Homeಮುಖಪುಟಸೋಷಿಯಲ್ ಮೀಡಿಯಾ, ಸುದ್ದಿ ವೆಬ್‌ಸೈಟ್, ಒಟಿಟಿ; ಬಗ್ಗುವ ಬೆನ್ನಿಗೆ ಗುದ್ದಲಿರುವ ಮುಷ್ಟಿಗಳು

ಸೋಷಿಯಲ್ ಮೀಡಿಯಾ, ಸುದ್ದಿ ವೆಬ್‌ಸೈಟ್, ಒಟಿಟಿ; ಬಗ್ಗುವ ಬೆನ್ನಿಗೆ ಗುದ್ದಲಿರುವ ಮುಷ್ಟಿಗಳು

- Advertisement -
- Advertisement -

ಗುರುವಾರ (ಫೆ,25) ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಾಮಾಜಿಕ ಮಾಧ್ಯಮಗಳು, ಡಿಜಿಟಲ್ ಸುದ್ದಿ ಮಾಧ್ಯಮಗಳು ಮತ್ತು ಒಟಿಟಿ ವ್ಯವಸ್ಥೆಗಳ ಕುರಿತಾದ ನಿಯಮಗಳು, ಬಹುತೇಕ ಮೂರನೇ ಅವಧಿಯ ಚುನಾವಣೆ ಎದುರಿಸುವುದಕ್ಕೆ ಹಾಲಿ ಸರ್ಕಾರದ ಪ್ರಾಥಮಿಕ ಹಂತದ ತಯಾರಿಯಂತೆಯೇ ಕಾಣಿಸುತ್ತಿವೆ. ತಾನು ಮೇಲೆದ್ದು ಬಂದ ಏಣಿಯನ್ನು ಇನ್ನೊಬ್ಬರು ಬಳಸಿ ಮೇಲೇರಬಾರದು, ಅಥವಾ ಕನಿಷ್ಠ ಆ ಏಣಿಯ ಮೇಲೆ ನಿಯಂತ್ರಣ ತನ್ನದಾಗಿರಬೇಕು ಎಂಬ ಯೋಚನೆ ಈ ನಿಯಮಗಳ ಹಿಂದೆ ಗಾಢವಾಗಿರುವಂತೆ ಅನ್ನಿಸುತ್ತದೆ.

ಒಂದು ಸಂವಿಧಾನ; ಅದರಡಿ ಜಾರಿಗೆ ಬಂದಿರುವ ಕಾಯಿದೆಗಳು; ಆ ಕಾಯಿದೆಗಳ ಅನುಷ್ಠಾನಕ್ಕೆಂದು ರಚಿತವಾದ ರೂಲ್ಯೂಗಳು? ಇವೆಲ್ಲವುಗಳ ಮೂಲಭೂತ ಉದ್ದೇಶ ದೇಶದ ಪ್ರಜೆಗಳ ಬದುಕನ್ನು ಸುಗಮಗೊಳಿಸುವುದು. ಇವನ್ನೆಲ್ಲ ಕಾರ್ಯರೂಪಕ್ಕೆ ತರಬೇಕಾದ ಶಾಸಕಾಂಗ, ಇದಕ್ಕೆ ವ್ಯತಿರಿಕ್ತವಾಗಿ, ಕೇವಲ ತನ್ನ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕಾರ್ಯಾಚರಿಸುವ ಇತ್ತೀಚೆಗಿನ ಟ್ರೆಂಡಿಗೆ ಲೇಟೆಸ್ಟ್ ಉದಾಹರಣೆ ಏನು? ಮಾಹಿತಿ ತಂತ್ರಜ್ಞಾನ (ಮಧ್ಯಂತರಿಗಳ ಮಾರ್ಗದರ್ಶಿ ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021.

ಭಾರತದಲ್ಲಿ ಐಟಿ ಕಾಯಿದೆ ಜಾರಿಗೆ ಬಂದದ್ದು 2000ನೇ ಇಸವಿಯಲ್ಲಿ. ಮಾಹಿತಿ ತಂತ್ರಜ್ಞಾನ ಉದ್ಯಮಕ್ಕೆ 20ವರ್ಷಗಳ ಅವಧಿ ಎಂದರೆ ಬಲುದೀರ್ಘವಾದದ್ದು. ಪ್ರತೀ ಎರಡು ವರ್ಷಗಳಿಗೊಮ್ಮೆ ಆಟದ ನಿಯಮಗಳೇ ಬದಲಾಗುವಷ್ಟು ವೇಗವಾಗಿ ಬೆಳೆಯುತ್ತಿರುವ ಈ ಉದ್ಯಮವನ್ನು ಇನ್ನೂ ನಿಯಂತ್ರಿಸುತ್ತಿರುವುದು 2000ನೇ ಇಸವಿಯ ಕಾಯಿದೆ! 2011ರಲ್ಲಿ, ಮೊದಲ ಬಾರಿಗೆ ಐಟಿ ಕ್ಷೇತ್ರದ ಮಧ್ಯಂತರಿಗಳ ಮಾರ್ಗದರ್ಶಿ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಆಗ ಐಟಿ ಸಚಿವರಾಗಿದ್ದವರು ಕಪಿಲ್ ಸಿಬಲ್.

ಇಂದು 2021ಕ್ಕೆ ನಾವು ತಲುಪಿದ್ದರೂ, ಈ ದೇಶದ ಜನಸಾಮಾನ್ಯರ ಡೇಟಾವನ್ನು ಸಂರಕ್ಷಿಸುವ, ಖಾಸಗಿತನವನ್ನು ಕಾಪಾಡುವ, ಪಾರದರ್ಶಕ ಮತ್ತು ಸಹಜ ನ್ಯಾಯಕ್ಕೆ ಒದಗಿಬರುವ ಮಾಹಿತಿ ತಂತ್ರಜ್ಞಾನ ಪರಿಸರವೊಂದನ್ನು ರೂಪಿಸುವುದು ನಮ್ಮ ಶಾಸಕಾಂಗಕ್ಕೆ ಸಾಧ್ಯವಾಗಿಲ್ಲ. ಈ ಕೊರತೆ ಹುಟ್ಟುಹಾಕಿರುವ ಸಾಮಾಜಿಕ-ಆರ್ಥಿಕ-ರಾಜಕೀಯ-ಧಾರ್ಮಿಕ ಬಿಕ್ಕಟ್ಟುಗಳು ಊಹಿಸುವುದಕ್ಕೂ ಅಸಾಧ್ಯವೆನ್ನಿಸುವಷ್ಟು ಅಗಾಧ. ಇವೆಲ್ಲ ‘ಗೊತ್ತಿಲ್ಲದಿರುವುದರ ವರದಾನ’ ನಮ್ಮನ್ನು ಇಲ್ಲಿಯ ತನಕ ಕಾಪಾಡಿಕೊಂಡು ಬಂದಿದೆ!

ಇಂದು ಮುಂಚೂಣಿಯಲ್ಲಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ಯಂತ್ರ ಕಲಿಕೆ (ಮಷೀನ್ ಲರ್ನಿಂಗ್) ತಂತ್ರಜ್ಞಾನಗಳು ಮಾಹಿತಿ-ಸುದ್ದಿ-ಮನರಂಜನೆ-ಉದ್ಯೋಗ-ಮಾರುಕಟ್ಟೆ-ಗಳಿಕೆಗಳ ನಡುವಿನ ವಿಭಾಜಕ ರೇಖೆಗಳನ್ನು ಯಾವ ಪರಿ ಅಳಿಸಿಹಾಕುತ್ತಿವೆ ಎಂದರೆ, ಅವೆಲ್ಲವೂ ಒಂದೇ ಆಗಿಬಿಟ್ಟಿವೆ. ಇಂತಹದೊಂದು ಅತ್ಯಾಧುನಿಕ ‘ಯುದ್ಧ’ವನ್ನು ನಾವು ಭರ್ಜಿ-ಕತ್ತಿ-ಬಿಲ್ಲುಬಾಣಗಳನ್ನು ಹಿಡಿದು ಎದುರಿಸುತ್ತಿದ್ದೇವೆ! ಮೊನ್ನೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಕಟಿಸಿರುವ ಐಟಿ ನಿಯಮಗಳೂ ಕೂಡ ಇಂತಹದೇ ಒಂದು ಪುರಾತನ ಹತ್ಯಾರು. ಇದು ಮೇಲ್ನೋಟಕ್ಕೇ, 2024ರ ಲೋಕಸಭಾ ಚುನಾವಣೆಗೆ ಪೂರ್ವಪ್ರಾಥಮಿಕ ತಯಾರಿ. ಅದು ಹೇಗೆಂಬುದನ್ನು ಈ ನಿಯಮಗಳ ಒಳವಿವರಗಳು ಸಮರ್ಥವಾಗಿ ಬಿಚ್ಚಿಡಬಲ್ಲವು.

PC : Media Indian Group

ಸಕಾರಣ ಮುನ್ನೆಚ್ಚರಿಕೆಗಳು (ಡ್ಯೂ ಡೆಲಿಜೆನ್ಸ್)

ಹಳೆಯ 2011ರ ನಿಯಮಗಳ ಆವೃತ್ತಿಯಲ್ಲಿದ್ದುದು ಕೇವಲ 11 ಸಕಾರಣ ಮುನ್ನೆಚ್ಚರಿಕೆಗಳು ಮಾತ್ರ. ಈಗ ಹೊಸದಾಗಿ ಆಗಿರುವ ಬದಲಾವಣೆಗಳು ಮೂಲಭೂತವಾಗಿ ಹೇಳುತ್ತಿರುವುದು ಅದನ್ನೇ ಆದರೂ, ಪ್ರಭುತ್ವ ತನಗೆ ನಿರ್ದಿಷ್ಟವಾಗಿ ಎಲ್ಲೆಲ್ಲ ನಿಯಂತ್ರಣ, ಹಸ್ತಕ್ಷೇಪದ ಅವಕಾಶ ಬೇಕೆಂಬುದನ್ನು ಅನುಭವದ ಆಧಾರದಲ್ಲಿ ಕಂಡುಕೊಂಡಿರುವುದರಿಂದ, ಅವನ್ನೆಲ್ಲ ನಿರ್ದಿಷ್ಟವಾಗಿ ಗುರುತಿಸಲಾಗಿದೆ. ಹಾಗಾಗಿ, ಮೊದಲಿದ್ದ ಇಲೆಕ್ಟ್ರಾನಿಕ್ ರೆಕಾರ್ಡ್‌ಗಳು, ಟೆಲಿಕಾಂ ಸೇವಾದಾತರು, ಇಂಟರ್‌ನೆಟ್ ಸೇವಾದಾತರು, ವೆಬ್ ಹೋಸ್ಟಿಂಗ್ ಸೇವೆಗಳು, ಸರ್ಚ್ ಎಂಜಿನ್‌ಗಳು, ಪಾವತಿ-ಹರಾಜು ಸೈಟ್‌ಗಳು, ಆನ್ಲೈನ್ ಮಾರುಕಟ್ಟೆಗಳು, ಸೈಬರ್ ಕೆಫೆಗಳು ಎಂಬ ‘ಮಧ್ಯಂತರಿಗಳ’ ಕಾನೂನಿನ ವ್ಯಾಖ್ಯಾನಕ್ಕೆ ಈಗ ಈ ನಿಯಮದ ಹೆಸರಿನಲ್ಲಿ ವೆಬ್‌ಸೈಟ್‌ಗಳು, ಆಪ್ಲಿಕೇಷನ್‌ಗಳು, ಸಾಮಾಜಿಕ ಮಾಧ್ಯಮಗಳು, ಮೀಡಿಯಾ ಶೇರಿಂಗ್ ವೆಬ್‌ಸೈಟ್‌ಗಳು, ಬ್ಲಾಗ್‌ಗಳು, ಆನ್‌ಲೈನ್ ಚರ್ಚಾಫೋರಂಗಳು, ಮತ್ತು ಅಂತಹ ಚಟುವಟಿಕೆಗಳಿರುವ ಇತರ ವ್ಯವಸ್ಥೆಗಳು ಎಂದು ಸೇರ್ಪಡೆ ಮಾಡಲಾಗಿದೆ.

ಅದರಲ್ಲೂ ಸರ್ಕಾರದ ಮುಖ್ಯ ಗಮನ ಇರುವುದು ಸಾಮಾಜಿಕ ಮಾಧ್ಯಮಗಳು, ಸುದ್ದಿ ವೆಬ್‌ಸೈಟ್‌ಗಳ ಕುರಿತು. ಇದರೊಂದಿಗೆ ಅಯಾಚಿತವಾಗಿ ಕೊರೊನೋತ್ತರ ಒಟಿಟಿ ದೃಶ್ಯ ಮಾಧ್ಯಮ ವ್ಯವಸ್ಥೆಯೂ ಸೇರಿಕೊಂಡಿದೆ.

ಏನು ಬದಲಾವಣೆಗಳು?

ಹೊಸ ನಿಯಮಗಳು ತಂದಿರುವ ಪ್ರಮುಖ ಬದಲಾವಣೆಗಳನ್ನು ಹೀಗೆ ಪಟ್ಟಿ ಮಾಡಬಹುದು:

1. ಸ್ವಂತ ವಿವೇಚನೆಯ ನಿಯಂತ್ರಣ, ಬಾಹ್ಯ ವ್ಯವಸ್ಥೆಯೊಂದರ ನಿಯಂತ್ರಣ (ಹೈಕೋರ್ಟು ನ್ಯಾಯಾಧೀಶರ ದರ್ಜೆಯ ಮುಖ್ಯಸ್ಥರಿರುವ ಸಮಿತಿ) ಮತ್ತು ಸರ್ಕಾರದ ಉನ್ನತಾಧಿಕಾರಿ ಸಮಿತಿಯ ನಿಯಂತ್ರಣ ಎಂಬ ಮೂರು ಹಂತದ ನಿಯಂತ್ರಣ ವ್ಯವಸ್ಥೆ ಮತ್ತು ಅವೆಲ್ಲದರ ನಡುವೆ ನೇರ ಸಂವಹನಕ್ಕೆ ಅವಕಾಶ ಆಗುವಂತೆ ‘ಕಂಪ್ಲಯನ್ಸ್ ಅಧಿಕಾರಿ’, ‘ನೋಡಲ್ ಸಂಪರ್ಕ ವ್ಯಕ್ತಿ’ ‘ರೆಸಿಡೆಂಟ್ ಗ್ರಿವೆನ್ಸ್ ಅಧಿಕಾರಿ’, ಜಂಟಿ ಕಾರ್ಯದರ್ಶಿ ದರ್ಜೆಯ ‘ಆಥರೈಸ್ಡ್ ಅಧಿಕಾರಿ’ ಎಂಬೆಲ್ಲ ಸಂಪರ್ಕ ಬಿಂದುಗಳನ್ನು ರಚಿಸಲಾಗಿದೆ. ವಿದೇಶಿ ಮೂಲದ ಮಧ್ಯಂತರಿಗಳಲ್ಲೂ ಈ ಹುದ್ದೆಗಳಲ್ಲಿ ಭಾರತೀಯ ಮೂಲದವರಿರಬೇಕು ಎಂದು ನಿರ್ದಿಷ್ಟಪಡಿಸಲಾಗಿದೆ.

2. ಮಧ್ಯಂತರಿಗಳು ಅಥವಾ ಸುದ್ದಿ ಸೈಟ್‌ಗಳಲ್ಲಿರುವ, ಸರ್ಕಾರಕ್ಕೆ ಆಕ್ಷೇಪಾರ್ಹ ಅನ್ನಿಸಿದ ವಿಚಾರಗಳನ್ನು ತೆಗೆದುಹಾಕಿಸಲು ಸಮಯಬದ್ಧವಾದ ವ್ಯವಸ್ಥೆಯೊಂದು ಏರ್ಪಾಡಾಗಿದೆ.

3. ಇಂಟರ್‌ನೆಟ್ ಮೂಲದ ವೆಬ್ ಸೀರೀಸ್‌ಗಳಿಗೆ ಮತ್ತು ಬೇರೆ ಕಂಟೆಂಟ್‌ಗಳಿಗೆ ಇನ್ನು ಸಾಂಪ್ರದಾಯಿಕ ಸೆನ್ಸಾರ್ ವ್ಯವಸ್ಥೆ ಅಪ್ರಸ್ತುತಗೊಳ್ಳಲಿರುವುದರಿಂದ(?), ಒಂದು ರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

4. ಸುದ್ದಿ ವೆಬ್‌ಸೈಟ್‌ಗಳಿಗೆ ನೋಂದಾಯಿಸಿಕೊಳ್ಳಲು ‘ಬ್ರಾಡ್ಕಾಸ್ಟ್ ಸೇವಾ’ ಎಂಬ ನಿಯಂತ್ರಕ ಪೋರ್ಟಲ್ ರಚನೆಯನ್ನು ಪ್ರಕಟಿಸಲಾಗಿದೆ.

5. ಮಧ್ಯಂತರಿಗಳಲ್ಲಿ (ಹಾಗೆಂದರೆ, ಫೇಸ್ಬುಕ್, ಟ್ವಿಟ್ಟರ್, ಯುಟ್ಯೂಬ್‌ನಂತಹ ಇನ್ನೊಬ್ಬರ ಕಂಟೆಂಟ್ ಪ್ರಕಟಿಸುವ ಮಧ್ಯವರ್ತಿ ಮಾಧ್ಯಮಗಳು) ಐದು ಲಕ್ಷ ಚಂದಾದಾರರು ಅಥವಾ ಐವತ್ತು ಲಕ್ಷ ಹಿಂಬಾಲಕರಿಗಿಂತ ಹೆಚ್ಚಿರುವವರನ್ನು ‘ಗಮನಾರ್ಹ ಮಧ್ಯಂತರಿಗಳು’ ಎಂದು ಪ್ರತ್ಯೇಕಿಸಲಾಗಿದೆ.

ಮೇಲ್ನೋಟಕ್ಕೆ, ಇವಿಷ್ಟು ಈ ಹೊಸ ನಿಯಮಗಳ ಅನ್ವಯ ಆಗಿರುವ ಗಮನಾರ್ಹ ಬದಲಾವಣೆಗಳು. ಅರೇ? ಇಷ್ಟೇನಾ? ಇದರಲ್ಲೇನಿದೆ?! ಎಂದುಕೊಂಡರೆ, ಈ ನಿಯಮಗಳಲ್ಲಿ ವ್ಯಕ್ತವಾಗಿ ಹೇಳದಿರುವ ಹಲವು ಅಂಶಗಳು ಮುನ್ನೆಲೆಗೆ ಬರತೊಡಗುತ್ತವೆ. ಅವುಗಳನ್ನು ಸ್ವಲ್ಪ ವಿವರವಾಗಿ ನೋಡೋಣ.

ಆಟ ಇರೋದು ಎಲ್ಲಿ?

ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿಗಳೆಲ್ಲ, ಭಾರತದಲ್ಲಿ ತಮ್ಮ ಕೇಂದ್ರಸ್ಥಾನವಾಗಲೀ, ಸರ್ವರ್ ಆಗಲೀ ಇಲ್ಲದ ಬಹುರಾಷ್ಟ್ರೀಯ ಸಂಸ್ಥೆಗಳು. ಅವುಗಳ ಚಂದಾದಾರರಾಗುವಾಗಲೇ ನಾವು ಅವರ ನಿಯಮ ಮತ್ತು ಷರತ್ತುಗಳಿಗೆ ಒಪ್ಪಿರುತ್ತೇವೆ. ಆ ನಿಯಮಗಳು ಸ್ಪಷ್ಟವಾಗಿ, ತಮ್ಮ ಕಾನೂನು ವ್ಯಾಪ್ತಿ ಕ್ಯಾಲಿಫೋರ್ನಿಯಾದಲ್ಲಿ ಊರ್ಜಿತವಿರುವ ಕಾನೂನುಗಳು ಮತ್ತು ಯಾವುದೇ ತಗಾದೆ ತಕರಾರುಗಳಿದ್ದಲ್ಲಿ, ಇದ್ದವರು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ಅಥವಾ ಸ್ಟೇಟ್ ನ್ಯಾಯಾಲಯದಲ್ಲಿ ಅದು ಇತ್ಯರ್ಥವಾಗಬೇಕು ಎಂದು ವಿಧಿಸುತ್ತವೆ. ಅವರ ಬಳಕೆ ಒಪ್ಪಂದಗಳ ‘ಫೈನ್ ಲೈನ್’ಗಳು ಬಹುತೇಕ ಏಕಮುಖಿ. ಸದ್ಯಕ್ಕೆ General Data Protection Regulation (Regulation (EU) 2016/679) ಅಡಿ ಡೇಟಾ ಸಂರಕ್ಷಣೆ ಮತ್ತು ಡೇಟಾ ವಿನಿಮಯಕ್ಕೆ EU-U.S. Privacy Shield Framework and the Swiss-U.S. Privacy Shield Framework ಒಪ್ಪಂದದ ಅಡಿ ಕಾರ್ಯಾಚರಿಸುವ ಈ ದೊಡ್ಡ ಕಂಪನಿಗಳು, ಜಗತ್ತಿನ ಬಹುತೇಕ ಸರ್ಕಾರಗಳನ್ನೇ ತಿರುಗಿ ಪ್ರಶ್ನಿಸಬಲ್ಲ ಸ್ನಾಯುಬಲ ಬೆಳೆಸಿಕೊಂಡಿರುವುದನ್ನು ಕಳೆದ 2-3 ವರ್ಷಗಳಲ್ಲಿ ಜಗತ್ತು ಗಮನಿಸಿದೆ. ಅಮೆರಿಕ, ಯುರೋಪು, ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಈ ಅನುಭವಗಳಾಗಿವೆ.

ಸರ್ಕಾರಗಳಿಗೆ ಕ್ಯಾರೇ ಅನ್ನದ ಈ ಜಯಂಟ್ ಕಂಪನಿಗಳು ಸದ್ಯಕ್ಕೆ ಸ್ವಲ್ಪ ಮರ್ಯಾದೆ ಕೊಡುತ್ತಿರುವುದು ಅದರ ಬಳಕೆದಾರರ ಖಾಸಗಿತನದ ಸೋರಿಕೆಯ ಪ್ರಶ್ನೆ ಎದ್ದಾಗ ಬರುವ ನೈತಿಕ ಪ್ರಶ್ನೆಗಳಿಗೆ ಮಾತ್ರ. ಉಳಿದಂತೆ ಅವರನ್ನು ಹಿಡಿಯುವವರಿಲ್ಲ. ಈಗ ಭಾರತದ ಹೊಸ ನಿಯಮಗಳು ಈ ಸಂಸ್ಥೆಗಳಿಗೆ ಹೇಗೆ ಅನ್ವಯ ಆಗುತ್ತವೆ? ಒಂದು ವೇಳೆ ಭಾರತೀಯ ಮೂಲದ ಅಧಿಕಾರಿಗಳೇ ಆಯಕಟ್ಟಿನ ಜಾಗಗಳಲ್ಲಿ ಇದ್ದರೂ, ಅವರು ಸಂಸ್ಥೆಯ ನಿಯಮಗಳಿಗೆ ಎಷ್ಟರಮಟ್ಟಿಗೆ ಉತ್ತರದಾಯಿಯಾದಾರು? ಎಂಬುದು ಸ್ಪಷ್ಟವಿಲ್ಲ. ಆ ಸಂಸ್ಥೆಗಳು ಅಗತ್ಯ ಬಿದ್ದರೆ ಅಂತಹ ಅಧಿಕಾರಿಗಳನ್ನು ಕೆಳಗಿಳಿಸಿ ಕೈ ತೊಳೆದುಕೊಳ್ಳುತ್ತವೆ ಎಂಬುದಕ್ಕೂ ಭಾರತದಲ್ಲೇ ಇತ್ತೀಚೆಗಿನ ಉದಾಹರಣೆ (ಆಂಕಿದಾಸ್ ಪ್ರಕರಣ) ಇದೆ.

ಇನ್ನೊಂದು ದಿಕ್ಕಿನಿಂದ ನೋಡಿದರೆ, ಈ ಸಂಸ್ಥೆಗಳ ಜೊತೆ ಸೌಹಾರ್ದ ಸಂಬಂಧವನ್ನೇ ಹೊಂದಿರುವ ಹಾಲಿ ಪ್ರಭುತ್ವ, ತನಗೆ ಬೇಡವೆನ್ನಿಸಿದ ಕಂಟೆಂಟ್‌ಗಳನ್ನು ಅಲ್ಲಿಂದ ಹೊರತೆಗೆಸಲು ಅಧಿಕೃತ ಸಂಪರ್ಕ ಬಿಂದು ವ್ಯವಸ್ಥೆಯೊಂದನ್ನು ಈ ಹೊಸ ನಿಯಮಗಳ ಮೂಲಕ ರೂಪಿಸಿಕೊಂಡಂತಾಗಿದೆ. ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿರುವುದೇ ಇಂತಹದೊಂದು ಸಾಧ್ಯತೆಯ ಸ್ಪಷ್ಟ ಸೂಚನೆ. ಹಾಗಾಗಿ, ಒಂದು ವಿಚಾರ ಸ್ಪಷ್ಟ. ಅದೇನೆಂದರೆ ಈ ನಿಯಮಗಳ ಉದ್ದೇಶ ವಿದೇಶೀ ಮೂಲದ ‘ಗಮನಾರ್ಹ ಮಧ್ಯಂತರಿಗಳಲ್ಲ!’ ಹಾಗಾದರೆ ಬಾಕಿ ಉಳಿದದ್ದು ಯಾರು? ಅದು ದೇಶದೊಳಗಿನ ಸಣ್ಣಪುಟ್ಟ ವೆಬ್ ಸುದ್ದಿ ಮಾಧ್ಯಮಗಳು. ಸಾಂಪ್ರದಾಯಿಕ ಮಾಧ್ಯಮಗಳನ್ನೆಲ್ಲ ತನ್ನ ಸೇವೆಗೆ ತಾಲೀಮು ಕೊಟ್ಟು ತಗ್ಗಿಸಿ ಬಗ್ಗಿಸಿದ ಬಳಿಕ ಪ್ರಭುತ್ವಕ್ಕೆ ಈಗ ಉಳಿದಿರುವುದು, ‘ಕಡು ಸತ್ಯ’ಗಳನ್ನು ಕ್ಷೀಣವಾದರೂ, ಖಚಿತ ಧ್ವನಿಯಲ್ಲಿ ಹೇಳುತ್ತಿರುವ ಸಣ್ಣ ಮಾಧ್ಯಮಗಳು. ಉದ್ಯೋಗದಿಂದ ಹೊರಬಂದ ಬರ್ಖಾ ದತ್ ಅವರಂತಹ ಜನಪ್ರಿಯ ಪತ್ರಕರ್ತರಿಗೆ ಸ್ವಂತ ಟೆಲಿವಿಷನ್ ಚಾನೆಲ್ ಒಂದನ್ನು ಆರಂಭಿಸುವ ಸಾಧ್ಯತೆಗಳನ್ನು ಹೊಸಕಿ ಹಾಕಿದ ಚರಿತ್ರೆ ಇರುವ ಪ್ರಭುತ್ವಕ್ಕೆ ಸಣ್ಣಪುಟ್ಟ ಮಾಧ್ಯಮಗಳನ್ನು ಹುಡುಹುಡುಕಿ ಹೊಸಕಿಹಾಕಲು ಈ ಹೊಸ ನಿಯಮಗಳು ಕಾನೂನುಬದ್ಧವಾಗಿಯೇ ಅವಕಾಶ ಮಾಡಿಕೊಡಲಿವೆ.

ಅಂತಿಮವಾಗಿ, ಈ ಹೊಸ ನಿಯಮಗಳ ಆಸಿಡ್ ಟೆಸ್ಟ್ ಇರುವುದು, ಪ್ರಭುತ್ವ ತಾನು ಸ್ವತಃ ಸಾಕುತ್ತಿರುವ ಫೇಕ್ ಸುದ್ದಿ ಕಾರ್ಖಾನೆಗಳು, ಪ್ರಚಾರ ತಂತ್ರಗಳ ನಿಯಂತ್ರಣ ಹೇಗಾಗಲಿದೆ ಎಂಬುದರಲ್ಲಿ. ಅದು ಎಂದಿನಂತೆಯೇ ಮುಂದುವರಿದಿದ್ದರೆ, ಈ ಎಲ್ಲ ಬೆಳವಣಿಗೆಗಳು 2024ಕ್ಕೆ ತಯಾರಿ ಎಂಬುದರ ಸ್ಪಷ್ಟ ಸೂಚನೆ; ಅನುಮಾನವೇ ಬೇಡ.

ಒಟಿಟಿ ಕಥೆ

ಅಮೆಜಾನ್, ಸೋನಿ, ನೆಟ್‌ಫ್ಲಿಕ್ಸ್, ಆಪಲ್, ಡಿಸ್ನಿ+, ವಾರ್ನರ್ ಮೀಡಿಯಾದಂತಹ ರಕ್ಕಸ ಗಾತ್ರದ ಕಂಪನಿಗಳು ಸಿನಿಮಾ/ವೆಬ್ ಸೀರೀಸ್ ರಂಗಕ್ಕೆ ಬಿಲಿಯಗಟ್ಟಲೆ ತೊಡಗಿಸಿ ಇಳಿಯತೊಡಗಿರುವಾಗ, ಅವನ್ನು ಈ ಹೊಸ ನಿಯಮ ಭಾರತದೊಳಗೆ ನಿಯಂತ್ರಿಸ ಹೊರಟರೆ, ಅದು ಈ ಸರ್ಕಾರದ ‘ಅಶ್ಲೀಲ ವೆಬ್‌ಸೈಟ್ ನಿಷೇಧ’ ತೀರ್ಮಾನದಷ್ಟೇ ಕೆಲಸಕ್ಕೆ ಬಾರದ ತೀರ್ಮಾನವಾಗಲಿದೆ. ಹಾಗಾಗಿ ಒಟಿಟಿ ಕಂಟೆಂಟ್ ಮೇಲಿನ ನಿಯಂತ್ರಣ ಕೂಡ ದೇಶದೊಳಗಿನ ಸಣ್ಣಪುಟ್ಟವರನ್ನು ಗಮನದಲ್ಲಿರಿಸಿಕೊಂಡು ಮಾಡಿದ್ದೇ ಹೊರತು ದೊಡ್ಡವರನ್ನಲ್ಲ. ಒಟಿಟಿ ದೀರ್ಘಕಾಲಿಕವಾಗಿ ನಿಲ್ಲಲಿದೆ ಮತ್ತು ಅದು ತನ್ನೊಂದಿಗೆ ಭಾರತದ ಸಾಂಪ್ರದಾಯಿಕ (ಈಗಾಗಲೇ ಅಪ್ರಸ್ತುತವೂ ಆಗಿರುವ) ಸೆನ್ಸಾರ್ ವ್ಯವಸ್ಥೆಯನ್ನು ಸಮಾಧಿ ಮಾಡಲಿದೆ ಎಂಬುದಕ್ಕೆ ಸಾಕಷ್ಟು ಮುನ್ಸೂಚನೆಗಳನ್ನು ಈ ಹೊಸ ನಿಯಮಗಳು ಕೊಟ್ಟಿವೆ ಎಂದರೆ ಅದು ಸರಿಯಾದ ವಿವರಣೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಫೇಸ್‌ಬುಕ್ ಬ್ಯಾನ್! ಟೆಕ್ ದೈತ್ಯನ ಅಹಂಗೆ ಬಿದ್ದ ಪೆಟ್ಟು: ಎಸ್ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...