“ಒಂದು ತಿಂಗಳ ಅವಕಾಶವನ್ನು ಸರ್ಕಾರಕ್ಕೆ ನೀಡುತ್ತೇನೆ. ಸಂಘ ಪರಿವಾರದ ದುಷ್ಕೃತ್ಯಗಳಿಗೆ ಕಡಿವಾಣ ಹಾಕಿ ಸರ್ವಜನಾಂಗದ ಶಾಂತಿಯ ತೋಟವನ್ನು ಪುನರ್ ಪ್ರತಿಷ್ಠಾಪನೆ ಮಾಡದಿದ್ದರೆ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಲೋಕನಾಯಕ ಜೆ.ಪಿ.ವಿಚಾರ ವೇದಿಕೆ ವತಿಯಿಂದ ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ, “ಸರ್ವ ಜನಾಂಗದ ಶಾಂತಿಯ ತೋಟ: ಒಂದು ಭಾವೈಕ್ಯತೆಯ ಚರ್ಚೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಿಜೆಪಿ ಬೆಂಬಲಿತ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇವಸ್ಥಾನದ ಬಳಿ ಮುಸ್ಲಿಮರು ಅಂಗಡಿ ನಡೆಸಬಾರದೇ? ವಿಶ್ವ ಹಿಂದೂ ಪರಿಷತ್ನವರು ಯಾರ್ರೀ? ಒಂದು ತಿಂಗಳಲ್ಲಿ ಸರಿಪಡಿಸದಿದ್ದರೆ, ಸಮಾಜವನ್ನು ಒಡೆಯುತ್ತಿರುವ ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸದಿದ್ದರೆ ಪಾದಯಾತ್ರೆ ನಡೆಸುತ್ತೇನೆ. ಕೋಮುದ್ವೇಷ ಬಿತ್ತುವ ಸಂಘಟನೆಗಳಿಗೆ ಬಲಿಯಾಗಬೇಡಿ. ಎಲ್ಲ ಧರ್ಮಗಳಿಗೂ ರಕ್ಷಣೆ ಕೊಟ್ಟು, ಶಾಂತಿಯುತ ವಾತಾವರಣ ನಿರ್ಮಿಸದೆ ಇದ್ದರೆ ಇಡೀ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುತ್ತೇನೆ ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಸರ್ವಜನಾಂಗವೂ ಬದುಕಬೇಕು. ಸಮಾನ ಮನಸ್ಕರೊಂದಿಗೆ ಮಾತನಾಡಿ ನಿರ್ಧಾರ ಮಾಡುತ್ತಿದ್ದೇನೆ. ಎರಡು ಸಲ ಮುಖ್ಯಮಂತ್ರಿಯಾಗಿದ್ದೇನೆ. ಅಧಿಕಾರಕ್ಕೆ ಬರಬೇಕೆಂಬ ಆಸೆ ಇಲ್ಲ. ಆದರೆ ಈ ಮುಗ್ಧ ಮನಸ್ಸುಗಳನ್ನು ರಕ್ಷಿಸಬೇಕಿದೆ ಎಂದು ತಿಳಿಸಿದರು.
“ಗಲ್ಫ್ ದೇಶಗಳಿಗೆ ಹೋಗಿ ಲಕ್ಷಾಂತರ ಹಿಂದೂಗಳು ದುಡಿಯುತ್ತಿದ್ದಾರೆ. ಯಾರಾದರೂ ಅವರನ್ನು ಹೊರಗಡೆ ಹೋಗಿ ಎಂದರೆ, ಅವರಿಗೆ ರಕ್ಷಣೆ ಕೊಡಲು ಏನಿದೆ?” ಎಂದು ಪ್ರಶ್ನಿಸಿದ ಅವರು, “ಹಲಾಲ್ ನಿಷೇಧವಂತೆ, ಅದೇನೋ ಜಟ್ಕಾ ಮಾಂಸ ಅಂತ ಹೇಳಿಕೊಂಡು ತಿರುಗುತ್ತಾ ಇದ್ದೀರಿ. ಜಟ್ಕಾ ಮಾಂಸ ತಿನ್ನಿಸಿ ಗಲ್ಫ್ನಲ್ಲಿರುವವರನ್ನು ವಾಪಸ್ ಓಡಿಸಿದರೆ ಆಮೇಲೆ ಜಟಕಾ ಓಡಿಸಬೇಕಾಗುತ್ತದೆ. ನಾಡಿನ ಜನತೆ ಎಚ್ಚೆತ್ತುಕೊಳ್ಳಿ” ಎಂದು ಮನವಿ ಮಾಡಿದರು.
ವಿಧಾನಸಭೆಯ ಸಭಾಧ್ಯಕ್ಷರು ಮಾತನಾಡುತ್ತಾ ತಮ್ಮನ್ನು ಆರ್ಎಸ್ಎಸ್ ಎಂದು ಗುರುತಿಸಿಕೊಳ್ಳುತ್ತಾರೆ. ನೀವೆಲ್ಲರೂ ಒಂದು ದಿನ ಆರ್ಎಸ್ಎಸ್ ಆಗುತ್ತೀರಿ ಅನ್ನುತ್ತಾರೆ. ನಾನಾಗ ಸದನದಲ್ಲಿ ಇರಲಿಲ್ಲ. ಎಲ್ಲಿ ಹೋಯಿತು ದನಿ? ನಮ್ಮ ಯುವಜನರಿಗೆ ಬೇಕಾಗಿರುವುದು ಉದ್ಯೋಗವೇ ಹೊರತು ಆರ್ಎಸ್ಎಸ್ ಅಲ್ಲ. ಇಂತಹ ದುಷ್ಟ ಶಕ್ತಿಗಳನ್ನು ಪ್ರೋತ್ಸಾಹಿಸಬೇಡಿ. ನಿಮ್ಮ ಮನೆಯ ಬಳಿ ಕೋಮುದ್ವೇಷದ ಪತ್ರಗಳನ್ನು ಹಂಚಲು ಬಂದವರಿಗೆ ಜನರು ಬುದ್ಧಿ ಹೇಳಿ ಎಂದು ಕೋರಿದರು.
“ನಾವು ವಿದ್ಯೆ ಕಲಿಯಬಾರದು, ಬೂದುಗುಂಬಳ ತಿನ್ನಬಾರದು ಎಂದರು. ನಮ್ಮನ್ನು ಗುಲಾಮಗಿರಿಯಲ್ಲಿ ಇಟ್ಟಿದ್ದರು. ಈ ಗುಲಾಮಗಿರಿಯಿಂದ ಹೊರತಂದಿದ್ದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ. ಸಂವಿಧಾನದಿಂದ ದೇಶದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ನಿಮ್ಮ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಆರ್ಎಸ್ಎಸ್ನಿಂದಲ್ಲ” ಎಂದು ಸ್ಪಷ್ಟಪಡಿಸಿದರು.
ವಾಟ್ಸ್ಅಪ್ನಲ್ಲಿ ಬಂದ ಕೋಮುದ್ವೇಷ ಸಂದೇಶ ಓದಿದ ಅವರು, “ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಕೇಳಿದ್ದೆವು. ಆದರೆ ಕೋಮುದ್ವೇಷಕ್ಕೆ ಹನ್ನೆರಡು ಸೂತ್ರಗಳನ್ನು ಬರೆದು ಹಂಚಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ಇಪ್ಪತ್ತನಾಲ್ಕು ಸೂತ್ರಗಳು ಬಂದಿದ್ದವು” ಎಂದು ವಿವರಿಸಿದರು.
“ವಾಟ್ಸ್ಅಪ್ನಲ್ಲಿ ಬಂದ ಸಂದೇಶವೊಂದರಲ್ಲಿ ಈಗ ಶಸ್ತ್ರದ ಬಳಕೆ ಬೇಡ. ಮೊದಲು ಸಾಮಾ, ನಂತರ ದಾನ, ಭೇದ, ಬಳಿಕ ದಂಡ ಪ್ರಯೋಗಿಸಿ ಎಂದು ಪ್ರಚೋದಿಸಲಾಗಿದೆ. ಭಾರತ ದೇಶದ ಭವಿಷ್ಯ ಭೀಕರವಾಗುತ್ತದೆ ಎಂದು ಹಿಂದೂಗಳಿಗೆ ಎಚ್ಚರಿಕೆ ನೀಡಲಾಗಿದೆ. ಭಯಂಕರವಾದ ಪರಿಸ್ಥಿತಿಗೆ ವಿಶ್ವಹಿಂದೂ ಪರಿಷತ್, ಬಜರಂಗದಳ ಕಾರಣವಾಗುತ್ತಿದೆ. ಬಜರಂಗದಳಕ್ಕೆ ತ್ರಿಶೂಲ ಕೊಡುವುದು ಏತಕ್ಕೆ? ಶಾಂತಿ ನಿರ್ಮೂಲನಕ್ಕಾ? ಈ ಬಜರಂಗದಳದಲ್ಲಿ ಇರುವ ಹುಡುಗರೆಲ್ಲ ಹಿಂದುಳಿದ ವರ್ಗದವರು” ಎಂದು ವಿಷಾದಿಸಿದರು.
“ಆರ್ಎಸ್ಎಸ್ಗೆ ಕೇಂದ್ರ ಕಚೇರಿಯೂ ಇಲ್ಲ; ಅದು ನೋಂದಣಿಯೂ ಆಗಿಲ್ಲ. ನಾನು ದಾಖಲೆ ತೆಗಿಸಿಕೊಂಡು ನೋಡಿದ್ದೇನೆ. ಅದಕ್ಕೆ ಗುರುತೇ ಇಲ್ಲ. ಅವರು ರಾಜ್ಯದಲ್ಲಿ ಯಾರಿಗಾದರೂ ಬೆಂಕಿ ಹಚ್ಚಿದರೆ ಈ ಸಂಘಟನೆಯ ಮುಖಂಡರನ್ನು ಬಂಧಿಸಲು ಆಗಲ್ಲ. ಯಾಕೆಂದರೆ ಆರ್ಎಸ್ಎಸ್ ರಿಜಿಸ್ಟರ್ ಆಗಿಲ್ಲ.
“ವಾಟ್ಸ್ಅಪ್ನಲ್ಲಿ ಇಂತಹ ಸಂದೇಶವನ್ನು ಹರಿಯಬಿಟ್ಟವರಿಗೆ ಸಹೋದರ, ಸಹೋದರಿ ಎಂಬ ಬಾಂಧವ್ಯ ಗೊತ್ತಿಲ್ಲ. ಸಂವಿಧಾನದಲ್ಲಿ ಅವಕಾಶ ಇದೆಯಾ? ಇವರ ವಿರುದ್ಧ ಯಾವುದಾದರೂ ಕ್ರಮ ಜರುಗಿಸಲಾಗಿದೆಯೇ” ಎಂದು ಪ್ರಶ್ನಿಸಿದರು.
35 ವರ್ಷಗಳಿಂದ ದೇವರ ವಿಗ್ರಹಗಳನ್ನು ಕೆತ್ತನೆ ಮಾಡುತ್ತಿರುವ ಮುಸ್ಲಿಂ ಕಲಾವಿದನ ಫೋಟೋವನ್ನು ತೋರಿಸಿದ ಅವರು, “ಇವರು ಕೆತ್ತಿರುವ ವಿಗ್ರಹಗಳನ್ನು ಸಾವಿರಾರು ಹಳ್ಳಿಗಳಲ್ಲಿ ಸ್ಥಾಪನೆ ಮಾಡಿದ್ದಾರೆ. ಈ ವಿಗ್ರಹಗಳನ್ನು ಏನು ಮಾಡುತ್ತೀರಿ ಎಂದು ಬಜರಂಗದಳ, ವಿಶ್ವಹಿಂದೂ ಪರಿಷತ್ಗೆ ಕೇಳುತ್ತೇನೆ. ಪಾಪ, ವಿಗ್ರಹಗಳಿಗೆ ಅಪಚಾರವಾಗಿಬಿಟ್ಟೆದಯಲ್ಲ. ಹಲಾಲ್ ಮಾಡಿದ್ದನ್ನು ತಿಂದು ಬಿಟ್ಟರೆ ನಮ್ಮ ದೇವರಿಗೆ ಮೈಲಿಗೆಯಾಗುತ್ತದೆ, ಹಲಾಲ್ ಮುಟ್ಟಬೇಡಿ ಎಂದು ಹೇಳಿಕೊಂಡು ತಿರುಗುತ್ತಿವೆ. ಇಷ್ಟು ವರ್ಷ ತಿಂದುಬಿಟ್ಟದ್ದೇವಲ್ಲ, ನಾವೇನು ಮಾಡುವುದು ಈಗ. ಈಗ ನಮ್ಮ ಶರೀರಕ್ಕೆ ಹೋಗಿ ಬಿಟ್ಟಿದೆ. ನಾವೇನು ಮಾಡೋದು. ನಮ್ಮ ದೇಹ ಅಪವಿತ್ರವಾಗಿಬಿಟ್ಟಿದೆ” ಎಂದು ವ್ಯಂಗ್ಯವಾಡಿಸಿದರು.
ಮೀಟ್ (ದನದ ಮಾಂಸ) ತಿಂದಿದ್ದೇನೆ: ಎಚ್ಡಿಕೆ
ದನದ ಮಾಂಸದ ಕುರಿತು ಮಾತನಾಡಿದ ಎಚ್.ಡಿ.ಕುಮಾರಸ್ವಾಮಿಯವರು, “ಪಶ್ಚಿಮ ಬಂಗಾಳ ಚುನಾವಣೆ ವಿಚಾರ ಸಂಬಂಧ ಮೊನ್ನೆ ಒಂದು ಪುಸ್ತಕ ಓದುತ್ತಿದ್ದೆ. ಪ್ರಧಾನಿ ನರೇಂದ್ರ ಮೋದಿಯವರ ಬಳಿ ಸೋಷಿಯಲ್ ಮೀಡಿಯಾ ಹ್ಯಾಂಡಲಿಂಗ್ ಮಾಡುವ ಒಬ್ಬ ಹೆಣ್ಣುಮಗಳು, ಬಿಜೆಪಿ ನಾಯಕನನ್ನು ಭೇಟಿಯಾಗಿ ಮಾತನಾಡಿದ್ದನ್ನು ದಾಖಲು ಮಾಡಲಾಗಿದೆ. ಈಶಾನ್ಯ ರಾಜ್ಯದ ಬಿಜೆಪಿ ನಾಯಕರು ಚುನಾವಣೆ ನೇತೃತ್ವ ವಹಿಸಲು ಬಂದಿರುತ್ತಾರೆ. ನಾನ್ ವೆಜಿಟೇರಿಯನ್ ಬೇಕು ಅಂತ ಕೇಳುತ್ತಾರೆ. ಕೆಲವು ಕಾರ್ಯಕರ್ತರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಯಾವ ನಾನ್ ವೆಜಿಟೇರಿಯನ್ ಕೇಳಿದರು? ನಮ್ಮಲ್ಲಿ ನಿಷೇಧ ಮಾಡಿದ್ದಾರಲ್ಲ. ಮೀಟ್ (ದನದ ಮಾಂಸ) ಬೇಕು ಅಂತಾರೆ. ಆಶ್ಚರ್ಯ ವ್ಯಕ್ತಪಡಿಸಿದಾಗ, ಟ್ರಾವೆಲ್ ಮಾಡಿ ಸುಸ್ತಾಗಿದೆ ಪ್ರೊಟೀನ್ ಬೇಕಲ್ಲ ಎಂದಿದ್ದಾರೆ. ನಾವು ಕೂಡ ಎಲ್ಲಾದರೂ ಹೋಗುತ್ತೇವಲ್ಲ. ಈಶಾನ್ಯ ರಾಜ್ಯಗಳಿಗೆ ಹೋದೆ. ಅಲ್ಲಿ ಮೀಟ್ ತಿನ್ನುವುದು ಸಂಸ್ಕೃತಿ. ನಾನು ಅವರ ಜೊತೆ ಸೇರಿಕೊಂಡು ಮೀಟ್ ತಿನ್ನೋದು ಅಭ್ಯಾಸ ಮಾಡಿಕೊಂಡಿದ್ದೇನೆ. ಇಲ್ಲಿ ಓ ಇವರು ಗೋಮಾಂಸ ತಿಂದಿರೋರು, ದೇವಸ್ಥಾನದ ಮುಂಭಾಗ ಅಂಗಡಿ ಹಾಕಲು ಬಿಡಬೇಡಿ ಎಂದು ಮಾತನಾಡುತ್ತಾರೆ. ಇದೆಲ್ಲವನ್ನೂ ನೋಡಿಯೇ ಹೋರಾಟಕ್ಕೆ ಸಿದ್ಧವಾಗಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಸಾಹಿತಿ ಕುಂ.ವೀರಭದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್, ಪತ್ರಕರ್ತ ಬಿ.ಎಂ.ಹನೀಫ್, ಆದಿಚುಂಚನಗಿರಿ ಶಾಖಾ ಮಠದ ಸೌಮ್ಯಾನಂದನಾಥ ಸ್ವಾಮೀಜಿ, ಧಾರ್ಮಿಕ ವಿದ್ವಾಂಸ ಮುಫ್ತಿ ಮಹಮ್ಮದ್ ಆಲಿ ಮಿಸ್ಬಾಹಿ ಜಮಾಲಿ ನೂರಿ, ಫಾ.ಸಿರಿಲ್ ವಿಕ್ಟರ್ ಹಾಜರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿರಿ: ಬಜರಂಗದಳ, VHPಯವರು ಸಮಾಜಘಾತುಕರು: ಎಚ್.ಡಿ ಕುಮಾರಸ್ವಾಮಿ



ಜಾತ್ಯಾತೀತ ಅಂತ ಹಿಂದೂಗಳ ಮೇಲೆ ಸವಾರಿ ಮಾಡಲಿಕ್ಕೆ ಈ ಬಾರಿ ಕುಮಾರ ಸ್ವಾಮಿ ನಾಟಕ ಮಾಡಿದರೆ ಈ ಬಾರಿ ಅವರ ಪಕ್ಷ ನೆಲಕ್ಕಚ್ಚೋದು ಗ್ಯಾರಂಟಿ