HomeUncategorizedಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

ಹಿಂದೂಸ್ಥಾನ ಯಾರಪ್ಪನದೂ ಅಲ್ಲ: ರಾಹತ್ ಇಂದೋರಿ ಅವರ ಒಂದು ಗಜಲ್ ಓದಿ

- Advertisement -
- Advertisement -

ಈಗಿನ ಸುದ್ದಿ ಬರೀ ಲಾಠಿ -ಬೂಟಿನ ಸದ್ದಿನ ಸುದ್ದಿ. ಅಸ್ಸಾಮಿನೊಳಗ ಸುರು ಆದ ಈ ಸದ್ದು ಈಗ ಎಲ್ಲಾ ಕಡೆ ಝಂಕಾರ ಬೀಟ್ಸ ಜೊತೆ ಕೇಳಲಿಕ್ಕೆ ಹತ್ತೇದ.

ಕಾಲೇಜು- ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಯಿ ಮುಚ್ಚಿಕೊಂಡು ಅಧ್ಯಯನ ಮಾಡಬೇಕು. ಅದನ್ನ ಬಿಟ್ಟುಕೊಟ್ಟು ಪ್ರತಿಭಟನೆ – ಹೋರಾಟ ಎಲ್ಲಾ ಯಾಕ ಮಾಡಬೇಕು? ಅಂತ ಕೆಲವರು ಕೇಳಾಕ ಹತ್ಯಾರ. ನೀವು ಗದ್ದಲಾ ಮಾಡಿದರ ನಾವು ಬಡೀತೇವಿ ಅಂತ ಹೇಳಿ ಅದು ಖರೇ ಅನ್ನೋದನ್ನ ತೋರಿಸಲಿಕ್ಕೆ ಹತ್ಯಾರ.

ಇದೆಲ್ಲಾ ಯಾಕ ಸುರು ಆತು? ಇದು ಪಾರ್ಲಿಮೆಂಟ ಭವನದಿಂದ ಸುರು ಆತು. ಅಲ್ಲೆ ನಮ್ಮನ್ನ ಪ್ರತಿನಿಧಿಸುವ ಮಹಾಮಹೋಪಾಧ್ಯಾಯರೆಲ್ಲಾ ಸೇರಿ `ಹೊರಗಿನಿಂದ ಬಂದವರನ್ನ ಹಿಡದು ಹೊರಗ ಹಾಕೋ’ ಕಾನೂನು ಖಲಬಲಿಯಿಂದ ಪಾಸು ಮಾಡಿದರು. ಅವರ ಪ್ರಕಾರ ಇದು ಅಸ್ಸಾಮು ಮತ್ತು ಇನ್ನು ಕೆಲವು ಪೂರ್ವ ಹಾಗೂ ಈಶಾನ್ಯದ ರಾಜ್ಯಗಳಿಗೆ ಅನ್ವಯ ಆಗಬೇಕಾಗಿತ್ತು. ಆದರ ಅವರಿಗೆ ಭಾಳ ದೊಡ್ಡ ಮನಸ್ಸು ಇದ್ದದ್ದಕ್ಕ ಇಡೀ ದೇಶಕ್ಕ ಲಾಗೂ ಮಾಡೋ ಹಂಗ ಅದನ್ನ ಮಾಡಿದರು.

ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ರಕ್ತ ಬರೋ ಹಂಗ ಹೊಡದು, ಅವರ ಮ್ಯಾಲೆ ದೌರ್ಜನ್ಯ ಮಾಡಿ ಅವಮಾನ ಮಾಡಿದ್ದನ್ನ ಭಾಳ ಜನಾ ಖಂಡಿಸಲಿಕ್ಕೆ ಹತ್ಯಾರ. ಆದರ ಅದನ್ನ ಬೆಂಬಲಿಸೋರ ಸಂಖ್ಯಾನೂ ಏನು ಕಮ್ಮಿ ಇಲ್ಲ. ಅವರು `ಹಂಗ ಆಗಬೇಕು’, `ದಂಡಂ ದಶಗುಣಂ’, `ಜಿಸಕಿ ಲಾಠ, ಉಸಕೀ ಭೈಂಸ್’ ಅಂತೆಲ್ಲಾ ಸಮಾಜ ವಿರೋಧಿ ಮಾಧ್ಯಮಗಳಾದ ವಾಟ್ಸಪ್ಪು – ಫೇಸುಬುಕ್ಕಿನ್ಯಾಗ ಚೀರಲಿಕ್ಕೆ ಹತ್ಯಾರ. ಈಗ ಆಗಲಿಕ್ಕೆ ಹತ್ತಿದ್ದು ಅವರ ಪ್ರಕಾರ ಸರಿ.

ಇದರ ಬಗ್ಗೆ ಒಂದು ಸ್ವಲ್ಪ ಉಲ್ಟಾ ವಿಚಾರ ಮಾಡೋಣ. ಎನ್‍ಡಿಎ ಸರಕಾರದ ಜಾಗಾದಾಗ ಯುಪಿಎ ಇತ್ತು ಅನಕೋರಿ, ಆಗ ಪೊಲೀಸರು ಬನಾರಸ ಹಿಂದೂ ಯುನಿವರ್ಸಿಟಿ ಒಳಗ ಹೊಕ್ಕು ಹುಡುಗ- ಹುಡುಗಿಯರನ್ನು ಹೊಡದಿದ್ದರೂ ಅಂತ ಅನಕೋರಿ ಆವಾಗನೂ ಅವರದು ಇದ ರೀತಿ ಪ್ರತಿಕ್ರಿಯಾ ಇರತಿತ್ತ? ಈ ನುಡಿಮುತ್ತುಗಳನ್ನ ಬಳಸಿ ಅವರು ಇದನ್ನ ಸಮರ್ಥಿಸಿ ಕೊಳ್ಳತಿದ್ದರೇನು?

ಇಷ್ಟರಾಗ ನಮ್ಮ ಮಹಾಮಹಿಮ ಪಂತ ಪ್ರಧಾನರ ಬಾಯಿಯಿಂದ ಒಂದು ಪವಿತ್ರ ವಾಕ್ಯ ಉದರಿ ಬಿದ್ದದ. ಅದೇನಂದರ ‘ಹಿಂಸಾಕೃತ್ಯಗಳನ್ನ ಮಾಡಲಿಕ್ಕೆ ಹತ್ತವರು ಯಾರು ಅಂತ ಎಲ್ಲಾರಿಗೂ ಗೊತ್ತದ. ಅವರವರು ಹಾಕ್ಕೊಂಡ ಅರಿವಿಯಿಂದ ಗೊತ್ತಾಗೇ ಬಿಡತದ’ ಅಂತ ಅಪರೂಪಕ್ಕ ಒಂದು ಖರೇ ಹೇಳ್ಯಾರ. ಯಾಕಂದರ ಹೊಡದವರು, ಬಡದವರು, ಖಾಕಿ ಸಮವಸ್ತ್ರ ಹಾಕಿಕೊಂಡ ಪೊಲೀಸರು. ದೆಹಲಿ ಪೋಲೀಸರು ದೆಹಲಿ ರಾಜ್ಯದ ಕೆಳಗ ಕೆಲಸ ಮಾಡೋರಲ್ಲ. ನೇರವಾಗಿ ಕೇಂದ್ರ ಸರಕಾರದ ಕೈಕೆಳಗ ದುಡಿಯೋರು. ಅವರ ಚಕ್ರವರ್ತಿ ಅಂದರ ಕೇಂದ್ರದ ಗೃಹ ಮಂತ್ರಿ. ಹಿಂಗಾಗಿ ಹಿಂಸೆಯನ್ನ ಆರ್ಡರ್ ಮಾಡಿದವರು ಯಾರು ಅಂತ ಎಲ್ಲಾರಿಗೂ ಗೊತ್ತಾಗತದ.

ಇನ್ನ ಕೆಲವರು ಟೀ ಷರ್ಟು – ಜೀನ್ಸ ಪ್ಯಾಂಟ್ ಹಕ್ಕೊಂಡು, ಪೊಲೀಸರ ಹೆಲ್ಮೇಟು, ಮುಖದ ಮ್ಯಾಲೆ ಮುಸುಗು ಹಾಕಿಹೊಂಡು ಸಣ್ಣಸಣ್ಣ ಹುಡುಗಿಯರನ್ನು ಹುಡುಕಿಹುಡುಕಿ ದೊಡ್ಡ ದೊಡ್ಡ ಲಾಠಿ ತೊಗೊಂಡು ಹೊಡದಾರ. ಅವರ ಅರಿವಿ ನೋಡಿದರ ಅವರು ಯಾರು ಅಂತ ಇನ್ನೋ ಗೊತ್ತಾಗವಲ್ಲದು. ಇನ್ನೇನು ಇನ್ನೊಂದು ಸ್ವಲ್ಪ ದಿವಸದಾಗ ಗೊತ್ತಾಗತದ. ನಮ್ಮ ನಾಯಕರು ದಾಡಿ- ಪೈಜಾಮಾ- ಬುರ್ಖಾ ಮನಸಿನ್ಯಾಗ ಇಟಗೊಂಡು ಹೇಳಿದ್ದರೋ ಏನೋ. ನಮಗಂತೂ ಅಂಥಾ ಅರಿವಿ ಕಾಣಲಿಲ್ಲ.

ಇಷ್ಟು ಎಲ್ಲದಕ್ಕೂ ಕಾರಣ ಏನು? ಹೊರಗಿನಿಂದ ಬಂದವರನ್ನು ಹೊರಗ ಹಾಕೋ ಹೆಸರಿನ್ಯಾಗ ನಮ್ಮ ಅಣ್ಣತಮ್ಮಂದಿರನ್ನ ಬ್ಯಾರೆ ಮಾಡೋ ಪಿತೂರಿ ನಡದದ.

ಭಾರತದ ವಿಭಜನಾ 1947 ಆದಾಗ ಹಾಗೂ ಪಾಕಿಸ್ತಾನದ ವಿಭಜನಾ 1971 ರೊಳಗ ಭಾಳ ಕುಟುಂಬ ಈ ನಾಲ್ಕೂ ದೇಶಗಳ ಗಡಿ ದಾಟಿ ಹೋದರು, ಬಂದರು. ಅವರು ಈಗ 50-70 ವರ್ಷಗಳಿಂದ ಈ ದೇಶದ ನೀರು ಕುಡದು, ಇಲ್ಲೆ ಮಣ್ಣಿನ್ಯಾಗ ಬೆವರು ಸುರಿಸಿಕೊಂಡು, ದುಡಕೊಂಡು, ದುಃಖ ಪಟಕೊಂಡು ಇದ್ದಾರ. ಇಷ್ಟು ವರ್ಷ ಆಗಲಾರದ ಈ ನಿರಾಶ್ರಿತರ ಸಮಸ್ಯಾ ಈಗ ಬಂದಂಗ ಕಾಣತದ. ಯಾಕಂದರ ಈ ದೇಶದಾಗ ಯಾವ ಸಮಸ್ಯೆನೂ ಇಲ್ಲ ಈಗ. ಬಡತನಾ ಇಲ್ಲ, ಹಸಿವು ಇಲ್ಲಾ, ನಿರಕ್ಷರತೆ ಇಲ್ಲಾ, ದೌರ್ಜನ್ಯ ಇಲ್ಲ, ಬಾಲ್ಯವಿವಾಹ ಇಲ್ಲ, ದೇವದಾಸಿ ಪದ್ಧತಿ ಇಲ್ಲ, ಬಾಲ ಕಾರ್ಮಿಕರು ಇಲ್ಲ, ಯಾವುದೇ ರೋಗ – ರುಜಿನ ಇಲ್ಲ, ಎಲ್ಲರಿಗೂ ಬೇಕಾದಷ್ಟು ಶಿಕ್ಷಣ ಸಿಕ್ಕದ, ಸಾಕಷ್ಟು ಉದ್ಯೋಗ ಅವ. ನಮ್ಮ ಆರ್ಥಿಕತೆ ಐದೋ – ಆರೋ ಟ್ರಿಲಿಯನ್ ಡಾಲರ್ ಕಡೆ ದಾಪುಗಾಲು ಹಾಕಲಿಕ್ಕೆ ಹತ್ತೇದ. ಹಿಂಗಾಗಿ ಇವೆಲ್ಲಾ.

ಹಿಂಗಾಗಿ ನಾಗರಿಕತೆ ತಿದ್ದುಪಡಿ ಕಾಯಿದೆ, ರಾಷ್ಟ್ರೀಯ ನಾಗರಿಕರ ದಾಖಲೆಪಟ್ಟಿ ಅಂತೆಲ್ಲಾ ಅವರನ್ನ ಹುಡುಕೋದು, ಕುತಗೀ ಹಿಡದು ಹೊರಗ ಹಾಕೋದು ಇಂಥಾ ವಿಚಾರ ನಡದದ. ಇದು ಉಚ್ಚ ಶಿಕ್ಷಣ ಪಡದ ವಿದ್ಯಾರ್ಥಿಗಳಿಗೆ ಮನಸು ಬರವಲ್ಲತು. ಹಿಂದೂ – ಮುಸ್ಲಿಮ ಸ್ವಾತಂತ್ರ್ಯ ಹೋರಾಟಗಾರರ ಪ್ರಾಣದ ಆಹುತಿ ಪಡದ ಮ್ಯಾಲೆ ಈ ದೇಶ ಪ್ರಜಾತಂತ್ರ ಆಗೇದ. ಈಗ ಅದನ್ನ ಧರ್ಮದ ಆಧಾರದ ಮ್ಯಾಲೆ ಒಡದು ಹಾಕಿದರ ಜನಸತ್ತಾ ಹೋಗಿ ಜನಾ ಸತ್ತಾರ ಆಗತದ ಅಂತ ಅವರ ಚಿಂತಿ.

ಅದಕ್ಕೆ ಈ ದೇಶ ಬರೇ ಹಿಂದೂಗಳದ್ದಲ್ಲ. ಬರೇ ಮೇಲುಜಾತಿಯವರದಲ್ಲ, ಬರೇ ಸಾಹುಕಾರರದ್ದಲ್ಲ. ಬರೇ ಗಂಡಸರದಲ್ಲ, ಬರೇ ಅಧಿಕಾರಸ್ಥರದಲ್ಲ, ಬರೇ ಜಮೀನುದಾರರು, ವ್ಯಾಪಾರಸ್ಥರು, ಕಾರಖಾನಿ ಮಾಲಿಕರದ್ದಲ್ಲ, ಇದು ಎಲ್ಲರಿಗೂ ಸೇರಿದ್ದು. ಐದು ಸಾವಿರ ವರ್ಷದ ಶ್ರೀಮಂತ ಬಹು ಸಾಂಸ್ಕøತಿಕ ನಾಗರಿಕತೆಯನ್ನು ಬರೇ ಐದು ವರ್ಷ ಆಳಲಿಕ್ಕೆ ಪರವಾನಗಿ ಪಡದು ಬಂದಿರೋರು ಹಾಳು ಮಾಡಬಾರದು ಅಂತ ಅವರ ಆಸೆ. ನಮ್ಮ ಯಾರನ್ನೂ ಸಾಕ್ಷ್ಯ, ಪ್ರಮಾಣ, ಗುರುತು, ಪುರಾವೆ ಕೇಳಬ್ಯಾಡರಿ. ಅಣ್ಣ- ತಮ್ಮಂದಿರಿಗೆ ಅಣ್ಣಾ ತಮ್ಮನಂಗ ಇರಲಿಕ್ಕೆ ಬಿಡರಿ ಅಂತ ಅವರ ಬೇಡಿಕೆ.

ಈ ಗುಂಗಿನ್ಯಾಗ ಶಾಯರಿ ಸರದಾರ ರಾಹತ್ ಇಂದೋರಿ ಅವರ ಒಂದು ಗಜಲ್ ಕೇಳೋಣು. ಏನಂತೀ?

ಏನು ?
ವಿರೋಧ ಮಾಡ್ತಾರಂತ?
ಮಾಡ್ಲಿ ಬಿಡು,
ಅವರೇನೀಗ
ನಮಗ ಜೀವಕ್ಕ ಜೀವಾ
ಕೊಡವರದಾರು? ಇಲ್ಲಲಾ?

ಇದೆಲ್ಲಾ ಬರೇ ಹೊಗಿ
ಬರೇ ಒಣಾ ಧೂಳು-ಹೊಗಿ ಅಷ್ಟ.
ಇದನ್ನ ಏನರ
ಮುಗಲು ಅಂತ ತಿಳ್ಕೊಂಡೀಯೇನು ಮತ್ತ?
ಇಲ್ಲಲಾ?

ಒಮ್ಮೆ ಬೆಂಕಿ ಬಿತ್ತೆಪಾ ಅಂದರ
ಕಿವಿ ತುಂಬುವಂಗ
ಕೆಟ್ಟ ಸುದ್ದಿ ಬರ್ತಾವ ನೋಡು
ಮನಿ ಎಲ್ಲಾ ಉರಕೊಂಡು ಬಿದ್ದಿದ್ದು,
ಬಾಯಿಬಾಯಿ ಬಡಕೊಂಡು ಅಳೋದು,
ಗೊತೈತಿಲ್ಲ?
ಇಲ್ಲೇನು ಬರೇ
ನಮ್ಮವ ಮನೀ
ಅದಾವೇನು?
ಇಲ್ಲಲಾ?

ನೋಡಪಾ ಯಪ್ಪಾ
ನಮ್ಮ ಬಾಯಾಗ ಬಂದದ್ದ ಮಾತೆಲ್ಲಾ
ಖರೇನ ಇರತೇತಿ
ನಮ್ಮ ಬಾಯಾಗೇನರ
ನಿಮ್ಮ ನಾಲಿಗಿ ಐತೇನ?
ಇಲ್ಲಲಾ?

ನಮ್ಮ ದುಷ್ಮನಗಳೇನೂ
ಕಮ್ಮಿ ಇಲ್ಲ ಅನ್ನೋದು
ನನಗ ಗೊತೈತಿ
ಆದರ ನಮ್ಮಂಗ ಅವರೇನು
ಮುಟಿಗ್ಯಾಗ
ಜೀವಾ ಇಟಗೊಂಡ
ಹೊಂಟಾರೇನು?
ಇಲ್ಲಲಾ?

ಇವತ್ತೇನು ಗಾದಿ ಮ್ಯಾಲೆ ಕುತುಗೊಂಡು
ಮೆರಿಲ್ಯಾಕ ಹತ್ಯಾರಲಾ
ಅವರು ನಾಳೆ ಇರಂಗಿಲ್ಲಾ
ಅವರು ಇಲ್ಲೆ
ಬಾಡಗೀಲೆ ಇರಾಕ ಬಂದಾವ್ರು
ಏನು ಈ ಮನಿ
ಇವರ ಸ್ವಂತದ್ದೇನು?
ಅಲ್ಲಲಾ?

ಎಲ್ಲಾರ ರಕ್ತ ಬಿದ್ದು ಬಿದ್ದು ಕೆಂಪಾಗೇತಿ
ಈ ಮಣ್ಣು
ಯಾರದರ
ಅಪ್ಪನ ಮನೀದೇನು
ಈ ಹಿಂದುಸ್ತಾನಾ?
ಅಲ್ಲಲಾ?

ವಿಡಿಯೋ ನೋಡಿ:

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...