Homeಕರ್ನಾಟಕಶಿವಮೊಗ್ಗ, ಚಿಕ್ಕಬಳ್ಳಾಪುರ ಸ್ಫೋಟಗಳ ಸಾಲಿಗೆ ಸೇರಬಾರದು ಬ್ರಹ್ಮಾವರ ತಾಲೂಕಿನ ಗಣಿ

ಶಿವಮೊಗ್ಗ, ಚಿಕ್ಕಬಳ್ಳಾಪುರ ಸ್ಫೋಟಗಳ ಸಾಲಿಗೆ ಸೇರಬಾರದು ಬ್ರಹ್ಮಾವರ ತಾಲೂಕಿನ ಗಣಿ

- Advertisement -
- Advertisement -

ಅಕ್ರಮವಾಗಿ ಹಣ ಹರಿದು ಬರುವಲ್ಲಿ ಅನಾಹುತ-ಅನಾಚಾರ ಆಗಿಯೇ ಆಗುತ್ತದೆ. ಇದು ಪ್ರಕೃತಿ ನಿಯಮ. ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಕಲ್ಲು ಮತ್ತು ಮರಳು ಗಣಿಗಳಲ್ಲಿ ಪ್ರತಿದಿನ ಒಂದಲ್ಲ ಒಂದು ಭಾನಗಡಿ ಇದ್ದದ್ದೇ! ಹತ್ತು-ಹನ್ನೆರಡು ಜಿಲ್ಲೆಗಳಲ್ಲಿ ನಿರಂತರ-ನಿರಾತಂಕವಾಗಿ ನಡೆಯುತ್ತಿರುವ ಕಳ್ಳ ಕಲ್ಲು ಗಣಿಗಾರಿಕೆಗೆ ಅಧಿಕಾರಸ್ಥರ ಪುಢಾರಿಗಳೇ ಪಿತಾಮಹರು. ಹೀಗಾಗಿ ಕಲ್ಲು ಕ್ವಾರಿಗಳಲ್ಲಿ ನರಬಲಿ, ರಕ್ತದೋಕುಳಿ ನಡೆಯುತ್ತಲೇ ಇದೆ. ಶಿವಮೊಗ್ಗದ ಹುಣಸೋಡು ಅಕ್ರಮ ಗಣಿಯಲ್ಲಿ ಘನಘೋರ ಸ್ಫೋಟ ಸಂಭವಿಸಿ ಆರು ಬಡ ಜೀವಗಳು ಆಹುತಿಯಾಗಿ ತಿಂಗಳಿನ್ನೂ ಕಳೆದಿಲ್ಲ; ಅದಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಿರೇನಾಗವೇಲಿ ಜಿಲೆಟಿನ್ ಸಿಡಿತಕ್ಕೆ ಆರು ಮಂದಿ ಬಲಿಯಾಗಿದ್ದಾರೆ!!

ರಾಜ್ಯದ ಸುಮಾರು 10-15 ಸಾವಿರ ಎಕರೆ ಪ್ರದೇಶದಲ್ಲಿ ಸಾವಿರಾರು “ಅಧಿಕೃತ” ಕಲ್ಲುಕ್ವಾರಿ ಮತ್ತು ಕ್ರಶರ್‌ಗಳಿವೆ ಎಂಬುದೊಂದು ಅಂದಾಜು. ಆದರೆ ಇದಕ್ಕೆ ದುಪ್ಪಟ್ಟು ಜಾಗದಲ್ಲಿ ದುಪ್ಪಟ್ಟು ಕಲ್ಲುಗಣಿ-ಕ್ರಶರ್‌ಗಳ “ಅನಧಿಕೃತ” ದಂಧೆ ರಾಜಾರೋಷವಾಗಿ ಸಾಗಿದೆ! ಇದು ಸರ್ಕಾರ ನಡೆಸುವವರಿಗೆ ಮತ್ತವರ ಅಧಿಕಾರಿ ಗಣಕ್ಕೆ ಗೊತ್ತಿರುವ ಸತ್ಯವೇ. ಕಳ್ಳ ಮಾರ್ಗದಲ್ಲಿ ಕೋಟಿ-ಕೋಟಿ ಲೂಟಿಯಾಗುತ್ತಿದ್ದರೂ ಕಡಿವಾಣ ಹಾಕುವುದಕ್ಕಾಗುತ್ತಿಲ್ಲ. ಸರ್ಕಾರವನ್ನೇ ಉರುಳಿಸುವಷ್ಟು ಮತ್ತು ಎಂಪಿ-ಎಮ್ಮೆಲ್ಲೆಗಳ ಗೆಲ್ಲಿಸುವ-ಸೋಲಿಸುವಷ್ಟು ಕೊಬ್ಬಿರುವ ಕ್ವಾರಿ ಲಾಬಿ ಮಟ್ಟಹಾಕುವ ತಾಕತ್ತು ಯಾರಿಗೂ ಇಲ್ಲವಾಗಿದೆ.

ಕಲ್ಲು ಕ್ವಾರಿಗಳಲ್ಲಿ ಸ್ಥಳೀಯ ಅಮಾಯಕ ಕೂಲಿಗಳ ಜತೆ ಆಂಧ್ರ, ಬಿಹಾರ, ಜಾರ್ಖಂಡ್ ಮುಂತಾದ ಹೊರ ರಾಜ್ಯಗಳ ಕಾರ್ಮಿಕರು ದುಡಿಯುತ್ತಿದ್ದಾರೆ. ಇದೊಂಥರಾ ಜೀತ!! ಜೀವ ಪಣಕ್ಕಿಟ್ಟು ಬೆವರಿಳಿಸಬೇಕಾದ ಬರ್ಬರ-ಭೀಕರ ಪದ್ಧತಿ!! ಕೆಲವು ಕಡೆ ಟನ್‌ಗಟ್ಟಲೆ ಸ್ಫೋಟಕ ಸಂಗ್ರಹಿಸಿಡಲಾಗಿದೆ. ಆಂಧ್ರ-ತಮಿಳುನಾಡು ಮತ್ತಿತರ ರಾಜ್ಯಗಳಿಂದ ಜಿಲೆಟಿನ್, ಅಮೋನಿಯಮ್ ನೈಟ್ರೇಟ್, ಡಿಟೋನೇಟರ್ ಮತ್ತು ಫ್ಯೂಸ್ ಪೂರೈಕೆಯಾಗುತ್ತಿದೆ. ಈ ಸ್ಫೋಟಕಗಳನ್ನು ಒಂದೇ ಕಡೆ ಸಂಗ್ರಹಿಸಿಡುವುದು ಗಂಡಾಂತರಕಾರಿ. ಯಾವ ಸುರಕ್ಷಾ ಕ್ರಮಗಳು ಇಲ್ಲದೆ ಸ್ಫೋಟಕ ದಾಸ್ತಾನು ಮಾಡುವ ಗಣಿ ಧಣಿಗಳು ಮಾರಣಹೋಮ ಮಾಡುತ್ತಿದ್ದಾರೆ. ಬೃಹತ್ ಬಂಡೆ ಒಡೆಯುವಾಗ ಪರವಾನಗಿ ಹೊಂದಿರುವ ಪರಿಣಿತರಿಂದಲೇ ಸ್ಫೋಟ ನಡೆಸಬೇಕೆಂಬ ನಿಯಮವಿದೆ. ಇದ್ಯಾವುದೂ ಯಾವ ಗಣಿಯಲ್ಲೂ ಪಾಲನೆಯಾಗುತ್ತಿಲ್ಲ.

ಕಲ್ಲುಕ್ವಾರಿ ಹಾಗೂ ಕ್ರಶರ್ ಪರವಾನಗಿ ಕಟ್ಟುನಿಟ್ಟಿನ ನಿಯಮವೇನೋ ಇದೆ. ಅರಣ್ಯ ಸಂರಕ್ಷಣಾ ಕಾಯ್ದೆ 198 2(1) ಮತ್ತು 2(3) ಮತ್ತು ಅರಣ್ಯ ಸಂರಕ್ಷಣಾ ಕಾನೂನು 2003(6) ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸಿಕ್ಕ ಬಳಿಕ 20 ಅಥವಾ 30 ವರ್ಷದ ಲೀಸ್ ನೀಡಬೇಕಾಗುತ್ತದೆ. ಇದೆಲ್ಲವನ್ನೂ ಪ್ರಜ್ಞಾಪೂರ್ವಕವಾಗೇ ಧಿಕ್ಕರಿಸಿ ಕಳ್ಳಕ್ವಾರಿಗೆ ಅವಕಾಶ ನೀಡಿ ತಮ್ಮ ಪಾಲು ಪಡೆಯುವ ಅಧಿಕಾರಿಗಳು ಏನೂ ಆಗಿಲ್ಲವೆಂಬಂತೆ ಇದ್ದು ಬಿಡುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಂತೂ ಲೇವಾದೇವಿ ಅಡ್ಡೆಯಂತಾಗಿ ಹೋಗಿದೆ! ಹೀಗಾಗಿ ಕಾಯ್ದಿಟ್ಟ ಅರಣ್ಯ, ಅಭಯಾರಣ್ಯ, ಪರಿಸರ ಸೂಕ್ಷ್ಮ ಪ್ರದೇಶದಲ್ಲೂ ನಾಯಿಕೊಡೆಗಳಂತೆ ಭೀಭತ್ಸ ಕ್ವಾರಿಗಳು ತಲೆಯೆತ್ತಿವೆ. ಕ್ರಶರ್‌ಗಳಿಗಷ್ಟೇ ಪರವಾನಗಿ ಪಡೆದು ಕಣ್ಕಟ್ಟು ನಡೆಸುವ ಕ್ವಾರಿ ಕುಳಗಳಿಗೆ ಕಳ್ಳ ಕ್ವಾರಿ ನಡೆಸಲು ಅಧಿಕಾರಿ ಬಳಗ ಅನುಕೂಲ ಮಾಡಿಕೊಡುತ್ತಿದೆ!

ಕಳ್ಳಕ್ವಾರಿಗಳಿಂದ ಪರಿಸರ ಶಬ್ದಮಾಲಿನ್ಯ ಆಗುತ್ತಿದೆ. ಯಂತ್ರಗಳ ಸದ್ದು ಮತ್ತು ಸ್ಫೋಟದಿಂದ ವನ್ಯ ಪ್ರಾಣಿಗಳು ದಿಕ್ಕೆಟ್ಟು ನಾಡಿಗೆ ನುಗ್ಗುತ್ತಿವೆ. ಕಲ್ಲುಸಾಗಾಟಕ್ಕೆ ರಸ್ತೆ, ಕಾರ್ಮಿಕರ ಗುಡಿಸಲು, ಯಂತ್ರಗಳ ಸ್ಥಾಪನೆ ಎಂದೆಲ್ಲ ಅರಣ್ಯ ನಾಶವಾಗುತ್ತಿದೆ. ಗಣಿಗಾರಿಕೆಯಿಂದ ನದಿಗಳು ಬತ್ತಿಹೋಗುತ್ತಿವೆ. ರೈತರ ಬೆಳೆಗೆ ಹಾನಿಯಾಗುತ್ತಿದೆ. ಮಣ್ಣಿನ ಸಾರಾಂಶ ಕಡಿಮೆಯಾಗುತ್ತಿದೆ. ಉಸಿರಾಟದ ತೊಂದರೆ, ಶ್ವಾಸಕೋಶ, ಶ್ರವಣ ಸಮಸ್ಯೆ, ಕೆಮ್ಮುಗಳಂಥ ರೋಗ ಜನರಿಗೆ ಬಾಧಿಸುತ್ತಿದೆ. ಸ್ಥಳೀಯ ಪ್ರಭಾವಿ ಮರಿ ಪುಢಾರಿಗಳ ಸಚಿವ-ಸಂಸದ-ಶಾಸಕರ ನಿಕಟವರ್ತಿಗಳೇ ಗಣಿಗಾರಿಕೆ ಯಜಮಾನರಾಗಿರುವುದರಿಂದ ನಿಷ್ಠಾವಂತ ಅಧಿಕಾರಿಗಳ ಕೈಕಟ್ಟಿಹಾಕಿದಂತಾಗಿದೆ. ಅಕ್ರಮಕ್ಕೆ ಅಂಕುಶವಿಡಲು ಪ್ರಯತ್ನಿಸುವ ಅಧಿಕಾರಿಗಳನ್ನು ಸತಾಯಿಸಿ ಪಳಗಿಸಲು ಹವಣಿಸುವುದು ಮಾಮೂಲಿ ಎಂಬಂತಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೊಪ್ಪಳ, ಚಾಮರಾಜನಗರ, ಮಂಡ್ಯ, ಬೀದರ್ ಮತ್ತು ಶಿವಮೊಗ್ಗಗಳಲ್ಲಿ ಕಲ್ಲುಕ್ವಾರಿ ಹಾವಳಿ ಜೋರಾಗಿದೆ! ಮೊನ್ನೆ ನಡೆದ ಗ್ರಾಪಂ ಇಲೆಕ್ಷನ್‌ನಲ್ಲೂ ಈ ಕ್ವಾರಿ ಕಪ್ಪು ಕಾಸು ನಿರ್ಣಾಯಕ ಆಟ ಆಡಿದೆ.

ಕಾಯ್ದೆ ಉಲ್ಲಂಘಿಸುವ ಕಲ್ಲು ಗಣಗಾರಿಕೆಯವರಿಗೆ 2 ವರ್ಷ ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸುವ ಕಾನೂನಿದೆ. ಇದು ಬರೀ ಹೆಸರಿಗಷ್ಟೇ. ಕಳೆದ 5 ವರ್ಷದಲ್ಲಿ ಕದ್ದು ಕಲ್ಲು ಸಾಗಿಸಿದ ಸುಮಾರು 800 ಪ್ರಕರಣಗಳಲ್ಲಿ ಗಣಿ ಇಲಾಖೆ ವಾಹನಗಳ ಜಪ್ತಿ ಮಾಡಿ 9 ಕೋಟಿ ದಂಡ ವಸೂಲಿ ಮಾಡಿದೆ ಎಂಬುದು ಸರ್ಕಾರಿ ಅಂಕಿ-ಅಂಶ. ಆದರೆ ಕಳ್ಳ ಗಣಿ ದೊರೆಗಳು-ಅಧಿಕಾರಿಗಳು-ಅಧಿಕಾರಸ್ಥ ರಾಜಕಾರಣಿಗಳ ಒಳ ಒಪ್ಪಂದದಲ್ಲಿ ಸಾವಿರಾರು ಕೋಟಿ ರೂ ಕಲ್ಲು ಕಳ್ಳ ಸಾಗಾಣಿಕೆ ಆಗಿದೆ; ರಾಜಧನ ತಪ್ಪಿಸಿ ಹಗಲು ದರೋಡೆ ಮಾಡಲಾಗುತ್ತಿದೆ. ಕಳೆದ 5 ವರ್ಷದಲ್ಲಿ ಅಕ್ರಮ ಗಣಿಗಾರಿಕೆಯ 1,126 ಕೇಸ್ ದಾಖಲಾಗಿದೆ. ಇದಕ್ಕೆ ಎರಡು ಪಟ್ಟು ಮುಚ್ಚಿಹೋಗಿದೆ. ಗಣಿ ಇಲಾಖೆ ಇತಿಹಾಸದಲ್ಲಿ ಒಂದಿಷ್ಟು ತೋರಿಕೆಗೆ ದಂಡ ಹಾಕುವ ಕಾರ್ಯಾಚರಣೆ ನಡೆದಿದೆಯೇ ಹೊರತು ಯಾವ ಕಲ್ಲು ಕಳ್ಳನಿಗೂ ಶಿಕ್ಷೆಯಾದ ದಾಖಲೆಯಿಲ್ಲ!! ಹಗಲಿರುಳೆನ್ನದೆ ಸ್ಫೋಟಕ ಜಿಲೆಟಿನ್ ಲಾರಿಗಟ್ಟಲೆ ಸಾಗಾಟವಾಗುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಕೇಂದ್ರ ಗಣಿ ಮತ್ತು ಭೂವಿಜ್ಞಾನ ಮಂತ್ರಿ ಪ್ರಹ್ಲಾದ್ ಜೋಶಿಯೇ ಶಿವಮೊಗ್ಗದಲ್ಲಿ ಸ್ಫೋಟ ಆದಾಗ- “ಅಕ್ರಮ ಗಣಿಗಾರಿಕೆ ಮತ್ತು ಅಧಿಕಾರಿಗಳ ಮಧ್ಯೆ ಹೊಂದಾಣಿಕೆಯಿದೆ” ಎಂದು ಬಹಿರಂಗವಾಗೇ ಹೇಳಿದ್ದು ಕಪ್ಪು ಕ್ವಾರಿ ದಂಧೆ ಅಸಲಿಯತ್ತು ಸಾಬೀತು ಪಡಿಸುವಂತಿದೆ!!

ರಾಜ್ಯದಲ್ಲಿ ನಡೆಯುತ್ತಿರುವ ಅಷ್ಟೂ ಅಪಾಯಕಾರಿ ಅನಧಿಕೃತ ಮತ್ತು ಅಧಿಕೃತ ಕಲ್ಲು ಗಣಿಗಳ ಭೀಭತ್ಸತೆಯ ಸ್ಯಾಂಪಲ್‌ನಂತಿದೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮದಲ್ಲಿ ಬಿಜೆಪಿ ಪ್ರಭಾವಿ ಶಾಸಕರೊಬ್ಬರ ಪರಮಾಪ್ತ ಬಂಟ ಅಕ್ರಮವಾಗಿ ನಡೆಸುತ್ತಿರುವ ಕಲ್ಲುಕ್ವಾರಿ ಕರ್ಮಕಾಂಡ! ಮಂದರ್ತಿ ಜಿಪಂ ಸದಸ್ಯ ಪ್ರತಾಪ್ ಹೆಗ್ಡೆ ಮತ್ತಾತನ ಸಹೋದರ ಪ್ರವೀಣ್ ಹೆಗಡೆ ಉಡುಪಿ ಶಾಸಕ ರಘುಪತಿ ಭಟ್ಟರ ಅಚ್ಚುಮೆಚ್ಚಿನ ಗೆಣೆಕಾರರು. ಪ್ರವೀಣ್ ಹೆಗಡೆ ಯುನಿಟಿ ರಾಕ್ ಇಂಡಸ್ಟ್ರೀಸ್ ಹೆಸರಿನ ಜಲ್ಲಿ ಕ್ರಶರ್ ಮತ್ತು ಕಲ್ಲುಕ್ವಾರಿ ಉದ್ಯಮ ಸಂಸ್ಥೆ ಸುಮಾರು 15 ಕೋಟಿ ರೂ ಬಂಡವಾಳದಲ್ಲಿ ಶುರು ಮಾಡಿದ್ದಾರೆ. ಇದನ್ನು ಮೊದಲು ರೆಸಾರ್ಟ್ ಉದ್ಯಮಿ ಜಾಯ್ ಆರಂಭಿಸಿದ್ದರು. ಅದಕ್ಕೆ ಹೆಗ್ಡೆ ಸಹೋದರರು ಸ್ಲೀಪಿಂಗ್ ಪಾರ್ಟ್‌ನರ್‌ಗಳಾಗಿದ್ದರು. ಈಚೆಗೆ ನಿಧನರಾದ ಅಂಡರ್ ವರ್ಲ್ಡ್ ಡಾನ್ ಒಬ್ಬನಿಂದ ಜಾಯ್‌ಗೆ ಬೆದರಿಕೆ ಬಂತೆಂದು ಹೇಳಲಾಗುತ್ತದೆ.

ಯುನಿಟಿ ರಾಕ್ ಇಂಡಸ್ಟ್ರೀಸ್‌ಗೆ ಲೀಸ್‌ನಲ್ಲಿ ಕೊಡಲಾಗಿರುವ ನಾಲ್ಕೂರು ಗ್ರಾಮದ ಸರ್ವೆ ನಂಬರ್ 27/7, 24/2, 24/8, 24/9ರಲ್ಲಿನ 1.97 ಎಕರೆ ಇಕೋ ಸೆನ್ಸಿಟಿವ್ ಝೋನ್‌ನಲ್ಲಿದೆ. ಈ ಬಗ್ಗೆ ದೂರು ಬಂದಾಗ ಅಂದಿನ ಹೆಬ್ರಿ ವಲಯದ ಅರಣ್ಯಾಧಿಕಾರಿ ಮುನಿರಾಜು ನಿಷ್ಠುರ ತನಿಖೆ ನಡೆಸಿ ಹೆಗ್ಡೆ ಬಂಧುಗಳ ರಾಕ್ ಇಂಡಸ್ಟ್ರಿಸ್ ಪರವಾನಗಿ ರದ್ದು ಮಾಡುವಂತೆ ವರದಿ ಕೊಟ್ಟಿದ್ದರು! ಅಷ್ಟೇ ಅಲ್ಲ, ಸರ್ವೆ ನಂಬರ್ 219/1ಪಿ1ರಲ್ಲೂ ಕ್ವಾರಿ ವ್ಯಾಪಿಸಿಕೊಂಡಿದ್ದು ಇದು ಡೀಮ್ಡ್ ಫಾರೆಸ್ಟ್‌ನಲ್ಲಿದೆ ಎಂದು ಆಕ್ಷೇಪಿಸಿದ್ದರು. ಸೋಮೇಶ್ವರ ವನ್ಯಜೀವಿ ವಲಯದ ತೆಂಕಹೊಲ ಮೀಸಲು ಅರಣ್ಯಕ್ಕೆ ಕೇವಲ 4.9 ಕಿ.ಮೀ ಅಂತರದಲ್ಲಿ ಕ್ವಾರಿಯಿರುವುದರಿಂದ ಹೆಗ್ಡೆಗಳು ನಡೆಸುತ್ತಿರುವ ಅಕ್ರಮ ಕ್ವಾರಿ ಸ್ಥಗಿತಗೊಳಿಸುವಂತೆ ವರದಿಯಲ್ಲಿ ಹೇಳಿದ್ದರು.

ಕ್ವಾರಿ ಧಣಿ ಅಧಿಕಾರಸ್ಥರ ಹತ್ತಿರದವನೆಂಬ ಕಾರಣಕ್ಕೆ ಖಡಕ್ ಮುನಿರಾಜು ನಂತರ ಬಂದ ಆರ್‌ಎಫ್‌ಓ ಸದ್ರಿ ಕಲ್ಲು ಗಣಿಗಾರಿಕೆಗೆ ಅವಕಾಶ ಕೊಟ್ಟು ಸುಮ್ಮನಿದ್ದಾರೆ. ಎರಡು ವರ್ಷದ ಹಿಂದೆ ಈ ಗಣಿಗಾರಿಕೆಯಲ್ಲಿ ಉತ್ತರ ಭಾರತದ ಕೂಲಿಯೊಬ್ಬ ನಿಗೂಢವಾಗಿ ಸತ್ತು ಬಿದ್ದಿದ್ದ. ಅದನ್ನು ಸಿಡಿಲು ಹೊಡೆತದಿಂದಾದ ಸಾವೆಂದು ಸಾರಲಾಗಿತ್ತು. ಮುಚ್ಚಿರುವ ಮಜುಬೂತ್ ಗೇಟಿನ ಒಳಗಿರುವ ಈ ಕ್ವಾರಿಯಲ್ಲಿ ನಿರಂತರವಾಗಿ ಜಿಲೆಟಿನ್ ಆಸ್ಫೋಟ ಆಗುತ್ತಿರುತ್ತದೆ. ಅಪಾರ ಸ್ಫೋಟಕ ಸಂಗ್ರಹ ಇಲ್ಲಿದೆಯೆನ್ನಲಾಗಿದೆ. ಪ್ರತಿದಿನ ಕಮ್ಮಿಯೆಂದರೂ 250 ಲಾರಿ ಲೋಡ್ ಜಲ್ಲಿಕಲ್ಲು ಈ ಕ್ವಾರಿಯಿಂದ ಆಚೀಚೆಯ ಜಿಲ್ಲೆಗಳಿಗೆ ಹೋಗುತ್ತದೆ! ಒಂದು ದಿನಕ್ಕೆ ಹತ್ತಿರಹತ್ತಿರ ಮುಕ್ಕಾಲು ಕೋಟಿ ಲೂಟಿಯಿದು!!

ಹೇಳೋರಿಲ್ಲ; ಕೇಳೋರಿಲ್ಲ! ನಿತ್ಯವೂ ಕಳ್ಳ ಕಲ್ಲುಗಣಿ ದೊರೆ ಬಳಗಕ್ಕೆ ಸುಗ್ಗಿಯೇ ಸುಗ್ಗಿ!!


ಇದನ್ನೂ ಓದಿ: ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...