Homeಕರ್ನಾಟಕಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

- Advertisement -
- Advertisement -

ನನ್ನ ಹಿನ್ನೆಲೆ ವಿಚಿತ್ರ. ಆದರೆ ಅದರ ಚಿತ್ರ ಮಾತ್ರ ಇನ್ನೂ ನನ್ನ ಮನಸ್ಸಿನಿಂದ ಅಳಿಸಿಹೋಗಿಲ್ಲ. ನಾನು ಆಗ ಬಹುಶಃ ಹತ್ತು ವರ್ಷದ ಹುಡುಗ. ಪಿರಿಯಾಪಟ್ಟಣದಿಂದ ಒಬ್ಬ ವ್ಯಕ್ತಿ ಸೈಕಲ್ ಮೇಲೆ ಬಂದು, ಮನೆಮನೆಗೂ ಹೋಗಿ, ನನ್ನಂತಹ ಎಳೆಯ ಹುಡುಗರನ್ನು ಹಿಡಿದುಕೊಂಡು ಬಂದು ಕಬಡ್ಡಿ, ಕೊಕೊ ಇತ್ಯಾದಿ ಆಟಗಳನ್ನು ಆಡಿಸುತ್ತಿದ್ದ. ಕೆಲವು ತಿಂಗಳುಗಳ ಕಾಲ ನಾವು ಅಂದರೆ ನಾನು ಮತ್ತು ನನ್ನ ಸ್ನೇಹಿತರು, ಕುಗ್ರಾಮದಲ್ಲೊಂದು ಮನರಂಜನೆ ಸಿಕ್ಕಿತಲ್ಲ ಎನ್ನುವ ಸಂತೋಷದಿಂದ ಆಟ ಆಡುವುದಕ್ಕಾಗಿ ಪ್ರತಿದಿನ ಮುಗ್ಧತೆಯಿಂದ ತಪ್ಪದೇ ಆ ವ್ಯಕ್ತಿಗಾಗಿ ಕಾಯುತ್ತಿದ್ದೆವು.

ಹೈಸ್ಕೂಲ್ ಹೆಡ್ಮಾಸ್ಟರ್ ಆಗಿದ್ದ ನಮ್ಮಪ್ಪ ಅಂದು ಸಂಜೆ ಸ್ಕೂಲ್ ಬಾಗಿಲು ಹಾಕಿಕೊಂಡು ಮನೆಗೆ ಹೋಗುವಾಗ ನಾವು ಆಟ ಆಡುತ್ತಿದ್ದ ಸ್ಥಳದಲ್ಲಿ ಕಾವಿ ಬಣ್ಣದ ಧ್ವಜವನ್ನ ನೆಟ್ಟಿರುವುದನ್ನ ಕಂಡರು ಅನಿಸುತ್ತದೆ. ಆದರೆ ಅಲ್ಲಿ ಅವರು ಏನನ್ನೂ ಮಾತನಾಡದೇ ಮನೆಗೆ ಬಂದರು. ಅವರು ಅಸಹನೆಗೊಂಡಿದ್ದರು ಅನ್ನುವುದು ನನಗೆ ಗೊತ್ತಾಗಿದ್ದು ನಾನು ಮನೆಗೆ ಬಂದ ಮೇಲೆ.

ನಮ್ಮಪ್ಪ ತನಿಖೆ ಮಾಡುವವರ ರೀತಿ “ಅದ್ಯಾರೊ, ನಿಮ್ಮನ್ನೆಲ್ಲಾ ಆಟ ಆಡಿಸುತ್ತಿದ್ದವರು?” ಅಂತ ಕೇಳಿದಾಗ ನಾನು, “ಅವರು ಪಿರಿಯಾಪಟ್ಟಣದಿಂದ ಸೈಕಲ್ಲಿನಲ್ಲಿ ಬರುತ್ತಾರೆ, ನಮಗೆ ಅನೇಕ ಆಟಗಳನ್ನು ಹೇಳಿಕೊಟ್ಟು, ಆಡಿಸುತ್ತಾರೆ. ಮೊದಲು ಒಂದು ಹಾಡನ್ನೂ ನಾವು ಹೇಳಬೇಕು” ಅಂತ ಹೇಳಿದಾಗ ನಮ್ಮಪ್ಪನಿಗೆ ಖಾತ್ರಿಯಾಗಿತ್ತೆನಿಸುತ್ತದೆ ಇದು ಆರ್.ಎಸ್.ಎಸ್‌ನ ಒಂದು ಶಾಖೆ ಎಂದು.

ಅಪ್ಪ ನನ್ನನ್ನು ಮರುದಿನದಿಂದ ಸಂಜೆ ಅಲ್ಲಿಗೆ ಹೋಗದಂತೆ ನಿಷೇಧಿಸಿದರು. ಆರ್.ಎಸ್.ಎ.ಸ್ ಮತ್ತು ಗೋಡ್ಸೆ ನಂಟು ಮತ್ತು ಅವನ ಗಾಂಧಿ ಹತ್ಯೆಯ ಕೃತ್ಯದ ನೆನಪು ಅವರಲ್ಲಿ ಹಸಿಯಾಗಿಯೇ ಇನ್ನೂ ಉಳಿದಿತ್ತು. ಅದಲ್ಲದೇ ಅವರು ಮುಂಬೈ ಲಾ ಕಾಲೇಜಿನಲ್ಲಿ ಅಂಬೇಡ್ಕರ್ ಅವರ ವಿದ್ಯಾರ್ಥಿಯಾಗಿದ್ದವರೂ ಕೂಡ. ಅಂಬೇಡ್ಕರ್ ಅವರ ವ್ಯಕ್ತಿತ್ವದ ಒಂದು ಕಿರಣ ಬಹುಶಃ ನನ್ನ ತಂದೆಯವರಲ್ಲಿಯೂ ಬಂದು ಹೊಕ್ಕಿದ್ದಿರಬಹುದು. ಅಲ್ಲಿಗೆ ನನ್ನ ಆರ್.ಎಸ್.ಎಸ್ ಸಂಸ್ಥೆಯ ಒಡನಾಟ ಮೊಳಕೆಯಲ್ಲಿಯೇ ಒಣಗಿಹೋಯಿತು. ಬಹುಶಃ ಮತ್ತೊಂದು ಸಂದರ್ಭಕ್ಕೆ ಹವಣಿಸುತ್ತಿತ್ತು!

ನನ್ನ ಎಸ್.ಎಸ್.ಎಲ್.ಸಿ. ಮುಗಿದು ನಾನು ಬೆಂಗಳೂರಿನ ನನ್ನ ಅಣ್ಣನ ಮನೆಯಲ್ಲಿ ನೆಲೇಸಿ ನನ್ನ ಪಿ.ಯು.ಸಿ. ಮತ್ತು ಬಿ.ಎಸ್.ಸಿ. ತರಗತಿಗಳನ್ನು ಮುಗಿಸಿದೆ. ನಂತರ ನನ್ನ ಕೆಲವು ಸಹಪಾಠಿಗಳು ಲಾ ಕಾಲೇಜು ಸೇರಿದರು. ಯಾವುದೇ ಗೊತ್ತುಗುರಿ ಇಲ್ಲದೇ ನಾನೂ ಲಾ ಕಾಲೇಜನ್ನು ಸೇರಿದೆ. ಅದೇ ಸಮಯಕ್ಕೆ ಅಣ್ಣ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ. ಆಗ ನನ್ನ ವಾಸ್ತವ್ಯವೇ ಒಂದು ದೊಡ್ಡ ಸಮಸ್ಯೆಯಾಗಿ ನನ್ನನ್ನು ಕಾಡಿತು. ಇದನ್ನು ನನ್ನ ಸ್ನೇಹಿತನೊಬ್ಬನ ಹತ್ತಿರ ತೋಡಿಕೊಂಡೆ. ಎಲ್ಲಾದರೂ ರೂಮು ಕೊಡಿಸೊ ಅಂತ ಅವನ ಹಿಂದೆ ಬಿದ್ದೆ. ಅವನೊಬ್ಬ ನಿಷ್ಠಾವಂತ ಸ್ವಯಂಸೇವಕ ಅನ್ನುವುದು ನನಗೆ ಅಲ್ಲಿಯವರೆಗೂ ತಿಳಿದಿರಲಿಲ್ಲ. ನನ್ನ ಅಣ್ಣನ ಮನೆಯನ್ನು ಖಾಲಿ ಮಾಡುವುದಕ್ಕೆ ಒಂದು ತಿಂಗಳ ಸಮಯವಿತ್ತು. ನಾನಿನ್ನೂ ಅಲ್ಲಿಯೇ ವಾಸಿಸುತ್ತಿದ್ದೆ. ಎರಡು ದಿನಗಳ ನಂತರ ಇನ್ನೂ ಖಾಲಿ ಮಾಡದ ಅಣ್ಣನ ಮನೆಗೆ ಬಂದ ಅವನು, “ನಿನಗೆ ಇರಲು ಒಂದು ಜಾಗ ಇದೆ, ಆದರೆ ಒಂದು ಷರತ್ತು, ನೀನು ಸಂಘಕ್ಕೆ ಸೇರಬೇಕು” ಅಂದ. ನನ್ನ ಚಿಕ್ಕವಯಸ್ಸಿನಲ್ಲಾದ ಪ್ರಕರಣ ಆಗಲೇ ನೆನಪಿನಿಂದ ಮಾಸಿಹೋಗಿತ್ತು. ನನ್ನ ತಂದೆ ಈಗ ದೂರದ ಊರಾದ ಶೃಂಗೇರಿ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರು. ಇರೋದಕ್ಕೆ ರೂಮು ಸಿಕ್ಕರೆ ಏನು ಬೇಕಾದರೂ ಮಾಡ್ತೀನಿ ಅನ್ನುವ ಪರಿಸ್ಥಿತಿಯನ್ನ ಎದುರಿಸುತ್ತಿದ್ದೆ ಆ ದಿನಗಳಲ್ಲಿ. ಇದು ಸಂಘದ ಸಹವಾಸದ ಎರಡನೇ ಇನ್ನಿಂಗ್ಸ್.

ಅಂದಿನಿಂದ ನಾನು ಕಾರ್ಯಾಲಯದಲ್ಲಿ ವಾಸಿಸಲು ಪ್ರಾರಂಭಿಸಿದೆ. ಕೆಲವು ಪ್ರಚಾರಕರು ಮತ್ತು ನಿವಾಸಿಗಳ ಜತೆ ಬೇಗನೆ ಎದ್ದು ಪ್ರಾತಃ ಸ್ಮರಣೆಯ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೆ. ನಂತರ ಏಳು ಗಂಟೆಗೆ ಬೆಳಗಿನ ಶಾಖೆಯ ಸಭೆ. ನಂತರ ನನ್ನ ಲಾ ಕಾಲೇಜು ಇತ್ಯಾದಿ. ಇಷ್ಟೇ ಆದರೆ ಹೇಗೋ ಅನುಸರಿಸಿಕೊಂಡು ಇದ್ದುಬಿಡಬಹುದು ಅಂತ ನನ್ನ ಮನಸ್ಸಿನಲ್ಲಿ ಅನಿಸತೊಡಗಿತು. ಆದರೆ ನನಗೊಂದು ಬಡ್ತಿ ಸಿಕ್ಕಿತು. ಅದು ಸಂಘದ ಪ್ರಮುಖ ಬೈಟಕ್ಕುಗಳಲ್ಲಿ ಕುಳಿತು ಅವರ ಮಾತುಗಳನ್ನು ಕೇಳುವ ಅವಕಾಶ. ನನಗೆ ಚಿಕ್ಕಂದಿನಲ್ಲಿ ನಮ್ಮಪ್ಪ ನನ್ನಲ್ಲಿ ಹುಟ್ಟುಹಾಕಿದ ಸೆಕ್ಯುಲರಿಸಂ ಬೀಜ ಮೊಳಕೆಯೊಡೆದು ಹೆಮ್ಮರವೇನೂ ಆಗದೆ, ಬಹುಶಃ ನನ್ನ ಸುಪ್ತಪ್ರಜ್ಞೆಯಲ್ಲಿ ತಟಸ್ಥವಾಗಿಯೇ ಇತ್ತು. ಈ ಭೈಟಕ್‌ಗಳಲ್ಲಿನ ವಿಚಾರ ಲಹರಿಗಳು ನನ್ನ ಕಿವಿಯ ಮೇಲೆ ಬೀಳುತ್ತಿದ್ದಂತೆ ಅದು ಮೊಳಕೆಯೊಡೆಯಲು ಶುರುವಾಯಿತು ಎನ್ನಬಹುದು. ಅದು ದೊಡ್ಡ ಮರವಾಗಿ ಬೆಳೆಯಲು ಹೆಚ್ಚು ಸಮಯವೇನು ಹಿಡಿಯಲಿಲ್ಲ. ಅದೇ ಕಾರಣಕ್ಕೆ ನಾನು ಅವರ ಸಂವಾದಗಳ ಮಧ್ಯೆ ಮೂಗು ತೂರಿಸಲು ಪ್ರಾರಂಭಿಸಿದೆ. ಒಂದು ದಿನ “ಹಾಗೇನಿಲ್ಲ, ನನ್ನ ಚಿಕ್ಕ ವಯಸ್ಸಿನ ಅನೇಕ ಸ್ನೇಹಿತರುಗಳ ನೀವು ಹೇಳುವ ಧರ್ಮಕ್ಕೆ ಸೇರಿದವರು.. ಅದಲ್ಲದೇ ನನಗೆ ಕನ್ನಡವನ್ನ ಕಲಿಸಿದವರೇ ಸೈಯದ್ ಹುಸೇನ್ ಅನ್ನುವ ಮೇಷ್ಟ್ರು” ಅಂದಾಗ ಅಲ್ಲಿ ನೆರೆದಿದ್ದ ಪ್ರಮುಖರ ಮುಖದಲ್ಲೆಲ್ಲಾ ಅಸಹನೆಯ ಸುಕ್ಕುಗಳು ಮೂಡತೊಡಗಿದವು.

ನಂತರ, ಇವನು ನಮ್ಮ ಗುಂಪಿಗೆ ಸರಿಹೊಂದುವುದಿಲ್ಲ ಎಂದು ನನ್ನನ್ನು ಈ ಘಟನೆ ನಡೆದ ದಿನಗಳ ನಂತರ ವಿದ್ಯಾರ್ಥಿ ಪರಿಷತ್‌ನ ಆಫೀಸನ್ನು ನೋಡಿಕೊಳ್ಳಲು ನಿಯೋಜಿಸಿಬಿಟ್ಟರು.

ಒಂದು ದಿನ ವಿದ್ಯಾರ್ಥಿ ಪರಿಷತ್‌ನ ಒಂದು ದೊಡ್ಡ ಸಭೆಯನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಅಂದು ಒಂದು ದೊಡ್ಡ ವ್ಯಾನಿನಲ್ಲಿ ಸ್ವಯಂಸೇವಕರ ಜತೆ ಮೈಸೂರಿಗೆ ನಾನೂ ಹೊರಟೆ. ದಾರಿಯಲ್ಲಿ ಅಂತ್ಯಾಕ್ಷರಿ ಆಟ ಆಡುವ ಮನಸ್ಸು ಎಲ್ಲರಿಗೂ ಆಯಿತು. ನನಗೂ ಖುಷಿ ಆಯಿತು. ಆದರೆ ಯಾವುದೇ ಸಿನೆಮಾ ಹಾಡು ಹಾಡುವುದನ್ನ ನಿಷೇಧಿಸಲಾಗಿತ್ತು. ಬರೀ ಸಂಘಗೀತೆಗಳು. ಒಂದು ಸಂಘಗೀತೆಯ ಚರಣ ಅಂತ್ಯಗೊಂಡಿದ್ದು ಒಂದು ಜನಾಂಗವನ್ನು ನಿಂದಿಸುವ ಶಬ್ದಗಳಿಂದ. ಅಂದು ನನ್ನ ಮನಸ್ಸಿನಲ್ಲಿ ವಿಪ್ಲವವೊಂದು ಆರಂಭಗೊಂಡಿತು. ಜಿಗುಪ್ಸೆಗೊಂಡ ನಾನು ಮೈಸೂರು ತಲುಪುವವರೆಗೂ ಮೌನದಿಂದಲೇ ಕುಳಿತುಬಿಟ್ಟಿದ್ದೆ.

ನನ್ನ ಮನಸ್ಸಿನಲ್ಲಿ ಎದ್ದ ವೈಚಾರಿಕ ಭಾವನೆಗಳು ಘನೀಭವಿಸಿ ರೂಪಪಡೆಯಲು ಪ್ರಾರಂಭವಾಗಿತ್ತು ಎನ್ನಬಹುದು. ಯಾವ ಪರಂಪರೆಯಲ್ಲಿಯೂ ಅದರಲ್ಲೂ ಭಾರತೀಯ ಪರಂಪರೆಯಲ್ಲಿ, ಅದು ನೈಜ ಸ್ವರೂಪದ್ದಾಗಿದ್ದರೆ, ಇನ್ನೊಂದು ಧರ್ಮಕ್ಕೆ ಸೇರಿದ ಜೀವಗಳ ಸಾವನ್ನ ಹಾಡಿನ ರೂಪದಲ್ಲಿ ವೈಭವಿ ಕರಿಸುತ್ತದೆಯೇ? ನನಗೆ ಗೊತ್ತಿದ್ದಂತೆ ನಮ್ಮ ಭಾರತೀಯ ಪರಂಪರೆಯ ಧರ್ಮದಲ್ಲಿ ಯಾವುದನ್ನ ಹಿಂದೂ ಅಂತ ಕರೆಯುತ್ತವೆಯೋ ಅದೊಂದು ಹನಿಹನಿಯಾಗಿ ಇಡೀ ಭೂಮಿಯನ್ನ ತಣಿಸುವ ಸೋನೆ ಮಳೆಯ ಹಾಗೆ ಅಲ್ಲವೇ? ಮಳೆ ಬಿದ್ದರೆ ಒಂದು ಪಂಗಡಕ್ಕಾಗಿ ಬೀಳುತ್ತದೆಯೇ? ಆದರೆ ಅದೇ ನೀರು ಶೇಖರಣೆಯಾಗಿ ಒಂದು ಗುಂಡಿಯಲ್ಲಿ ನಿಂತು, ಕೊಳೆತು ಬಗ್ಗಡವಾಗಿ ಕಾಯಿಲೆ ಹರಡಲು ಶುರುಮಾಡಿಬಿಟ್ಟರೆ? ಈ ರೀತಿಯ ದ್ವಂದ್ವಗಳು ನನ್ನನ್ನು ಕಾಡತೊಡಗಿತು.

ಇನ್ನು ಈ ವಾತಾವರಣದಲ್ಲಿದ್ದರೆ ನನ್ನ ಆಲೋಚನೆಗಳೂ ಇದೇ ರೀತಿ ಬಗ್ಗಡವಾಗಿಬಿಡಬಹುದು ಅನ್ನುವ ಭಯದಿಂದ ನಾನು ಆ ಸಭೆಗೆ ಹೋಗದೇ ವಾಪಸ್ಸು ಬೆಂಗಳೂರಿನ ಬಸ್ಸನ್ನು ಹತ್ತಿದೆ. ನಾನು ವಾಸಿಸುತ್ತಿದ್ದ ಸ್ಥಳಕ್ಕೆ ನನ್ನ ಬಟ್ಟೆ ಬರೆಯನ್ನು ತೆಗೆದುಕೊಳ್ಳುವುದಕ್ಕೂ ನಾನು ಅಲ್ಲಿಗೆ ಹೋಗಲಿಲ್ಲ.

ಇಲ್ಲಿಗೆ ಸಂಘದ ನನ್ನ ಎರಡನೇ ಇನ್ನಿಂಗ್ಸ್ ಕೂಡ ಕೊನೆಯಾಗಿತ್ತು. ಅದೇ ಕೊನೆಯಾಗಿತ್ತು.

ಕೆ ಶ್ರೀನಾಥ್

ಕೆ ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.


ಇದನ್ನೂ ಓದಿ: ಆರ್‌ಎಸ್‌ಎಸ್‌ ಸಾಮಾಜಿಕ ನ್ಯಾಯದ ವಿರೋಧಿ, ಅದು ಮನುಸ್ಮೃತಿಯನ್ನು ನಂಬುತ್ತದೆ: ಮಲ್ಲಿಕಾರ್ಜುನ ಖರ್ಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...