ಎಲ್ಲಾ ಶಾಲಾ ಮಕ್ಕಳಿಗೆ ಸಂಸ್ಕೃತವನ್ನು ಕಡ್ಡಾಯವಾಗಿ ತೃತೀಯ ಭಾಷೆಯಾಗಿ ಕಲಿಸಲು, ಮನುಸ್ಮೃತಿ ಮತ್ತು ಪ್ರಾಚೀನ ಸಂಖ್ಯಾ ಪದ್ಧತಿಗಳನ್ನು ಪಠ್ಯಕ್ರಮದಲ್ಲಿ ಪರಿಚಯಿಸಲು ರಾಜ್ಯ ಸರ್ಕಾರ ಎನ್ಸಿಇಆರ್ಟಿಗೆ ಪ್ರಸ್ತಾವನೆ ಸಲ್ಲಿಸಿದೆ.
“ಪೈಥಾಗರಸ್ ಪ್ರಮೇಯ, ನ್ಯೂಟನ್ನ ತಲೆಯ ಮೇಲೆ ಸೇಬು ಬೀಳುವ ಪ್ರಸಂಗ ಇತ್ಯಾದಿ ಸುಳ್ಳುಗಳನ್ನು ಹೇಗೆ ರಚಿಸಲಾಗುತ್ತಿದೆ ಮತ್ತು ಪ್ರಚಾರ ಮಾಡಲಾಗುತ್ತಿದೆ” ಎಂದು ಪ್ರಶ್ನಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದೆ.
ರಾಜ್ಯ ಸರ್ಕಾರದಿಂದ ಸಲ್ಲಿಕೆಯಾಗಿರುವ ಪ್ರಸ್ತಾವನೆ ಸಂಬಂಧಿಸಿದಂತೆ ಕರ್ನಾಟಕದ ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎನ್ಇಪಿ ಅಡಿಯಲ್ಲಿ ರಾಜ್ಯ ಪಠ್ಯಕ್ರಮವನ್ನು ಎನ್ಸಿಇಆರ್ಟಿ ವೆಬ್ಸೈಟ್ಗೆ ಕಳುಹಿಸಬೇಕು. ಪ್ರತಿ ರಾಜ್ಯವೂ ಪೊಷಿಷನ್ ಪೇಪರ್ ಅಪ್ಲೋಡ್ ಮಾಡಬೇಕಿದೆ. ಅದರ ಭಾಗವಾಗಿ ಕರ್ನಾಟಕ ಈ ಪ್ರಸ್ತಾವನೆಗಳನ್ನು ಸಲ್ಲಿಸಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ರಾಜ್ಯದಲ್ಲಿ ಎನ್ಇಪಿ ಕಾರ್ಯಗತಗೊಳಿಸುವ ಕಾರ್ಯಪಡೆಯ ಅಧ್ಯಕ್ಷರಾದ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಎನ್ಸಿಇಆರ್ಟಿಗೆ ಸಲ್ಲಿಕೆ ಮಾಡಿದ ತಕ್ಷಣ ಅದು ಪಠ್ಯಪುಸ್ತಕದಲ್ಲಿ ಬಂದು ಬಿಡುತ್ತದೆ ಎಂದು ಅರ್ಥವಲ್ಲ. ಪೈಥಾಗರಸ್ ಥಿಯರಿ ಸುಳ್ಳು ಎಂಬ ಚರ್ಚೆ ಅಂತಾರಾಷ್ಟ್ರೀಯ ಮಟ್ಟದಲ್ಲಿದೆ. ಫೈಥಾಗರಸ್ ಥಿಯರಿ ಬೌದ್ಧಾಯನ ಸಿದ್ಧಾಂತದಲ್ಲಿ ಮೊದಲು ಚರ್ಚೆಯಾಗಿದೆ. ಆದರೆ ಪಾಶ್ಚಿಮಾತ್ಯರು ಹೇಳಿದ್ದನ್ನು ನಂಬುತ್ತಿದ್ದೇವೆ. ವೈಶೇಷಿಕ ದಾರ್ಶನಿಕ ಶಾಸ್ತ್ರದಲ್ಲಿ ಗುರುತ್ವ ಎಂಬ ವಿಷಯ ಬರುತ್ತದೆ. ಇದೆಲ್ಲವೂ ಚರ್ಚೆಯಾಗಬೇಕು. ಇದು ಸರಿ, ಅದು ತಪ್ಪು ಎಂದು ಹೇಳುತ್ತಿಲ್ಲ. ಕೆಲವು ಸಿದ್ಧಾಂತಗಳನ್ನು ನಮ್ಮ ತಲೆಯ ಮೇಲೆ ಹಾಕಿದ್ದಾರೆ. ಅವುಗಳಿಗೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ. ಅವುಗಳನ್ನು ಪ್ರಶ್ನೆ ಮಾಡುವ ಕೌಂಟರ್ ಥಿಯರಿಗಳು ಈಗ ಬರುತ್ತಿವೆ. ಇದನ್ನು ಒಪ್ಪಲೇಬೇಕೆಂದೂ ಇಲ್ಲ” ಎಂದು ತಿಳಿಸಿದರು.
“ಸ್ಮೃತಿಗಳನ್ನು ಬೋಧಿಸುವ ಸಲಹೆ ನೀಡಲಾಗಿದೆ. ಮನುಸ್ಮೃತಿ ಎಂದರೆ ಪುರುಷಸೂಕ್ತ ಮಾತ್ರವಲ್ಲ. ಒಳ್ಳೆಯದನ್ನು ತೆಗೆದುಕೊಂಡು ಕೆಟ್ಟದ್ದನ್ನು ಬಿಡಬೇಕು. ಭಾರತೀಯ ಭಾಷೆಯ ಆಯ್ಕೆ ಎಂದರೆ ಸಂಸ್ಕೃತವೇ ಆಗಬೇಕೆಂದೇನೂ ಅಲ್ಲ. ತಮಿಳು ಆಗಬಹುದು. ಇನ್ಯಾವುದೇ ಭಾಷೆಯೂ ಆಗಬಹುದು. ಆದರೆ ಸಂಸ್ಕೃತದಲ್ಲಿ ವಿಚಾರಗಳಿವೆ” ಎಂದು ಸಮರ್ಥಿಸಿಕೊಂಡರು.
ಏನಿದು ಪೊಷಿಷನ್ ಪೇಪರ್?
ಯಾವುದಾದರೂ ಒಂದು ವಿಷಯವನ್ನು ಯಾವ ಆಧಾರದ ಮೇಲೆ ಬೋಧಿಸಬೇಕಾಗುತ್ತದೆ ಎಂದು ತಿಳಿಸುವ ಪ್ರಬಂಧವೇ ಪೊಸಿಷನ್ ಪೇಪರ್. ಯಾವುದಾದರೂ ಒಂದು ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಬಂಧವೇ ಪೊಸಿಷನ್ ಪೇಪರ್. ರಾಮಾಯಣ, ಮಹಾಭಾರತ, ಪುರಾಣ, ಕಥೆ, ಪುಣ್ಯಕತೆ, ಪಂಚತಂತ್ರ ಇತ್ಯಾದಿಗಳಲ್ಲಿ ಏನಾಗಿತ್ತು? ಅದನ್ನು ಏಕೆ ಬೋಧಿಸಬೇಕು ಇತ್ಯಾದಿಗಳನ್ನು ಈ ಪ್ರಬಂಧದಲ್ಲಿ ವಿವರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ರಾಜ್ಯ ಸರ್ಕಾರಗಳು ಎನ್ಸಿಇಆರ್ಟಿಗೆ ಸಲ್ಲಿಸುವ ಈ ಪೊಷಿಷನ್ ಪೇಪರ್ಗಳ ಆಧಾರದಲ್ಲಿ ಪಠ್ಯ ರೂಪಿತವಾಗುತ್ತದೆ.
ಕರ್ನಾಟಕ ಸರ್ಕಾರ ಒಟ್ಟು 26 ಪೊಷಿಷನ್ ಪೇಪರ್ಗಳನ್ನು ಸಲ್ಲಿಸಿದೆ. ಅದರಲ್ಲಿ ಪೊಷಿಷನ್ ಪೇಪರ್ಸ್ ಆಫ್ ನಾಲೆಡ್ಜ್ ಆಫ್ ಇಂಡಿಯಾ ಹಲವಾರು ಸಮಸ್ಯಾತ್ಮಕ ಅಂಶಗಳನ್ನು ಒಳಗೊಂಡಿದೆ. ಈ ಆಕ್ಷೇಪಗಳನ್ನು ಅಲ್ಲಗಳೆಯುವ ಮದನ್ ಗೋಪಾಲ್, “ವಿದ್ವತ್ಪೂರ್ಣ ಐಐಟಿ ಪ್ರೊಫೆಸರ್ ಅಧ್ಯಕ್ಷತೆಯಲ್ಲಿ ಈ ಪೇಪರ್ ಸಿದ್ಧಪಡಿಸಲಾಗಿದೆ. ಇದನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ” ಎಂದಿದ್ದಾರೆ.
‘ಸಂಸ್ಕೃತ ಕಡ್ಡಾಯ ಕಲಿಕೆಗೆ ಪ್ರಸ್ತಾಪ’
ಭಾರತೀಯ ಜ್ಞಾನವೆಲ್ಲ ಸಂಸ್ಕೃತದಲ್ಲಿದ್ದು, ಅದನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಪ್ರಸ್ತಾಪವನ್ನು ಸರ್ಕಾರ ಮಾಡಿದೆ. ಸಾವಿರಾರು ಭಾಷೆಗಳಿರುವ ನಾಡಿನಲ್ಲಿ ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕು. ಒಂದು: ಪ್ರಾದೇಶಿಕ ಭಾಷೆ, ಎರಡು: ಇಂಗ್ಲಿಷ್ ಮೂರು: ಭಾರತೀಯ ಭಾಷೆ (ಸಂಸ್ಕೃತ). ಸಂಸ್ಕೃತ ಭಾಷೆಯಲ್ಲಿ ಭಾರತದ ಎಲ್ಲ ಜ್ಞಾನವು ಇದ್ದು, ಅದು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಪೊಷಿಷನ್ ಪೇಪರ್ನಲ್ಲಿ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಎಲ್ಲವೂ ಭಾರತದಲ್ಲಿಯೇ ಇತ್ತು ಎನ್ನುವುದು ಎನ್ಇಪಿ ಉದ್ದೇಶ: ನಿರಂಜನಾರಾಧ್ಯ
“ಪಾಶ್ಚಾತ್ಯ ವಿಜ್ಞಾನ ಸುಳ್ಳು. ಭಾರತದಲ್ಲಿ ಎಲ್ಲವೂ ಇತ್ತು ಎಂಬುದನ್ನು ಪ್ರತಿಪಾದಿಸುವುದೇ ಎನ್ಇಪಿ. ಭಾರತೀಕರಣ, ಭರತವರ್ಷ- ಇತರೆ ಹೆಸರುಗಳಲ್ಲಿ ಈ ವಿಷಯಗಳನ್ನು ಬೋಧಿಸಲಾಗುತ್ತದೆ. 26 ಪೋಷಿಷನ್ ಪೇಪರ್ಗಳನ್ನು ರಾಜ್ಯ ಸರ್ಕಾರ ಮಾಡಿದೆ. ಅವುಗಳನ್ನು ಈಗ ಎನ್ಸಿಇಆರ್ಟಿಗೆ ಕಳುಹಿಸಲಾಗಿದೆ. ಅವುಗಳನ್ನೆಲ್ಲ ಕೇಂದ್ರೀಕರಿಸಿ ಪಠ್ಯ ರೂಪಿಸಲಾಗುತ್ತದೆ. ಶಿಕ್ಷಣ ವ್ಯವಸ್ಥೆಗೆ ಇದು ಮಾರ್ಗಸೂಚಿಯಾಗುತ್ತದೆ” ಎಂದರು.
ಇದನ್ನೂ ಓದಿರಿ: ಈ ಎನ್ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?
“ಶಿಕ್ಷಣಯನ್ನು ಅನುಸರಿಸದೆಯೇ ಈ ಹಿಂದೆ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಪಠ್ಯದಲ್ಲಿ ಈ ವಿಷಯಗಳನ್ನು ಸೇರಿಸಲಾಗುತ್ತಿತ್ತು. ಅದಕ್ಕೆ ವಿರೋಧವೂ ಬಂತು. ಈಗ ಫ್ರೇಮ್ ವರ್ಕ್ ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಜಾರಿಗೆ ತರುತ್ತಿದ್ದಾರೆ. ಈ ರೀತಿಯ ಬದಲಾವಣೆಗಳು ಸಮಾಜ, ವಿಜ್ಞಾನ, ಗಣಿತಕ್ಕೆ ನಿಲ್ಲುವುದು” ಎಂದು ತಿಳಿಸಿದರು.
“ಸನಾತನ ಭಾರತದಲ್ಲಿ ಎಲ್ಲವೂ ಇತ್ತು. ನಮಗೆ ಪಾಶ್ಚಿಮಾತ್ಯ ಶಿಕ್ಷಣ ಬೇಕಿಲ್ಲ. ನಾವೇ ಮೊದಲು ಎಲ್ಲವನ್ನೂ ಕಂಡು ಹಿಡಿದಿದ್ದು, ನಂತರದಲ್ಲಿ ನಮ್ಮ ಜ್ಞಾನವನ್ನು ಪಾಶ್ಚೀಮಾತ್ಯರು ಕದ್ದರು. ಭಾರತೀಯ ಜ್ಞಾನ ವ್ಯವಸ್ಥೆಯನ್ನು ಬಿಟ್ಟು, ಪಾಶ್ಚಿಮಾತ್ಯ ಜ್ಞಾನ ವ್ಯವಸ್ಥೆಯನ್ನು ನಾವು ಕಟ್ಟಿಕೊಂಡಿದ್ದೇವೆ. ಅದನ್ನು ಸರ್ವನಾಶ (ಬುಲ್ಡೋಜ್) ಮಾಡಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಪುನರುತ್ಥಾನ ಮಾಡಬೇಕು ಎಂಬುದು ಅವರ ಅಜೆಂಡಾ. ಅದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ, ಪೋಷಿಷನ್ ಪೇಪರ್, ಪಠ್ಯಕ್ರಮ ಚೌಕಟ್ಟು ಎಂಬ ಮಾರ್ಗಗಳನ್ನು ಹಿಡಿದಿದ್ದಾರೆ” ಎಂದು ವಿವರಿಸಿದರು.
ಯಾವ ಶಿಕ್ಷಣ ವ್ಯವಸ್ಥೆಯಿಂದ ವಿಚಾರವಂತರಾಗಿ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಥರದ ಮಹನೀಯರು ಸ್ವಾತಂತ್ರ್ಯ ಹೋರಾಟವನ್ನು ಕಟ್ಟಿದರೋ ಅದನ್ನು ಸಮಸ್ಯಾತ್ಮಕವಾದದ್ದು ಎಂದು ಇವರು ಭಾವಿಸುತ್ತಾರೆ ಎಂದರು.
ಶೂದ್ರ ಮತ್ತು ದಲಿತ ಸಮುದಾಯಗಳ ಗುಲಾಮ ಶಾಸಕರು ಏನು ಕತ್ತೆ ಮೆಯುಸುತ್ತಿದ್ದಾರಾ?ಕೇವಲ 3% ಇರುವ ಸಮುದಾಯದವರ ಅಡಿಯಾಳು ಗುಲಾಮರೆ ಇವರು? ಥು ನಿಮ್ಮ ಜನ್ಮಕ್ಕಿಷ್ಟು ,ಭಾಬಾಸಾಹೇಬರ ಸಂವಿಧಾನದ ಮೇರೆಗೆ ನೀವೆಲ್ಲಾ ಶಾಸಕ,ಮಂತ್ರಿಗಳಾಗಿದ್ದೀರಾ, ಅದನ್ನ ತೆಗೆದರೆ ಆಗ ನಿಮ್ಮ ಬುಡಗಳಿಗೆ ಬೆಂಕಿ ತಗಲತ್ತೇನೋ?
ಮಾನ್ಯರೇ ತಾವೂ ಸತ್ಯ ಸಂಗತಿ ನಿಜವಾದ ಮಾತು ಹೇಳಿದಿರಿ , ಅನಂತ ಧನ್ಯವಾದಗಳು ಶರಣು ಶರಣಾರ್ಥಿ ಮಲ್ಲಿಕಾರ್ಜುನ ನಾಗಶೆಟ್ಟಿ ಬೀದರ್ ಜಿಲ್ಲೆ