ ಶಾಸ್ತ್ರದಲ್ಲಿ ತರಬೇತಿ ಪಡೆದ ಮಹಿಳೆಯರು ದೇವಾಲಯದ ಅರ್ಚಕರ ಹುದ್ದೆಗಳನ್ನು ವಹಿಸಿಕೊಳ್ಳಲು ಬಯಸಿದರೆ ಅವರಿಗೆ  ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತೇವೆ’ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಶೇಖರ್ ಬಾಬು ಘೋಷಿಸಿದ್ದರು. ಇದು ಪರ-ವಿರೋಧ ಚರ್ಚೆಗೆ ನಾಂದಿ ಹಾಡಿತ್ತು. ಈಗ ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ ನೀಡುವ ಕ್ರಮ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ನಟ ಚೇತನ್ ಅವರ ಬ್ರಾಹ್ಮಣ್ಯದ ಹೇಳಿಕೆ ಕುರಿತು ಸಂಘಟನೆಗಳು ದೂರು ನೀಡಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ನಟ ಚೇತನ್ ಪರ-ವಿರೋಧ ಪೋಸ್ಟ್‌ಗಳು ಹರಿದಾಡುತ್ತಿವೆ. ಇದರ ಜೊತೆಗೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ನಡುವಿನ ವ್ಯತ್ಯಾಸಗಳನ್ನು ಕುರಿತು ನೆಟ್ಟಿಗರು ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ತಮಿಳುನಾಡು : ತೂತುಕುಡಿ ಲಾಕಪ್‌ ಡೆತ್‌ಗೆ 1 ವರ್ಷ, ಕಮರುತ್ತಿದೆ ನ್ಯಾಯದ ನಿರೀಕ್ಷೆ

ತಮಿಳುನಾಡು ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಚಿಂತಕ, ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟು, ರಾಜ್ಯದಲ್ಲಿಯೂ ಇಂತಹ ದಿಟ್ಟ ನಿರ್ಧಾರ ಜಾರಿಯಾಗಲಿ ಎಂದಿದ್ದಾರೆ.

“ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ನಾರಾಯಣ ಗುರುಗಳನ್ನು ತಮ್ಮ ಗುರುಗಳೆಂದು ಒಪ್ಪಿಕೊಳ್ಳುವ ಬಿಲ್ಲವ ಸಮುದಾಯದ ನಾಯಕರೊಬ್ಬರು ಧಾರ್ಮಿಕ ದತ್ತಿ ಇಲಾಖೆಯ ಸಚಿವರಾಗಿದ್ದಾರೆ. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರು ಈ ಅವಕಾಶವನ್ನು ಬಳಸಿಕೊಂಡು ನಾರಾಯಣ ಗುರುಗಳ ಆಶಯಕ್ಕೆ ಅನುಗುಣವಾಗಿ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಜಾತಿಭೇದವಿಲ್ಲದೆ ಅರ್ಚಕರನ್ನು ನೇಮಿಸುವ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು” ಎಂದಿದ್ದಾರೆ.

“ಹಿಂದೂಗಳೆಲ್ಲ ಸೋದರರು ಎಂದು ಭಾವಿಸುವ ಆರ್‌ಎಸ್‌ಎಸ್‌ ಮತ್ತು ಅದರ ಪರಿವಾರ ಸಂಘಟನೆಗಳು ಹಾಗೂ ಬ್ರಾಹ್ಮಣರು ಬೇರೆ, ಜಾತಿಭೇದ, ಪುರೋಹಿತಷಾಹಿಯನ್ನು ಒಪ್ಪಿಕೊಳ್ಳುವ ಬ್ರಾಹ್ಮಣ್ಯ ಬೇರೆ ಎಂದು ವಾದಿಸುತ್ತಿರುವ ಬ್ರಾಹ್ಮಣರು ಮತ್ತು ಅವರ ಸಂಘಸಂಸ್ಥೆಗಳು ಕೂಡಾ ಇದನ್ನು ವಿರೋಧಿಸಲಿಕ್ಕಿಲ್ಲ ಎಂದು ನಂಬಿದ್ದೇನೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಎಲ್‌ಕೆಜಿ ಮಗು’ ಎಂದು ಅಪಹಾಸ್ಯ ಮಾಡಿದ್ದಕ್ಕೆ ದೇಶದ ಕಿರಿಯ ಮೇಯರ್‌‌ ಆರ್ಯ ರಾಜೇಂದ್ರನ್ ಹೇಳಿದ್ದೇನು?

ಲೇಖಕ ನಾಗೇಗೌಡ ಕೀಲಾರ ಅವರು ತಮಿಳುನಾಡಿನ ಸರ್ಕಾರದ ನಿರ್ಧಾರವನ್ನು, ’ಈ ಆಗಮ ಶಾಸ್ತ್ರದ ಟ್ರೈನಿಂಗ್, ಶ್ಲೋಕಗಳ ಟ್ರೈನಿಂಗ್ ಮುಖಾಂತರ ನಾವುಗಳು ಅಬ್ರಾಹ್ಮಣರ ಮೆದುಳಿಗೆ ಬ್ರಾಹ್ಮಣ್ಯವನ್ನೆ ತುಂಬುತ್ತಿದ್ದೇವೆ ಹೊರತು ಬೇರೆ ಏನನ್ನೂ ಸಾಧಿಸುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

ಅರ್ಚಕ ವೃತ್ತಿ ಎನ್ನುವುದೇ ಇರಬಾರದು ಎನ್ನುವ ನಾಗೇಗೌಡ ಕೀಲಾರ ಅವರು, ’ ಅರ್ಚಕ ವೃತ್ತಿ ಅನ್ನುವುದೇ ಇರಬಾರದು. ಮೊದಲು ನಾವುಗಳು ನಮ್ಮ ದೇವಸ್ಥಾನಗಳ ಗರ್ಭಗುಡಿಯನ್ನು ಮಾರ್ಪಾಟು ಮಾಡಬೇಕು. ವಿಶಾಲವಾದ ಕೋಣೆಯನ್ನಾಗಿ ಪರಿವರ್ತಿಸಿ ಅಲ್ಲಿ ಒಳ್ಳೆಯ ಗಾಳಿ ಬೆಳಕು ಇರಬೇಕು. ಜನರೇ ಸ್ವತಃ ಒಳಗೆ ಹೋಗಿ ಯಾರದೇ ನೆರವು ಇಲ್ಲದೆ ಒಂದೆರಡು ನಿಮಿಷ ಸ್ವತಃ ಪೂಜೆ ಮಾಡಿಕೊಂಡು ಬರುವ ವ್ಯವಸ್ಥೆ ಮಾಡಬೇಕು. ಪೂಜಾ ಕೋಣೆಯ ಸುವ್ಯವಸ್ಥೆಯನ್ನು ಕಾಪಾಡಲು ಯಾರನ್ನಾದರೂ ಒಬ್ಬರನ್ನು ನೇಮಕ ಮಾಡಿದರೆ ಸಾಕು. ಈ ವ್ಯಕ್ತಿಗೆ ಸೆಕ್ಯುರಿಟಿ ಗಾರ್ಡ್ ಗೆ ಇರುವ ಕೌಶಲ್ಯ ಇದ್ದರೆ ಸಾಕೇ ಹೊರತು ಯಾವುದೇ ಆಗಮ ಶಾಸ್ತ್ರದ ಟ್ರೈನಿಂಗ್ ಅವಶ್ಯಕತೆ ಇಲ್ಲ’ ಎಂದಿದ್ದಾರೆ.

’ಅಬ್ರಾಹ್ಮಣರು ಅರ್ಚಕರು ಆಗೋದು ನನ್ನ ಅಭಿಪ್ರಾಯದಲ್ಲಿ ಯಾವುದೇ ಸಾಮಾಜಿಕ ಮೇಲಿನ ಚಲನೆ ಅಲ್ಲವೇ ಅಲ್ಲ. ಇದು ಕೂಡ ಬ್ರಾಹ್ಮಣ್ಯದ ಮುಂದುವರಿಕೆಯೇ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಕೆಲವು ವರ್ಷಗಳ ಹಿಂದೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಪರಿಶಿಷ್ಟಜಾತಿ-ಪಂಗಡದವರ ಜೊತೆಯಲ್ಲಿ ಮಹಿಳೆಯರನ್ನೂ ಅರ್ಚಕರನ್ನಾಗಿ ನೇಮಿಸುವ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಈಗ ತಮಿಳುನಾಡು ಸರ್ಕಾರದ ಕ್ರಮದಿಂದ ಪ್ರೇರಿತರಾಗಿ ರಾಜ್ಯದಲ್ಲಿಯೂ ಮಹಿಳೆಯರು ಮತ್ತು ಬ್ರಾಹ್ಮಣೇತರರಿಗೆ ಅರ್ಚಕ ಹುದ್ದೆ ನೀಡಲಿ ಎಂಬುದು ಸಾಮಾಜಿಕ ಹೋರಾಟಗಾರರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ತರಬೇತಿ ಪಡೆದ ಮಹಿಳೆಯರನ್ನು ಅರ್ಚಕರಾಗಿ ನೇಮಿಸಲಾಗುತ್ತದೆ: ತಮಿಳುನಾಡು ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read