ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅವ್ಯವಹಾರ, ಭ್ರಷ್ಟಾಚಾರ, ಹಣ ದುರುಪಯೋಗ ಹಾಗೂ ಇತರ ಚಟುವಟಿಕೆಗಳ ವಿಚಾರಣೆ ನಡೆಸಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಸಹಕಾರ ಇಲಾಖೆಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ವಾರ್ಷಿಕ ರೂ 20 ಕೋಟಿಗೂ ಅಧಿಕ ವಹಿವಾಟು ನಡೆಸುವ, ರಾಜ್ಯದ 5 ಲಕ್ಷಕ್ಕೂ ಹೆಚ್ಚು ಎಲ್ಲಾ ವೃಂದದ ರಾಜ್ಯ ಸರಕಾರಿ ನೌಕರರು ಸದಸ್ಯರಾಗಿರುವ ಮತ್ತು ಕರ್ನಾಟಕ ಸರಕಾರದಿಂದ ಪ್ರತಿ ವರ್ಷ ಕೋಟ್ಯಾಂತರ ರೂ ಸಹಾಯಾನುದಾನ ಪಡೆಯುತ್ತಿರುವ ಕರ್ನಾಟಕ ಸಂಘಗಳ ನೊಂದಣಿ ಅದಿನಿಯಮ 1960 ರಡಿ ನೊಂದಾಯಿತ ಹಾಗು ಸರಕಾರದಿಂದ ಮಾನ್ಯತೆ ಪಡೆದ ಸಂಘ ಆಗಿರುವ, ‘ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು’ ಸಂಘವು, ಆದಾಯ ತೆರಿಗೆ ಕಾಯ್ದೆ 1961, ಕರ್ನಾಟಕ ಮುನಿಸಿಪಲ್ ಕಾಯ್ದೆ 1964, ಭಾರತೀಯ ದಂಡ ಸಂಹಿತೆ 1860, ಕರ್ನಾಟಕ ಸಂಘಗಳ ನೊಂದಣಿ ಆದಿನಿಯಮ 1960, ಕರ್ನಾಟಕ ನಾಗರೀಕ ಸೇವಾ ನಿಯಮಗಳು, ಸಂಘದ ಬೈಲಾ ನಿಯಮ ಉಲ್ಲಂಘಿಸಿ ತೆರಿಗೆಗಳ್ಳತನ ದಂಥಹ ಗಂಭೀರ ಸ್ವರೂಪದ ಅರ್ಥಿಕ ಅಪರಾಧಗಳು, ಭ್ರಷ್ಟಾಚಾರ, ಹಣ ದುರುಪಯೋಗ, ವಂಚನೆ, ಅವ್ಯವಸ್ಥಿತ ವ್ಯವಸ್ಥಾಪನೆ & ಕಾರ್ಯ ನಿರ್ವಹಣೆಯಂಥಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತವಾಗಿದೆ ಎಂದು ಐವರು ಸರ್ಕಾರಿ ನೌಕರರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ತಿಂಗಳ ಆರಂಭದಲ್ಲಿ ದೂರು ನೀಡಿದ್ದರು.
ಈ ಹಿಂದೆಯೇ ಸಂಘದ ಸದಸ್ಯರು, ಪದಾಧಿಕಾರಿಗಳು ಸೂಕ್ತ ದಾಖಲೆಗಳೊಂದಿಗೆ ಸಂಘಗಳ ನೊಂದಣಾಧಿಕಾರಿಗಳು, ನಾಲ್ಕನೆ ವಲಯ, ಬೆಂಗಳೂರು ನಗರ ಜಿಲ್ಲೆ, ಮಲ್ಲೇಶ್ವರಂ, ಬೆಂಗಳೂರು ಇವರಿಗೆ ದಿನಾಂಕ 24.10.2020, 30.12.2020, 24/02/2022 ಮತ್ತು ವಿವಿದ ದಿನಾಂಕಗಳಲ್ಲಿ ಈ ಬಗ್ಗೆ ದೂರು ಸಲ್ಲಿಸಿ ಶಾಸನಾತ್ಮಕ ವಿಚಾರಣೆ ಜರುಗಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿದ್ದರೂ ಯಾವುದೇ ಕ್ರಮ ಆಗಿರುವುದಿಲ್ಲ. ಸರಕಾರದ ವಿವಿಧ ಪ್ರಾಧಿಕಾರಿಗಳಿಗೆ ಸಲ್ಲಿಸಿದ ದೂರಿಗೂ ಕ್ರಮ ಆಗಿರುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಸಂಘದಲ್ಲಿನ ಕಾನೂನು ಬಾಹಿರ ಚಟುವಟಿಕೆಗಳು, ಅರ್ಥಿಕ ಅಪರಾಧಗಳು, ಅಪ್ರಜಾಸತ್ತಾತ್ಮಕ, ನಿರಂಕುಶಾಡಳಿತ ಮತ್ತು ಅವ್ಯವಸ್ಥಿತ ಕಾರ್ಯ ನಿರ್ವಹಣೆ ಮುಂದುವರೆದಿದೆ. ಅರ್ಥಿಕ ಅಪರಾಧ, ಭಷ್ಟಾಚಾರ, ಹಣ ದುರುಪಯೋಗ, ವಂಚನೆ ಮೂಲಕ ಸರಕಾರದ ಬೊಕ್ಕಸಕ್ಕೆ ಮತ್ತು ಸಂಘಕ್ಕೆ ಹಾನಿ ಉಂಟು ಮಾಡಿದ್ದಲ್ಲದೇ, ಖೊಟ್ಟಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ನೀಡಿದ ಸುಳ್ಳು ಮಾಹಿತಿ ಆಧರಿಸಿ ಹೊರಡಿಸಲ್ಪಟ್ಟ ಸರಕಾರಿ ಆದೇಶದಿಂದ ರಾಜ್ಯದ 3 ಲಕ್ಷಕ್ಕೂ ಹೆಚ್ಚಿನ ಸಂಘದ ಸದಸ್ಯರಿಗೆ ಪ್ರತಿ ವರ್ಷ 3 ಕೋಟಿಗೂ ಅಧಿಕ ಅರ್ಥಿಕ ನಷ್ಟ ಉಂಟು ಮಾಡಿರುವ ರಾಜ್ಯಾಧ್ಯಕ್ಷರ ವಿರುದ್ಧ ಸೂಕ್ತ ಕಾನೂನುಗಳಡಿ ಕ್ರಮ ಕೈಗೊಂಡು ಸದಸ್ಯರ ಸಾಮಾನ್ಯ ಹಿತಾಸಕ್ತಿ ಕಾಪಾಡಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಅದರೊಟ್ಟಿಗೆ ಮೇಲ್ನೋಟಕ್ಕೆ ಸಾಬೀತಾಗುವಂಥಹ 5 ಪ್ರಮುಖ ಸಾಕ್ಷ್ಯ ಪುರಾವೆಗಳನ್ನು ದೂರಿನೊಂದಿಗೆ ಲಗತ್ತಿಸಲಾಗಿದೆ.
ಸಂಘದ ಅಧ್ಯಕ್ಷರು ಸಂಘದ ಸದಸ್ಯರಲ್ಲದವರಿಂದ ರೂ 83 ಲಕ್ಷಕ್ಕೂ ಅಧಿಕ ಹಣವನ್ನು ಜಾಹೀರಾತು ರೂಪದಲ್ಲಿ ಸಂಗ್ರಹಿಸಿದ್ದಾರೆ. ಆದರೆ ಆ ಹಣಕ್ಕೆ ಆದಾಯ ತೆರಿಗೆ ಪಾವತಿಸಿಲ್ಲ. ಸರ್ಕಾರದಿಂದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 2 ಕೋಟಿ ರೂ ಅನುದಾನ ಪಡೆಯಲಾಗಿದೆ ಮತ್ತು ಜಾಹೀರಾತಿನಿಂದ 1 ಕೋಟಿ ರೂ ಸಂಗ್ರಹಿಸಲಾಗಿದೆ. ಆದರೆ ಸಂಘದ ಖಾತೆಗೆ 55,95,000 ರೂ ಗಳನ್ನು ಮಾತ್ರ ಹಾಕಿದ್ದು ಉಳಿದ ಹಣವನ್ನು ಹಾಕಿಲ್ಲ. ಅಲ್ಲದೇ ಸಂಘದ ಯಾವುದೇ ಸಭೆಗಳಲ್ಲಿ ನಿರ್ಣಯ ಮಾಡದೇ 35.02 ಲಕ್ಷ ರೂ ಹಣ ವ್ಯಯಿಸಿ ಕಿಯಾ ಕಾರ್ನಿವಾಲ್ ಎಂಬ ಐಷರಾಮಿ ಕಾರು ಖರೀದಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ ಸದಸ್ಯರ ಸದಸ್ಯತ್ವ ಶುಲ್ಕವನ್ನು 100 ರೂ ನಿಂದ 200 ರೂಗೆ ಏರಿಸುವಂತೆ ಆದೇಶ ಹೊರಡಿಸಲಾಗಿದೆ. ಆ ಮೂಲಕ ಸರ್ವಸದಸ್ಯರ ಮಹಾಸಭೆ ನಡೆಸದೇ ಸದಸ್ಯತ್ವ ಶುಲ್ಕ ಹೆಚ್ಚಿಸುವ ಮೂಲಕ ಸಂಘದ ಬೈಲಾವನ್ನು ಉಲ್ಲಂಘಿಸಲಾಗಿದೆ. ಸಂಘದ ಅಧ್ಯಕ್ಷರಿಗೆ ಶಿವಮೊಗ್ಗದಲ್ಲಿ ವಾಸಕ್ಕೆ ಮನೆ ಪಡೆದಿದ್ದರೂ ಸಹ ಬೆಂಗಳೂರಿನಲ್ಲಿ ಸರ್ಕಾರಿ ವಸತಿಗೃಹದಲ್ಲಿನ ಎರಡು ಮನೆಗಳನ್ನು ಒಂದೆಂದು ತೋರಿಸಿ ಬಾಡಿಗೆಗೆ ಪಡೆಯಲಾಗಿದೆ. ಇದಕ್ಕೆ ಸಂಘದಿಂದಲೇ ಬಾಡಿಗೆ ಕಟ್ಟಲಾಗುತ್ತಿದೆ. ಈ ಮೂಲಕ ಕಾನೂನು ಉಲ್ಲಂಘಿಸಲಾಗಿದೆ. ಅಲ್ಲದೇ ಕೋವಿಡ್ ಸಾಂಕ್ರಾಮಿಕ ಇದ್ದಾಗಲೂ ಕಾನೂನುಬಾಹಿರವಾಗಿ 300ಕ್ಕೂ ಅಧಿಕ ಸಂಘದ ಪರಿಷತ್ ಸದಸ್ಯರು ಸಭೆ ಸೇರಿ ಬೈಲಾಗಿ ತಿದ್ದುಪಡಿ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್ ಷಡಾಕ್ಷರಿಯವರ ವಿರುದ್ಧ ಈ ರೀತಿಯ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು ಮತ್ತು ಸಂಘಗಳ ಜಿಲ್ಲಾ ನೊಂದಣಾಧಿಕಾರಿಗಳು ತನಿಖೆ ನಡೆಸಬೇಕೆಂದು ಜೂನ್ 20 ರಂದು ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ರಾಘವನ್ ಆರ್.ವಿ ಆದೇಶಿಸಿದ್ದಾರೆ.
ಕಳೆದ ತಿಂಗಳು ಆರ್ಟಿಐ ಕಾರ್ಯಕರ್ತನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಷಡಾಕ್ಷರಿಯವರ ವಿರುದ್ಧ ಸಾಗದಲ್ಲಿ ಎಫ್ಐಆರ್ ದಾಖಲಾಗಿದೆ. ಆ ಬೆನ್ನಲ್ಲೇ ಅವರ ಮೇಲೆ ಭ್ರಷ್ಟಾಚಾರದ ತನಿಖೆಗೆ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಮರುಕಳಿಸಿದ ಸರ್ವಾಧಿಪತ್ಯದ ಅಪಾಯ


