ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಸಂತ್ರಸ್ತ ಬಾಲಕಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದ ಮೇಲೆ, ಆಕೆಯ ಚಿಕ್ಕಪ್ಪನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಾಲನ್ಯಾಯ ಕಾಯ್ದೆಯಡಿ ಎಫ್ಐಆರ್ ದಾಖಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆ, ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ತಂದೆಯ ಅನಾರೋಗ್ಯದ ಕಾರಣ ಚಿಕ್ಕಪ್ಪನ ಮನೆಯಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತ ಬಾಲಕಿ, ಮೇ 22ರಂದು ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಚಿಕ್ಕಪ್ಪ ಮೇ 24ರಂದು ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾಗಿದ್ದ ಬಾಲಕಿ ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಪತ್ತೆಯಾಗಿದ್ದಳು. ಈ ಬಗ್ಗೆ ಒಡನಾಡಿ ಸಂಸ್ಥೆ ಕೂಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿತ್ತು. ಸಂಸ್ಥೆಯ ನಿರ್ದೇಶಕ ಸ್ಪ್ಯಾನ್ಲಿ ಅವರೊಂದಿಗೆ ಮಂಗಳವಾರ ಬಾಲಕಿ ಚಿತ್ರದುರ್ಗಕ್ಕೆ ಬಂದಿದ್ದಳು.
ಮುರುಘಾಶ್ರೀ ಬೆಂಬಲಿಗರು ಚಿಕ್ಕಪ್ಪನ ಮೂಲಕ ಬಾಲಕಿಗೆ ಒತ್ತಡ ಹಾಕುತ್ತಿದ್ದರಿಂದ ಆಕೆ ಮನೆಬಿಟ್ಟು ತೆರಳಿದ್ದಳು ಎಂದು ತಿಳಿದು ಬಂದಿದೆ.
ಒಡನಾಡಿ ಸಂಸ್ಥೆಯ ನೆರವಿನೊಂದಿಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾದ ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿತ್ತು. ಸಮಿತಿ ಬಾಲಕಿಯ ಅಳಲು ಆಲಿಸಿ, ಬಾಲನ್ಯಾಯ ಕಾಯ್ದೆಯ ಕಲಂ 75ರ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಚಿಕ್ಕಪ್ಪನ ವಿರುದ್ಧ ದೂರು ದಾಖಲಿಸುವಂತೆ ಮಕ್ಕಳ ರಕ್ಷಣಾಧಿಕಾರಿಗೆ ಸೂಚಿಸಿತ್ತು.
“ಮನೆ ತೊರೆದ ಬಾಲಕಿ ಒಡನಾಡಿ ಸೇವಾ ಸಂಸ್ಥೆಗೆ ಬಂದಿದ್ದಳು. ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ಚಿಕ್ಕಪ್ಪನ ಕಿರುಕುಳದ ಬಗ್ಗೆ ವಿವರಿಸಲಾಗಿದೆ. ಪೋಕ್ಸೋ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆದಿದೆ. ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಸಲಾಗಿದೆ. ಹಣ, ಚಿನ್ನಾಭರಣದ ಆಮಿಷ ಒಡ್ಡಲಾಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು” ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಪ್ಯಾನ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಯಡಿಯೂರಪ್ಪ ವಿರುದ್ಧ ಪೋಕ್ಸೋ ದೂರು ದಾಖಲಿಸಿದ್ದ ಮಹಿಳೆ ದಿಢೀರ್ ಸಾವು: ತನಿಖೆಗೆ ಆಗ್ರಹಿಸಿದ ಜನವಾದಿ ಮಹಿಳಾ ಸಂಘಟನೆ


