ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಇತ್ತೀಚೆಗೆ ಉತ್ತರ ಪ್ರದೇಶದ ರೈಲು ಪ್ರಯಾಣದ ಸಂದರ್ಭದಲ್ಲಿ “ಹಲ್ಲೆ ನಡೆಸಿದ್ದಾರೆ” ಎಂಬ ಆರೋಪವನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೋಮವಾರ ತಳ್ಳಿಹಾಕಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ವಿಷಯದಲ್ಲಿ “ಸುಳ್ಳು ಹೇಳಿಕೆ ನೀಡುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ .
“ಯಾವುದೇ ಸನ್ಯಾಸಿನಿಯರ ಮೇಲೆ ಯಾವುದೇ ದಾಳಿ ನಡೆದಿಲ್ಲ… ಕೇರಳದ ಮುಖ್ಯಮಂತ್ರಿ ಸಂಪೂರ್ಣವಾಗಿ ಸುಳ್ಳು ಹೇಳುತ್ತಿದ್ದು, ಅವರು ತಪ್ಪು ಹೇಳಿಕೆಯನ್ನು ನೀಡುತ್ತಿದ್ದಾರೆ” ಎಂದು ರಾಜ್ಯದ ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಯೂಷ್ ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ABVP ಕಾರ್ಯಕರ್ತರಿಂದ ಕ್ರೈಸ್ತ ಸನ್ಯಾಸಿನಿಗಳಿಗೆ ಕಿರುಕುಳ: ವ್ಯಾಪಕ ಟೀಕೆ
ಮಾರ್ಚ್ 19 ರಂದು ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಘಟನೆಯ ಪ್ರತಿಧ್ವನಿಗಳು ಕೇರಳದ ಚುನಾವಣ ಕಣದಲ್ಲಿ ಮೂಡಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರದ ವಿರುದ್ದ ದಾಳಿ ನಡೆಸಿದ್ದರು. ಇದರಿಂದಾಗಿ ಕೇಂದ್ರ ಸಚಿವ ಅಮಿತ್ ಆರೋಪಿಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಘಟನೆಯಲ್ಲಿ ಸನ್ಯಾಸಿನಿಯರ ವಿರುದ್ಧವೆ ದೂರು ದಾಖಲಾಗಿತ್ತು.
ದೂರು ಪಡೆದ ನಂತರ ಸ್ಥಳೀಯ ಪೊಲೀಸರು ದೂರು ಸರಿಯಾಗಿದೆಯೇ ಎಂದು ತನಿಖೆ ನಡೆಸಿದ್ದಾರೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.
“ಒಂದು ಆರೋಪವಿತ್ತು. ಕೆಲವು ಜನರು ಸನ್ಯಾಸಿನಿಯರ ವಿರುದ್ಧ ದೂರು ನೀಡಿದರು. ದೂರು ಸರಿಯಾಗಿದೆಯೇ ಅಥವಾ ತಪ್ಪಾಗಿದೆಯೇ ಎಂದು ಕಂಡುಹಿಡಿಯುವುದು ಪೊಲೀಸರ ಕರ್ತವ್ಯ. ಅದಕ್ಕಾಗಿ ಪೊಲೀಸರು ವಿಚಾರಣೆ ನಡೆಸಿದರು. ಅವರು ಸರಿಯಾದ ಉದ್ದೇಶಕ್ಕಾಗಿ ಹೋಗುವ ನಿಜವಾದ ಪ್ರಯಾಣಿಕರು ಎಂದು ಖಚಿತಪಡಿಸಿಕೊಳ್ಳಲು ಅವರ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದೆ. ನಂತರ ತಕ್ಷಣ ಅವರನ್ನು ಹೋಗಲು ಬಿಡಲಾಗಿದೆ” ಎಂದು ಪೊಲೀಸರ ಕ್ರಮವನ್ನು ಸಮರ್ಥಿಸುತ್ತಾ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಅನ್ನು ‘ಸಂಘ ಪರಿವಾರ’ ಎಂದು ಕರೆಯುವುದು ಸರಿಯಲ್ಲ- ರಾಹುಲ್ ಗಾಂಧಿ
ಸಂಘ ಪರಿವಾರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ವಿದ್ಯಾರ್ಥಿಗಳು ಸನ್ಯಾಸಿನಿಯರನ್ನು ರೈಲಿನಿಂದ ಹೊರಗೆಳೆದು ದೂಡಿದ್ದಾರೆ ಎಂಬ ಆರೋಪವನ್ನು ರೈಲ್ವೆ ಸಚಿವರು ತಳ್ಳಿಹಾಕಿದ್ದಾರೆ. “ಅದು ಸಂಪೂರ್ಣವಾಗಿ ತಪ್ಪು” ಎಂದು ಅವರು ಹೇಳಿದ್ದಾರೆ.
ಸನ್ಯಾಸಿನಿಯರ ವಿರುದ್ಧ ಯಾರು ದೂರು ನೀಡಿದ್ದಾರೆ ಎಂದು ಸಚಿವರು ಹೇಳಲಿಲ್ಲ.
ಝಾನ್ಸಿಯಲ್ಲಿನ ಅಧಿಕಾರಿಗಳ ಪ್ರಕಾರ, ಮಾರ್ಚ್ 19 ರಂದು ಸ್ಥಳೀಯ ಭಜರಂಗದಳದ ಕಾರ್ಯಕರ್ತರು ಇಬ್ಬರು ಮಹಿಳೆಯರನ್ನು ಮತಾಂತರಕ್ಕಾಗಿ ಬಲವಂತವಾಗಿ ಕರೆದೊಯ್ಯಲಾಗುತ್ತಿದೆ ಎಂದು ಸನ್ಯಾಸಿನಿಯರ ವಿರುದ್ದ ದೂರು ನೀಡಿದ್ದಾರೆ ಎಂದು ವದಿಯಾಗಿದೆ.
ಇದನ್ನೂ ಓದಿ: ಸಿಎಂ ಪಳನಿಸ್ವಾಮಿ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆ: ಕ್ಷಮೆ ಕೇಳಿದ ಡಿಎಂಕೆ ನಾಯಕ