ಚರ್ಚೆಗಳು ನಡೆದ ಬಳಿಕವೂ ಮಸೂದೆಯನ್ನು ತಡೆ ಹಿಡಿಯಲು ರಾಜ್ಯಪಾಲರು ಮುಂದಾದರೆ ಆ ಮಸೂದೆಗೆ ಒಪ್ಪಿಗೆ ನೀಡುವಂತೆ ರಾಜ್ಯ ಸಚಿವ ಸಂಪುಟ ಅವರನ್ನು ಒತ್ತಾಯಿಸಬಹುದು ಎಂದು ಕೇರಳ ಸರ್ಕಾರ ಮಂಗಳವಾರ (ಸೆ.9) ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದೆ. ಇದಕ್ಕೆ ಕರ್ನಾಟಕ ದನಿಗೂಡಿಸಿದೆ.
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ಗೆ ಮಾಡಿದ ಶಿಫಾರಸ್ಸನ್ನು ಆಲಿಸುವ ವೇಳೆ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್ ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠದೆದುರು ಕೇರಳ ವಾದ ಮಂಡಿಸಿದೆ.
ಕೇರಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ಅವರು, ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಚರ್ಚೆಗಳ ನಂತರವೂ ಯಾವುದೇ ಒಮ್ಮತ ಏರ್ಪಡದಿದ್ದರೆ ಮತ್ತು ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯಲು ಉದ್ದೇಶಿಸಿದರೆ, ಸಚಿವ ಸಂಪುಟ ತಕ್ಷಣವೇ 163ನೇ ವಿಧಿಯಡಿ ಒಪ್ಪಿಗೆ ನೀಡುವಂತೆ ಸಲಹೆ ನೀಡಬಹುದು ಎಂದು ಹೇಳಿದರು.
“ರಾಜ್ಯಪಾಲರಿಗೆ ವಿಧಿ 163ರ ಅಡಿ ಅಂಕಿತವನ್ನು ನೀಡುವುದರ ಹೊರತಾದ ಯಾವುದೇ ಆಯ್ಕೆಗಳಿಲ್ಲ. ನನ್ನ ದೃಷ್ಟಿಕೋನದಲ್ಲಿ ಹೇಳಬೇಕೆಂದರೆ, ಶಾಸನಸಭೆಯಲ್ಲಿ ಮಸೂದೆಯು ಅಂಗೀಕಾರಗೊಂಡ ಬೆನ್ನಿಗೇ, ಚರ್ಚೆಗೆ ಆಸ್ಪದವನ್ನೂ ನೀಡದೆ ಮಂತ್ರಿಪರಿಷತ್ತು163ನೇ ವಿಧಿಯನ್ನು ಬಳಸುವ ಮೂಲಕ ಅಂಕಿತ ಹಾಕುವಂತೆ ರಾಜ್ಯಪಾಲರನ್ನು ಒತ್ತಾಯಿಸುವುದು ಸೂಕ್ತವಲ್ಲವೇನೋ. ರಾಜ್ಯಪಾಲರನ್ನು ಹಾಗೆ ಒತ್ತಾಯಿಸುವುದು… ರಾಜ್ಯದ ಮುಖ್ಯಸ್ಥರಾಗಿ ಅವರು ಹೊಂದಿರುವ ಉನ್ನತ ಸ್ಥಾನಕ್ಕೆ ತಕ್ಕುದಾದುದಲ್ಲ,” ಎಂದು ಅವರು ವಿವರಿಸಿದ್ದಾರೆ. ಆ ಮೂಲಕ 163ರ ಅಡಿ ರಾಜ್ಯಪಾಲರಿಗೆ ಅಂಕಿತ ಹಾಕುವುದರ ಹೊರತಾದ ಆಯ್ಕೆಗಳಿಲ್ಲ ಎನ್ನುವುದನ್ನು ಸ್ಪಷ್ಪಪಡಿಸುವುದರ ಜೊತೆಗೇ, ಸಾಂವಿಧಾನಿಕ ಔಪಚಾರಿಕತೆಯ ಬಗ್ಗೆಯೇ ತಿಳಿಸಿದ್ದಾರೆ.
ಹಣಕಾಸು ಮಸೂದೆಗೆ ಒಪ್ಪಿಗೆ ನೀಡದೆ ಇರುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂಬ ಪ್ರಶ್ನೆಯೇ ಇಲ್ಲ ಇದನ್ನು ಸಂವಿಧಾನ ಸ್ಪಷ್ಟಪಡಿಸಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಸುಬ್ರಮಣ್ಯಂ ಅವರು ಕೂಡ ವೇಣುಗೋಪಾಲ್ ಅವರ ವಾದಕ್ಕೆ ದನಿಗೂಡಿಸಿದ್ದಾರೆ. ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆ ಮೇಲೆ ರಾಜ್ಯಪಾಲರಿಗೆ ವೀಟೋ ಅಧಿಕಾರ ಇಲ್ಲ ಎಂದಿದ್ದಾರೆ.
ರಾಜ್ಯಪಾಲರಿಗೆ ತಕ್ಕುದಲ್ಲದ ವಿಟೋ ಅಧಿಕಾರ ನೀಡುವಂತೆ ಮಾಡುವ ಯಾವುದೇ ವ್ಯಾಖ್ಯಾನ ಚುನಾಯಿತ ರಾಜ್ಯ ಶಾಸಕಾಂಗಗಳ ಅಸ್ತಿತ್ವಕ್ಕೆ ವಿರುದ್ಧ ಎಂದು ಹೇಳಿದ್ದಾರೆ.
ರಾಜ್ಯಪಾಲರು ಮಸೂದೆಯನ್ನು ಸಚಿವ ಸಂಪುಟದ ಸಲಹೆಯ ಮೇರೆಗೆ ಶಾಸನಸಭೆಗೆ ಹಿಂದಿರುಗಿಸಲು ಮಾತ್ರ ಅಧಿಕಾರ ಹೊಂದಿದ್ದು, ಮರುಪಾಸಾದ ನಂತರ ಅನಿವಾರ್ಯವಾಗಿ ಅನುಮೋದಿಸಬೇಕು ಎಂದು ಸುಬ್ರಮಣಿಯಂ ವಾದಿಸಿದ್ದಾರೆ.
ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರವಿಂದ್ ದಾತಾರ್ ಕೂಡ ರಾಜ್ಯಪಾಲರಿಗೆ 200ನೇ ವಿಧಿಯ ಅಡಿಯಲ್ಲಿ ಮಸೂದೆ ತಡೆಯುವ ಯಾವುದೇ ವಿವೇಚನಾಧಿಕಾರ ಇಲ್ಲ ಎಂದಿದ್ದಾರೆ.
ಹೊಸ ಉಪರಾಷ್ಟ್ರಪತಿ ಆಯ್ಕೆ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮಾತುಗಳನ್ನು ನೆನಪಿಸಿದ ಕಾಂಗ್ರೆಸ್


