Homeಅಂಕಣಗಳುಸಾರ್ವಜನಿಕವಾಗಿ ಜಾತಿ ಸಂವಾದಕ್ಕೆ ತೆರೆದುಕೊಳ್ಳುವ ಬಗ್ಗೆ..

ಸಾರ್ವಜನಿಕವಾಗಿ ಜಾತಿ ಸಂವಾದಕ್ಕೆ ತೆರೆದುಕೊಳ್ಳುವ ಬಗ್ಗೆ..

- Advertisement -
- Advertisement -

ಸೆಪ್ಟಂಬರ್ 18ರಂದು ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಭೆಯಲ್ಲಿ ಅದರ ಅಧ್ಯಕ್ಷರು “ಬ್ರಾಹ್ಮಣರ ಶೋಷಣೆ ಸಹಿಸೆವು” ಎಂದು ಹೇಳಿರುವುದು ವರದಿಯಾಗಿದೆ. ಅಷ್ಟು ಸಾಲದು ಎಂಬಂತೆ ತಾವೂ ವೈಯಕ್ತಿಕವಾಗಿ ಶೋಷಣೆಗೆ ಒಳಗಾಗಿ, ಬ್ರಾಹ್ಮಣನಾಗಿರುವ ಕಾರಣಕ್ಕೆ ತನಗೆ ಹೈಕೋರ್ಟ್ ನ್ಯಾಯಾಧೀಶನ ಸ್ಥಾನವನ್ನು ನಿರಾಕರಿಸಲಾಯಿತು ಎಂದಿದ್ದಾರೆ (ಪ್ರಜಾವಾಣಿ). ಜ್ಞಾನಕ್ಕೆ ತೆರೆದುಕೊಳ್ಳದೆ, ತಾರತಮ್ಯ ಬೋಧಿಸುವ ಶಾಸ್ತ್ರಗಳನ್ನು ಮಕ್ಕಿಕಾಮಕ್ಕಿ ಅನುಸರಿಸಿ, ಜಾತಿ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಹಂತದಿಂದ, ಸಮಾನತೆ ಸಾಧಿಸಲು ಶೋಷಿತ ಸಮುದಾಯಗಳಿಗೆ ನೀಡಲಾದ ಮೀಸಲಾತಿಯನ್ನು ತಿಳಿದೂತಿಳಿದೂ ವಿರೋಧಿಸಿದ ಹಂತಕ್ಕೆ ಬಂದು ನಿಂತು, ಈಗ ತಾವೇ ಶೋಷಿತರು ಎಂದು ಹೇಳಿಕೊಳ್ಳುವ ಮಟ್ಟಕ್ಕೆ ಬೆಳೆದಿರುವುದು ಕ್ರೌರ್ಯದ ಪರಮಾವಧಿಯೇ ಸರಿ. ಸ್ವತಂತ್ರ ಭಾರತದಲ್ಲಿ ಸಂವಿಧಾನ ಕೊಡಮಾಡಿದ ಸಮಾನ ಹಕ್ಕುಗಳ ಕಾರಣಕ್ಕೆ ಸಾಧ್ಯವಾದ ತುಸು ಪ್ರಗತಿಯನ್ನು ಮತ್ತು ಅವಕಾಶವಂಚಿತ ಸಮುದಾಯಗಳಿಗೆ ಸಿಕ್ಕ ಕೆಲವು ಸವಲತ್ತುಗಳನ್ನೂ ಸಹಿಸಿಕೊಳ್ಳಲಾಗದ ಶೋಷಕ ಸಮುದಾಯ ಈಗ ತಾನೇ ಸಂತ್ರಸ್ತ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರತಿಕ್ರಾಂತಿಯ ಕುತಂತ್ರಕ್ಕೆ ಮರುಳಾಗುವವರಿಲ್ಲ ಎಂದು ಮರುಕಪಡುವಂತೆಯೂ ಇಲ್ಲ; ಏಕೆಂದರೆ ಈಗಿನ ಪ್ರಭುತ್ವ ಅವರ ಬೆನ್ನಿಗೇ ನಿಂತು ಮನುಧರ್ಮ ಶಾಸ್ತ್ರವನ್ನು ಪ್ರತಿಷ್ಠಾಪಿಸಲು ಹವಣಿಸುತ್ತಿದೆ! ಮನುವಾದಿ ಮುಖ್ಯವಾಹಿನಿ ಮಾಧ್ಯಮಗಳು ಅದನ್ನು ನಂಬಿಸಲು ಹಗಲಿರುಳು ಶ್ರಮಿಸುತ್ತಿವೆ.

ಇಂಥ ಪರಿಸ್ಥಿತಿ ನಿರ್ಮಾಣವಾಗಿರುವಾಗ, ಸಾಹಿತ್ಯದಲ್ಲೋ, ಸಿನಿಮಾದಲ್ಲೋ ಅಥವಾ ವಿಮರ್ಶೆಯಲ್ಲೋ ಜಾತಿ (ಆದರಲ್ಲೂ ಪ್ರಿವಿಲೆಜ್ ಹೆಚ್ಚಿರುವ) ಹೇಗೆ ಕೆಲಸ ಮಾಡುತ್ತಿದೆಯೆಂದು ತೋರಿಸಿ ಚರ್ಚಿಸಿದಾಗ, ’ಜಾತಿಯಿಂದ ಗುರುತಿಸುತ್ತಿದ್ದಾನೆಂದೋ, ಜಾತಿ ಚಹರೆಯನ್ನು ಬಲಪಡಿಸುತ್ತಿದ್ದಾನೆಂದೋ’ ಬಾಯಿಮುಚ್ಚಿಸಲು ಅಥವಾ ಉಳಿದವರು ಅಂತಹ ಚರ್ಚೆಯನ್ನು ಉಪೇಕ್ಷಿಸುವಂತೆ ಉತ್ತೇಜಿಸಲು ಒಂದು ದೊಡ್ಡ ಪಡೆಯೇ ಸನ್ನದ್ಧವಾಗಿರುತ್ತದೆ. ಅಂತಹದೊಂದು ಇತ್ತೀಚಿನ ಉದಾಹರಣೆಯನ್ನು ಗಮನಿಸಬಹುದು. ನಾಗೇಗೌಡ ಕೀಲಾರ ಶಿವಲಿಂಗಯ್ಯ ಕಳೆದ ವರ್ಷ ಬಿಡುಗಡೆಯಾದ ಮತ್ತು ಹತ್ತುಹಲವು ಮರುಮುದ್ರಣಗಳನ್ನು ಕಂಡಿರುವ ವಸುಧೇಂದ್ರರ ’ತೇಜೋ ತುಂಗಭದ್ರಾ’ ಕಾದಂಬರಿಯ ಬಗ್ಗೆ ತಾವು ಓದುಗರಾಗಿ ಅನುಭವಿಸಿದ ಸಮಸ್ಯೆಗಳನ್ನು ವಿವರಿಸಲು ವಾರ್ತಾಭಾರತಿ ಪತ್ರಿಕೆಯಲ್ಲಿ ಅದಕ್ಕೆ ವಿಮರ್ಶೆಯ ರೂಪ ನೀಡಿದ್ದರು. ಆ ವಿಮರ್ಶೆಯ ಮುಖ್ಯ ವಾದಗಳಲ್ಲಿ ಒಂದು: ಹೇಗೆ ಕಾದಂಬರಿ ಇಸ್ಲಮಾಫೋಬಿಯಾವನ್ನು ಪೋಷಿಸುತ್ತದೆಂಬುದು; ಮುಸಲ್ಮಾನ ಪ್ರಭುತ್ವದ ದೌರ್ಜನ್ಯದ ಬಗ್ಗೆ ಪುಟಗಟ್ಟಲೆ ಬರೆದು ಹೇಗೆ ಹಿಂದೂ ರಾಜರ ಕ್ರೌರ್ಯಗಳ ಬಗ್ಗೆ ಮೃದು ಧೋರಣೆ ತಳೆಯುತ್ತದೆಂಬುದು. ಇಂದಿನ ಕಾಲಘಟ್ಟದಲ್ಲಿ (ಎಂದಿಗೂ) ಇಂತಹ ಪಕ್ಷಪಾತಿ ಧೋರಣೆಯ ಕಥಾಹಂದರ ಓದುಗರನ್ನು ಹೇಗೆ ತಪ್ಪಾಗಿ ಪ್ರಭಾವಿಸಬಲ್ಲದು ಎಂಬುದನ್ನು ಅರಿತು, ಅದನ್ನು ಓದುಗರಿಗೆ ವಿಸ್ತರಿಸಬೇಕಿದ್ದ ವಿಮರ್ಶಕರಲ್ಲಿ (ಪುಸ್ತಕದ ಬಗ್ಗೆ ಅಭಿಪ್ರಾಯಗಳನ್ನು ನಮೂದಿಸಿರುವವರನ್ನು ಒಳಗೊಂಡಂತೆ) ಹೆಚ್ಚಿನ ಸಂಖ್ಯೆ ಬ್ರಾಹ್ಮಣರೇ ಇರುವುದರಿಂದ ಅವರಿಗದು ಸಾಧ್ಯವಾಗದೇ ಹೋಯಿತೇ ಎಂಬ ಪ್ರಶ್ನೆಯನ್ನು ನಾಗೇಗೌಡಎತ್ತಿದ್ದರು.

ಈ ಹಿಂದೆ ವಿಮರ್ಶಕ ಸುಭಾಷ್ ರಾಜಮಾನೆ ಮತ್ತೊಂದಿಬ್ಬರ ’ತೇಜೋ ತುಂಗಭಧ್ರಾ’ ಕಾದಂಬರಿಯ ಬಗ್ಗೆ ಇಂತಹ ಕೆಲವು ಸಕಾಲಿಕ ಪ್ರಶ್ನೆಗಳನ್ನು ಎತ್ತಿದ್ದರು. ನಾಗೇಗೌಡರ ಈ ವಿಮರ್ಶೆ, ಕಾದಂಬರಿ ಧ್ವನಿಸುವ ಧೋರಣೆಗಳು ಇಂದು ಬಿಗಡಾಯಿಸಿರುವ ರಾಜಕೀಯ-ಸಾಮಾಜಿಕ ಸನ್ನಿವೇಶಕ್ಕೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ವಿವರವಾಗಿ ಚರ್ಚಿಸಿತ್ತು. ಇದು ವಿಶಾಲ ಚರ್ಚೆಗೆ ಎಡೆಮಾಡಿಕೊಡಬೇಕಿತ್ತು. ಆದರೆ ಕಾದಂಬರಿಕಾರರು ಮತ್ತು ಪ್ರಶ್ನಿಸಲಾದ ವಿಮರ್ಶಕರು ಚರ್ಚೆಯನ್ನು ಮುಂದುವರಿಸಲು ಮುಂದಾಗಿಲ್ಲ. ಒಂದು ರೀತಿಯ ಮೌನ ಆವರಿಸಿದೆ. ಎರಡನೇ ಬಗೆಯ ಪ್ರತಿಕ್ರಿಯೆಯಲ್ಲಿ, ನಾಗೇಗೌಡರು ’ವಿಮರ್ಶಕರ ಜಾತಿಯನ್ನು ಎತ್ತಿತೋರಿಸಿರುವ ಕಾರಣಕ್ಕಾಗಿ’ ಅವರೇ ಜಾತಿಗ್ರಸ್ತರು ಎಂಬ ಹೀಗಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದವು. ಇವರಲ್ಲಿ ಬಹುತೇಕರು, ಜಾತಿಯನ್ನು ಮರೆಮಾಚಿಕೊಳ್ಳುವ ಅದರೆ ಅದರಿಂದ ಸಿಗುವ ಪ್ರಿವಿಲೆಜ್‌ಗಳನ್ನು ಅನುಭವಿಸುವವರು ಮತ್ತು ಜಾತಿ ಸಾರ್ವಜನಿಕವಾಗಿ ಚರ್ಚೆಯಾದ ಕೂಡಲೇ ಬೆದರುವ ವರ್ಗಕ್ಕೆ ಸೇರಿದವರು. ಇಂತಹ ’ಕೃತಕ’ ಮರೆಮಾಚುವಿಕೆ ಜಾತಿವಿನಾಶಕ್ಕೆ ನಿಜವಾದ ಅಡೆತಡೆಯುಂಟುಮಾಡಿದೆ ಎಂಬುದು ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಸಂಗತಿ. ಬಹುಜನರೆನ್ನಿಸಿಕೊಳ್ಳುವ ವಿವಿಧ ಸಮುದಾಯಗಳ ಚಹರೆ ಅಥವಾ ಅಸ್ಮಿತೆಯನ್ನು ಬಲಪಡಿಸುವುದರಿಂದಲೇ ಜಾತಿವಿನಾಶ ಸಾಧ್ಯ ಎಂದು ’ದಲಿತ್ ವಾಯ್ಸ್’ ಪತ್ರಿಕೆ ಸಂಪಾದಿಸುತ್ತಿದ್ದ ವಿ ಟಿ ರಾಜಶೇಖರ್ ಅಂತಹವರು ವಾದಿಸಿದ್ದೂ ಕೂಡ ಇದೆ.

’ತೇಜೋ ತುಂಗಭಧ್ರಾ’ದ ವಿಮರ್ಶೆ ಪ್ರಕಟವಾದ ನಂತರದಲ್ಲಿ ಕಥೆಗಾರ-ವಿಮರ್ಶಕ-ಪತ್ರಕರ್ತ ಚ.ಹ ರಘುನಾಥ ಅವರ ಲೇಖನವೊಂದು ಪ್ರಕಟವಾಯ್ತು (ಇದು ವಿಮರ್ಶೆಗೆ ಪ್ರತಿಕ್ರಿಯಿಯೇನಲ್ಲ). ಅವರ ಪ್ರಜಾವಾಣಿಯ ಅಂಕಣ ’ಪಡಸಾಲೆ’ಯಲ್ಲಿ “ಕನ್ನಡದ ಓದುಗರು ಸಾಹಿತ್ಯ ಕೃತಿಯೊಂದನ್ನು ಒಕ್ಕೊರಲಿನಿಂದ ಸಂಭ್ರಮಿಸಿದ್ದು ಕೊನೆಯದಾಗಿ ಯಾವಾಗ” ಎಂಬ ಪ್ರಶ್ನೆಯೊಂದಿಗೆ ಪ್ರಾರಂಭಿಸಿ ಕೆಲವು ಜನರೈಲೇಶನ್‌ಗಳನ್ನು ಮಾಡುತ್ತಾ ಹೋಗುತ್ತಾರೆ. ಕೆಲವು ಲೇಖಕರ ಹೆಸರುಗಳನ್ನು ಮತ್ತು ಬರಹಗಳನ್ನು ನಮೂದಿಸುತ್ತಾ, ತಮ್ಮ ಸಮುದಾಯ ವರ್ಗಗಳನ್ನು ಮೀರಿ ಆ ಲೇಖಕರು ಮತ್ತು ಅವರ ಸಾಹಿತ್ಯಿಕ ಕೃತಿಗಳು ಎಲ್ಲರಿಗೂ ತಲುಪಿದ್ದವು ಎಂದು ಹೇಳುವ ಮಾತು ಅರ್ಧ ಸತ್ಯ ಮಾತ್ರದ್ದು. ಮಲೆಗಳಲ್ಲಿ ಮದುಮಗಳು ಆಗಲೀ ಕುಸುಮಬಾಲೆಯೇ ಆಗಲೀ ಆ ಕಾದಂಬರಿಗಳನ್ನು ಮತ್ತು ಅವುಗಳ ಲೇಖಕರನ್ನು ಕಡೆಗಣಿಸುವ ರಾಜಕೀಯ ಅವುಗಳು ರಚನೆಯಾದಾಗಿಲಿಂದಲೂ ಇದ್ದೇಇದ್ದುದನ್ನು ಮರೆಮಾಚಲಾದೀತೇ? ಅದರ ಹಿಂದೆ ಜಾತಿ ರಾಜಕೀಯ ಇದ್ದುದನ್ನು ಗುರುತಿಸಲಾಗುವುದಿಲ್ಲವೇ? ಇತ್ತೀಚೆಗೆ ’ಆರ್‌ಎಸ್‌ಎಸ್| ಆಳ ಮತ್ತು ಅಗಲ’ ಕೃತಿಯನ್ನು ಬರೆದಾಗ ದೇವನೂರ ಮಹದೇವರನ್ನು ಯಾವ ರೀತಿ ಹಳಿಯಲಾಯಿತು ಎಂಬುದರ ಹಿಂದೆ ಜೀವವಿರೋಧಿ ಸಿದ್ಧಾಂತ ಕೆಲಸ ಮಾಡುತ್ತಿಲ್ಲವೇ? ಅದರ ಹಿಂದೆ ಜಾತಿ ಪ್ರತಿಷ್ಠೆಯ ಪಿತೂರಿಯಿಲ್ಲವೇ?

ರಘುನಾಥರು ಮುಂದುವರಿದು “ಸಮಸ್ಯೆ ಇರುವುದು, ಗ್ರಹಿಕೆ ಮತ್ತು ಸ್ವೀಕಾರದ ಹಿನ್ನೆಲೆಯಲ್ಲಿ ಸಾಹಿತ್ಯದ ಮಾನವೀಯ ಸೆಲೆಗಳಿಗಿಂತಲೂ ಸಾಮಾಜಿಕ-ರಾಜಕೀಯ ಮುನ್ನಲೆಗೆ ಬರುತ್ತಿರುವುದರಲ್ಲಿ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಲಂಕೇಶ್ ಮತ್ತು ಅಡಿಗರು ಕೆಲಸ ಮಾಡುವುದು ಸಾಧ್ಯವಾಗುವುದು ಹಾಗೂ ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ಕುವೆಂಪು ಹಾಗೂ ಮಾಸ್ತಿ ಪರಸ್ಪರ ಗೌರವ ಉಳಿಸಿಕೊಂಡಿದ್ದನ್ನು ಗಮನಿಸಬೇಕು” ಎನ್ನುತ್ತಾರೆ. ಸಾಮಾಜಿಕ-ರಾಜಕೀಯವನ್ನು ಹೊರತುಪಡಿಸಿದ ಮಾನವೀಯ ಸೆಲೆಗಳನ್ನು ಹುಡುಕುವುದು ಸಾಧ್ಯವೇ? ಮಾನವೀಯ ಸೆಲೆಗಳನ್ನು ಕಾಪಾಡಿಕೊಳ್ಳುವುದಕ್ಕಾಗಿಯೇ ಎಷ್ಟೋ ಸಾಮಾಜಿಕ-ರಾಜಕೀಯ ಹೋರಾಟಗಳು ಇಂದು ನಡೆಯುತ್ತಿವೆಯಲ್ಲವೇ? ಸಾಹಿತ್ಯದಲ್ಲಿ ರಾಜಕೀಯ-ಸಾಮಾಜಿಕ ಸಮಸ್ಯೆಗಳನ್ನು ಮುನ್ನಲೆಗೆ ತರಬಾರದು ಎಂಬುದು ಯಥಾಸ್ಥಿತಿಯನ್ನು ಬೋಧಿಸುವ, ಅಸಮಾನತೆಯಲ್ಲಿಯೇ ಸಾಮರಸ್ಯ ಸಾಧಿಸಬಹುದೆಂಬುವ ವೈದಿಕಶಾಹಿ ಪುರಾಣಗಳ ಕಂತೆಮಾತಿನಂತೆ ಕೇಳಿಸುವುದಿಲ್ಲವೇ?

ಭಿನ್ನಾಭಿಪ್ರಾಯಗಳ ನಡುವೆಯೂ ಇಬ್ಬರು ಸಾಹಿತಿಗಳು ಕೆಲಸ ಮಾಡಲು ಸಾಧ್ಯವಾಯಿತು ಎಂಬ ಜನರಲೈಸೇಷನ್ ಕುರಿತು ಹೇಳುವುದಾದರೆ, 70 ಮತ್ತು 80ರ ದಶಕ ಜಾತಿ ಮತ್ತು ಸಿದ್ಧಾಂತಗಳ ಕಾರಣಕ್ಕೆ ಹಲವು ಪ್ರಯೋಗಗಳನ್ನು ಮತ್ತು ಹಲವು ವಿವಾದಗಳನ್ನು ಕಂಡ ಕಾಲ. ಒಂದು ರೀತಿಯ ಅಶಾಂತತೆಯನ್ನು ಹುಟ್ಟುಹಾಕಿದ್ದ ಕಾಲ. ಬಸವಲಿಂಗಪ್ಪನವರ ’ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನದು ಬೂಸಾ’ ಎಂಬ ಹೇಳಿಕೆಯಿಂದ ಕೆರಳಿ ಶೋಷಕ ಸಮುದಾಯದ ಜನರು ಸೃಷ್ಟಿಸಿದ ಗಲಭೆಗಳು ಮುಂದೆ ಬ್ರಾಹ್ಮಣರನ್ನು ಹೊರತುಪಡಿಸಿದ ’ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ಕ್ಕೆ ಕಾರಣವಾಯಿತು (ಅಲ್ಲಿಯವರೆಗೂ ಹೆಚ್ಚು ಕೇಳಿಬರುತ್ತಿದ್ದ ಬ್ರಾಹ್ಮಣೇತರ ಚಳವಳಿಗಳು ಸಕ್ರಿಯವಾಗಿದ್ದ ಕಾರಣಕ್ಕೂ). ಈ ಒಕ್ಕೂಟದ ಬಗ್ಗೆ ಸಾಹಿತಿ ಯು.ಆರ್ ಅನಂತಮೂರ್ತಿಯವರೂ ಸೇರಿದಂತೆ ಹಲವು ಬ್ರಾಹ್ಮಣ ಸಾಹಿತಿಗಳು ವ್ಯಕ್ತಪಡಿಸಿದ ಅಸಹನೆಯ ಅಭಿಪ್ರಾಯಗಳು ಹಲವು ಬಣ್ಣಗಳಿಂದ ಕೂಡಿದ್ದವು. ಅಂದರೆ ಎಲ್ಲವೂ ಅಂದು ಅನ್ಯೋನ್ಯವಾಗಿಯೇನೂ ಇರಲಿಲ್ಲ ಅನ್ನುವುದು ಸ್ಪಷ್ಟ. ಅನ್ಯೋನ್ಯವಾಗಿ ಇರುವ ಅವಶ್ಯಕತೆಯೂ ಇರಲಿಲ್ಲ. ಆದರೆ ಆ ಘರ್ಷಣೆಗಳಿಂದ ಹೊಮ್ಮಬೇಕಿದ್ದ ವಿವೇಕ ಮತ್ತು ತಿಳಿವಳಿಕೆ ಮುಂದಿನ ಪೀಳಿಗೆಗಳಿಗೆ ದಕ್ಕದಂತೆ ಮತ್ತೆ ವೈದಿಕ ಶಕ್ತಿಗಳು ಹೇಗೆ ಜಾಗೃತವಾದವು ಎಂಬುದನ್ನು ಇಂದು ಅವಲೋಕಿಸುವ ತುರ್ತು ಖಂಡಿತಾ ಇದೆ. ಇಲ್ಲದಿದ್ದರೆ ಬ್ರಾಹ್ಮಣ ಮಹಾಸಭಾದವರು ಅತ್ಯುಗ್ರತೆಯಿಂದ ತಾವು ಬಲಿಪಶುಗಳು ಎಂದು ಹೇಳುವ ಸುಳ್ಳಿನ ಪುನರಾವರ್ತನೆ ನಿಲ್ಲುವುದೇ ಇಲ್ಲ!

ಯು.ಆರ್ ಅನಂತಮೂರ್ತಿಯವರು ತಾವು ಪ್ರಾರಂಭಿಸಿದ ಋಜುವಾತು ಪತ್ರಿಕೆಯ ಮೊದಲನೇ ಸಂಚಿಕೆಯಲ್ಲಿಯೇ ಬರಹಗಾರರ ಒಕ್ಕೂಟವನ್ನು ಅಟ್ಯಾಕ್ ಮಾಡಲು ಸಂಪಾದಕೀಯವನ್ನು ಬಳಸಿಕೊಳ್ಳುತ್ತಾರೆ. ಋಜುವಾತು ಸಂಪಾದಕ ಮಂಡಲಿಯ 20 ಜನರಲ್ಲಿ 16 ಜನ ಬ್ರಾಹ್ಮಣರು ಇದ್ದುದ್ದನು ಲಂಕೇಶರು ಎತ್ತಿತೋರಿಸಿದ್ದರೆಂದು ಚಂಪಾ 1981ರಲ್ಲಿ ಬರೆದ ಸಂಕ್ರಮಣದ ಒಂದು ಸಂಪಾದಕೀಯದಲ್ಲಿ ದಾಖಲಿಸುತ್ತಾರೆ. ’ಮೇಜರ್-ಶ್ರೇಷ್ಠ-ಮುಖ್ಯ’ ಎಂಬ ಗುಣವಿಶೇಷಣಗಳನ್ನು ಬಳಸಿ ಹೇಗೆ ಬ್ರಾಹ್ಮಣ ಜಾತಿಯ ಕವಿವರ್ಗ ಅವರವರನ್ನೇ ಬಿಂಬಿಸಿಕೊಂಡಿತು ಮತ್ತು ಶೂದ್ರ-ದಲಿತ ಬರಹಗಾರರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿತು ಎಂಬುದನ್ನೂ ಚಂಪಾ ಬರೆಯುತ್ತಾರೆ. ಗೋಪಾಲಕೃಷ್ಣ ಅಡಿಗರ ಎಷ್ಟೋ ಪದ್ಯಗಳು ಪ್ರಜಾಪ್ರಭುತ್ವ ವಿರೋಧಿ ಮತ್ತು ಸನಾತನ ’ಶ್ರೇಷ್ಠತೆ’ಯನ್ನು ಮೆರೆಯುವಂತಹವು ಹಾಗೂ ಜನಸಂಘದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು ತಮ್ಮ ಸಾಹಿತ್ಯದಲ್ಲಿಯೂ ಅದೇ ಧೋರಣೆ ಹೊಂದಿದ್ದರು ಎಂಬಂತಹ ವಿಷಯಗಳನ್ನು ತೇಜಸ್ವಿ-ಚಂಪಾರಂತಹವರು ಚರ್ಚಿಸಿದ್ದರೂ, ಅವರ ಸಾಹಿತ್ಯವನ್ನು ಬಗೆದು ನೋಡದೆ, ಮುಂದಿನ ಪೀಳಿಗೆಗೆ ಅದರ ಸಮಸ್ಯೆಗಳನ್ನು ತಿಳಿಯದಂತೆ ಅವರನ್ನು ’ಮೇಜರ್’ ಕವಿಯನ್ನಾಗಿಯೇ ಉಳಿಸಿಕೊಂಡ, ’ಸಾಹಿತ್ಯ ಮತ್ತು ಮಾಧ್ಯಮ ವಲಯ’ ಹೆಚ್ಚು ಯಾರ ಹಿಡಿತದಲ್ಲಿದೆ ಎಂಬುದನ್ನು ಇಂದಾದರೂ ತಿಳಿಯಬೇಕಲ್ಲವೇ? ಹಿಂದೆ ಎಲ್ಲವೂ ರಮ್ಯವಾಗಿತ್ತೆಂಬ ಕಲ್ಪನೆಯನ್ನು ಬದಿಗೊತ್ತಿ, ಅಡಿಗರು ತಮ್ಮ ಪದ್ಯಗಳಲ್ಲಿ ತಂದಿರುವ ರಾಜಕೀಯವನ್ನು ಎಳೆಎಳೆಯಾಗಿ ಬಿಡಿಸಿ ಇಂದಾದರೂ ಗಟ್ಟಿ ದನಿಯಲ್ಲಿ ಹೇಳಬೇಕಿದೆ. ಹಲವು ಕಾಲಘಟ್ಟಗಳಲ್ಲಿ ಇದ್ದ ಓದಿನ ರಾಜಕೀಯದ ಬಗ್ಗೆ ಹೆಚ್ಚಿನ ಚರ್ಚೆಗಳಾಗಬೇಕಿದೆ. ಇದು ಯಾವುದೋ ಜಾತಿಯ ಬಗ್ಗೆ ಅಥವಾ ಒಂದು ನಿರ್ದಿಷ್ಟ ಜಾತಿಯ ಲೇಖಕರ ಬಗ್ಗೆ ಅಸಹನೆ ಮೂಡಿಸುವುದಕ್ಕಲ್ಲ. ಆದರೆ, ಅಂದು ಸಿಕ್ಕ ಪ್ರಿವಿಲೆಜ್ ಇಂದ ಯಾವ ಸಿದ್ಧಾಂತದ ರಾಜಕೀಯವನ್ನು ಅವರು ಪಸರಿಸಿದರು ಎಂಬುದನ್ನು ಡಿಸೆಕ್ಟ್ ಮಾಡಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಆಯಾಯ ಲೇಖಕರು ನೀಡಿರುವ ಕೊಡುಗೆಗಳನ್ನು ಮರೆಮಾಚುವ ಯಾವ ಉದ್ದೇಶವೂ ಇರುವುದಿಲ್ಲ.

ಯುಆರ್‌ಎ ಅವರು ತಮ್ಮ ಕೊನೆಗಾಲದಲ್ಲಿಯೂ ’ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಬರೆದು, ಹಿಂದುತ್ವದ ಶಕ್ತಿಗಳಿಗೆ ತೋರಿಸಿದ ಪ್ರತಿರೋಧವನ್ನು ಎಂದಿಗೂ ಮರೆಯುವಂತಿಲ್ಲ. ಅದೇ ರೀತಿಯಲ್ಲಿ ಇನ್ನೂ ಉನ್ನತವಾದ ವಿವೇಕ ನಮ್ಮ ಸಮಾಜಕ್ಕೆ ದಕ್ಕಬೇಕಾದರೆ, ಅದರ ಪೂರ್ವದಲ್ಲಿ ತಾರಕದಲ್ಲಿದ್ದ ಚರ್ಚೆಗಳನ್ನೂ, ಅವು ಸಾಹಿತ್ಯಕ್ಕೆ ಸಂಬಂಧಿಸಿದವಾದರೂ ರಾಜಕೀಯ-ಸಾಮಾಜಿಕ-ಸೈದ್ಧಾಂತಿಕ ನೆಲೆಯಲ್ಲಿ ಅವಲೋಕಿಸುವುದು ಮುಖ್ಯವಾಗಿದೆ.

ಸಾಹಿತ್ಯದ ಹಿನ್ನೆಲೆಯಲ್ಲಿ ಈ ಸಂಗತಿಗಳನ್ನು ಚರ್ಚಿಸಲಾಯಿತಾದರೂ, ಸಮಾಜದಲ್ಲಿ ಜಾತಿ ಹಿಡಿತ ಎಷ್ಟು ಬಲವಾಗುತ್ತಿದೆ ಎಂಬುದನ್ನು ಬ್ರಾಹ್ಮಣ ಮಹಾಸಭಾದ ಸಭೆ ಎತ್ತಿ ತೋರಿಸಿದೆ. ಬ್ರಾಹ್ಮಣ ಸಮುದಾಯದ ಮಟ್ಟಕ್ಕಲ್ಲದಿದ್ದರೂ ಒಂದು ಕಾಲಕ್ಕೆ ಹಾವನೂರು ವರದಿ ನೀಡಿದ್ದ ಮೀಸಲಾತಿಯ ವಿರುದ್ಧ ನಿಂತಿದ್ದ ಲಿಂಗಾಯತ ಸಮುದಾಯ ಇಂದು ಹೆಚ್ಚಿನ ಮೀಸಲಾತಿಗೆ ಬೇಡಿಕೆಯೊಡ್ಡುತ್ತಿದೆ. ಒಕ್ಕಲಿಗರ ಸಮಾವೇಶಗಳೂ ಆ ನಿಟ್ಟಿನಲ್ಲಿ ನಡೆದಿವೆ. ಅಂದರೆ ಜಾತಿ ಸೂಚಕ ಹೆಸರುಗಳನ್ನು ವ್ಯಕ್ತಿಗತವಾಗಿ ಮರೆಮಾಚಿದ್ದು ಸಾಮುದಾಯಿಕವಾಗಿ ಜಾತಿವಿನಾಶಕ್ಕೆ ದೊಡ್ಡ ಕೊಡುಗೆಯೇನನ್ನೂ ನೀಡದಿರುವುದು ಸ್ಪಷ್ಟವಾಗಿದೆ. ಭಾರತದಂತಹ ದೇಶದಲ್ಲಿ ಸಾರ್ವಜನಿಕ ಪ್ರದೇಶಗಳನ್ನು ಜಾತಿಮುಕ್ತಗೊಳಿಸಿದ್ದು ಒಂದು ಕ್ರಾಂತಿಕಾರಕ ಕಾರ್ಯಕ್ರಮವಾಗಿದ್ದರೂ, ಜಾತಿಯ ಜೊತೆಗೆ ಬೆಸುಗೆ ಹೊಂದಿದ್ದ ಸವಲತ್ತುಗಳು ಉದ್ಯಮ, ಶಿಕ್ಷಣ ಹಾಗೂ ಇನ್ನಿತರ ವಲಯಗಳಲ್ಲಿ ಬೇರೆಬೇರೆ ರೀತಿಯಲ್ಲಿ ಅವ್ಯಾಹತವಾಗಿ ಮುಂದುವರಿದಿವೆ. ಈ ನಿಟ್ಟಿನಲ್ಲಿ ಇಂದು ಜಾತಿಯನ್ನು ಬಹಿರಂಗವಾಗಿ ಕಾಣದಂತೆ ಮುಚ್ಚಿಟ್ಟು ಸಾಮಾಜಿಕ ಆಗಿಹೋಗುಗಳನ್ನು ಅವಲೋಕಿಸುವ ಸಂದರ್ಭಕ್ಕೆ ನಾವಿನ್ನೂ ಬಂದುನಿಂತಿಲ್ಲ.

ಈ ಹಲವು ಚರ್ಚೆಗಳ ಹಿನ್ನೆಲೆಯಲ್ಲಿ ಜಾತಿಯ ಬಗೆಗೆ ಸಾರ್ವಜನಿಕವಾಗಿ ಮಾತನಾಡಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ. ಅದು, ಜಾತಿ ಪ್ರತಿಷ್ಠೆಯನ್ನು ಮೆರೆಯುವ ಅಥವಾ ವರ್ಣಾಶ್ರಮದಲ್ಲಿ ಮೇಲು-ಕೀಳಿರಲಿಲ್ಲ ಎಂಬ ತಥಾಕಥಿತ ಸುಳ್ಳನ್ನು ಪುನರಾವರ್ತಿಸುವ ರೀತಿಯಲ್ಲಲ್ಲ. ತಮ್ಮ ಜಾತಿ ಸಲುವಾಗಿ ಸಿಕ್ಕಿರುವ ವೈಯಕ್ತಿಕ-ಔದ್ಯೋಗಿಕ-ಸಾಮಾಜಿಕ ಸವಲತ್ತುಗಳನ್ನು ನಾವೆಲ್ಲರೂ ಇನ್ನಷ್ಟು ತೀಕ್ಷ್ಣ ವಿಮರ್ಶೆಯ ದೃಷ್ಟಿಯಿಂದ ನೋಡಿಕೊಳ್ಳಬಹುದೇ? ಜಾತಿಯನ್ನು ಮೀರುವ ಬಗೆಗೆ ಇಲ್ಲಿಯವರೆಗೂ ಕಟ್ಟಿಕೊಂಡಿದ್ದ ಕಲ್ಪನೆಗಳನ್ನು ವಿಮರ್ಶೆಗೆ ಒಡ್ಡಿಕೊಳ್ಳಬಹುದೇ? ಒಂದು ಸಮುದಾಯಕ್ಕೆ ಸೇರಿರುವವರಾಗಿ ಅನುಭವಿಸಿರಬಹುದಾದ ಶೋಷಣೆಯ ಜತೆಜತೆಗೇ ತಮ್ಮ ಸಮುದಾಯ ಶೋಷಕನಾಗಿ ವರ್ತಿಸಿರುವ-ವರ್ತಿಸುತ್ತಿರುವ ವಿದ್ಯಮಾನಗಳನ್ನು ಮತ್ತೆ ಅವಲೋಕಿಸಿಕೊಳ್ಳಬಹುದೇ? ತಾನು ಮಾಡುತ್ತಿರುವ ಶೋಷಣೆಯ ಕಾರಣಗಳಿಂದ ತಾನು ಕಳೆದುಕೊಳ್ಳುತ್ತಿರುವ ವಿವೇಕ-ಶಾಂತಿ-ಸಹಬಾಳ್ವೆ ಮುಂತಾದ ಕಲ್ಪನೆಗಳ ಬಗ್ಗೆ ತಿಳಿಯದೆ ಶೋಷಕನೂ ಕೂಡ ’ಸಮಸ್ಯೆ’ಯಲ್ಲಿದ್ದಾನೆ ಎಂಬ ಅರಿವಿನ ಬೆಳಕಿನಲ್ಲಿ ಹೊಸ ಪರಿಹಾರಗಳ, ಹೊಸ ದಾರಿಗಳ ಶೋಧನೆಗೆ ತೊಡಗಿಕೊಳ್ಳಬಹುದೇ? ಇಂತಹ ಒಳನೋಟಗಳು ದಕ್ಕಿದಾಗ ಹುಟ್ಟುವ ವೈರುಧ್ಯವನ್ನು ಬಗೆಹರಿಸಿಕೊಳುವ ದಾರಿಗಳನ್ನು ಕಂಡುಹಿಡಿಯಲು ಮುಂದಾಗಬಹುದೇ? ಇಂತಹ ಮತ್ತು ಈ ರೀತಿಯಲ್ಲಿ ಆರೋಗ್ಯಪೂರ್ಣ ಮತ್ತು ಪ್ರಗತಿದಾಯಕವಾಗಿ ಬೆಳೆಸಬಹುದಾದ ಪ್ರಶ್ನೆಗಳೊಂದಿಗೆ ಜಾತಿ ಬಗ್ಗೆ ಸಾರ್ವಜನಿಕವಾಗಿ ಸಂವಾದಿಸುವ-ಚರ್ಚಿಸುವ ಸಲುವಾಗಿ ನ್ಯಾಯಪಥ ಪತ್ರಿಕೆ ವೇದಿಕೆಯಾಗಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಕೆಲವು ಆಹ್ವಾನಿತ ಬರಹಗಳ ಜೊತೆಗೆ ಓದುಗರೂ ಸಂವಾದದಲ್ಲಿ ತೊಡಗಿಕೊಳ್ಳಲು ಮುಕ್ತ ಆಹ್ವಾನವಿದೆ. ಈ ಸಂವಾದ ನಡೆಸುವ ಬಗೆಗಿನ ನಿಮ್ಮ ಅನಿಸಿಕೆಗಳನ್ನ, ಮತ್ತು ಸಂವಾದದಲ್ಲಿ ಪಾಲ್ಗೊಳ್ಳಲು ಈಮೇಲ್ ಬರೆಯುತ್ತೀರಲ್ಲವೇ?


ಇದನ್ನೂ ಓದಿ: ಸದನದಲ್ಲಿ ಹಗರಣಗಳ ಸದ್ದು; ’ಹಿಟ್ ಅಂಡ್ ರನ್’ ಇತಿಹಾಸ ಮರುಕಳಿಸುವುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...