Homeಚಳವಳಿದೀನ ದಲಿತೋದ್ಧಾರಕ ಮಹಾತ್ಮ ಕುದ್ಮುಲ್ ರಂಗರಾವ್

ದೀನ ದಲಿತೋದ್ಧಾರಕ ಮಹಾತ್ಮ ಕುದ್ಮುಲ್ ರಂಗರಾವ್

- Advertisement -
- Advertisement -

ಕುದ್ಮುಲ್ ರಂಗರಾವ್ ಭಾರತ ಕಂಡ ಮಹಾನ್ ಮಾನವತಾವಾದಿ, ಶಿಕ್ಷಣ ಪ್ರೇಮಿ, ಸಮಾಜ ಸುಧಾರಕ, ಮಹಿಳಾ ಸಬಲೀಕರಣ ರೂವಾರಿ, ದಲಿತೋದ್ಧಾರಕ, ಸ್ವಾತಂತ್ರ್ಯ ಹೋರಾಟಗಾರ ಮೊದಲಾದ ಬಹುಮುಖ ವ್ಯಕ್ತಿತ್ವವುಳ್ಳವರಾಗಿದ್ದರು. ಆಕಸ್ಮಿಕವಾಗಿ ಇವರು ಬ್ರಾಹ್ಮಣರಾಗಿದ್ದರೂ ತಮ್ಮ ಬಹುಮುಖಿ ಕೊಡುಗೆಗಳಿಂದ ಎಲ್ಲರಿಂದಲೂ ಮಹಾತ್ಮರೆಂಬ ಗೌರವಕ್ಕೆ ಭಾಜನರಾಗಿದ್ದಾರೆ. ಇವರು ಕೇರಳದ ಕಾಸರಗೋಡಿನ ಕುದ್ಮುಲ್ ಎಂಬ ಸಣ್ಣ ಹಳ್ಳಿಯಲ್ಲಿ ಜೂನ್ 29, 1859ರಂದು ದೇವಪ್ಪಯ್ಯ ಮತ್ತು ಗೌರಿ ದಂಪತಿಗಳ ಪುತ್ರರಾಗಿ ಜನಿಸಿದರು. ಇವರು ಬಾಲ್ಯ ಶಿಕ್ಷಣ ಹಾಗೂ ಮೆಟ್ರಿಕ್ಯುಲೇಷನ್ ಶಿಕ್ಷಣವನ್ನು ಕಾಸರಗೋಡಿನಲ್ಲಿ ಮುಗಿಸಿ ಜೀವನ ನಿರ್ವಹಣೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಮಂಗಳೂರನ್ನು ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡರು. ಶ್ರೀ ಸಾಮಾನ್ಯ ಕುಟುಂಬಕ್ಕೆ ಸೇರಿದ ಇವರು ಆರ್ಥಿಕವಾಗಿ ಸ್ಥಿತಿವಂತರಲ್ಲದಿದ್ದರೂ ಅಪಾರ ಹೃದಯ ಶ್ರೀಮಂತಿಕೆ ಹೊಂದಿದ್ದರು.

ಕುದ್ಮುಲ್ ರಂಗರಾವ್ ಅಂಚೆ ತೆರಪಿನ ಶಿಕ್ಷಣದ ಮೂಲಕ ಪ್ಲೀಡರ್‌ಷಿಪ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮಂಗಳೂರಿನ ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ವಕಾಲತ್ತು ವಹಿಸುವ ಅರ್ಹತೆ ಗಳಿಸಿದರು. ಇವರು ಬಾಲ್ಯದಿಂದಲೂ ಬಡವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಧರ್ಮವನ್ನು ಹೊಂದಿದ್ದರು. ಭೂಮಾಲೀಕರು, ಉದ್ದಿಮೆದಾರರು ಮೊದಲಾದ ಬಲಾಢ್ಯರಿಂದ ಶೋಷಣೆಗೆ ಗುರಿಯಾದ ಅಸಹಾಯಕರಿಗೆ ಇವರು ನ್ಯಾಯಾಲಯದಲ್ಲಿ ಉಚಿತವಾಗಿ ಸಹಾಯ ಮಾಡುವ ಪ್ರವೃತ್ತಿ ಹೊಂದಿದ್ದರು. ಜೀವನ ನಿರ್ವಹಣೆಗಾಗಿ ಇವರು ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ನಿರ್ವಹಿಸಿದ್ದರೂ ಆ ಕಾಲದಲ್ಲಿ ಬ್ರಿಟಿಷರು ಭಾರತೀಯರ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳನ್ನು ಉಗ್ರವಾಗಿ ಪ್ರತಿಭಟಿಸಿ ಕರಾವಳಿ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಸಮಾನ ಮನಸ್ಕರೊಡಗೂಡಿ ಭೂಮಿಕೆ ಸಿದ್ದಪಡಿಸಿದರು. ಇವರನ್ನು ಅಂದು ಬಡವರ ಲಾಯರ್ ಎಂದೇ ಜನರು ಪ್ರೀತಿಯಿಂದ ಸಂಬೋಧಿಸುತ್ತಿದ್ದರು.

ಕುದ್ಮುಲ್ ರಂಗರಾವ್ ವಯಸ್ಸಿನಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಯವರಿಗಿಂತ ಹಿರಿಯರಾಗಿದ್ದರು. ದೀನ ದುರ್ಬಲರ ಅಭಿವೃದ್ಧಿ ಹರಿಕಾರರಾದ ಇವರ ಬಗ್ಗೆ ಗಾಂಧಿಯವರಿಗೆ ಅಪಾರ ಪ್ರೀತಿ ಮತ್ತು ಗೌರವ ಇತ್ತು. ಇವರ ಮಾನವೀಯತೆ ಮತ್ತು ರಾಷ್ಟ್ರಪ್ರೇಮದಿಂದ ಪ್ರಭಾವಿತರಾಗಿ ಗಾಂಧಿ ಇವರನ್ನು ಪ್ರೀತಿಪೂರ್ವಕವಾಗಿ ಗುರುವರ್ಯ ಎಂದೇ ಕರೆಯುತ್ತಿದ್ದರು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಯುವಜನರು ಮತ್ತು ಸಮಾನ ಮನಸ್ಕರನ್ನು ಸಂಘಟಿಸಲು ಗಾಂಧೀಜಿ ಕುದ್ಮುಲ್
ರಂಗರಾವ್‌ರವರ ಸಹಕಾರ ಪಡೆದಿದ್ದರು. ಇವರು ಸಮಾಜ ಸುಧಾರಣೆಗೆ ವಿಶೇಷ ಮಹತ್ವ ನೀಡಿ ಮಂಗಳೂರಿನಲ್ಲಿ ರಾಷ್ಟ್ರದ ಅಪ್ರತಿಮ ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯರು ಆರಂಭಿಸಿದ ಬ್ರಹ್ಮ ಸಮಾಜ ಶಾಖೆಯನ್ನು 1870ರಲ್ಲಿ ಆರಂಭಿಸಿದರು.

ಹಿಂದೂ ವರ್ಣವ್ಯವಸ್ಥೆ, ಅಸಮಾನತೆ ಮತ್ತು ಅಸ್ಪೃಶ್ಯತೆಗಳಿಂದ ಜಿಗುಪ್ಸೆಗೊಂಡ ಕುದ್ಮುಲ್ ರಂಗರಾವ್ ಕರಾವಳಿ ಕರ್ನಾಟಕದಲ್ಲಿ ಸಮಾಜ ಸುಧಾರಣೆಗೆ ಹಲವಾರು ವೈರುಧ್ಯಗಳು ಮತ್ತು ಅಪಾಯಗಳ ನಡುವೆಯೂ ಮುಂದಾದರು. ದಲಿತರು, ಹಿಂದುಳಿದವರು ಮತ್ತು ಶೋಷಿತ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗಿರುವುದರಿಂದ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿಲ್ಲವೆಂದು ಕುದ್ಮುಲ್ ರಂಗರಾವ್ ಬಲವಾಗಿ ಪ್ರತಿಪಾದಿಸಿದರು.

ಪ್ರಗತಿಗೆ ವಿದ್ಯೆಯೇ ಮೂಲ ಎಂದು ನಂಬಿದ್ದ ಇವರು ಶೋಷಿತ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಕಂಕನಾಡಿ, ಬೋಳೂರು, ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್ ಮೊದಲಾದೆಡೆ ಉಚಿತ ಶಾಲೆಗಳನ್ನು ತೆರೆದರು. ಮಕ್ಕಳು ಶಾಲೆಗೆ ಬರುವುದನ್ನು ಪ್ರೋತ್ಸಾಹಿಸಲು ಅವರಿಗೆ ಉಚಿತ ಊಟದ ವ್ಯವಸ್ಥೆಯನ್ನೂ ಮಾಡಿದರು. ಮಕ್ಕಳ ಪೋಷಕರಿಗೆ ಅಂದಿನ ಕಷ್ಟಕಾಲದಲ್ಲಿ ದಿನಕ್ಕೆ ಎರಡು ಪೈಸೆ ಪ್ರೋತ್ಸಾಹ ಧನ ನೀಡುತ್ತಿದ್ದರು. ಇವರ ಜ್ಞಾನದಾಸೋಹ ಕಾಯಕ ಮೇಲ್ವರ್ಗದವರ ಕೆಂಗಣ್ಣಿಗೆ ಗುರಿಯಾಯಿತು. ಪ್ರಾಣಭಯವನ್ನೂ ಲೆಕ್ಕಿಸದೇ ಇವರು ದೀನ ದುರ್ಬಲರ ಶಿಕ್ಷಣಕ್ಕೆ ಭದ್ರಬುನಾದಿ ಹಾಕಿದರು. ಅಂದು ವೈದಿಕಶಾಹಿ ಮತ್ತು ಬಂಡವಾಳಶಾಹಿಗಳ ದಬ್ಬಾಳಿಕೆಗೆ ಶೂದ್ರ ಸಮುದಾಯಗಳು ಕರಾವಳಿ ಕರ್ನಾಟಕ ಭಾಗದಲ್ಲಿ ಗುರಿಯಾಗಿದ್ದವು.

ದುರ್ಬಲ ವರ್ಗಗಳ ಅಸಹಾಯಕ ಮಕ್ಕಳು ಮತ್ತು ಯುವಕರನ್ನು ಭೂಮಾಲೀಕರು ಮತ್ತು ಶ್ರೀಮಂತರು ಜೀತದಾಳುಗಳನ್ನಾಗಿ ಇಟ್ಟುಕೊಂಡು ಶೋಷಣೆಗೆ ಗುರಿಪಡಿಸುತ್ತಿದ್ದರು. ಕುದ್ಮುಲ್ ರಂಗರಾವ್ ಇಂತಹ ಅಮಾನವೀಯ ಜೀತಪದ್ಧತಿಯ ವಿರುದ್ಧ ಸಾಮಾಜಿಕ ಹೋರಾಟವನ್ನು ರೂಪಿಸಿ ಬಹಳಷ್ಟು ಜೀತದಾಳುಗಳನ್ನು ಸ್ವತಂತ್ರರನ್ನಾಗಿಸಿದರು. ಯಾರು ಎಷ್ಟೇ ಹೆದರಿಸಿದರೂ ಇವರು ತಮ್ಮ ಸಾಮಾಜಿಕ ನ್ಯಾಯಪರ ಹೋರಾಟಗಳನ್ನು ಧೀಮಂತಿಕೆಯಿಂದ ಮುಂದುವರೆಸಿದರು. ಆ ಕಾಲದಲ್ಲಿ ವಿಧವೆಯರ ಪುನರ್ ವಿವಾಹ ಮತ್ತು ಅಂತರ್ಜಾತಿಯ ವಿವಾಹಗಳಿಗೆ ರಾಜಾರಾಮ್ ಮೋಹನರಾಯರು ಉತ್ತರ ಭಾರತದಲ್ಲಿ ದಿಟ್ಟ ಹೋರಾಟ ನಡೆಸಿದಂತೆ ದಕ್ಷಿಣದಲ್ಲಿ ಕುದ್ಮುಲ್ ರಂಗರಾವ್‌ರು ಪ್ರಬಲ ಹೋರಾಟ ನಡೆಸಿದರು. ತಮ್ಮ ಮಗಳು ರಾಧಾಭಾಯಿ ಚಿಕ್ಕ ವಯಸ್ಸಿನಲ್ಲಿ ವಿಧವೆಯಾದಾಗ ಆಕೆಯನ್ನು ಮರುಮದುವೆಯಾಗಲು ಮುಂದೆ ಬಂದ ಪ್ರಗತಿಶೀಲ ಯುವಕ ಪಿ.ಸುಬ್ಬರಾಯನ್ ಎಂಬುವರೊಂದಿಗೆ ವಿವಾಹ ಮಾಡಿ ಸಮಾಜಕ್ಕೆ ಮಾದರಿಯೆನಿಸಿದರು.

ಕುದ್ಮುಲ್ ರಂಗರಾಯರ ಹೋರಾಟಗಳು ಮತ್ತು ಕೊಡುಗೆಗಳಿಂದ ಮಹಾತ್ಮ ಗಾಂಧಿ ಪ್ರಭಾವಿತರಾಗಿ ದೀನ ದುರ್ಬಲರನ್ನು ಮೇಲೆತ್ತುವ ನಿಟ್ಟಿನಲ್ಲಿ ಅವರು ತಮಗೆ ಗುರು ಎಂದು ಶ್ಲಾಘಿಸಿದರು. ತಮ್ಮ ಪತ್ರಿಕೆಗಳಲ್ಲಿ ಇವರ ಮೇರು ವ್ಯಕ್ತಿತ್ವವನ್ನು ಗಾಂಧೀಜಿ ಮುಕ್ತ ಕಂಠದಿಂದ ಹೊಗಳಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಕುದ್ಮುಲ್ ರಂಗರಾಯರ ಅಸ್ಪೃಶ್ಯತೆಯ ನಿವಾರಣೆ ಮತ್ತು ಸಾಮಾಜಿಕ ನ್ಯಾಯಪರ ಹೋರಾಟಗಳಿಂದ ಪ್ರಭಾವಿತರಾಗಿದ್ದರು. ಇವರನ್ನು ಕರ್ನಾಟಕದ ಜ್ಯೋತಿ ಬಾಫುಲೆ ಎಂದು ಬಣ್ಣಿಸಲು ಹೆಮ್ಮೆಯೆನಿಸುತ್ತದೆ.

ಕುದ್ಮುಲ್ ರಂಗರಾಯರಿಗೆ ಶಿಕ್ಷಣ, ಸಮಾಜ ಸುಧಾರಣೆ, ಸ್ವಾತಂತ್ರ್ಯ ಹೋರಾಟ ಮೊದಲಾದವುಗಳ ಜೊತೆಗೆ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಯುವಜನರ ಉದ್ಯಮಶೀಲತೆ ಅಭಿವೃದ್ಧಿಗಳ ಬಗ್ಗೆ ವಿಶೇಷ ಕಾಳಜಿ ಇತ್ತು. ಹಿಂದುಳಿದವರಿಗೆ ವೃತ್ತಿಪರ ಶಿಕ್ಷಣ ನೀಡುವ ಸಲುವಾಗಿ ಮಂಗಳೂರಿನ ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆಯನ್ನು ಪ್ರಾರಂಭಿಸಿದರು. ನಿರುದ್ಯೋಗಿ ಯುವಕರಿಗೆ ಬಡಗಿ ಕೆಲಸ, ನೇಯ್ಗೆ, ತೋಟಗಾರಿಕೆ, ಕಸೂತಿ, ಜೇನು ಸಾಗಾಣಿಕೆ, ರೇಷ್ಮೆ ಹುಳು ಸಾಕಾಣಿಕೆ ಮೊದಲಾದ ವೃತ್ತಿಗಳಲ್ಲಿ ತರಬೇತಿ ಕೊಡಿಸಿ ಅವರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು. ಯುವಜನರ ಸಬಲೀಕರಣಕ್ಕೆ ಕುದ್ಮುಲ್ ರಂಗರಾವ್ ನೀಡಿದ ಕೊಡುಗೆ ಅಮೂಲ್ಯವಾದುದು.

ಕುದ್ಮುಲ್ ರಂಗರಾವ್ ಕರಾವಳಿ ಕರ್ನಾಟಕದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಸಹಕಾರ ಚಳುವಳಿಯನ್ನು ಮುನ್ನಡೆಸಿದರು. ಹಿಂದುಳಿದವರ ಆರ್ಥಿಕ ಅಭಿವೃದ್ಧಿಗಾಗಿ ಮಂಗಳೂರಿನ ಕೋರ್ಟ್ ಹಿಲ್ಸ್ ಪ್ರದೇಶದಲ್ಲಿ ಆದಿ ದ್ರಾವಿಡ ಸಹಕಾರ ಸಂಘ ಸ್ಥಾಪಿಸಿದರು. ಅಂದು ಬ್ಯಾಂಕುಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ದಲಿತರಿಗೆ ನಿಲುಕುತ್ತಿಲ್ಲವಾದ್ದರಿಂದ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಸಹಕಾರ ಸಂಘವನ್ನು ಕುದ್ಮುಲ್ ರಂಗರಾವ್ ಸ್ಥಾಪಿಸಿ ನಾಡು ಕಂಡ ಶ್ರೇಷ್ಟ ಸಹಕಾರ ರತ್ನವಾಗಿ ಇತಿಹಾಸದಲ್ಲಿ ಉಳಿದಿದ್ದಾರೆ. ದುರ್ಬಲ ವರ್ಗಗಳ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗಿ ಕೊಳೆಗೇರಿಗಳಲ್ಲಿ ಪ್ರಾಣಿಗಿಂತಲೂ ಕೀಳಾಗಿ ಬದುಕುವ ಹೀನಾಯ ಪ್ರವೃತ್ತಿಯನ್ನು ತಪ್ಪಿಸುವ ಸಲುವಾಗಿ ಇವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಪ್ರಕ್ರಿಯೆಗಳನ್ನು ಬಲಪಡಿಸಿ ದುರ್ಬಲರಿಗೆ ಜೀವನೋಪಾಯ ಮಾರ್ಗಗಳನ್ನು ಕಲ್ಪಿಸಬೇಕೆಂದು ಬಹಳ ಹಿಂದೆಯೇ ಕರೆ ನೀಡಿದ್ದರು. ಅಸ್ಪೃಶ್ಯ ಜನಾಂಗಗಳ ಉದ್ಧಾರಕ್ಕೆ ಕುದ್ಮುಲ್ ರಂಗರಾವ್ ಬದ್ಧರಾಗಿದ್ದರು. ದಲಿತರಲ್ಲೇ ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಜನರಿಗೆ ಮಂಗಳೂರಿನ ಕೋರ್ಟುಗುಡ್ಡೆ ಬಳಿ ಸಾಲು ಮನೆಗಳನ್ನು ಕಟ್ಟಿಸಿದರು. ಬಡವರಿಗೆ ಜನತಾ ಮನೆಗಳನ್ನು ಕಟ್ಟಬೇಕೆಂಬ ಪರಿಕಲ್ಪನೆಯನ್ನು ಸ್ವಾತಂತ್ರ್ಯಪೂರ್ವದಲ್ಲಿ ಇವರು ಸರ್ಕಾರಕ್ಕೆ ನೀಡಿದರು.

ಇಂದಿಗೂ ಕೂಡ ಕರಾವಳಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಅಜಲು ಪದ್ಧತಿ ವಿರುದ್ಧ ಇವರು ಬಹಳ ಹಿಂದೆಯೇ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಶ್ರೀಮಂತ ರೋಗಿಗಳ ಉಗುರು ಮತ್ತು ಕೂದಲನ್ನು ಅನ್ನಕ್ಕೆ ಕಲಸಿ ಕೊರಗ ಸಮುದಾಯದ ಜನರಿಗೆ ತಿನ್ನಿಸಿದರೆ ಕಾಯಿಲೆ ವಾಸಿಯಾಗುವುದೆಂಬ ಅತ್ಯಂತ ಕೆಳದರ್ಜೆಯ ಮೌಢ್ಯವೇ ಅಜಲು ಪದ್ಧತಿ. ಇಂತಹ ಮಾನವ ಹಕ್ಕುಗಳ ಉಲ್ಲಂಘನೆ ಪ್ರವೃತ್ತಿ ವಿರುದ್ಧ ಇವರು ದಿಟ್ಟ ಹೋರಾಟ ನಡೆಸಿದರು.

ಇವರು ಮಂಗಳೂರು ನಗರದಲ್ಲಿ ಸ್ಥಾಪಿಸಿರುವ ದಲಿತ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯವನ್ನು ಇಂದು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿದೆ. ದಲಿತ ಅಧಿಕಾರಿಯೊಬ್ಬರು ಕಾರಿನಲ್ಲಿ ಬರುವಾಗಿ ಮೇಲೆದ್ದ ಧೂಳು ನನ್ನ ತಲೆಯ ಮೇಲೆ ಬಿದ್ದಾಗ ನನಗೆ ಅತೀವ ಆನಂದವುಂಟಾಗುತ್ತದೆ ಎಂದು ಹೇಳಿದ ಕುದ್ಮುಲ್ ರಂಗರಾವ್ ಅಂತಹ ಮಹಾತ್ಮರು ಇಂದು ಸಿಗುವುದುಂಟೆ? ಗಾಂಧಿ ಮತ್ತು ಕುದ್ಮುಲ್ ರಂಗರಾಯರ ಸಾಮಾಜಿಕ ಮತ್ತು ಆರ್ಥಿಕ ವಿಚಾರಧಾರೆಗಳು ಒಂದೇ ಆಗಿದ್ದು ಮಾನವೀಯ ನೆಲೆಗಟ್ಟನ್ನು ಹೊಂದಿವೆ. ಇಂದು ಹಿಂದುತ್ವದ ಪ್ರಯೋಗಶಾಲೆಯಾಗಿ ಪರಿವರ್ತನೆಗೊಳ್ಳುತ್ತಿರುವ ಭಾರತವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಇಂತಹ ಮಹಾತ್ಮರು ಮತ್ತೊಮ್ಮೆ ಹುಟ್ಟಿ ಬರಬೇಕು. ಭಾರತಕ್ಕೆ ತಾಲಿಬಾನಿಗಳು ಬೇಡ, ಕುದ್ಮುಲ್ ರಂಗರಾವ್, ಗಾಂಧಿ, ಅಂಬೇಡ್ಕರ್ ಮೊದಲಾದ ಮಹಾತ್ಮರು ಇಂದು ಬೇಕೇ ಬೇಕು.

***

ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

(ಲೇಖಕರಾದ ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು ಅವರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರು ಹಾಗೂ ಅಪ್ರತಿಮ ವಿಚಾರವಾದಿ. ನೇರ, ದಿಟ್ಟ ನುಡಿಗೆ ಹೆಸರಾದವರು.)

ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಪರಿಶಿಷ್ಟ ಜಾತಿಯವನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ; ಯುವಕ ಆತ್ಮಹತ್ಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕುದ್ಮುಲ್ ರಂಗರಾವ್ ಕುರಿತ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅವರ ಲೇಖನ ಪ್ರಸ್ತುತ ಸಮಾಜಕ್ಕೆ ದಿಕ್ಸೂಚಿಯಂತಿದೆ.ಲೇಖಕರಿಗೆ ಅಭಿನಂದನೆಗಳು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...