Homeಚಳವಳಿಜೀವ ಬಿಟ್ಟೆವು ಭೂಮಿ ಕೊಡೆವು: KHB ಭೂಸ್ವಾಧೀನ ವಿರೋಧಿಸಿ ದಲಿತರ ಪ್ರತಿಭಟನೆ

ಜೀವ ಬಿಟ್ಟೆವು ಭೂಮಿ ಕೊಡೆವು: KHB ಭೂಸ್ವಾಧೀನ ವಿರೋಧಿಸಿ ದಲಿತರ ಪ್ರತಿಭಟನೆ

"ನಾವು ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಆದರೆ ನಮ್ಮ ಪಾಲಿನ ತುಂಡು ಭೂಮಿ ಸಹ ಕಿತ್ತುಕೊಂಡು ಮತ್ತೆ ದಲಿತರನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರ ನಡೆಯುತ್ತಿದೆ"

- Advertisement -
- Advertisement -

ಜೀವ ಬಿಟ್ಟರೂ ಸರಿಯೆ, ನಮ್ಮ ಪಾಲಿನ ತುಂಡು ಭೂಮಿ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಮಂಡ್ಯ ಜಿಲ್ಲೆಯ ಎಲೆಚಾಕನಹಳ್ಳಿ ಗ್ರಾಮದ ದಲಿತರು ಕರ್ನಾಟಕ ಗೃಹ ಮಂಡಳಿಯ ಭೂಸ್ವಾಧೀನ ವಿರುದ್ಧ ಸತತ ಮೂರು ದಿನದಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕರ್ನಾಟಕ ಗೃಹ ಮಂಡಳಿಯು ಮಂಡ್ಯ ತಾಲ್ಲೂಕಿನ ತೂಬಿನಗೆರೆ ಗ್ರಾ.ಪಂ.ವ್ಯಾಪ್ತಿಯ ಎಲೆಚಾಕನಹಳ್ಳಿ ಗ್ರಾಮದ ಸಮೀಪ ಹೊಸ ಬಡಾವಣೆ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ಸಮುದಾಯದವರಿಗೆ ಸೇರಿದ 21 ಎಕರೆ ತೋಟಿ ಇನಾಂ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಡಾ.ಬಾಬೂಜಿ ಮತ್ತು ಡಾ.ಭೀಮ್ ರಾವ್ ಯುವಕರ ಸಂಘದ ನೇತೃತ್ವದಲ್ಲಿ ನೂರಾರು ದಲಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ದಲಿತರನ್ನು ಮತ್ತೆ ಗುಲಾಮಗಿರಿಗೆ ದೂಡುವ ಹುನ್ನಾರ – ಸ್ವಾಮಿ ವೈ.ಜೆ

ಗ್ರಾಮದ ಯುವ ದಲಿತ ಮುಖಂಡ ವೈ.ಜೆ ಸ್ವಾಮಿ ಮಾತನಾಡಿ, “200 ವರ್ಷಗಳಿಂದ ನಮ್ಮ ಹಿರೀಕರು ದುಡಿದ ಪರಿಣಾಮ ನಮ್ಮ 20 ದಲಿತ ಕುಟುಂಬಗಳಿಗೆ 21 ಎಕರೆ ತೋಟಿ ಇನಾಂ ಭೂಮಿ ಸಿಕ್ಕಿದೆ. ಆ ಭೂಮಿಯನ್ನು ನಂಬಿಕೊಂಡು ನಾವು ಕೃಷಿ-ಹೈನುಗಾರಿಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಆದರೆ ನಮ್ಮ ಈ ತುಂಡು ಭೂಮಿಯನ್ನು ಸಹ ಕಿತ್ತುಕೊಂಡು ಮತ್ತೆ ದಲಿತರನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ದಲಿತರು ಸಾಕು ಆಡು-ಕುರಿಗಳು, ಹಸು-ದನಗಳು ಅಪ್ಪಿ ತಪ್ಪಿ ಸವರ್ಣಿಯರ ಹೊಲ- ಗದ್ದೆಗೆ ಹೋಗಿಬಿಟ್ಟರೆ ಆಕಾಶವೇ ಉರುಳಿಹೋದ ಹಾಗೆ ಆಡುತ್ತಾರೆ. ದಲಿತರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಇದು ತಪ್ಪಬೇಕು, ನಮ್ಮ ಭೂಮಿಯಲ್ಲಿ ನಾವು ಬದುಕಬೇಕು ಎಂಬುದು ನಮ್ಮ ಆಶಯ. ಆದರೆ ನಮ್ಮ ಭೂಮಿಯನ್ನು ಚಿಲ್ಲರೆ ಕಾಸು ಕೊಟ್ಟು ಕಿತ್ತುಕೊಳ್ಳುವುದನ್ನು ನಾವು ಒಪ್ಪುವುದಿಲ್ಲ. ಒಂದು ವೇಕೆ ಕೆಎಚ್‌ಬಿ ಭೂಸ್ವಾಧೀನ ಕೈಬಿಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಗ್ರಾಮದ ಹಿರಿಯರು  ಮಾತನಾಡಿ, “ನಮಗೆ ಈ ಭೂಮಿಯೇ ಗತಿ. ನಮ್ಮ ಮಕ್ಕಳ ಭವಿಷ್ಯಕ್ಕೆ ಇರುವುದು ಈ ಭೂಮಿ ಮಾತ್ರ. ಹಾಗಾಗಿ ನೀವು ಏನು ಮಾಡಿದರೂ ಸಹ ಈ ಭೂಮಿ ಬಿಟ್ಟುಕೊಡುವುದಿಲ್ಲ. ಎಷ್ಟು ದುಡ್ಡು ಕೊಟ್ಟರೂ ನಾವು ಭೂಮಿ ಬಿಡುವುದಿಲ್ಲ. ಬಡವರಿಗೆ ದಯವಿಟ್ಟು ಮೋಸ ಮಾಡಬೇಡಿ” ಎಂದು ಅಳಲು ತೋಡಿಕೊಂಡರು.

ಕೃಷಿ ಯೋಗ್ಯ ಭೂಮಿಯ – ಕೆರೆಯ ವಶಕ್ಕೆ ವಿರೋಧ

ಎಲೆಚಾಕನಹಳ್ಳಿ ಗ್ರಾಮದ ಬಳಿ ಸುಮಾರು 200 ಎಕರೆ ಪ್ರದೇಶದಲ್ಲಿ ಗೃಹ ಮಂಡಳಿಯು ಬಡಾವಣೆ ನಿರ್ಮಿಸಲು ಉದ್ದೇಶಿಸಿದ್ದು, ಈ ಪೈಕಿ ಸುಮಾರು 50 ಎಕರೆ ಕೃಷಿ ಯೋಗ್ಯ ಜಮೀನು ಪರಿಶಿಷ್ಟ ಜಾತಿಗೆ ಸೇರಿದ ತೋಟಿ ಇನಾಂ ಭೂಮಿಯಾಗಿದೆ. ಒಂದು ಕೆರೆ ಸಹ ಇದ್ದು ಭಾರೀ ಮಳೆಗೆ ತುಂಬಿದೆ. ಈ ಭೂಮಿಯನ್ನೆ ನಂಬಿಕೊಂಡು ಸುಮಾರು 20 ಪರಿಶಿಷ್ಟ ಜಾತಿಯ ಕುಟುಂಬಗಳು ಜೀವನ ನಡೆಸುತ್ತಿದ್ದು, ಅಲ್ಲಿ ಟಮೋಟ, ಬದನೆಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಈ ಭೂಮಿಯನ್ನು ವಶಪಡಿಸಿಕೊಂಡು ಅಲ್ಲಿ ನಿವೇಶನ ಮಾಡುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಲೆ ನಿಗದಿಯಲ್ಲಿ ಭಾರಿ ತಾರತಮ್ಯ

ಅಲ್ಲದೆ ದಲಿತರ ಭೂಮಿ ವಶಪಡಿಸಿಕೊಳ್ಳುವಾಗ ಬೆಲೆ ನಿಗಧಿಯಲ್ಲಿಯೂ ಸಹ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಕೆಲವರ ಜಮೀನಿಗೆ ಎಕರೆಯೊಂದಕ್ಕೆ 52 ಲಕ್ಷ ರೂ.ಗಳ ಬೆಲೆ ನಿಗದಿ ಮಾಡಿದರೆ ದಲಿತರ ಭೂಮಿಗೆ ಎಕರೆಯೊಂದಕ್ಕೆ ಕೇವಲ 7 ಲಕ್ಷ ರೂ. ನಿಗದಿ ಮಾಡಲಾಗಿದೆ ಎನ್ನಲಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಈ ಭೂಮಿಗೆ ಎಕರೆಗೆ ಕೇವಲ 7 ಲಕ್ಷ ರೂಗಳನ್ನು ಯಾವ ಆಧಾರದಲ್ಲಿ ಮಾಡಲಾಗಿದೆ? ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ನೀಡಿ ವಂಚಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಕೆರೆಯನ್ನು ಮಣ್ಣಿನಿಂದ ಮುಚ್ಚಿ ಅದರ ಮೇಲೆ ಮನೆ ಕಟ್ಟಲು ಹೊರಟಿರುವ ಕೆ.ಎಚ್.ಬಿ!

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕೆ.ಹೆಚ್.ಬಿ. ಸಹಾಯಕ ಕಾರ್ಯಪಾಲಕ ಅಭಿಯಂತರ ಲಾರೆನ್ಸ್, ಮತ್ತೊಬ್ಬ ಅಧಿಕಾರಿ ವೇಣುಗೋಪಾಲ್ ಭೇಟಿ ನೀಡಿ ಹಕ್ಕೊತ್ತಾಯ ಪತ್ರ ಸ್ವೀಕರಿಸಿದ್ದಾರೆ. ಆದರೆ ಭೂ ಸ್ವಾಧೀನ ಕೈಬಿಡುವುದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಲದಿಗೆ ಜೆಸಿಬಿ ಯಂತ್ರಗಳನ್ನು ತಂದು ಕಾಮಗಾರಿ ಆರಂಭಿಸಲಾಗುತ್ತಿದೆ. ಆದರೆ ಅದಕ್ಕೆ ನಾವು ಅವಕಾಶ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಗ್ರಾಮದ ಮುಖಂಡರಾದ ವೈ.ಜೆ ಸ್ವಾಮಿ, ದಿನೇಶ್, ಗವಿ, ಬೋರಯ್ಯ, ಜವರಯ್ಯ, ಸಾಗರ್ ಮತ್ತಿತರರು ಹೋರಾಟದ ನೇತೃತ್ವ ವಹಿಸಿದ್ದಾರೆ.

ಇದನ್ನೂ ಓದಿ; ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿ ಪಾದಯಾತ್ರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇಶಿ ಮುಸ್ಲಿಮರ ಗಣತಿಗೆ ಅಸ್ಸಾಂ ಸಂಪುಟ ಅನುಮೋದನೆ

0
ರಾಜ್ಯದ ದೇಶಿ ಮುಸ್ಲಿಮರ ಆರ್ಥಿಕ-ಸಾಮಾಜಿಕ ಸಮೀಕ್ಷೆಗೆ ಸಮೀಕ್ಷೆಗೆ ಅಸ್ಸಾಂ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ. ಮುಸ್ಲಿಂ ಜನಾಂಗದ ಐದು ಸಮುದಾಯಗಳನ್ನು ದೇಶಿಯ ಅಸ್ಸಾಂ ಮುಸ್ಲಿಮರು ಎಂದು ಹಿಮಂತ್ ಬಿಶ್ವ ಶರ್ಮಾ ನೇತೃತ್ವದ ಸರ್ಕಾರ...