ಪುರಸಭೆ ಅಧಿಕಾರಿಗಳು ಕಿರುಕುಳ ನೀಡಿತ್ತಿದ್ದಾರೆ ಎಂದು ಆರೋಪಿಸಿರುವ ಪೌರ ಕಾರ್ಮಿಕರೊಬ್ಬರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ. ಮೃತರಿಗೆ ಮೂರು ಜನ ಮಕ್ಕಳಿದ್ದು, ಹೆಂಡತಿ ಕಳೆದ 5 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.
ಪುರಸಭೆ ಪೌರಕಾರ್ಮಿಕರಾದ ನಾರಾಯಣ ಎಂಬುವವರು ನೇಣಿಗೆ ಶರಣಾಗಿದ್ದಾರೆ. ಇದಕ್ಕೆ ಪುರಸಭೆ ಮುಖ್ಯಾಧಿಕಾರಿ ಮುರುಗೇಶ್ ಮತ್ತು ಜಾಸ್ಮಿನ್ ಖಾನ್ ಅವರೇ ಕಾರಣ ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ.
ಘಟನೆಯ ವಿವರ:
ಪೌರಕಾರ್ಮಿಕರು ಮ್ಯಾನ್ಹೋಲ್ಗೆ ಇಳಿಯಕೂಡದು ಎಂಬ ನಿಯಮವಿದೆ. ಆದರೆ ಅದನ್ನು ಮೀರಿದ ಅಧಿಕಾರಿಗಳು ನಾರಾಯಣ ಅವರನ್ನು ಮ್ಯಾನ್ಹೋಲ್ಗೆ ಇಳಿಸಿದ್ದರು. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ನಾರಾಯಣ ಅವರನ್ನು ಕರೆದು ಬೆದರಿಕೆ ಹಾಕಿದ್ದಾರೆ. “ತಾನು ಮ್ಯಾನ್ಹೋಲ್ಗೆ ಇಳಿಯಲು ಅಧಿಕಾರಿಗಳು ಕಾರಣವಲ್ಲ; ನಾನೇ ಸ್ವಯಿಚ್ಚೆಯಿಂದ ಇಳಿದಿದ್ದೇನೆ” ಎಂದು ಆತನಿಂದ ಹೇಳಿಕೆ ಕೊಡಿಸಿದ್ದಾರೆ.
ಈ ಘಟನೆಯ ಕುರಿತು ನಾರಾಯಣ ಅವರ ಅತ್ತೆ ಸಂಪೂರ್ಣ ವಿವರ ನೀಡಿದ್ದಾರೆ. ವೀಡಿಯೋ ನೋಡಿ.
ನಂತರ 2018 ರಲ್ಲಿ ಒಮ್ಮೆ ಆರೋಗ್ಯ ಅಧಿಕಾರಿ ಹೇಳಿದ ಕೆಲಸವನ್ನು ಮಾಡಲು ನಿರಾಕರಿಸಿದ ನಾರಾಯಣ ಅವರನ್ನು ಅಧಿಕಾರಿ ಹೊಡೆದಿದ್ದರು. ಈ ಘಟನೆಯಿಂದ ನೊಂದ ನಾರಾಯಣ ದೂರು ನೀಡುವುದಾಗಿ ತಿಳಿಸಿದ್ದಾರೆ. ಆದರೆ ಕೌನ್ಸಿಲರ್ ಸೇರಿದಂತೆ ಕೆಲವರು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ. ಜೊತೆಗೆ ಆರೋಗ್ಯ ಆಧಿಕಾರಿ ನಾರಾಯಣ ಅವರ ಬಳಿ ಕ್ಷಮೆ ಕೇಳುವಂತೆ ಆದೇಶಿಸಿದ್ದಾರೆ. ಹಾಗಾಗಿ ಅಧಿಕಾರಿ ಕ್ಷಮೆ ಕೂಡ ಕೇಳಿದ್ದರು. ಆದರೆ ಇದನ್ನೇ ಗುರಿಯಾಗಿಸಿಕೊಂಡು ಅಂದಿನಿಂದ ಆ ಅಧಿಕಾರಿ ನಾರಾಯಣ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಗೋಡ್ಸೆ ಬಗ್ಗೆ ಸುಳ್ಳು ಹೇಳಿ ತಪ್ಪುದಾರಿಗೆಳೆದಿದ್ದರು: ಕಾಂಗ್ರೆಸ್ ಸೇರಿದ ಹಿಂದೂ ಮಹಾಸಭಾ ಸದಸ್ಯ
ಫೆ.22 ರಂದು ನಾರಾಯಣ ಅವರಿಗೆ ಕೋವಾಕ್ಸಿನ್ ಲಸಿಕೆ ನೀಡಲಾಗಿತ್ತು. ನಂತರ ಸ್ವಲ್ಪ ಚಳಿ-ಜ್ವರ ಕಾಣಿಸಿಕೊಂಡಿದ್ದರಿಂದ ಅವರು ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಮರುದಿನ ಕೆಲಸಕ್ಕೆ ಹೋದಾಗ ಮುಖ್ಯ ಅಧಿಕಾರಗಳಿಂದ ಅನುಮತಿ ಪಡೆದು ಕೆಲಸಕ್ಕೆ ಬರಬೇಕು ಎಂದು ಮೇಸ್ತ್ರಿಗಳು ಹೇಳಿಕಳುಹಿಸಿದ್ದಾರೆ. ಆಗ ನಾರಾಯಣ ಆರೋಗ್ಯ ಅಧಿಕಾರಿಗಳ ಬಳಿ ಹೋದಾಗ, ಅಲ್ಲಿ ಅವರು “ನೀನು ಟ್ರ್ಯಾಕ್ಟರ್ ಕೆಲಸಕ್ಕೆ ಹೋಗು” ಎಂದು ಹೇಳಿದ್ದಾರೆ. ಇದು ತುಂಬಾ ಕಷ್ಟದ ಕೆಲಸವಾಗಿರುವುದರಿಂದ, ಜೊತೆಗೆ ತನಗೆ ಆರೋಗ್ಯ ಸರಿಯಿಲ್ಲದಿರುವುದರಿಂದ ಬೇರೆ ಕೆಲಸ ಕೊಡಿ ಎಂದು ನಾರಾಯಣ ಕೇಳಿದ್ದಾರೆ. ಈ ಹಿಂದೆಯೂ ನಾರಾಯಣ ಇದೇ ಕೆಲಸವನ್ನು ಮಾಡಿದ್ದಾರೆ. ಆದರೆ ಅಂದು ಆರೋಗ್ಯ ಸರಿಯಿಲ್ಲದಿದ್ದುದರಿಂದ ಈ ಕೆಲಸ ಮಾಡಲು ನಿರಾಕರಿಸಿದ್ದಾರೆ. ಆದರೆ ಕಿರುಕುಳ ನೀಡುತ್ತಿದ್ದ ಅಧಿಕಾರಿ ಈ ಅವಕಾಶವನ್ನು ಬಳಸಿಕೊಂಡು, “ಮಾಡಿದರೆ ಈ ಕೆಲಸ ಮಾಡು; ಇಲ್ಲದಿದ್ದರೆ ಮನೆಗೆ ಹೋಗು” ಎಂದು ನಿಂದಿಸಿ ಕಳುಹಿಸಿದ್ದಾರೆ.
ಇದರಿಂದ ಮನನೊಂದ ನಾರಾಯಣ, ತನ್ನ ಮನೆಗೆ ಬಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ನಲ್ಲಿ, “ಪುರಸಭೆಯ ಮುಖ್ಯ ಅಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳೇ ನನ್ನ ಸಾವಿಗೆ ಕಾರಣ. ಅವರು ನನಗೆ ಕಿರುಕುಳ ನೀಡಿದ್ದಾರೆ” ಎಂದು ಬರೆದಿದ್ದಾರೆ.
ಈ ವಿಷಯ ತಿಳಿದ ಅಧಿಕಾರಿಗಳು ಇತರ ಪೌರ ಕಾರ್ಮಿಕರಿಗೂ ಬೆದರಿಕೆ ಹಾಕಿದ್ದು, ಯಾರೂ ಕೂಡ ಅಲ್ಲಿಗೆ ಹೋಗಕೂಡದು ಎಂದು ಒತ್ತಾಯಿಸಿದ್ದಾರೆ. ನಂತರ ಈ ಪ್ರಕರಣವನ್ನು ಮುಚ್ಚಿಹಾಕಲು ಪುರಸಭೆಯ ಇತರ ಅಧಿಕಾರಿಗಳು ಮತ್ತು ಕೌನ್ಸಿಲರ್ಗಳು ಸೇರಿ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ವಿಷಯ ಸಮಾಜ ಕಲ್ಯಾಣ ಇಲಾಖೆಯ ಮಟ್ಟದಲ್ಲಿ ಚರ್ಚೆಗೆ ಬಂದು ಪುರಸಭೆಯ ಅಧಿಕಾರಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಈ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಕಾಂಗ್ರೆಸ್-ಡಿಎಂಕೆ ಸರ್ಕಾರ ಪತನ ಹಿನ್ನೆಲೆ – ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ


