ಹಿರಿಯ ರಂಗಕರ್ಮಿಗಳೂ ಹಾಗೂ ಗಾಂಧಿವಾದಿಗಳೂ ಆದ ಹೆಗ್ಗೋಡಿನ ಪ್ರಸನ್ನರವರು ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಿಂದ ಬೆಂಗಳೂರಿನ ವಲ್ಲಭ ನಿಕೇತನದಲ್ಲಿ ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಹಾಗೂ ಸತ್ಯಾಗ್ರಹವನ್ನು ತೀವ್ರಗೊಳಿಸಿದ ಪ್ರಸನ್ನರವರು ಅಕ್ಟೊಬರ್ 6 ರಿಂದ ಅಮರಣಾಂತ ಉಪವಾಸವನ್ನೂ ಆರಂಭಿಸಿದ್ದಾರೆ. ಜನಸಾಮಾನ್ಯರಲ್ಲಿ ಮಾರಕ ಆರ್ಥಿಕತೆಯ ಕುರಿತು ಅರಿವು ಮೂಡಿಸುವ ಹಾಗೂ ಆಳುವ ವರ್ಗವನ್ನು ಎಚ್ಚರಿಸುವ ನಿಟ್ಟಿನಲ್ಲಿ ಈ ಸತ್ಯಾಗ್ರಹವನ್ನು ಗ್ರಾಮ ಸೇವಾ ಸಂಘವು ಆರಂಭಿಸಿದೆ.
ಕೇಂದ್ರ ಸರಕಾರದ ದಮನಕಾರಿ ಆರ್ಥಿಕ ಯೋಜನೆಗಳಿಂದಾಗಿ ಬಹುತೇಕ ಉದ್ಯಮಗಳು ನಷ್ಟಕ್ಕೆ ತುತ್ತಾಗಿ ದಿವಾಳಿ ಹಂತಕ್ಕೆ ಬಂದು ನಿಂತಿವೆ. ದೇಶಾದ್ಯಂತ ಕೋಟ್ಯಾಂತರ ಕಾರ್ಮಿಕರು ನೌಕರರು ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ದೇಶದ ಆರ್ಥಿಕತೆಯೇ ಅಧೋಗತಿಗಿಳಿದಿದೆ. ಬೇಡಿಕೆಗೂ ಹಾಗೂ ಹೂಡಿಕೆಗೂ ನಡುವಿನ ಅಂತರ ಹೆಚ್ಚುತ್ತಲೇ ಸಾಗಿದೆ. ನೋಟು ಅಮಾನ್ಯೀಕರಣ ಹಾಗೂ ಅತಿರೇಕದ ಜಿಎಸ್ಟಿ ತೆರಿಗೆಗಳು ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿದು ಹಾಕಿದೆ. ಇದರಿಂದಾಗಿ ರೈತ ಕಾರ್ಮಿಕರಷ್ಟೇ ಅಲ್ಲಾ ಉದ್ಯಮಪತಿಗಳೂ ಆತ್ಮಹತ್ಯೆ ದಾರಿ ಕಂಡುಕೊಳ್ಳುತ್ತಿದ್ದಾರೆ.
ಒಂದು ಕಡೆ ಆಧುನಿಕ ಯಂತ್ರೋಪಕರಣಗಳ ವ್ಯಾಪಕ ಬಳಕೆಯಿಂದಾಗಿ ನಿರುದ್ಯೋಗ ಹೆಚ್ಚುತ್ತಲೇ ಸಾಗಿದರೆ ಇನ್ನೊಂದು ಕಡೆ ಅಭಿವೃದ್ಧಿಯ ಹೆಸರಲ್ಲಿ ಪರಿಸರವೇ ನಾಶವಾಗುತ್ತಿದೆ. ಅತ್ಯಮೂಲ್ಯವಾದ ಪ್ರಕೃತಿಯ ನಾಶದ ವಿಕೃತಿ ಹಾಗೂ ಅಮೂಲ್ಯ ಮಾನವ ಸಂಪನ್ಮೂಲಗಳ ನಿರ್ಲಕ್ಷತೆಗಳು ಭವಿಷ್ಯದ ಭಾರತವನ್ನು ವಿನಾಶದಂಚಿಗೆ ತಂದು ನಿಲ್ಲಿಸುವುದರಲ್ಲಿ ಸಂದೇಹವಿಲ್ಲ.
ಇಂತಹ ವಿಕ್ಷಿಪ್ತ ಪರಿಸ್ಥಿತಿಯಲ್ಲಿ ಗಾಂಧೀಜಿ ಪ್ರಸ್ತುತವೆನಿಸುತ್ತಾರೆ. ಅವರ ತತ್ವಾದರ್ಶಗಳು ಮಾದರಿ ಎನಿಸುತ್ತವೆ. ವಿನಾಶಕಾರಿ ಆರ್ಥಿಕತೆಯನ್ನು ನಿಯಂತ್ರಿಸಲು ಸಮಯೋಚಿತ ಸಂಯಮದ ಜನಪರ ಆರ್ಥಿಕ ವ್ಯವಸ್ಥೆಯ ಅಗತ್ಯತೆ ಈಗ ಬೇಕಾಗಿದೆ. ಇದಕ್ಕೆ ಪ್ರಸನ್ನರವರು ಪವಿತ್ರ ಆರ್ಥಿಕತೆ ಎಂದು ಕರೆದು ಅದಕ್ಕಾಗಿ ಆಗ್ರಹಿಸಲು ಸತ್ಯಾಗ್ರಹ ನಿರತರಾಗಿದ್ದಾರೆ.
ಗಾಂಧೀಜಿಯವರು ಪ್ರತಿಪಾದಿಸಿದ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಜನರಿಗೆ ದುಡಿಮೆಗೆ ಅವಕಾಶ ಒದಗಿಸುವಂತಹ ವ್ಯವಸ್ಥೆಗಾಗಿ ಒತ್ತಾಯಿಸಲು ಹಾಗೂ ಕೆಲಸ ಮತ್ತು ಪರಿಸರವನ್ನು ನಾಶಮಾಡುವ ಪ್ರಸ್ತುತ ಜನವಿರೋಧಿ ಆರ್ಥಿಕ ವ್ಯವಸ್ಥೆಯನ್ನು ವಿರೋಧಿಸಲು ಪ್ರಸನ್ನರವರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಇದು ಬೋರ್ಗರಿವ ಪ್ರವಾಹದ ವಿರುದ್ದ ಈಜುವ ಪ್ರಕ್ರಿಯೆ. ಇಂತಹುದನ್ನೇ ಇಂಗ್ಲೀಷರ ಬಲಿಷ್ಟ ಏಕಾಧಿಪತ್ಯದ ವಿರುದ್ದ ಹೋರಾಟ ರೂಪಿಸಿದ ಗಾಂಧೀಜಿ ಕೊನೆಗೂ ಯಶಸ್ವಿಯಾಗಿದ್ದರು. ಗಾಂಧೀಜಿಯವರಿಗೆ ಜನಾಂದೋಲನ ಸಂಘಟಿಸುವ ಅಪಾರ ಸಾಮರ್ಥ್ಯ ಸಿದ್ದಿಸಿತ್ತು. ವಿದೇಶಿ ಆಡಳಿತಗಾರರ ದಮನದ ವಿರುದ್ದ ಜನತೆ ತಿರುಗಿ ಬಿದ್ದಿದ್ದರು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಸ್ವದೇಶಿ ಶೋಷಕರ ವಿರುದ್ದ ಜನಾಂದೋಲನ ರೂಪಗೊಳ್ಳಲು ಪ್ರಯತ್ನಗಳು ಆರಂಭವಾಗಬೇಕಿದೆ. ಆ ನಿಟ್ಟಿನಲ್ಲಿ ಪುಟ್ಟ ಪ್ರಯತ್ನಕ್ಕೆ ಪ್ರಸನ್ನರವರು ಚಾಲನೆ ಕೊಟ್ಟಿದ್ದಾರೆ.
ವಿನಾಶದತ್ತ ಸಾಗುತ್ತಿರುವ ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತರಲು, ನಿರುದ್ಯೋಗವನ್ನು ನಿವಾರಿಸಿ ಪರಿಸರವನ್ನು ಉಳಿಸಲು ಗಾಂಧೀಜಿಯವರು ಪ್ರತಿಪಾದಿಸಿದ ಸಂಯಮದ ಆರ್ಥಿಕತೆಯ ಅನುಷ್ಟಾನ ಇಂದಿನ ತುರ್ತು ಅಗತ್ಯವಾಗಿದೆ. ಪ್ರಸನ್ನರವರು ಪ್ರತಿಪಾದಿಸುವ ಪವಿತ್ರ ಆರ್ಥಿಕತೆಯ ಈ ಚಳುವಳಿಗೆ ಎಲ್ಲಾ ಪ್ರಜ್ಞಾವಂತ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಬೆಂಬಲಿಸಬೇಕಾದ ಅಗತ್ಯವಿದೆ.
ಈ ಇಳಿವಯಸ್ಸಿನಲ್ಲಿ ತಾವು ನಂಬಿದ ಗಾಂಧೀ ತತ್ವಾದರ್ಶಗಳಿಗಾಗಿ ಅಮರಣಾಂತ ಉಪವಾಸ ಆರಂಭಿಸಿರುವ ಪ್ರಸನ್ನನವರನ್ನು ಎಲ್ಲರೂ ಬೆಂಬಲಿಸೋಣ. ಬನ್ನಿ ನಮ್ಮೆಲ್ಲರ ನಡಿಗೆ ವಲ್ಲಭ ನಿಕೇತನದ ಕಡೆಗೆ ಸಾಗಲಿ. ಭವಿಷ್ಯದ ಸಂಯಮದ ಆರ್ಥಿಕತೆಯ ಬೆಳಕಿನ ಕಿರಣವೊಂದು ಇಲ್ಲಿಂದಲೇ ಉದಯಿಸಿ ವಿನಾಶ ತರುವ ಕತ್ತಲೆಯ ಆರ್ಥಿಕತೆಯನ್ನು ಕೊನೆಗಾಣಿಸಲು ಮುನ್ನುಡಿ ಬರೆಯಲಿ..



ಯಾವುದೇ ಹೋರಾಟವು ಟೆಕ್ನಾಲಜಿಯ ಮುನ್ನಡೆ,ಬಳಕೆಯಿಂದ ದುಡಿಮೆಯನ್ನು ಕಡಿಮೆ ಮಾಡುವುನ್ನು ವಿರೋದಿಸಬಾರದು.
ಹೆಚ್ಚಿನ ಆಳಿನ ಬಳಕೆಯಿಂದ ಮಯ್ ದಂಡಿಸಿ ದುಡಿಮೆ ಬದಲು ಟೆಕ್ನಾಲಜಿಯಿಂದ ಕಡಿಮೆ ವೆಚ್ಚದಲ್ಲಿ ಆಗುವ ದುಡಿಮೆಯಿಂದ ಬರುವ ಮಿಗುಉಳಿತಾಯವನ್ನು ದುಡಿಯುವ ಗುಂಪಿಗೆ ತಲುಪಿಸುವ ದಾರಿಯ ಬಗೆಗೆ ಒತ್ರುಕೊಡಬೇಕು.