Homeಕರ್ನಾಟಕನಾನು ಹಿಂದೂ ಅಲ್ಲ, ಲಿಂಗಾಯತ; ನಮ್ಮ ದೇಶದಲ್ಲಿ 12,000 ವಿಭಿನ್ನ ಸಂಸ್ಕೃತಿಗಳಿವೆ: ಕುಂವೀ

ನಾನು ಹಿಂದೂ ಅಲ್ಲ, ಲಿಂಗಾಯತ; ನಮ್ಮ ದೇಶದಲ್ಲಿ 12,000 ವಿಭಿನ್ನ ಸಂಸ್ಕೃತಿಗಳಿವೆ: ಕುಂವೀ

- Advertisement -
- Advertisement -

“ನಾನು ಹಿಂದೂ ಅಲ್ಲವೆಂದು ವಿದ್ಯುಕ್ತವಾಗಿ ಘೋಷಿಸುತ್ತಿದ್ದೇನೆ. ನಾನು ಲಿಂಗಾಯತ ಸಮುದಾಯದಿಂದ ಬಂದವನು” ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಲೋಕನಾಯಕ ಜೆ.ಪಿ.ವಿಚಾರ ವೇದಿಕೆ ವತಿಯಿಂದ ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ, “ಸರ್ವ ಜನಾಂಗದ ಶಾಂತಿಯ ತೋಟ: ಒಂದು ಭಾವೈಕ್ಯತೆಯ ಚರ್ಚೆ” ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

“1824ರಲ್ಲಿ ಬಂದ ಶಬ್ದ ಹಿಂದೂ. ಈ ದೇಶದಲ್ಲಿ 12,000 ಜಾತಿಗಳಿವೆ. 12,000 ಸಂಸ್ಕೃತಿಗಳಿವೆ. ಅಷ್ಟು ವೈವಿಧ್ಯಮಯ ದೇಶ ಯಾವುದಾದರೂ ಇದ್ದರೆ ಅದು ನನ್ನ ದೇಶ. ಹೀಗಾಗಿ ನಾವೆಲ್ಲ ಹಿಂದೂ ಎಂದು ಹೇಳುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others

ನಿಜಲಿಂಗಸ್ವಾಮಿ ಎಂಬ ಹುಡುಗ 2ನೇ ವಯಸ್ಸಿನಲ್ಲಿ ಜಾತ್ರೆಯಲ್ಲಿ ತಪ್ಪಿಸಿಕೊಂಡಿದ್ದ. ಸುಮಾರು 22 ವರ್ಷಗಳ ನಂತರ ಆ ಹುಡುಗ ಪತ್ತೆಯಾದ. ಉಸ್ಮಾನ್ ಎಂಬವರ ಮುಸ್ಲಿಂ ಕುಟುಂಬದಲ್ಲಿ ಆ ಹುಡುಗ ಬೆಳೆದ. ಉಸ್ಮಾನ್ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಆ ಹುಡುಗನನ್ನು ಇರಿಸಿದ್ದರು. ಹಿಂದೂ ಅಂತ ತಿಳಿದ ಬಳಿಕ ಹಿಂದೂ ಸಂಪ್ರದಾಯದ ಊಟವನ್ನೇ ನೀಡಿದರು. ಅವನದ್ದೇ ಆದ ನಿಲುವನ್ನು ಬೆಳೆಸಿದರು. ಹೀಗೆ ಇಪ್ಪತ್ತೆರಡು ವರ್ಷಗಳ ಕಾಲ ನೋಡಿಕೊಂಡಿದ್ದಾರೆ. ನಿಜಲಿಂಗ ಎಂದೇ ಆತನ ಹೆಸರಿದೆ. ಯಾವುದೇ ಬದಲಾವಣೆ ಮಾಡಿಲ್ಲ. ಇದು ನಮ್ಮ ಭಾರತ ಎಂದು ತಿಳಿಸಿದರು.

ನಮ್ಮಲ್ಲಿ ಎರಡು ರೀತಿಯ ದೆವ್ವಗಳಿವೆ. ಹಿರಿಯರ ಹಬ್ಬ ಮಾಡಿದಾಗ ಕೆಲವು ದೆವ್ವಗಳು ಸ್ವರ್ಗಕ್ಕೆ ಹೋಗುತ್ತವೆ. ಇನ್ನು ಕೆಲವು ದೆವ್ವಗಳಿವೆ- ಗೋಳ್ವಲ್ಕರ್‌‌, ನಾಥೂರಾಮ್ ಗೋಡ್ಸೆ, ಹೆಗಡೇವಾರ್‌- ಇವು ಆಗಾಗ್ಗೆ ಕೆಲವರ ಮೈಮೇಲೆ ಬರುತ್ತವೆ ಎಂದು ವಿಷಾದಿಸಿದರು.

ಬಹಳ ಸಜ್ಜನರು ಕೆಲವು ಹೇಳಿಕೆಗಳನ್ನು ಕೊಡುತ್ತಾರೆ. ಅವರ ಮೈಮೇಲೆ ದೆವ್ವ ಬಂದಾಗ ಮುಸ್ಲಿಂ ವಿರೋಧಿಯಾಗಿ ಮಾತನಾಡುತ್ತಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಂತೂ ಒಳ್ಳೆಯ ವ್ಯಕ್ತಿ, ಶಿಕ್ಷಿತ. ಅವರು ಇದ್ದಕ್ಕಿದ್ದಂತೆ ಪಂಚರ್‌ ಹಾಕುವವರ ಬಗ್ಗೆ ಮಾತನಾಡುತ್ತಾರೆ. ಯಾಕೆಂದರೆ ಅವರ ಮೈಮೇಲೆ ಗೋಳ್ವಲ್ಕರ್‌ ಪ್ರೇತ ಬಂದಿರುತ್ತದೆ. ರೇಣುಕಾಚಾರ್ಯ ಅಂತ ಇದ್ದಾರೆ. ಅವರೂ ಬಹಳ ಒಳ್ಳೆಯವರು. ಅವರ ಮೇಲೆ ಪ್ರೇತ ಬಂದಾಗ ಏನೋ ಹೇಳಿಕೆ ನೀಡುತ್ತಾರೆ. ವಿಜಯಪುರದಲ್ಲಿ ಒಬ್ಬ ಸಜ್ಜನರು ಇದ್ದಾರೆ. ಅವರು ಹೆಸರು ಬಸವರಾಜ ಯತ್ನಾಳ್. ಅವರು ಕೂಡ ವಿಚಿತ್ರವಾದ ಹೇಳಿಕೆಗಳನ್ನು ನೀಡುತ್ತಾರೆ ಎಂದು ಟೀಕಿಸಿದರು.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ್ ದಾಸ್ ಮಾತನಾಡಿ, “ಮಾನವನ ದುಃಖ ದುಮ್ಮಾನಗಳನ್ನು ಪರಿಹಾರ ಮಾಡುವುದಕ್ಕೆ ಧರ್ಮಗಳು ಹುಟ್ಟಿದವು. ಹಾಗಾಗಿ ದಮನಕ್ಕೆ ಒಳಗಾಗಿರುವ ಜನರ ದನಿಯೇ ಧರ್ಮ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹಾಗಾಗಿ ನಾವು ಧರ್ಮ ವಿರೋಧಿಗಳಾಗಬೇಕಿಲ್ಲ. ಆದರೆ ನಮ್ಮೆಲ್ಲ ಸುತ್ತ ಈ ರೀತಿಯ ಬೆಳವಣಿಗೆಗಳು ಯಾಕೆ ಆಗುತ್ತಿವೆ? ಧರ್ಮವು ಅಪ್ರಜಾಪ್ರಭುತ್ವಗೊಂಡಾಗ ಅದು ಮೂಲಭೂತವಾದವಾಗುತ್ತದೆ. ಇದು ಮನುಕುಲಕ್ಕೆ ಬಹಳ ಹಾನಿಕಾರಕ” ಎಂದು ಎಚ್ಚರಿಸಿದರು.

ಕಾಶ್ಮೀರದಲ್ಲಿ ಶೇ. 92ರಷ್ಟು ಜನರು ಮುಸ್ಲಿಮರಿದ್ದಾರೆ. ಅಲ್ಲಿನ ಮುಸ್ಲಿಂ ಮಹಿಳೆಯರು ಬುರ್ಕಾ ಹಾಕಲ್ಲ. ಆದರೆ ಇಸ್ಲಾಮಿಕ್ ಮೂಲಭೂತವಾದಿಗಳು, ಬುರ್ಕಾ ಹಾಕಲೇಬೇಕೆಂದು ಧಮ್ಕಿ ಹಾಕುತ್ತಿದ್ದಾರೆ. ಅದು ಮೂಲಭೂತವಾದ. ಮೂರು ನಾಮ ಹಾಕಬೇಕು, ತಿಲಕ ಇಡಬೇಕು, ಗಡ್ಡ ಬಿಡಬೇಕು, ಪಾದಪಾದ ಪೂಜೆ ಮಾಡಬೇಕು ಎಂದು ಹೇರುವುದು ಮೂಲಭೂತವಾದ. ಇದನ್ನು ಎದುರಿಸದಿದ್ದರೆ ಶಾಂತಿ ನೆಮ್ಮದಿ ಇರುವುದಿಲ್ಲ. ಹೀಗಾಗಿ ನಾವು ಧರ್ಮ ವಿರೋಧಿಗಳಾಗಬೇಕಿಲ್ಲ. ಧರ್ಮವನ್ನು ಅಪ್ರಜಾಪ್ರಭುತ್ವಗೊಳಿಸುವ ಪ್ರಕ್ರಿಯೆಯನ್ನು ವಿರೋಧ ಮಾಡಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ‘ಮಾಧ್ಯಮಗಳು ಟಿಆರ್‌ಪಿ ಹಿಂದೆ ಹೋಗುತ್ತಿವೆ. ಹಿಜಾಬ್‌ ಧರಿಸದೆ ಹೋದ ನೂರಾರು ವಿದ್ಯಾರ್ಥಿಗಳಿದ್ದರು. ಅವರನ್ನು ಮಾಧ್ಯಮಗಳು ತೋರಿಸಲಿಲ್ಲ. ತರಗತಿಯಲ್ಲಿ ಹಿಜಾಬ್ ಧರಿಸಿ ಪಾಠ ಕೇಳಿದರೆ ಶಿಕ್ಷಣ ವ್ಯವಸ್ಥೆ ಕುಸಿದು ಹೋಗುತ್ತಿರಲಿಲ್ಲ. ಅದೇ ರೀತಿ ತಲೆ ಮೇಲೆ ಹಿಜಾಬ್‌ ಇಲ್ಲದೆ ಪಾಠ ಕೇಳಿದರೆ ಇಸ್ಲಾಂ ಧರ್ಮ ಕೆಟ್ಟು ಹೋಗುವುದಿಲ್ಲ. ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮವಿದೆ” ಎಂದು ವಿವರಿಸಿದರು.

“ನಾವು ದೇಶದ ಬಗ್ಗೆ ಚಿಂತನೆ ಮಾಡಬೇಕಿದೆ. ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕಾರ್ಖಾನೆಗಳು ಮುಚ್ಚಿವೆ. ಇದರ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿಲ್ಲ. ಲಕ್ಷಾಂತರ ಕೋಟಿ ರೂ. ಸಾಲವನ್ನು ಸರ್ಕಾರ ಮಾಡಿದೆ. ಕೆಲವು ರಾಜಕಾರಣಿಗಳು ನನ್ನ ಮೈಯಲ್ಲಿ ಹಿಂದೂ ರಕ್ತ ಹರಿಯುತ್ತಿದೆ ಎನ್ನುತ್ತಾರೆ. ಮಣಿಪಾಲ್‌ ಆಸ್ಪತ್ರೆಗೆ ಹೋಗಿ ಅರ್ಜೆಂಟಾಗಿ ಎರಡು ಬಾಟಲ್‌ ಹಿಂದೂ ರಕ್ತ ಬೇಕು ಎಂದರೆ ಕೊಡುತ್ತಾರಾ?” ಎಂದು ಪ್ರಶ್ನಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಸೌಮ್ಯಾನಂದ ಸ್ವಾಮೀಜಿ, ಇಸ್ಲಾಂ ಧಾರ್ಮಿಕ ವಿದ್ವಾಂಸರಾದ  ಮುಫ್ತಿ ಮಹಮ್ಮದ್‌ ಅಲಿ ಮಿಸ್ಬಾಹಿ ಜಮಾಲಿ ನೂರಿ, ಆರ್ಚ್‌ ಡಯಾಸಿಸ್‌ ಕಮ್ಯುನಿಕೇಷನ್‌ ಸೆಂಟರ್‌ ನಿರ್ದೇಶಕರಾದ ಫಾ. ಸಿರಿಲ್ ವಿಕ್ಟರ್‌ ಸರ್ವಧರ್ಮ ಸಮನ್ವಯತೆ ಸಾರುವ ಭಾಷಣ ಮಾಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿರಿ: ಕೋಮುದ್ವೇಷದ ವಿರುದ್ಧ ಪಾದಯಾತ್ರೆ ಮಾಡುವೆ: ಎಚ್‌.ಡಿ.ಕುಮಾರಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...