Homeಚಳವಳಿಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..

ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..

ಸಮಾಜದ ಕಟ್ಟಕಡೆಯ ಮನುಜರ ಬಗ್ಗೆ ಜೀವಪರವಾಗಿ ಮಿಡಿಯಲು ಹಿಂದು ಮುಂದು ನೋಡದ ಗೌರಿ ಎಂಬ ಜೀವ ಇಂದಿದ್ದರೆ ಅದೆಷ್ಟು ಪ್ರತಿರೋದ ಒಡ್ಡುತ್ತಿತ್ತು ಅಲ್ಲವೇ?

- Advertisement -
- Advertisement -

ಗೌರಿ ಮೇಡಂ ನಮ್ಮನ್ನಗಲಿ ಮೂರು ವರ್ಷಗಳಾದವು. ಅವರ ನೆನಪಿನ ಕಾವು ನಿಧಾನಕ್ಕೆ ಕರಗುತ್ತಿದೆ ಎನಿಸಿದರೂ ದಮನಕಾರಿ ನೀತಿಗಳು ಹಾಗೂ ತಾರಕ್ಕೇರಿರುವ ತಾರತಮ್ಯದ ಹೊಗೆ ಉಸಿರುಗಟ್ಟಿಸಿದಾಗಲೆಲ್ಲ ಅವರು ನೆನಪಾಗಲೇಬೇಕು. ಈ ಒಂದು ಕಾರಣಕ್ಕೆ ಮಾತ್ರ ಗೌರಿ ಮೇಡಂ ನೆನಪಾದರೆ ನಾವು ಸೋತಂತೆ. ಹಾಗೂ ‘ಸೋ ಕಾಲ್ಡ್’ ಮಾದ್ಯಮ ಭಾಷೆಯಾದ ‘ಸಹಜ ಸ್ಥಿತಿಗೆ’ ಮರಳಿದಂತೆಯೇ ಆಗುತ್ತದೆ. ಇಂತಹ ಕೃತಕ ಅಸಹಜ ಸ್ಥಿತಿಯಲ್ಲಿ ಜೀವಪರವಾದವರು ಸಹಜವಾಗಿರಲಾರರು ನಿಜ. ಆದರೆ ಮೌನವಾಗಿರುವವರ ಕತೆ ಏನು? ಗೌರಿ ಮೇಡಂ ಆ ರೀತಿಯ ದಿವ್ಯ ಮೌನಿಗಳ ಜೊತೆಗೂ ಗುದ್ದಾಡಿ ಬಾಯಿಬಿಡಿಸುತ್ತಿದ್ದವರು. ಆದರೆ ಈಗ ಅವರಿಗಾಗಿಯೇ ಬಾಯಿಬಿಡುವವರ ಸಂಖ್ಯೆ ಕಡಿಮೆಯಾಗಿಹೋಯಿತೇನೋ ಎಂಬ ವಿಷಾದ ಕಾಡದೇಇರದು.

ಹೀಗೆ ಯೋಚಿಸುತ್ತಿರುವಾಗ ಕೋವಿಡ್ ಸಮಯದಲ್ಲಿ ಗೌರಿ ಮೇಡಂ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ‘ಕಂಡಹಾಗೆ’ಯಲ್ಲಿ ಹೇಗೆಲ್ಲಾ ಕಣ್ಣು ಹಾಯಿಸುತ್ತಿದ್ದರು ಎಂಬುದನ್ನೊಮ್ಮೆ ಅವರ ದೈಹಿಕ ಅನುಪಸ್ಥಿತಿಯಲ್ಲಿ ಊಹಿಸಬಹುದೇನೋ.

ಗೌರಿ ಮೇಡಂ ಕಡೆಗಾಲದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಕ್ರಿಯಾಶೀಲರಾಗಿದ್ದರು. ಇದನ್ನು ಮನದಲ್ಲಿಟ್ಟುಕೊಂಡು ಕೋವಿಡ್-19 ವೈರಸ್ ಭಾರತವನ್ನು ಪ್ರವೇಶಿಸಿದ ತಿಂಗಳಲ್ಲಿ ಸೋಷಿಯಲ್ ಮೀಡಿಯಾದಲ್ಲೊಂದು ಸಂದೇಶ ಬಹಳ ಸದ್ದು ಮಾಡಿದ್ದನ್ನು ಗಮನಿಸಬಹುದು. ಅದರ ತಲೆಬರಹ ‘ಕೊರೊನಾ ಕಲಿಸಿದ ಪಾಠಗಳು’. ಪ್ರಕೃತಿಯ ಮುಂದೆ ಎಂತಹ ದೇಶವಿರಲಿ, ಪ್ರಬಲ ವ್ಯಕ್ತಿಯಿರಲಿ ಎಲ್ಲವೂ ಧೂಳಿಪಟವಾಗಬಲ್ಲದು ಎಂಬುದು ಅದರ ಒಟ್ಟಾರೆ ಅಭಿಪ್ರಾಯ. ಎಲ್ಲರೂ ಆ ಸಂದೇಶವನ್ನು ಎಷ್ಟು ಬೇಗ ಹಂಚಿಕೊಂಡರೋ ಅಷ್ಟೇ ಬೇಗ ಮರೆತೂಹೋದರು.

ಆದರೆ ಗೌರಿ ಮೇಡಂ ಇದ್ದಿದ್ದರೆ ಏನು ಮಾಡುತ್ತಿದ್ದರು? ಕೊರೊನಾ ವೈರಸ್ ವಕ್ಕರಿಸಿದ ನಂತರವೂ ಭಾರತೀಯರು ‘ಕಲಿಯದ ಬಹಳಷ್ಟು ಪಾಠಗಳಿವೆ’ ಎಂದಂದುಬಿಡುತ್ತಿದ್ದರೆ? ಮುಲಾಜೇ ಇಲ್ಲ, ಅಂದುಬಿಡುತ್ತಿದ್ದರು. ಮುಂದೆ ಒಂದೊಂದಾಗಿ ಪ್ರಶ್ನೆಗಳ ಮೂಲಕವೇ ಉತ್ತರ ಹುಡುಕಲು ಪ್ರೇರೇಪಿಸುತ್ತಿದ್ದರು. ಅಲ್ಲಲ್ಲಿ ಕೆಂಡವಾಗುತ್ತಿದ್ದರು. ಕೆಂಡವಾಗಿ ತಣ್ಣಗಾಗುತ್ತಿದ್ದರು. ಸುಮ್ಮನೆ ಅಂತಹ ಪ್ರಶ್ನೆಗಳನ್ನು ಊಹಿಸೋಣ.

‘ಈ ದೇಶದಿಂದ ಕೊರೊನಾ ಹೋದರೆ ಸಾಕಪ್ಪ’ ಎನ್ನುತ್ತಿರುವ ಸಂದರ್ಭದಲ್ಲಿ ಉತ್ತರಪ್ರದೇಶದಲ್ಲಿ ಹಾಗೂ ಕರ್ನಾಟಕದ ಸಿಂದಗಿಯಲ್ಲಿ ದಲಿತ ಯುವಕರಿಬ್ಬರನ್ನು ದೇವಸ್ಥಾನ ವಿಚಾರದಲ್ಲಿ ಹಿಂದೂ ಮೇಲ್ಜಾತಿ ಜನರು ಕೊಂದೇಬಿಟ್ಟಿದ್ದಾರೆ. ಪುಣೆಯಲ್ಲಿ ಹಿಂದೂ ಮೇಲ್ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನನ್ನು ಕೊಲೆಗೈಯ್ಯಲಾಗಿದೆ. ಕೊರೊನಾ ಸಮಯದಲ್ಲಿ ತಮಿಳುನಾಡು ಸೇರಿದಂತೆ ದೇಶದೆಲ್ಲೆಡೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಈಗ ಹೇಳಿ, ಈ ಜನಗಳಿಗೆ ಅತಿಯಾಗಿ ಬಾಧಿಸುತ್ತಿರುವುದು ಕೊರೊನಾ ವೈರಸ್ಸೇ ಅಥವಾ ಜಾತಿ ವೈರಸ್ಸೇ? ಎಂದು ಗೌರಿ ಮೇಡಂ ಖಂಡಿತವಾಗಿ ಕೇಳುತ್ತಿದ್ದರು.


ಇದನ್ನೂ ಓದಿ: 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯ, ಪ್ರತಿನಿತ್ಯ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ..


ಚೀನಾದಿಂದ ಭಾರತಕ್ಕೆ ಕೊರೊನಾ ಬಂದ ತಿಂಗಳಲ್ಲಿಯೇ ಹಲವು ಮಾಧ್ಯಮಗಳೂ ಸೇರಿದಂತೆ ಅದಕ್ಕೆ ಮುಸ್ಲಿಂ ಧರ್ಮ ಆರೋಪಿಸಿಬಿಟ್ಟರು. ಅಲ್ಲಿಯವರೆಗೆ ಚೀನಾ ದೇಶವನ್ನು ವಾಚಾಮಗೋಚರವಾಗಿ ಉಗುಳುತ್ತಿದ್ದ ಅದೇ ಬಾಯಿಗಳು ಇದ್ದಕ್ಕಿದ್ದಂತೆ ತಮ್ಮ ನಾಲಿಗೆಯನ್ನು ಭಾರತೀಯ ಮುಸ್ಲಿಂ ಬಾಂಧವರ ಮೇಲೆ ತಿರುಗಿಸಿಬಿಟ್ಟರು. ಈ ನಾಲಿಗೆಗೆ ಆಹಾರ ಒದಗಿಸಲು ಒಂದಷ್ಟು ಮಿದುಳುಗಳು ಹಳೆಯ ಯೂಟ್ಯೂಬ್ ವಿಡಿಯೋಗಳಿಗೆ ಸುಳ್ಳಿನ ಬಣ್ಣ ಬಳಿದು ಹಂಚಿಬಿಟ್ಟರು. ಇಂತಹ ವಿಡಿಯೋಗಳ ಸತ್ಯಾಸತ್ಯತೆ ಪರೀಕ್ಷಿಸದ ವಾಟ್ಸಾಪ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಹೆಚ್ಚೆಚ್ಚು ಫಾರ್ವರ್ಡ್ ಮಾಡಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದುಬಿಟ್ಟರು. ದಿನಬೆಳಗಾಗುವುದರೊಳಗೆ ಕೊರೊನಾವನ್ನು ಮುಸ್ಲಿಂ ಭಯೋತ್ಪಾದನೆಗೆ ತಳುಕು ಹಾಕಿ ಕೊರೊನಾಗೂ ಅಚ್ಚರಿಯನ್ನುಂಟು ಮಾಡಿದ್ದರು. ಅಲ್ಲಿಗೆ ಕೋಮುವಾದಿ ಆತ್ಮಗಳು ಶಾಂತವಾಗಿ ಹೋದವು. ಇದಕ್ಕೆ ಬಹುಶಃ, ‘ಭಾರತದ ಜಾತಿವಾದ ಮತ್ತು ಕೋಮುವಾದ ಹಿಂಸಾಚಾರವನ್ನು ನೋಡಿ ಕೊರೊನಾ ವೈರಸ್ ಕೂಡ ನಾಚಿ ದುರ್ಬಲ ಮ್ಯುಟೇಶನ್ನಿಗೆ ಒಳಗಾಗಿಬಿಡುತ್ತದೆ’ ಎಂದುಬಿಡುತ್ತಿದ್ದರೇನೋ ಗೌರಿ ಮೇಡಂ.

ಕೊರೊನಾ ಮ್ಯುಟೇಷನ್‌ನಿಂದಾಗಿ ತನ್ನ ರಚನೆಯನ್ನೇ ಬದಲಿಸಿಕೊಳ್ಳುತ್ತಿದೆ. ಹಾಗೆಯೇ ನಮ್ಮ ಮಾಧ್ಯಮಗಳು ಸಹ ಕೊರೊನಾದೊಂದಿಗೆ ಪ್ರಾಸ ಪದಗಳನ್ನೂ ಪೋಣಿಸಿ ಮ್ಯುಟೇಷನ್ ಮಾಡಿವೆ. ‘ಚೀನಾ ಕೊರೊನಾ’ದಿಂದ ಆರಂಭವಾಗಿ ಭಾರತಕ್ಕೆ ಬಂದೊಡನೆ ಅದು ‘ತಬ್ಲಿಗಿ ಕೊರೊನ’ವಾಗಿ, ಕರ್ನಾಟಕಕ್ಕೆ ಬಂದೊಡನೆ ಅದು ‘ನಂಜನಗೂಡಿನ ನಂಜಾಗಿ’, ‘ನರ್ಸ್ ನಂಜಾಗಿ’ ಕೊನೆಗೆ ಮಹಾರಾಷ್ಟ್ರದ ‘ಬಾಂಬೆ ಬಾಂಬ್’ಆಗಿ ಪರಿವರ್ತನೆಯಾಯಿತು. ಇದನ್ನು ಕಂಡು ‘ಟಿ.ಆರ್.ಪಿ’ ಭೂತಗಳೇ ಪ್ರಾಸಬದ್ಧ ಪದಪುಂಜಗಳಿಂದ ನಿಮ್ಮ ಹೊಟ್ಟೆಪಾಡು ಬಗೆಹರಿಯಿತೇ? ಎಂದಂದು ಬಿಡುತ್ತಿದ್ದರೇನೋ ಗೌರಿ ಮೇಡಂ.

ಮೊದಲ ಲಾಕ್‌ಡೌನ್ ಅವಧಿಯಲ್ಲಿ ದಿನ ಬೆಳಗಿನ ಸಮಯದಲ್ಲಿ ಅನೇಕರು ಚೀನಿಯರ ಪ್ರಮಾದವನ್ನು ಖಂಡಿಸುತ್ತಾ ಶಪಿಸುತ್ತಾ ಕೆಂಡಕಾರಿದರು. ಆದರೆ ಸಂಜೆಯಾಗುತ್ತಿದ್ದಂತೆ ‘ಕ್ವಾರಂಟೈನ್ ತಿಂಡಿ’ಯನ್ನಾಗಿ ಗೋಬಿಮಂಚೂರಿ, ಪಾನಿಪೂರಿ ಮಾಡಿಕೊಂಡು ತಿಂದರು. ಅದನ್ನು ತಿನ್ನುವ ಮುನ್ನ ತಮ್ಮ ‘ಚೀನಾ ಮೇಡ್’ ಶಿಯೋಮಿ, ಒಪ್ಪೊ, ಒನ್ ಪ್ಲಸ್ ಟಿ, ವಿವೋ ಮೋಬೈಲ್‌ಗಳಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿ ಖುಷಿಪಟ್ಟರು. ಇಂತಹ ಹೇಳುವುದಕ್ಕೂ ಮಾಡುವುದಕ್ಕೂ ತಾಳಮೇಳವಿಲ್ಲದ ಹೊಟ್ಟೆತುಂಬಿದ ಮನುಷ್ಯರ ಬಾಯಿಯಿಂದ ಪದೇಪದೇ ಹೊರಡುವ ಬೈಗುಳವೊಂದಿದೆ. ‘ಹೊಟ್ಟೆಗೇನ್ ತಿಂತಿಯಾ’ ಅಂತ. ಈ ಬೈಗುಳ ನೆನೆದಾಕ್ಷಣ ಲಾಕ್‌ಡೌನ್ ಸಮಯದಲ್ಲಿ ಬಡವನೊಬ್ಬ ರಸ್ತೆಯ ಮೇಲಿನ ನಾಯಿಯ ಕಳೇಬರವನ್ನು ಬಾಯಿಗೆ ಹಾಕಿಕೊಂಡಿದ್ದನು. ಇದನ್ನು ಕಂಡ ಗೌರಿ ಮೇಡಂ ಆತ ನಾಯಿ ಕಳೇಬರ ಬಾಯಿಗೆ ಹಾಕಿಕೊಂಡದ್ದು ತಿನ್ನಲಿಕ್ಕಲ್ಲ ಹೊಟ್ಟೆ ತುಂಬಿದವರ ಮುಖಕ್ಕೆ ಉಗಿಯಲಿಕ್ಕೆ ಎಂದಂದುಬಿಡುತ್ತಿದ್ದರು. ಮುಂದುವರೆದು ‘ಒಮ್ಮೆ ಮುಖ ಮುಟ್ಟಿ ನೋಡಿಕೊಳ್ಳಿ’ ಎನ್ನಲು ಮರೆಯುತ್ತಿರಲಿಲ್ಲವೇನೋ ಗೌರಿ ಮೇಡಂ.

ಅದೇ ಲಾಕ್‌ಡೌನ್ ಸಮಯದಲ್ಲಿ ಮಲಗಿದ್ದಲ್ಲೇ ರೈಲಿಗೆ ಬಲಿಯಾದವರನ್ನೂ ಕಂಡೆವು. ಮತ್ತದೇ ಮಾತುಗಳು. ‘ಯಾರಾದರು ರೈಲಿನ ಕೆಳಗೆ ಮಲಗ್ತಾರೇನ್ರಿ? ದಡ್ಡರು ಸಹ ಅಂತ ಕೆಲಸ ಮಾಡಲ್ಲ’. ಇಡೀ ದೇಶದವರ ಹೊಟ್ಟೆ ತುಂಬಿಸಲು ರೈಲಿನ ಬೋಗಿಗಳಿಗೆ ದಿನಸಿ ಮೂಟೆಗಳನ್ನು ತುಂಬುವ ಹಮಾಲಿಯೇ ಅಂದು ರೈಲಿನ ಹಳಿಗಳ ಮೇಲೆ ಮಲಗಿರಬಹುದಲ್ಲವೆ? ಹಾಗೆ ಸುಮ್ಮನೆ ಯೋಚಿಸಿ, ಹಳಿಗಳ ಮೇಲೆ ಮಲಗಿದ್ದವರ ಬಳಿ ಹೋಗಿ ‘ಕೊರೊನಾ ಸಮಯದಲ್ಲಿ ಯಾಕ್ರಪ್ಪಾ ಹೀಗೆ ರಾತ್ರೋ ರಾತ್ರಿ ಹೊರಟು ಮಲಗಿದ್ದೀರಿ?’ ಎಂದು ಪ್ರಶ್ನಿಸಿದೊಡನೆ ಅತ್ತ ಕಡೆಯಿಂದ ‘ಏ ರಟ್ಟೆ ತುಂಬ ಕೆಲ್ಸ, ಹೊಟ್ಟೆ ತುಂಬ ರೊಟ್ಟಿ ಇದ್ರೆ ಕೊರೊನ ಏನ್ಮಾಡ್ತದೇಳಿ’ ಎಂದುತ್ತರ ಬರುತ್ತಿತ್ತೇನೋ. ಇದನ್ನೇ ವೈದ್ಯರು ‘ರೋಗ ನಿರೋಧಕ ಶಕ್ತಿ’ ಎನ್ನುವುದಲ್ಲವೆ? ಆಗ ‘ಏ ಕೂಡಿಟ್ಟು ತಿನ್ನುವವರೇ ನಿಮಗೆ, ದಿನ ದುಡಿದು ತಿನ್ನುವವರ ಮೇಲೆ ಯಾಕಿಷ್ಟು ಅಸೂಯೆ’ ಎಂದಂದುಬಿಡುತ್ತಿದ್ದರೇನೋ ಗೌರಿ ಮೇಡಂ.

ದೇಶಾದ್ಯಂತ ಕೊರೊನಾ ವಿರುದ್ಧ ಜನರ ಪರವಾಗಿ ಹೋರಾಡಿದವರು ವೈದ್ಯರು ಮತ್ತು ವೈದ್ಯಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು. ದುರಂತವೆಂದರೆ ಇಂತಹ ವೀರರನ್ನೂ ಕ್ರೂರಿ ಕೊರೊನಾ ಬಲಿ ಪಡೆಯಿತು. ಆದರೆ ಅವರ ಕಳೆಬರವನ್ನು ಸುಡಲು ಅಥವಾ ಹೂಳಲು ದೇಶಾದ್ಯಂತ ವಿರೋಧ ವ್ಯಕ್ತವಾಯಿತು. ಈ ರೀತಿ ವಿರೋಧಿಸಿದವರಲ್ಲಿ ಶಾಸಕ, ಮಂತ್ರಿಗಳೂ ಸಹ ಇದ್ದರು! ಮೃತರ ಸಂಬಂಧಿಕರು ಶವದೊಂದಿಗೆ ಅಲೆದಲೆದು ಸುಸ್ತಾಗಿ ಎಲ್ಲೋ ಒಂದು ಕಡೆ ಬೀದಿ ಹೆಣದಂತೆ ಹೂಳಿ ಬರಬೇಕಾಯಿತು. ಇಂತಹವರಿಗೆ ‘ಅಲ್ಲಿ ಹೆಣವಾದದ್ದು ಯಾರು’ ಎಂದು ಪ್ರಶ್ನಿಸಿಬಿಡುತ್ತಿದ್ದರೇನೋ ಗೌರಿ ಮೇಡಂ.

ವಲಸಿಗ

ತಲೆಯ ಮೇಲೊಂದು ಚೀಲ. ಕಂಕುಳಲ್ಲೊಂದು ಕಂದಮ್ಮ. ಕೈಹಿಡಿದು ಅಮ್ಮನ ಹಿಂದೆ ಅಳುತ್ತಾ ಹೆಜ್ಜೆ ಹಾಕುತ್ತಿದ್ದ ಮಗು. ಇದು ಲಾಕ್‌ಡೌನ್ ಸಮಯದ ವಲಸೆ ಕಾರ್ಮಿಕರ ಸ್ಥಿತಿ. ಸರ್ಕಾರಗಳ ಹೃದಯ ಮುಟ್ಟಲಾಗದೇ ಕನಿಷ್ಠ ಕಿವಿ ಮುಟ್ಟಲು ‘ಕಾಲ್ನಡಿಗೆ ಜಾಥಾ’ ಹಮ್ಮಿಕೊಳ್ಳುತ್ತಿದ್ದ ಕಾರ್ಮಿಕರು ಇಂದು ಸರ್ಕಾರದ ಲಾಕ್‌ಡೌನ್ ನಿರ್ಧಾರದಿಂದಾಗಿಯೇ ‘ಪ್ರಭುತ್ವ ಪ್ರೇರಿತ ಕಾಲ್ನಡಿಗೆ ಜಾಥಾ’ ಆರಂಭಿಸಿದ್ದರು. ಹೀಗೆ ಹೊರಟವರ ವಿರುದ್ಧ ‘ಕೊರೊನಾ ಸಮಯದಲ್ಲಿ ಇದು ಬೇಕಿತ್ತ್ತಾ? ಮನೆಲಿ ಬಿದ್ದಿರಬೇಕು ತಾನೆ?’ ಎಂದವರೆಷ್ಟೋ. ಆಶ್ಚರ್ಯವೆಂದರೆ, ಹೀಗೆ ಕಾರ್ಮಿಕರ ಮೇಲೆ ಕೆಂಡ ಕಾರಿದ ಜನರೇ ಲಾಕ್‌ಡೌನ್‌ಗೂ ಮುಂಚೆ ‘STAY HOME SAVE LIFE’ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದರು. ಕಾರ್ಮಿಕರು ಹೊರಟದ್ದೂ ಸಹ ಅವರವರ ‘ಮನೆಗೆ’ ಎಂಬ ಕನಿಷ್ಠ ಪ್ರಜ್ಞೆಯೂ ಸಹ ಬಾಯಿಬಡುಕರಿಗೆ ಇಲ್ಲದಾಗಿತ್ತು. ಹೀಗೆ ಭಾರತಕ್ಕಾಗಿ ದುಡಿಯುವ ಕಾರ್ಮಿಕರು ರಸ್ತೆಗುಂಟ ಬರಿಗಾಲಲ್ಲಿ ನಡೆಯುತ್ತಿದ್ದರೆ, ಆಕಾಶದಲ್ಲಿ ವಿದೇಶಕ್ಕಾಗಿ ಹಾಗೂ ತಮಗಾಗಿ ಮಾತ್ರ ದುಡಿಯುತ್ತಿದ್ದವರನ್ನು ಹೊತ್ತುಕೊಂಡು ಭಾರತಕ್ಕೆ ವಿಮಾನಗಳು ಬರುತ್ತಿದ್ದವು. ಅದನ್ನು ಕಂಡು ‘ವಿಮಾನಗಳನ್ನು ನೋಡಿ ಕಂಕುಳಲ್ಲಿ ಅಳುತ್ತಿದ್ದ ಮಗು ‘ನಗುವುದನ್ನು’ ಕಂಡು ನಾವು-ನೀವು ನಗುವುದಾ, ಅಳುವುದಾ, ನಾಚಿ ತಲೆತಗ್ಗಿಸುವುದಾ?’ ಎಂದು ಮೌನವಾಗಿಬಿಡುತ್ತಿದ್ದರೇನೋ ಗೌರಿ ಮೇಡಂ.

ಹೀಗೆ ಒಂದಲ್ಲಾ ಎರಡಲ್ಲ. ಕೊರೊನಾ ಕಾಲದಲ್ಲಿ ಭಾರತೀಯರು ಕಲಿಯದ ಪಾಠಗಳನ್ನು ಬೆರಳೆತ್ತಿ ತೋರಿಸಿ ದಿಟ್ಟತನದಿಂದ ಪ್ರಶ್ನಿಸುತ್ತಿದ್ದರು ಗೌರಿ ಮೇಡಂ ಎಂಬುದಕ್ಕೆ ನಮ್ಮಲ್ಲಿ ಅವರ ಜೀವಿತಾವದಿಯ ಹಲವು ಸಾಕ್ಷ್ಯಗಳಿವೆ. ರೋಹಿತ್ ವೇಮುಲನ ಬಲಿ ಪಡೆದಾಗ ತನ್ನ ಕರುಳ ಬಳ್ಳಿಯನ್ನೇ ಕಿತ್ತುಕೊಂಡರು ಪಾಪಿಗಳು ಎಂದು ಅಲವತ್ತುಕೊಂಡದ್ದನ್ನು ಕಂಡಿದ್ದೇವೆ. ಒಳಮೀಸಲಾತಿ ವಿಚಾರದಲ್ಲಿ ಅಣ್ಣತಮ್ಮಂದಿರೇ ಎದುರಾಳಿಗಳಾದರಲ್ಲ ಎಂದು ಗೋಗರೆದಿದ್ದನ್ನು ಕಂಡಿದ್ದೇವೆ. ಸಮಾಜದ ಕಟ್ಟಕಡೆಯ ಮನುಜರ ಬಗ್ಗೆ ಜೀವಪರವಾಗಿ ಮಿಡಿಯಲು ಹಿಂದು ಮುಂದು ನೋಡದ ಗೌರಿ ಎಂಬ ಜೀವ ಇಂದಿದ್ದರೆ ಅದೆಷ್ಟು ಪ್ರತಿರೋದ ಒಡ್ಡುತ್ತಿತ್ತು ಅಲ್ಲವೇ?

– ಸಾಕ್ಯ ಸಮಗಾರ.

ಹೊಸ ತಲೆಮಾರಿನ ಚಿಂತಕ ಮತ್ತು ಆಕ್ಟಿವಿಸ್ಟ್ ಆದ ’ಸಾಕ್ಯ, ಅಂಬೇಡ್ಕರ್ ಚಿಂತನೆಯ ಆಳವಾದ ಓದಿನ ಜೊತೆಗೆ ಬದಲಾವಣೆಯ ಕೆಲಸದಲ್ಲಿ ಸ್ವತಃ ತೊಡಗಿಕೊಂಡಿರುವವರು.


ಇದನ್ನೂ ಓದಿ; ದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...