ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ ಇಬ್ಬರು ಕ್ರೈಸ್ತ ಸನ್ಯಾಸಿನಿಗಳಿಗೆ ಕಿರುಕುಳ ನೀಡಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯ ಸೇರಿದಂತೆ ಮೂವರು ಬಲಪಂಥೀಯ ಮುಖಂಡರಿಗೆ ನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ.
ಮೂವರೂ ಆರೋಪಿಗಳು ಬುಧವಾರ ಸಂಜೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಮೂವರು ಆರೋಪಿಗಳಾದ ಅಜಯ್ ಶಂಕರ್ ತಿವಾರಿ, ಎಬಿವಿಪಿ ಸದಸ್ಯ ಅಂಚಲ್ ಅರ್ಜಾರಿಯಾ, ರಾಷ್ಟ್ರಭಕ್ತ ಸಂಘಟನ್ ಅಧ್ಯಕ್ಷ ಮತ್ತು ಹಿಂದೂ ಜಾಗರಣ್ ಮಂಚ್ನ ಕಾರ್ಯದರ್ಶಿ ಪುರ್ಗೆಶ್ ಅಮರಿಯಾ ಅವರನ್ನು ಇಬ್ಬರು ಸನ್ಯಾಸಿನಿಗಳಿಗೆ ಕಿರುಕುಳಕ್ಕೆ ಸಂಬಂಧಿಸಿದಂತೆ ಏಪ್ರಿಲ್ 2 ರಂದು ರೈಲ್ವೇ ಪೊಲೀಸರು ಬಂಧಿದ್ದರು.
ಇದನ್ನೂ ಓದಿ: ಆರ್ಎಸ್ಎಸ್ ಅನ್ನು ‘ಸಂಘ ಪರಿವಾರ’ ಎಂದು ಕರೆಯುವುದು ಸರಿಯಲ್ಲ- ರಾಹುಲ್ ಗಾಂಧಿ
ಇಬ್ಬರು ಸನ್ಯಾಸಿನಿಗಳು ಮತ್ತು ಇಬ್ಬರು ವಿಧ್ಯಾರ್ಥಿಗಳು ಮಾರ್ಚ್ 19 ರಂದು ಉತ್ಕಲ್ ಎಕ್ಸ್ಪ್ರೆಸ್ನಲ್ಲಿ ದೆಹಲಿಯಿಂದ ಒರಿಸ್ಸಾದ ರೂರ್ಕೆಲಾಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಲಪಂಥೀಯ ದುಷ್ಕರ್ಮಿಗಳು ಕಿರುಕುಳ ನೀಡಿದ್ದರು. ಜೊತೆಗೆ ಅವರನ್ನು ರೈಲಿನಿಂದ ಕೆಳಗಿಳಿಸಿದ್ದು ದೇಶದಾದ್ಯಂತ ವ್ಯಾಪಕ ಆಕ್ರೋಶ ಉಂಟು ಮಾಡಿತ್ತು.
ಕೇರಳ ಮುಖ್ಯಮಂತ್ರಿ ಗೃಹ ಸಚಿವ ಅಮಿತ್ ಷಾ ಅವರಿಗೆ ಲಿಖಿತ ದೂರು ನೀಡಿದ್ದರು. ಪರಿಣಾಮವಾಗಿ ಗೃಹ ಸಚಿವ ಅಮಿತ್ ಶಾ ಆರೋಪಿಗಳ ಮೇಲೆ ಕ್ರಮ ಜರುಗಿಸುವ ಹೇಳಿಕೆ ನೀಡಿದ್ದರು.
ಆದರೆ ಇದರ ನಂತರ ರೈಲ್ವೇ ಸಚಿವ ಪಿಯೂಷ್ ಗೋಯಲ್, “ಕ್ರೈಸ್ತ ಸನ್ಯಾಸಿನಿಯರಿಗೆ ರೈಲು ಪ್ರಯಾಣದ ಸಂದರ್ಭದಲ್ಲಿ ಹಲ್ಲೆ ನಡೆಸಿಲ್ಲ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: ‘ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯರ ಮೇಲೆ ಯಾವುದೇ ದಾಳಿ ನಡೆದಿಲ್ಲ’-ಕೇಂದ್ರ ರೈಲ್ವೇ ಸಚಿವ