ರಾಜ್ಯದಲ್ಲಿ ಉಪಚುನಾವಣೆಯ ಗಾಳಿ ದಿನೇ ದಿನೇ ರಭಸವಾಗುತ್ತಿದ್ದು, ಪ್ರತಿ ಪಕ್ಷಗಳೂ ಪರಸ್ಪರ ಟೀಕಾಪ್ರಹಾರ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, “ನಾನು ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಈ ರಾಜ್ಯದ ಜನತೆ ಬೀಸುವ ಕಲ್ಲು” ಎಂದು ಹರಿಹಾಯ್ದಿದ್ದಾರೆ.
“ನಾನು ಬಂಡೆಯಾಗಲು ಇಚ್ಚಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿಕಲ್ಲಾಗುತ್ತೇನೆ. ಇಲ್ಲವಾದರೆ ಈ ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಜನ ಬೀಸುವ ಕಲ್ಲು” ಎಂದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಪ್ರಚಾರದಲ್ಲಿ, ಕ್ಷೇತ್ರದ ಐಡಿಯಲ್ ಹೋಮ್ಸ್ ನಲ್ಲಿ ಒಕ್ಕಲಿಗ ಸಮುದಾಯದ ನಾನಾ ಸಂಘಟನೆಗಳ ಮುಖಂಡರೊಂದಿಗಿನ ಸಭೆಯಲ್ಲಿ ಈ ಮಾತುಗಳನ್ನು ಹೇಳಿದರು.
‘ಕೆಲವರು ಬಂಡೆನ ಡೈನಮೇಟ್ ಇಟ್ಟು ಪುಡಿ ಪುಡಿ ಮಾಡುತ್ತೇವೆ ಅಂತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರಡುಗಂಭವಾಗಿ ನಿಲ್ಲಲು, ಕಲ್ಲು ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗಲು ಸಾಧ್ಯ. ಮಿತಿ ಮೀರಿದರೆ, ಈ ಜನ ವಿರೋಧಿ ಸರ್ಕಾರಕ್ಕೆ ಜನ ಬೀಸುವ ಕಲ್ಲಾಗುವೆ. ಹೀಗಾಗಿ ನಾನು ಕೇವಲ ಬಂಡೆಯಾಗಲು ಇಚ್ಚಿಸುವುದಿಲ್ಲ. ಜನರಿಗೆ ನನ್ನಿಂದ ಉಪಯೋಗವಾದರೆ ಸಾಕು” ಎಂದು ಹೇಳಿದರು.
ಇದನ್ನೂ ಓದಿ: ಇದು ಕೇವಲ ಉಪ ಚುನಾವಣೆಯಲ್ಲ, ನೈತಿಕ ರಾಜಕಾರಣ ಉಳಿಸುವ ಗುರುತರ ಜವಾಬ್ಧಾರಿ!
“ನಾವು ಬೀಜ ಬಿತ್ತುವಾಗ ಅದು ಮರವಾಗಿ ಹಣ್ಣಾದರೂ ನೀಡಲಿ, ನೆರಳಾದರು ನೀಡಲಿ ಎಂಬ ಒಳ್ಳೆ ಭಾವನೆಯಿಂದ ಬಿತ್ತುತ್ತೇವೆ. ಎಲ್ಲ ಬೀಜಗಳು ಹಣ್ಣನ್ನೇ ನೀಡಬೇಕು ಎಂದು ಬಯಸುವುದಿಲ್ಲ. ಕೆಲವೊಮ್ಮೆ ಮರ ಬೆಳೆಸುವವರು ಒಬ್ಬರಾದರೆ, ಮತ್ತೊಬ್ಬರು ಹಣ್ಣು ತಿನ್ನುತ್ತಾರೆ. ಯಾರೋ ಕಟ್ಟಿದ ಹುತ್ತದಲ್ಲಿ ವಿಷ ಸರ್ಪ ಬಂದು ಸೇರುತ್ತದೆ. ಇದು ಪ್ರಕೃತಿ ನಿಯಮ” ಎಂದು ವಿವರಿಸಿದರು.
“ನಮ್ಮ ರವಿ ಪತ್ನಿ ಕುಸುಮಾ ಮತ್ತು ಅವರ ಕುಟುಂಬ ನನಗೆ ಮುಂಚೆಯಿಂದಲೂ ಗೊತ್ತಿದೆ. ಪಾಪ ಆತ ಯಾವುದೋ ಕಾರಣಕ್ಕೆ ಹೇಡಿತನ ತೋರಿಬಿಟ್ಟ. ಆತ ಯಾವುದೇ ಪರಿಸ್ಥಿತಿ ಇದ್ದರೂ ಧೈರ್ಯದಿಂದ ಎದುರಿಸಿ ತನ್ನ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ನೋಡಿಕೊಳ್ಳಬೇಕಿತ್ತು. ನಮ್ಮ ಸಮಾಜ ಅವರನ್ನು ಎಷ್ಟು ಪ್ರೀತಿ, ಗೌರವದಿಂದ ನೋಡುತ್ತಿತ್ತು. ಆದರೆ ನಷ್ಟ ಆಗಿದ್ದು ಯಾರಿಗೆ? ಆತನ ಅಸಹಜ ಸಾವನ್ನು, ಅನೇಕರು ಕೊಲೆಯಾಯ್ತು ಅಂತಾ ಧರಣಿ ಮಾಡಿದ್ದನ್ನು ನೋಡಿದ್ದೇವೆ. ನಮ್ಮದೇ ಸರ್ಕಾರ ಸಿಬಿಐ ತನಿಖೆಗೆ ಕೊಟ್ಟೆವು. ಯಾವ ಯಾವ ಹೇಳಿಕೆ ಕೊಡಿಸಿದ್ದಾರೆ ಎಂಬ ದಾಖಲೆಯೂ ನಮ್ಮ ಬಳಿ ಇದೆ. ಆದರೆ ನಾವು ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬೇಡ. ನಮ್ಮ ಹೆಣ್ಣು ಮಗಳು ಎಲ್ಲರ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡು, ಸಪ್ತಪದಿ ತುಳಿದು ಮದುವೆಯಾಗಿದ್ದಾಳೆ. ಆದರೆ ನಮ್ಮ ಶೋಭಕ್ಕ ಚುನಾವಣೆ ವೇಳೆ ಗಂಡನ ಹೆಸರು ಬಳಸಿಕೊಳ್ಳಬೇಡ ಅಂತಾರಲ್ಲ ಹೇಗೆ ಸಾಧ್ಯ? ಶೋಭಕ್ಕ ನೀನು, ನಿನ್ನ ಮಗಳೋ, ತಂಗಿನೋ ಆ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ: ಮೀಟಿಂಗ್ ಮೇಲೆ ಮೀಟಿಂಗ್
“ಈಗ ನವರಾತ್ರಿ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ರಕ್ಷಣೆ ನೀಡಲು ದುರ್ಗಾದೇವಿ, ರಾಜರಾಜೇಶ್ವರಿ ಆಶೀರ್ವಾದ ಬೇಕಿದೆ. ಈ ದೇವತೆಗಳ ಆಶೀರ್ವಾದದೊಂದಿಗೆ ನಾವು ಕ್ಷೇತ್ರದ ಹಿತ ಕಾಯಲು ನೊಂದು ಬೆಂದಿರುವ ಹೆಣ್ಣು ಮಗಳನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ” ಎಂದರು.
‘ಕೊರೋನಾ ಹರಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ನೇರ ಕಾರಣವಾಗಿದ್ದು, ಮೊದಲು ಲಸಿಕೆಯನ್ನು ತರಲಿ. ಆಮೇಲೆ ಅದನ್ನು ಉಚಿತವಾಗಿ ನೀಡುವ ಬಗ್ಗೆ ಘೋಷಣೆ ಮಾಡಲಿ. ಚುನಾವಣೆಗೋಸ್ಕರ ಸುಖಾಸುಮ್ಮನೆ ಆಶ್ವಾಸನೆ ನೀಡುವುದು ಬೇಡ’ ಎಂದು ಟೀಕಿಸಿದ್ದಾರೆ.
“ಸರ್ಕಾರ ಲಾಕ್ ಡೌನ್ ಮಾಡಿದ್ದಕ್ಕೆ ಚಾಲಕರಿಗೆ, ನೇಕಾರರಿಗೆ, ಸವಿತಾ ಸಮಾಜದವರಿಗೆ 5 ಸಾವಿರ ಕೊಡುತ್ತೇನೆ ಎಂದು ಹೇಳಿದರು. ಆದರೆ ಈವರೆಗೂ ಕೊಟ್ಟಿಲ್ಲ. ಒಬ್ಬ ಕಾರ್ಮಿಕ, ರೈತನಿಗೆ ಸಹಾಯ ಮಾಡಿಲ್ಲ. ನಗರ ಪ್ರದೇಶಗಳಲ್ಲಿ ಕಟ್ಟಡಗಳು ಖಾಲಿ ಬಿದ್ದಿದೆ. ಪಾಲಿಕೆಗಳಿಗೆ ಸೂಚನೆ ನೀಡಿ ಅವರಿಗೆ ತೆರಿಗೆ ವಿನಾಯಿತಿ ಕೊಡಲು ಇವರಿಂದ ಸಾಧ್ಯವಾಗುವುದಿಲ್ಲವೇ? ಬ್ಯಾಂಕ್ ಸಾಲದ ಬಡ್ಡಿ ಮನ್ನಾ ಮಾಡಿದ್ದಾರಾ? ಇವರೇನು ಲಸಿಕೆ ಕೊಡುತ್ತಾರೆ? ಕೋರೊನಾದಿಂದ ಮೃತಪಟ್ಟವರ ಹೆಣವನ್ನು ಬಿಸಾಡಿದರು. ಕೇಂದ್ರ ಸರ್ಕಾರ ನಮ್ಮ ಕೇಂದ್ರ ಸಚಿವರ ಪಾರ್ಥಿವ ಶರೀರವನ್ನು ಅವರ ಕುಟುಂಬದವರಿಗೆ ತೋರಿಸಲಿಲ್ಲ. ಸೇನಾ ವಿಮಾನ ಸೌಲಭ್ಯ ಕಲ್ಪಿಸಿ ಅವರ ಶವವನ್ನು ಇಲ್ಲಿಗೆ ತಲುಪಿಸಿದ್ದರೆ ಅವರ ಕುಟುಂಬದವರು, ಜನರು ಅವರ ಮುಖ ನೋಡಿಕೊಳ್ಳುತ್ತಿದ್ದರು. ಇಚ್ಛೆ ಇದ್ದರೆ ಅದನ್ನು ಮಾಡುವ ಧೃಢ ನಿರ್ಧಾರ ಇರುತ್ತದೆ. ಇದರಲ್ಲೇ ಸರ್ಕಾರಕ್ಕೆ ಯಾವುದೇ ದೂರದೃಷ್ಟಿ ಇಲ್ಲ ಎಂಬುದು ತಿಳಿಯುತ್ತದೆ” ಎಂದರು.
ಇದನ್ನೂ ಓದಿ: ಈ ಉಪಚುನಾವಣೆ ಜನರ ತೀರ್ಪು ಮಾರಿಕೊಂಡವರಿಗೆ ಪಾಠವಾಗಲಿ- ಡಿ.ಕೆ.ಶಿವಕುಮಾರ್