ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯ ಭಾಗವಾಗಿ ಸಲ್ಲಿಸಲಾಗಿರುವ 26 ಪೊಸಿಷನ್ ಪೇಪರ್ಗಳು ವಿವಾದ ಕಾರಣವಾಗಿವೆ. ಇತಿಹಾಸ ವಿಷಯದ ತಜ್ಞರು ಸಲ್ಲಿಸಿರುವ ವರದಿಯ ಶಿಫಾರಸ್ಸಿನಲ್ಲಿ “ಭಾರತದ ಇತಿಹಾಸದಲ್ಲಿ ನಡೆದ ಹಿಂದೂ ಹತ್ಯಾಕಾಂಡಗಳು ಸೇರಿಸಬೇಕು” ಎಂಬುದಕ್ಕೆ ಇತಿಹಾಸ ತಜ್ಞರು, ಪ್ರಾಧ್ಯಾಪಕರು, ನಿವೃತ್ತ ಉಪಕುಲಪತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಇಂತಹ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸುವುದು ಮಕ್ಕಳ ಮನಸ್ಸಿನಲ್ಲಿ ಪರಸ್ಪರ ದ್ವೇಷ, ವೈಷಮ್ಯದ ಭಾವನೆಯನ್ನು ಮೂಡಿಸುತ್ತದೆ. ಇಂತಹ ಪಠ್ಯ ಸಂವಿಧಾನದ ಆಶಯಗಳಿಗೆ ಮತ್ತು ಶೈಕ್ಷಣಿಕ ಚೌಕಟ್ಟಿಗೆ ವಿರುದ್ಧವಾಗಿದ್ದು, ಸಮಾಜದ ಶಾಂತಿ, ಸೌಹಾರ್ದತೆ, ಸಹಭಾಳ್ವೆಗೆ ಭಂಗ ತರುತ್ತದೆ ಎಂದು ಗುಲ್ಬರ್ಗಾ ಕೇಂದ್ರಿಯ ವಿಶ್ವವಿದ್ಯಾಲಯದ ವಿಶ್ರಾಂತ ಸಮ-ಕುಲಪತಿಗಳಾದ ಪ್ರೊ. ಎಸ್.ಚಂದ್ರಶೇಖರ್, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಓ. ಅನಂತರಾಮಯ್ಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಅಶೋಕ್ ಶೆಟ್ಟರ್, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಅಶ್ವತ್ಥನಾರಾಯಣ ಸೇರಿದಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಎನ್ಇಪಿ: ಫೈಥಾಗರಸ್ ಥಿಯರಿ ಸುಳ್ಳು, ಸಂಸ್ಕೃತ, ಮನುಸ್ಮೃತಿ ಕಲಿಕೆಗೆ ಪ್ರಸ್ತಾಪ: ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ
ಭಾರತದ ಇತಿಹಾಸದಲ್ಲಿ ಅನೇಕ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಹಿಂದೂ – ಬೌದ್ಧರ ನಡುವೆ, ಹಿಂದೂ – ಜೈನರ ನಡುವೆ, ಹಿಂದೂ – ಹಿಂದೂಗಳ ನಡುವೆಯೇ ಹತ್ಯಾಕಾಂಡಗಳು ನಡೆದಿವೆ. ಅವುಗಳನ್ನು ಮರೆಮಾಚಿ ಯಾವುದೋ ಒಂದು ಧರ್ಮಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತದ ಇತಿಹಾಸದಲ್ಲಿ ಹಿಂದೂಗಳ ಹತ್ಯಾಕಾಂಡವಷ್ಟೆ ನಡೆದಿದೆ ಎಂದು ಬಿಂಬಿಸುವುದು ಚರಿತ್ರೆಗೆ ಮಾಡಿದ ಅಪಚಾರವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚರಿತ್ರೆಯಲ್ಲಿ ನಡೆದಿರುವ ಹತ್ಯಾಕಾಂಡಗಳಿಗೆ ಮೊದಲೂ ಇಲ್ಲ, ಕೊನೆಯೂ ಇಲ್ಲ. ಹರಪ್ಪ ನಾಗರಿಕತೆಯ ಅಂತ್ಯಕ್ಕೆ ಹೊರಗಿನಿಂದ ಬಂದ ಆಕ್ರಮಣಕಾರರು ಕಾರಣವೆಂದು ಹಲವು ಇತಿಹಾಸಕಾರರು ಬರೆದಿಲ್ಲವೇ? ಅಶೋಕ ಕಳಿಂಗ ರಾಜ್ಯದ ಮೇಲೆ ನಡೆಸಿದ ಯುದ್ಧದ ಭೀಕರತೆ ಕುರಿತು ತನ್ನ ಶಾಸನದಲ್ಲಿಯೇ ತಿಳಿಸಿಲ್ಲವೇ? ಮಾಗಡಿ ಸಮೀಪದ ಕಲ್ಯದಲ್ಲಿ ಶ್ರೀವೈಷ್ಣವರು ಜೈನರನ್ನು ಕೊಲ್ಲಲಿಲ್ಲವೇ? ರೈತರ ಮೇಲಿನ ತೆರಿಗೆ ವಿರೋಧಿಸಿದ ನೂರಾರು ಜಂಗಮರನ್ನು ಮಾತುಕತೆಗೆ ಕರೆದು ಚಿಕ್ಕದೇವರಾಜ ಒಡೆಯರ್ ಹತ್ಯೆಗೈಯಲಿಲ್ಲವೇ? ಮೈಸೂರು ರಾಜ್ಯದಲ್ಲಿ ಮರಾಠರು ಮಾಡಿದ ಲೂಟಿ ಮತ್ತು ಸಾವು ನೋವುಗಳಿಗೆ ಲೆಕ್ಕವಿದೆಯೆ? ದಲಿತರು, ಬುಡಕಟ್ಟು ಜನಾಂಗಗಳ ಮೇಲೆ ನೂರಾರು ಹತ್ಯಾಕಾಂಡಗಳು ನಡೆದಿಲ್ಲವೇ? ಅವುಗಳಲ್ಲಿ ತಮಗೆ ಬೇಕಾದ್ದನ್ನು ಮಾತ್ರ ಆಯ್ದು ಹೇಳುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇತಿಹಾಸದಲ್ಲಿ ಒಳಿತು ಮತ್ತು ಕೆಡಕುಗಳೆರಡೂ ಇವೆ. ನಮ್ಮ ಮಕ್ಕಳಿಗೆ ಯಾವುದನ್ನು ನೀಡಬೇಕೆಂಬ ಎಚ್ಚರ, ತಿಳುವಳಿಕೆ ಶಿಕ್ಷಣತಜ್ಞರಿಗೆ ಇರಬೇಕಾಗುತ್ತದೆ. ಇತಿಹಾಸದಿಂದ ಸ್ನೇಹ, ಪ್ರೀತಿ, ಸಹಬಾಳ್ವೆ, ಸೌಹಾರ್ದತೆಯ ವಿಚಾರಗಳನ್ನು ಮುಗ್ಧ ಮನಸಿನ ಮಕ್ಕಳಿಗೆ ಕಲಿಸುವ ಮೂಲಕ ಬೌದ್ಧಿಕ ವಿಕಾಸಗೊಳಿಸಬೇಕೇ ಹೊರತು; ಕ್ರೌರ್ಯ, ದ್ವೇಷ, ಅಸೂಯೆಯ ಮೂಲಕ ವಿಕಾರಗೊಳಿಸಬಾರದು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆಗೆ ಡಾ. ಎಸ್.ಪಿ. ವಾಗೀಶ್ವರಿ,ಪ್ರಾಧ್ಯಾಪಕರು, ಕ್ರೈಸ್ಟ್ ವಿಶ್ವವಿದ್ಯಾಲಯ, ಡಾ. ಹಂ.ಗು. ರಾಜೇಶ್
ಸಂಪಾದಕರು, ಇತಿಹಾಸ ದರ್ಪಣ, ಡಾ. ಅಶ್ವತ್ಥನಾರಾಯಣ, ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ, ಡಾ. ಕೆ.ಸದಾಶಿವ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಎಂ. ಜಮುನಾರವರು ಸಹಿ ಹಾಕಿದ್ದಾರೆ.
ಇದನ್ನೂ ಓದಿ; NEP| ಮೊಟ್ಟೆ ನೀಡಿದರೆ ಮಕ್ಕಳಲ್ಲಿ ತಾರತಮ್ಯ ವೃದ್ಧಿ: ಎನ್ಸಿಇಆರ್ಟಿಗೆ ರಾಜ್ಯ ಸರ್ಕಾರದ ಸಮಿತಿ ಪ್ರಸ್ತಾವನೆ


