Homeಅಂಕಣಗಳುಪುಸ್ತಕ ವಿಮರ್ಶೆ; "ಐ ಕಾಂಟ್ ಬ್ರೀದ್" ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

- Advertisement -
- Advertisement -

ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿ ಅವರ ಕವನ ಸಂಕಲನ “ಐ ಕಾಂಟ್ ಬ್ರೀದ್”. ಅವರಲ್ಲಿನ ಕವಿ ಪ್ರತಿಭೆಯನ್ನು ಮತ್ತಷ್ಟು ಹುರಿಗೊಳಿಸಿ ಹೊಸೆದ ಕಾವ್ಯಮಾಲೆಯಾಗಿದೆ ಇದು. ವರ್ತಮಾನದ ತಲ್ಲಣಗಳನ್ನು ತಣ್ಣನೆಯ ಬಂಡಾಯದೊಂದಿಗೆ ಬೆಸೆದು, ನಮ್ಮೊಳಗಿನ ಜಡತ್ವವನ್ನು ಬಡಿದೆಬ್ಬಿಸುವ ಎಚ್ಚರಿಕೆಯ ಗಂಟೆಯಾಗಿದೆ. ಆವರಿಸಿರುವ ಅಂಧಕಾರಕ್ಕೆ ಬೆಳದಿಂಗಳ ಕಿರಣವಾಗಿ, ಸಮಕಾಲೀನ ಸಂಗತಿಗಳ ಪ್ರತಿಬಿಂಬವಾಗಿ, ಮನಸಿಗಂಟಿದ ಮಾಲಿನ್ಯಕ್ಕೆ ಸ್ಯಾನಿಟೈಸರ್ ಆಗಿ, ಧರ್ಮದ ಅಮಲು ಇಳಿಸುವ ತಂಪು ಪಾನಕವಾಗಿ, ಬೆಂಕಿ ಆರಿಸಿ, ಹಸಿರು ಸೃಜಿಸುವ ಹನಿಗಳ ಸಿಂಚನವಾಗಿ ಅಲ್ಲಿನ ಎಲ್ಲ ಕವಿತೆಗಳು ಸಹೃದಯರ ಅಂತರಂಗವನ್ನು ಆವರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತವೆ.

ತೀರ ಎಳೆಯ ತಾರುಣ್ಯದಲ್ಲಿಯೇ ’ಕಗ್ಗತ್ತಲು’ ಕವನ ಸಂಕಲನದ ಮೂಲಕ ಕಾವ್ಯಕ್ಷೇತ್ರಕ್ಕೆ ಕಾಲಿರಿಸಿದವರು ಮಹೇಶ. ನಿರಂತರವಾಗಿ ಉತ್ತಮ ಸಾಹಿತ್ಯದ ಕೃಷಿ ಮಾಡುತ್ತ, ಕನ್ನಡ ಕಾವ್ಯ, ಕಥೆ, ವೈಚಾರಿಕ ಕ್ಷೇತ್ರಕ್ಕೆ ಭರವಸೆಯ ಬೆಳೆ ನೀಡುತ್ತ, ಕವಿತೆಯಿಂದ ಕವಿತೆಗೆ, ಕೃತಿಯಿಂದ ಕೃತಿಗೆ ತಮ್ಮೊಳಗಿನ ಕವಿಯನ್ನು ಎತ್ತರಕ್ಕೆ ಬೆಳೆಸುತ್ತ, ಮಾಗಿಸುತ್ತ ಸಾಗಿರುವುದು ಈಗ ಅಕ್ಷರದ ರೂಪದಲ್ಲಿ ಮೂಡಿ ಕನ್ನಡದ ಓದುಗರ ಮುಂದೆ ಇದೆ.

ನಮ್ಮ ನಡುವೆ ನಿತ್ಯ ಘಟಿಸಿ ಇಂದು ಸುದ್ದಿಯಾಗಿ, ನಾಳೆ ರದ್ದಿಯಾಗಿ ನಮ್ಮ ಒತ್ತಡ, ಜಂಜಡಗಳ ನಡುವೆ ಮರೆತು ಹೋಗಿಬಿಡುವ ಅನೇಕ ಸಂಗತಿಗಳು ಕಾವ್ಯದ ರೂಪ ಪಡೆದಿವೆ ಇಲ್ಲಿ. ಮನುಷ್ಯನ ಅವಜ್ಞೆಗೆ ಒಳಗಾಗದೆ, ಮನುಕುಲಕ್ಕೆ ಸದಾ ಕಾಲ ಬಿಡದೇ ಕಾಡುವ ಚಿಂತನಾಕ್ರಮಗಳಾಗಬೇಕು ಎನ್ನುವ ರೀತಿಯಲ್ಲಿ, “ಐ ಕಾಂಟ್ ಬ್ರೀದ್ ಕವನ ಸಂಕಲನದ ಎಲ್ಲಾ 38 ಕವಿತೆಗಳು ವರ್ತಮಾನಕ್ಕೆ ಮುಖಾಮುಖಿಯಾಗುತ್ತವೆ. ಪ್ರತಿ ಸಾಲುಗಳಲ್ಲೂ ಮನುಷ್ಯತ್ವವನ್ನು ಸಾರುವ ಚಿಂತನೆಗಳು ಅಡಕವಾಗಿವೆ. ಓದುಗನೊಳಗೆ ಪ್ರೀತಿಯ ತೊರೆಯನ್ನು ತಿಳಿಯಾಗಿ, ಸದ್ದಿಲ್ಲದಂತೆ ಸಲಿಲವಾಗಿ ಹರಿಸಿ, ಮನಸ್ಸುಗಳನ್ನು ತೋಯಿಸುತ್ತವೆ.

ಅಧಿಕಾರದ ಕೇಂದ್ರ ಸ್ಥಾನಗಳ ಸುತ್ತಮುತ್ತಲಿನ ವಾತಾವರಣಕ್ಕಷ್ಟೇ ಸೌಕರ್ಯಗಳು ಸೀಮಿತವಾಗುವ ಪರಿಯನ್ನು ’ಪರುಷಕಟ್ಟೆ’ ಕವನದಲ್ಲಿ ಚಿತ್ರಿಸುತ್ತ, ಗಾಂಧಿಯ ಗ್ರಾಮ ಸ್ವರಾಜ್ಯ ಕಲ್ಪನೆಗೆ ಸಂಪೂರ್ಣ ಇತಿಶ್ರೀ ಹಾಡಿರುವ ಹಳ್ಳಿಗಳ ಸ್ಥಿತಿಯನ್ನು ಯಯಾತಿಗೆ ಹೋಲಿಸಿ, ಸೌಕರ್ಯಗಳ ನಿರೀಕ್ಷೆಯಲ್ಲಿರುವ ಹಳ್ಳಿಗರನ್ನು ಶಬರಿಗೆ ಹೋಲಿಸಿರುವದು ಅರ್ಥಪೂರ್ಣವಾಗಿ ಮೂಡಿಬಂದಿದೆ.

ಕೆಲವು ತಿಂಗಳುಗಳ ಹಿಂದೆ ಉತ್ತರ ಪ್ರದೇಶದ ಹಥರಾಸ್‌ನಲ್ಲಿ ನಡೆದ ಮನೀಷಾ ವಾಲ್ಮೀಕಿ ಎಂಬ ನತದೃಷ್ಟ ಯುವತಿಯ ಬರ್ಬರ ಹತ್ಯೆ ಹಲವರ ಪ್ರಜ್ಞಾಪೂರ್ವಕ ನಿರ್ಲಕ್ಷ್ಯಕ್ಕೆ ಒಳಗಾಯಿತು. ಈ ಹೊತ್ತಿನಲ್ಲಿ, ಕವಿಯಾದವನೊಬ್ಬ ಆ ಘಟನೆಗೆ ಸ್ಪಂದಿಸಬೇಕಾದ ಹೊಣೆಗಾರಿಕೆ ’ನಾನು ಮನೀಷಾ (ಕ್ಷಮಯಾ ಧರಿತ್ರಿ)’ ಕವನದ ಮೂಲಕ ಮಾನವೀಯ ನೆಲೆಗಳ ಸ್ಪಂದನೆ ವ್ಯಕ್ತವಾಗಿದೆ.

“ಬಂದೇ ಬರುತ್ತೇನೆ ಮತ್ತೆ
ಇದೇ ನೆಲದಲ್ಲಿ ನನ್ನ ಸುಟ್ಟವರ
ಮನೆಯಲ್ಲಿಯೇ ಮಗಳಾಗಿ ಹುಟ್ಟಿ
ಅವರ ಮನೆ ಬೆಳಗುವ
ನಂದಾ ದೀಪವಾಗುತ್ತೇನೆ..”

ಈ ಸಾಲುಗಳಲ್ಲಿ, ನ್ಯಾಯ, ಮನುಷ್ಯತ್ವ, ಪ್ರೀತಿಯ ಒರತೆಗಳು ಈಗ ಬತ್ತಿರಬಹುದು ಆದರೆ ಅವುಗಳು ಅಂತರಾಳದಲ್ಲಿ ಸ್ಥಾಯಿಯಾಗಿವೆ, ಮತ್ತೆ ಎಂದಾದರೂ ಅವು ಜೀವಸೆಲೆಯಾಗಿ ಮೈದಳೆಯುತ್ತವೆ ಎಂಬ ಭರವಸೆಯನ್ನು ಕವನದ ಮೂಲಕ ಓದುಗನ ಎದೆಗೆ ಕವಿ ದಾಟಿಸಿದ್ದಾರೆ.

ನಮ್ಮ ದೃಶ್ಯಮಾಧ್ಯಮಗಳ ಅಬ್ಬರ-ಭರಾಟೆಗಳು, ವೈಯಕ್ತಿಕ ಸ್ವಾತಂತ್ರ್ಯಗಳನ್ನೂ ಕೂಡ ಆಪೋಷನ ತೆಗೆದುಕೊಳ್ಳುತ್ತಿರುವ ವಿದ್ಯಮಾನಗಳನ್ನು ’ಆಕಾಶ-ಭೂಮಿ’ ಕವಿತೆಯಲ್ಲಿ ಸೊಗಸಾಗಿ, ತೀಕ್ಷ್ಣವಾಗಿ ದಾಖಲಿಸಿದ್ದಾರೆ. ’ಬಿಂಬ’ ಕವಿತೆಯು ರೂಪಕ, ಪ್ರತಿಮೆಗಳ ಹಂಗಿಲ್ಲದೇ ಮೂಡಿಬಂದಿದೆ. ಮೇಲ್ನೋಟಕ್ಕೆ ವಾಚ್ಯವೆನಿಸಿದರೂ ಕೂಡ, ವಸ್ತುವಿನ ದೃಷ್ಟಿಯಿಂದ ಹಿರಿದಾಗಿದೆ.

ರಾಜ ಬಂದ, ಟ್ರಂಪ್, ಅಹವಾಲುಗಳು, ಅಮಲು ಕವನಗಳು ಸಮಕಾಲೀನ ರಾಜಕಾರಣದ ಹಲವು ಮುಖಗಳನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸಿವೆ. ’ಅಲೈನ್‌ಮೆಂಟ್ ಕವಿತೆಯಲ್ಲಿ ಕಂಪ್ಯೂಟರ್ ಪರಿಭಾಷೆಯನ್ನು ಸಮರ್ಥವಾಗಿ ರೂಪಕವಾಗಿ ಬಳಸಿಕೊಂಡಿರುವುದು ಹೊಸಪೀಳಿಗೆಯ ಓದುಗರನ್ನು ಕಾವ್ಯದತ್ತ ಸೆಳೆದು ತರುವ ಸಾಧ್ಯತೆಗಳನ್ನು ತೋರಿದೆ.

“ಮೊದಲೆಲ್ಲ ಲೆಫ್ಟ್ ಅಲೈನ್‌ಮೆಂಟ್ ಸಾಲುಗಳಿರುತ್ತಿದ್ದವು,
ಇದೀಗ ರೈಟ್ ಅಲೈನ್‌ಮೆಂಟ್,
ಇವೆರಡರ ನಡುವೆ ಜಸ್ಟಿಫಿಕೇಷನ್ ಮಾಯವಾಗಿದೆ”

ಎನ್ನುವ ಸಾಲುಗಳು ರಾಜಕಾರಣದ ಸೈದ್ಧಾಂತಿಕ ಒಲವು, ನಿಲುವುಗಳಿಗೆ ಕನ್ನಡಿ ಹಿಡಿದಿವೆ.
ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ ಅಮೆರಿಕನ್ ಕಪ್ಪುವರ್ಣೀಯ ವ್ಯಕ್ತಿಯೊಬ್ಬನನ್ನು, ಅಮೆರಿಕಾದಲ್ಲಿ, ವರ್ಣಭೇದದ ಪೂರ್ವಾಗ್ರಹದ ಕಾರಣಕ್ಕೆ ಅಲ್ಲಿನ ಪೊಲೀಸರು ಅಮಾನವೀಯವಾಗಿ ಇದೇ 2020ರ ಮೇ 25ರಂದು ಕೊಲ್ಲುವಾಗ, ಆತನ ’ಐ ಕಾಂಟ್ ಬ್ರೀದ್’ ಎಂಬ ಆತ್ರರೋದನವನ್ನೇ, ಈ ಕವನ ಸಂಕಲನದ ಶೀರ್ಷಿಕೆಯಾಗಿಸಿರುವುದು ಮನುಷ್ಯತ್ವವನ್ನೇ ಉಸಿರುಗಟ್ಟಿಸಿರುವ ನಮ್ಮ ಸಮಕಾಲೀನ ವಾತಾವರಣದ ಚಿತ್ರಣ ನೀಡಿದೆ.

ಕನ್ನಡನಾಡಿನ ಹನ್ನೆರಡನೇ ಶತಮಾನದ ಹರಳಯ್ಯನಿಂದ ಹಿಡಿದು ಇಂತಹ ಹತ್ಯೆಗಳು ಇಂದಿಗೂ ಆಗಾಗ ಮರುಕಳಿಸುತ್ತಿರುವುದನ್ನು ಆರ್ದ್ರವಾಗಿ ಹಾಡಿದೆ.

’ತರಕಾರಿ ಹುಡುಗಿ’, ’ಕಳ್ಳ’ ಕವಿತೆಗಳು ನಮ್ಮ ವ್ಯವಸ್ಥೆಯಲ್ಲಿ ಬಡಜೀವಗಳು ತುತ್ತು ಅನ್ನಕ್ಕೆ, ಹಸಿವಿನ ಚೀಲ ತುಂಬಿಸಲಿಕ್ಕೆ ಪಡುವ ಪಡಿಪಾಟಲುಗಳು, ಭ್ರಷ್ಟಾಚಾರದ ಸಾಗರದಲ್ಲಿ ತಿಮಿಂಗಿಲಗಳನ್ನು ಹಿಡಿಯದೇ ಹಸಿವಿಗಾಗಿ ತುಂಡುರೊಟ್ಟಿ ಕದ್ದವನನ್ನು ಹಿಡಿವ ಭ್ರಷ್ಟಾಚಾರ ನಿಗ್ರಹದ ನಾಟಕಗಳನ್ನು ಓದುಗರ ಕಣ್ಣ ಮುಂದೆ ತರುತ್ತವೆ.

ಅಲಾಯಿ (ಮೊಹರಂ) ನಮ್ಮ ಸೌಹಾರ್ದದ ಸಿಹಿ ಚೊಂಗೆಯಂತಿದ್ದರೆ, ದೂರು, ಗಡಿಪಾರು ಶೀರ್ಷಿಕೆಯ ಮೂರುಸಾಲಿನ ಹನಿಗಳು ಕಿರಿದರಲ್ಲಿ ಹಿರಿದರ್ಥ ಹೇಳುವ, ಸಮ ಸಮಾಜ ಸಂದೇಶಗಳನ್ನು ಸಮರ್ಥವಾಗಿ ಸಾರಿವೆ.

ನಮ್ಮ ಕೊಪ್ಪಳದ ನಾಡಕವಿ ಎಂದೇ ಹೆಸರಾದ ಗವಿಸಿದ್ಧ ಎನ್ ಬಳ್ಳಾರಿಯವರ ಮಗನೆಂಬ ವಿಶೇಷ ರಿಯಾಯಿತಿ, ಆದ್ಯತೆ ಬಯಸದೆಯೂ ಕಾವ್ಯಕ್ಷೇತ್ರದಲ್ಲಿ ಸ್ಪಷ್ಟವಾಗಿ ಸ್ವಸಾಮರ್ಥ್ಯದಿಂದಲೇ ಮಹೇಶ ಬಳ್ಳಾರಿ ಮುನ್ನಡೆಯುತ್ತಿದ್ದಾರೆ.

ಮಂಜುನಾಥ ಡೊಳ್ಳಿನ

ಹಿರಿಯ ಸಹಾಯಕ ನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ


ಇದನ್ನೂ ಓದಿ: ಪುಸ್ತಕ ವಿಮರ್ಶೆ: ಬುದ್ಧನೆಡೆಗೆ ಮರಳಿ ಹಾರುವ ಮೂಡ್ನಾಕೂಡು ಚಿನ್ನಸ್ವಾಮಿಯವರ ನೆನಪಿನ ಹಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...