ಯೂಟ್ಯೂಬ್ನಲ್ಲಿ ‘ಹಿಜಾಬ್ ಚಾಲೆಂಜ್’ ವಿಡಿಯೋ ಅಪ್ಲೋಡ್ ಮಾಡಿದ್ದ ಮುಸ್ಲಿಂ ಯುವಕನ ಮೇಲೆ ‘ಸೈಬರ್ ಭಯೋತ್ಪಾದನೆ’ ಪ್ರಕರಣ ದಾಖಲಿಸಿದ ತಮಿಳುನಾಡು ಪೊಲೀಸರು, ಆತನನ್ನು ಜೈಲಿಗಟ್ಟಿದ ಘಟನೆ ನಡೆದಿದೆ.
ಅನಶ್ ಅಹ್ಮದ್ (21) ಬಂಧನಕ್ಕೊಳಗಾದ ಯುವಕ. ಕೊಯಮತ್ತೂರಿನ ಪೊಧನೂರು ನಿವಾಸಿಯಾಗಿರುವ ಅನಶ್, ಫ್ರೀಲ್ಯಾನ್ಸ್ ವಿಡಿಯೋ ಜಾಕಿಯಾಗಿದ್ದಾನೆ. ಸೆಪ್ಟೆಂಬರ್ 5ರಂದು ಅನಶ್ನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದ ಕಾರಣ ಕೊಯಮತ್ತೂರು ಜೈಲು ಪಾಲಾಗಿದ್ದ ಅನಶ್, ಸುಮಾರು 56 ದಿನಗಳ ಬಳಿಕ ಅಕ್ಟೋಬರ್ 30ರಂದು ಬಿಡುಗಡೆಯಾಗಿದ್ದಾನೆ.
“ಯೂಟ್ಯೂಬ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಕ್ಕೆ ಅನಶ್ ಜೈಲು ಸೇರಿರುವುದು, ಪ್ರಸ್ತುತ ಭಾರತ ಮತ್ತು ಕರ್ನಾಟಕದಲ್ಲಿ ಮುಸ್ಲಿಮರು ಎದುರಿಸುತ್ತಿರುವ ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುತ್ತದೆ” ಎಂದು ಅನಶ್ ಪರ ವಕೀಲ ಪುಲಿಯಾಂತೋಪ್ ಮೋಹನ್ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ : ಸೆಪ್ಟೆಂಬರ್ ಮೊದಲ ವಾರದಲ್ಲಿ ‘ಕಸ್ವಾ ಟಿವಿ’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅನಶ್ ಹಿಜಾಬ್ ಚಾಲೆಂಜ್ ವಿಡಿಯೋ ಅಪ್ಲೋಡ್ ಮಾಡಿದ್ದ. ಪ್ರಸ್ತುತ ತೆಗೆದು ಹಾಕಲಾಗಿರುವ ಆ ವಿಡಿಯೋದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತು, ಅಲ್ಲಿ ಓಡಾಡುವ ಮಹಿಳೆಯರಿಗೆ ಹಿಜಾಬ್ ಧರಿಸಿ ನೋಡುತ್ತೀರಾ? ಎಂದು ಕೇಳುವ ದೃಶ್ಯವಿತ್ತು. ಆ ವಿಡಿಯೋವನ್ನು ಕೊಯಮತ್ತೂರಿನ ರೇಸ್ ಕೋರ್ಸ್ ಬಳಿ ರೆಕಾರ್ಡ್ ಮಾಡಲಾಗಿತ್ತು ಎಂದು ವರದಿಗಳು ಹೇಳಿವೆ.
ವಿದೇಶಗಳಲ್ಲಿ ನಡೆಯುತ್ತಿದ್ದ ಹಿಜಾಬ್ ಚಾಲೆಂಜ್ ಈಗ ಭಾರತಕ್ಕೂ ಕಾಲಿಟ್ಟಿದೆ. ಪ್ರವಾಸಿ ತಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುವ ಮುಸ್ಲಿಂ ಯುವತಿಯರು, ಅಲ್ಲಿ ಓಡಾಡುವ ಮಹಿಳೆಯರಿಗೆ ಹಿಜಾಬ್ ಧರಿಸಿ ಹೇಗೆ ಕಾಣುತ್ತೀರಿ ಎಂದು ನೋಡುತ್ತೀರಾ? ಎಂದು ಕೇಳುತ್ತಾರೆ. ಆಗ, ಧರ್ಮಾತೀತವಾಗಿ ಇಷ್ಟ ಇರುವ ಮಹಿಳೆಯರು ಒಂದು ಸಲ ಹಿಜಾಬ್ ಧರಿಸಿ ತಮ್ಮನ್ನು ತಾವು ಹೇಗೆ ಕಾಣುತ್ತಾರೆ ಎಂದು ಕನ್ನಡಿ ಹಿಡಿದು ನೋಡುತ್ತಾರೆ. ಬಳಿಕ, ಹಿಜಾಬ್ ಕಳಚಿ ವಾಪಸ್ ಕೊಟ್ಟು ತೆರಳುತ್ತಾರೆ. ಇಲ್ಲಿ ಯಾರಿಗೂ ಹಿಜಾಬ್ ಧರಿಸಿಲು ಬಲವಂತ ಮಾಡುವುದಿಲ್ಲ, ಮನವಿ ಮಾಡಲಾಗುತ್ತದೆ. ಜನರು ಇಷ್ಟವಿದ್ದರೆ ಧರಿಸಬಹುದು. ಈ ಮೂಲಕ ಮುಸ್ಲಿಂ ಮಹಿಳೆಯರ ಉಡುಪಾದ ಹಿಜಾಬ್ ಅನ್ನು ಇತರ ಧರ್ಮೀಯರಿಗೆ ಪರಿಚಯಿಸಲಾಗುತ್ತದೆ.
ಈ ಪ್ರಕರಣದಲ್ಲಿ ಕೊಯಮತ್ತೂರು ರೇಸ್ ಕೋರ್ಸ್ ಬಳಿ ಹಿಜಾಬ್ ಚಾಲೆಂಜ್ ನಡೆಸಿದ್ದ ವಿಡಿಯೋವನ್ನು ಕಸ್ವಾ ಟಿವಿ ಯೂಟ್ಯೂಬ್ ಚಾನೆಲ್ನಲ್ಲಿ ಅನಶ್ ಹಂಚಿಕೊಂಡಿದ್ದ. ಇದು ಬಲಪಂಥೀಯ ಗುಂಪಿನ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆದಿತ್ತು. ಮುಂದುವರಿದು, ಬಲಪಂಥೀಯ ಸಂಘಟನೆ ಭಾರತ್ ಸೇನೆಯ ಜಿಲ್ಲಾ ಸಂಯೋಜಕ ಎಸ್. ಕುಮರೇಶನ್ ಎಂಬವರು ವಿಡಿಯೋ ಧರ್ಮಗಳ ನಡುವೆ ಉದ್ವಿಗ್ನತೆ ಉಂಟು ಮಾಡುತ್ತದೆ ಎಂದು ಆರೋಪಿಸಿ, ಅನಶ್ ವಿರುದ್ದ ದೂರು ದಾಖಲಿಸಿದ್ದರು.
ದೂರು ಆಧರಿಸಿ ಅನಶ್ ವಿರುದ್ದ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 352 ಮತ್ತು 353(2) ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 ಎಫ್ (ಸೈಬರ್ ಭಯೋತ್ಪಾದನೆಗೆ ಶಿಕ್ಷೆ) ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನಶ್ನ ಬಂಧಿಸಿದ್ದರು. ಬಳಿಕ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಪ್ರಕರಣದಲ್ಲಿ ಜಾಮೀನು ಕೋರಿ ಅನಶ್ ಸಲ್ಲಿಸಿದ್ದ ಎರಡು ಜಾಮೀನು ಅರ್ಜಿಗಳನ್ನು ಕೊಯಮತ್ತೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಆತ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿ ಜಾಮೀನು ಪಡೆದಿದ್ದಾನೆ.
ಅನಶ್ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ಆತನ ಪರ ವಾದ ಮಂಡಿಸಿದ ವಕೀಲ ಮೋಹನ್ ಅವರು, “ಯಾರನ್ನೂ ಹಿಜಾಬ್ ಧರಿಸುವಂತೆ ಒತ್ತಾಯಿಸಿಲ್ಲ. ಜನರು ಸ್ವಯಂ ಪ್ರೇರಿತರಾಗಿ ಧರಿಸಿದ್ದಾರೆ. ಇದರಲ್ಲಿ ಯಾವುದೇ ಸಮುದಾಯಗಳ ನಡುವೆ ವಿವಾದ ಸೃಷ್ಟಿಸುವ ಉದ್ದೇಶವಿರಲಿಲ್ಲ. ಅಲ್ಲದೆ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಯಾರೂ ಕೂಡ ದೂರು ದಾಖಲಿಸಿಲ್ಲ ಎಂದಿದ್ದಾರೆ. ನ್ಯಾಯಮೂರ್ತಿ ಪಿ ಧನಬಾಲ್ ಅವರು ಅನಶ್ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪರಿಗಣಿಸಿ ಮತ್ತು ಆತನ ಜೈಲುವಾಸ ಅನುಭವಿಸಿದ ಅವಧಿಯನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಮೋಹನ್ ಅವರು, “ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಅನಶ್ ವಿರುದ್ದ ಐಟಿ ಕಾಯ್ದೆಯ ಸೆಕ್ಷನ್ 66 ಎಫ್ (ಸೈಬರ್ ಭಯೋತ್ಪಾದನೆ) ಪ್ರಕರಣ ಹೂಡಿರುವುದು ‘ನ್ಯಾಯಸಮ್ಮತವಲ್ಲ’. ಏಕೆಂದರೆ, ವಿಡಿಯೋ ಅಪ್ಲೋಡ್ ಮಾಡಿರುವುದರ ಹಿಂದೆ ಯಾವುದೇ ಅಪರಾಧ ಎಸಗುವ ಉದ್ದೇಶ ಇರಲಿಲ್ಲ. ಸೈಬರ್ ಭಯೋತ್ಪಾದನೆ ಎಂದರೆ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುವ ಚಟುವಟಿಕೆಗಳಿಂದ ಕೂಡಿರಬೇಕು. ಇದೊಂದು ಸಾಮಾನ್ಯ ಸೈಬರ್ ಪ್ರಕರಣ. ವಿಡಿಯೋ ಸ್ಪಷ್ಟವಾಗಿ ಭಾರತೀಯ ಸಂವಿಧಾನದ 25 ನೇ ಪರಿಚ್ಛೇದದ ಅಡಿಯಲ್ಲಿ ಬರುತ್ತದೆ. 25ನೇ ಪರಿಚ್ಛೇದ ನಮಗೆ ನಮ್ಮ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆ” ಎಂದು ಹೇಳಿದ್ದಾರೆ.
“ಸೆಕ್ಷನ್ 66 ಎಫ್ ಸೈಬರ್ ಭಯೋತ್ಪಾದನೆಯ ಶಿಕ್ಷೆಗೆ ಸಂಬಂಧಿಸಿದೆ. ಭಾರತದ ಸಾರ್ವಭೌಮತೆ, ಸಮಗ್ರತೆ, ಭದ್ರತೆ ಅಥವಾ ಸ್ನೇಹ ಸಂಬಂಧಗಳಿಗೆ ಬೆದರಿಕೆಯೊಡ್ಡುವ ಕೃತ್ಯಗಳನ್ನು ಈ ಸೆಕ್ಷನ್ ಅಪರಾಧ ಎಂದು ಪರಿಗಣಿಸುತ್ತದೆ. ವಿಶೇಷವಾಗಿ ಆ ಕೃತ್ಯಗಳು ಕಂಪ್ಯೂಟರ್ಗಳು ಅಥವಾ ಇತರ ಡಿಜಿಟಲ್ ಸಾಧನಗಳ ಬಳಕೆಯನ್ನು ಒಳಗೊಂಡಿರಬೇಕು. ಈ ಪ್ರಕರಣದಲ್ಲಿ ಅನಶ್ ಅಪ್ಲೋಡ್ ಮಾಡಿರುವ ವಿಡಿಯೋಗೆ ಸಂಬಂಧಿಸಿ ಫೇಸ್ಬುಕ್ನಲ್ಲಿ ನಡೆದ ಪರ-ವಿರೋಧ ಚರ್ಚೆಯನ್ನು ಆಧರಿಸಿ ಪೊಲೀಸರು ಸೆಕ್ಷನ್ 66 ಎಫ್ ಅನ್ವಯಿಸಿದ್ದಾರೆ. ಇದರಲ್ಲಿ ಪೊಲೀಸರ ದುರದ್ದೇಶ ಎದ್ದು ಕಾಣುತ್ತದೆ. ಅನಶ್ ಅಪ್ಲೋಡ್ ಮಾಡಿರುವ ವಿಡಿಯೋದಿಂದ ನಮಗೆ ಸಮಸ್ಯೆಯಾಗಿದೆ ಎಂದು ಯಾರೂ ಕೂಡ ದೂರು ನೀಡಿಲ್ಲ ಮತ್ತು ವಿಡಿಯೋ ಇತ್ಯಾದಿಗಳ ಮೂಲಕ ಹೇಳಿಕೊಂಡಿಲ್ಲ. ಅನಶ್ ವಿಡಿಯೋ ಅಪ್ಲೋಡ್ ಮಾಡಿದ ಬಳಿಕ ಸಾವರ್ಜನಿಕ ಅಶಾಂತಿ ಸೃಷ್ಟಿಸುವ ಯಾವುದೇ ಪ್ರತಿಭಟನೆಗಳು ನಡೆದಿಲ್ಲ” ಎಂದು ವಕೀಲ ಮೋಹನ್ ವಿವರಿಸಿದ್ದಾರೆ.
ಕೇವಲ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಅನಶ್ ವಿರುದ್ದ ಸೈಬರ್ ಭಯೋತ್ಪಾದನೆ ಪ್ರಕರಣ ಹೂಡಿದ ಪೊಲೀಸರ ಕ್ರಮ ಸರಿಯಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಹಿಳೆಯರ ಸಮಸ್ಯೆಗಳ ಕುರಿತು ಪ್ರಸ್ತಾಪ : ಕೇರಳ ನಿರ್ಮಾಪಕರ ಸಂಘದಿಂದ ಸಾಂಡ್ರಾ ಥಾಮಸ್ ಉಚ್ಚಾಟನೆ


