Homeಮುಖಪುಟಪ್ರಶಾಂತ್ ಭೂಷಣ್‌ರ ನ್ಯಾಯಾಂಗ ನಿಂದನೆ ಪ್ರಕರಣದೆಡೆಗೆ ನನಗೇಕೆ ಕುತೂಹಲವೆಂದರೆ..; ಯೋಗೇಂದ್ರ ಯಾದವ್

ಪ್ರಶಾಂತ್ ಭೂಷಣ್‌ರ ನ್ಯಾಯಾಂಗ ನಿಂದನೆ ಪ್ರಕರಣದೆಡೆಗೆ ನನಗೇಕೆ ಕುತೂಹಲವೆಂದರೆ..; ಯೋಗೇಂದ್ರ ಯಾದವ್

ನೈಜ ಹೇಳಿಕೆಯೊಂದು ನ್ಯಾಯ ವ್ಯವಸ್ಥೆಯ ಹುಳುಕನ್ನು ಎತ್ತಿ ತೋರಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆಯೇ? ಒಂದು ನೈಜ ಅಭಿಪ್ರಾಯವು, ಅದು ಸಾಬೀತಾಗಿರಲಿ, ಇಲ್ಲದಿರಲಿ ನ್ಯಾಯಾಂಗ ನಿಂದನೆಯಾಗುತ್ತದೆಯೇ?

- Advertisement -
- Advertisement -

ಸುಪ್ರೀಂ ಕೋರ್ಟಿನಲ್ಲಿನ ಇತ್ತೀಚಿನ ನ್ಯಾಯಾಂಗ ನಿಂದನೆ ಪ್ರಕರಣಗಳ ಕುರಿತಾಗಿ ನಡೆಯುತ್ತಿರುವ ಚರ್ಚೆಯು ‘ತಮ್ಮ ಟ್ವೀಟುಗಳಿಗಾಗಿ ಮತ್ತು ಈ ಮುಂಚಿನ ಹೇಳಿಕೆಗಳಿಗಾಗಿ ಪ್ರಶಾಂತ್ ಭೂಷಣ್ ರವರನ್ನು ಶಿಕ್ಷಿಸಬೇಕಾ?’ ಎಂಬ ತಪ್ಪು ಪ್ರಶ್ನೆಗಳನ್ನೆತ್ತುತ್ತಿದೆ. ತಪ್ಪು ಪ್ರಶ್ನೆಗಳಿಗೆ ತಪ್ಪಾದ ಉತ್ತರಗಳೇ ಲಭ್ಯವಾಗಲು ಸಾಧ್ಯವಲ್ಲವೇ? ಆ ಉತ್ತರಗಳಲ್ಲಿ ಅನುಕಂಪವಿರಬಹುದು, ಸಮಂಜಸವಾದ ಉತ್ತರಗಳೂ ಇರಬಹುದು ಆದರೂ ಅವುಗಳು ತಪ್ಪು ಉತ್ತರಗಳೇ. ನ್ಯಾಯಾಂಗ ನಿಂದನೆಯ ಕಾನೂನಿನ ಪ್ರಸ್ತುತತೆ, ಸೈರಣೆಯ ಮೌಲ್ಯ, ನ್ಯಾಯಾಲಯಗಳಿಗೆ ಅವಶ್ಯವಾಗಿ ಇರಬೇಕಾಗಿರುವ ವಿಶಾಲ ಮನಸ್ಥಿತಿ, ಪ್ರಶಾಂತ್ ಭೂಷಣ್ ರವರ ಸಾಮಾಜಿಕ ಕಾರ್ಯಗಳ ಕುರಿತು ಚರ್ಚಿಸತೊಡಗಿದ್ದೇವೆ.

ಆದರೆ ಪ್ರಶ್ನೆ ಅದಲ್ಲ. ಈ ಪ್ರಕರಣ ಪ್ರಶಾಂತ್ ಭೂಷಣ್‌ರವರ ‘ಮಿತಿ ಮೀರಿದ’ ಹೇಳಿಕೆಗಳ ಕುರಿತಿರುವುದಲ್ಲ. ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿರುವ ಸಂವಿಧಾನ ರಕ್ಷಿಸಲು ಕಟಿಬದ್ಧರಾಗಿರಬೇಕಾದಂತಹ ಅತ್ಯುನ್ನತ ಹುದ್ದೆಯಲ್ಲಿರುವವರು ಸಂವಿಧಾನ, ಕಾನೂನು ಮತ್ತು ನೈತಿಕತೆಯ ಚೌಕಟ್ಟನ್ನು ಉಲ್ಲಂಘಿಸುತ್ತಿರುವ ಕುರಿತಾದ ಪ್ರಕರಣವಿದು. ಭಾರತದ ಮುಖ್ಯ ನ್ಯಾಯಮೂರ್ತಿಗಳ ಕುರಿತು ಪ್ರಶಾಂತ್ ಭೂಷಣ್‌ರು ಹೇಳಿದ್ದು ತಮಾಷೆಗಲ್ಲ, ಒಂದು ಬೀಸು ಹೇಳಿಕೆ ನೀಡಿ ಓಡಿಹೋಗುವುದಕ್ಕೂ ಅಲ್ಲ. ಅವರು ದೃಢತೆಯಿಂದ ಮಾತನಾಡಿದ್ದಾರೆ ಮತ್ತು ಗುರುತರ ಜವಾಬ್ದಾರಿಯೊಂದಿಗೆ ಮಾತನಾಡಿದ್ದಾರೆ ಹಾಗೂ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನಕ್ಕೆ ದೊಡ್ಡ ಮಟ್ಟದಲ್ಲಿ ಧಕ್ಕೆಯುಂಟಾಗಬಹುದು ಎಂಬ ಅರಿವಿದ್ದೇ ಮಾತನಾಡಿದ್ದಾರೆ. ಉಚ್ಛ – ಸರ್ವೋಚ್ಚ ನ್ಯಾಯಾಲಯಗಳಲ್ಲೊಂದಷ್ಟು ಉತ್ತಮ ರೀತಿಯ ಬದಲಾವಣೆಗಳು ಕಾಣುವಂತಾಗಲಿ ಎಂಬ ಉದ್ದೇಶದಿಂದಲೇ ಮಾತನಾಡಿದ್ದಾರೆ.

ಈ ದೃಷ್ಟಿಯಿಂದ ಪ್ರಶಾಂತ್ ಭೂಷಣ್ ಅವರ ವಿರುದ್ಧದ ಹನ್ನೊಂದು ವರ್ಷದ ಹಿಂದಿನ ನ್ಯಾಯಾಂಗ ನಿಂದನೆ ಪ್ರಕರಣದ ಪುನರ್ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟಿನ ನಿರ್ಧಾರವನ್ನು ಸ್ವಾಗತಿಸಬೇಕಿದೆ. ಪ್ರಜಾಪ್ರಭುತ್ವದ ವಿನಾಶಕ್ಕೆ ಕಳೆದ ನಾಲ್ಕು ಮುಖ್ಯ ನ್ಯಾಯಮೂರ್ತಿಗಳು ಕೊಟ್ಟ ಕೊಡುಗೆಯ ಕುರಿತು ಪ್ರಶಾಂತ್ ಭೂಷಣ್ ಮಾಡಿರುವ ಟ್ವೀಟುಗಳನ್ನು ತನ್ನರಿವಿಗೆ ತೆಗೆದುಕೊಂಡು ವಿಚಾರಣೆಗೊಳಪಡಿಸುವ ನ್ಯಾಯಾಲಯದ ನಿರ್ಧಾರ ಒಳ್ಳೆಯದೆ. (ಪ್ರಶಾಂತ್ ಭೂಷಣ್ ಮಾಡಿರುವ ಮೋಟಾರ್ ಸೈಕಲ್ಲಿನ ಕುರಿತಾದ ಟ್ವೀಟು ಈ ಪರಿಧಿಗೆ ಬರಲಾರದು. ಆ ಖಾಸಗಿ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡು, ಅದರ ಕುರಿತಾದ ಕೆಲಸಕ್ಕೆ ಬಾರದ ಅರ್ಜಿಯನ್ನು ಸ್ವೀಕರಿಸುವುದರ ಮೂಲಕ ನ್ಯಾಯಾಲಯವು ತನ್ನನ್ನು ತಾನೇ ಮುಜುಗರಕ್ಕೆ ಒಳಪಡಿಸಿಕೊಂಡಿದೆ). ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದರ ಮೂಲಕ ಉನ್ನತ ನ್ಯಾಯಾಲಯವು, ಸುದೀರ್ಘ ಕಾಲದಿಂದ ಚಾಪೆಯ ಕೆಳಗೆ ಗುಡಿಸಿ ಮುಚ್ಚಿಹಾಕಲಾಗುತ್ತಿದ್ದ ವಿಚಾರಗಳನ್ನು ಸಾರ್ವಜನಿಕ ಚರ್ಚೆಯ ನಿಕಷಕ್ಕೆ ಒಳಪಡಿಸುವ ಐತಿಹಾಸಿಕ ಅವಕಾಶವನ್ನಿತ್ತಿದೆ.

Image Courtesy: NDTV

ತೆಹೆಲ್ಕಾಗೆ ಪ್ರಶಾಂತ್ ಭೂಷಣ್ ನೀಡಿದ ಸಂದರ್ಶನದಲ್ಲಿ ಎತ್ತಿದ ಗಮನಾರ್ಹ ಪ್ರಶ್ನೆಗಳಿಗೆ ಈ ವಿಚಾರಣೆಯಲ್ಲಿ ಉತ್ತರ ಸಿಗಬಹುದು ಎಂಬ ನಂಬುಗೆಯಿಂದ ಪ್ರಕರಣದ ವಿಚಾರಣೆಯನ್ನು ಎದುರು ನೋಡುತ್ತಿದ್ದೇನೆ. ನ್ಯಾಯಾಂಗನಿಂದನೆಯ ಪ್ರಕರಣದ ವಿಚಾರಣೆ ಪ್ರಾರಂಭವಾದಾಗ ಪ್ರಶಾಂತ್ ಭೂಷಣ್ ಮೂರು ಸವಿವರವಾದ ಅಫಿಡವಿಟ್ ಸಲ್ಲಿಸುತ್ತಾರೆ. ಪುಟಗಟ್ಟಲೆಯಷ್ಟು ದಾಖಲೆಗಳನ್ನು ಸಾಕ್ಷ್ಯವಾಗಿ ಸಲ್ಲಿಸುತ್ತಾರೆ. ಈ ಸಾಕ್ಷ್ಯಗಳನ್ನೆಲ್ಲ ಪರಿಶೀಲಿಸಲು ನ್ಯಾಯಾಲಯ ಕೂರಲೇ ಇಲ್ಲ. ಎಂಟು ವರ್ಷಗಳ ಕಾಲ ಈ ಸಾಕ್ಷ್ಯಗಳ ಕುರಿತು ನ್ಯಾಯಾಲಯ ಮೌನವಾಗುಳಿದಿದ್ದು ಆ ದಾಖಲೆಗಳು ಸಂಬಂಧಪಟ್ಟವರಲ್ಲಿ ಭೀತಿ ಹುಟ್ಟಿಸಿತ್ತು ಎನ್ನುವ ಭಾವನೆಯನ್ನು ಮೂಡಿಸಿತ್ತು. ಸನ್ಮಾನ್ಯ ನ್ಯಾಯಮೂರ್ತಿಗಳ ಉದ್ದಿಶ್ಯಗಳೇನೇ ಇದ್ದರೂ, ಉನ್ನತ ನ್ಯಾಯಾಲಯವು ಈ ಅನುಕೂಲಕರವಲ್ಲದ ಪ್ರಶ್ನೆಗಳನ್ನು ಎದುರಿಸಲು ಮತ್ತು ಬಗೆಹರಿಸುವುದಕ್ಕೆ ನಿರ್ಧಾರ ತೆಗೆದುಕೊಂಡಿರುವುದು ನಾವೆಲ್ಲಾ ಆಭಾರಿಗಳಾಗಿರಬೇಕು.

ಎಂಟು ಮುಖ್ಯ ನ್ಯಾಯಮೂರ್ತಿಗಳ ಕುರಿತಿರುವ ಪ್ರಶ್ನೆಗಳು

ಸುಪ್ರೀಂ ಕೋರ್ಟಿನಲ್ಲಿ ಪ್ರಶಾಂತ್ ಭೂಷಣ್‌ರವರು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಎತ್ತಿದ ಪ್ರಮುಖ ಪ್ರಶ್ನೆಗಳನ್ನು ಇಲ್ಲಿ ನೆನಪಿಸಿಕೊಳ್ಳೋಣ. 1990ರಿಂದ 2010ರವರೆಗೆ ಇದ್ದ ಹದಿನೆಂಟು ಮುಖ್ಯ ನ್ಯಾಯಮೂರ್ತಿಗಳಲ್ಲಿ ಎಂಟು ಮಂದಿಯ ವಿರುದ್ಧವಿದ್ದ ಭ್ರಷ್ಟಾಚಾರದ (ಭ್ರಷ್ಟಾಚಾರವು ಹಣದ ರೂಪದಲ್ಲೇ ಇತ್ತೆಂದೇನಲ್ಲ) ಆರೋಪಗಳ ಕುರಿತಾದ ವಿಸ್ತೃತ ಸಾಕ್ಷ್ಯಗಳನ್ನು 2009ರಲ್ಲಿ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಎಂಟು ಪ್ರಶ್ನೆಗಳಿದ್ದವು.

ರಂಗನಾಥ್ ಮಿಶ್ರಾ: ನಿವೃತ್ತರಾದ ನಂತರ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಟಿಕೆಟ್ ಒಪ್ಪಿಕೊಂಡ ಮಿಶ್ರಾರವರ ನಡೆಗೂ 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ನಾಯಕರ ಮೇಲಿದ್ದ ಆರೋಪಗಳಲ್ಲಿ ಹುರುಳಿಲ್ಲ ಎಂದು ಮಿಶ್ರಾರವರ ತನಿಖಾ ಆಯೋಗ ಸಲ್ಲಿಸಿದ ವರದಿಗೂ ಸಂಬಂಧವಿಲ್ಲವೇ?

ಕೆ. ಎನ್. ಸಿಂಗ್: ಹದಿನೆಂಟು ದಿನಗಳ ಕಾಲ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದನ್ನು ಬಳಸಿಸಿಕೊಂಡು ಜೈನ್ ಎಕ್ಸ್ಪೋರ್ಟ್ ಮತ್ತು ಜೈನ್ ಶುಧ್ ವನಸ್ಪತಿಯ ಕುರಿತಾದ ಎಲ್ಲಾ ಪ್ರಕರಣಗಳನ್ನು ತಮಗೇ ವರ್ಗಾಯಿಸಿಕೊಂಡು ಆ ಕಂಪನಿಗಳಿಗೆ ಅನುಕೂಲಕರವಾದ ತೀರ್ಪುಗಳನ್ನು ನೀಡಲಿಲ್ಲವೇ? ಇಲ್ಲವಾದಲ್ಲಿ ಸಿಂಗ್‌ರವರು ಮುಖ್ಯನ್ಯಾಯಮೂರ್ತಿ ಸ್ಥಾನದಿಂದ ನಿರ್ಗಮಿಸಿದ ಮೇಲೆ ನ್ಯಾಯಾಲಯವು ಅವರಿತ್ತ ತೀರ್ಪುಗಳನ್ನು ಮರುಪರಿಶೀಲನೆಗೊಳಪಡಿಸಿ ಆ ತೀರ್ಪುಗಳನ್ನು ರದ್ದುಗೊಳಿಸಿದ್ದು ಏಕೆ?

ಎ.ಎಂ. ಅಹಮದಿ: ಈ ಹಿಂದೆ ಸುಪ್ರೀಂ ಕೋರ್ಟಿನ ಆದೇಶದನ್ವಯ ಎಲ್ಲಾ ಕಟ್ಟಡ ಕಾಮಗಾರಿ ಚಟುವಟಿಕೆಯನ್ನು ನಿಷೇಧಿಸಲಾಗಿದ್ದ ಪ್ರದೇಶದಲ್ಲೇ ಅಹಮದಿಯವರು ನಿವೇಶನ ಖರೀದಿಸಿ ಅರಮನೆಯಂತಹ ಭವ್ಯ ಮನೆಯನ್ನು ಕಟ್ಟಿಸಿದರಲ್ಲವೇ? ಸುಪ್ರೀಂ ಕೋರ್ಟಿನ ಆದೇಶಗಳನ್ನು ತಾವು ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ಗಾಳಿಗೆ ತೂರಿದರಲ್ಲವೇ? ಮುಖ್ಯನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ಹಣ ಘೋಷಿಸಿದ್ದ ಮತ್ತು ಸ್ಥಾಪಿಸಿದ್ದ ಭೋಪಾಲಿನ ಆಸ್ಪತ್ರೆಯ ಟ್ರಸ್ಟಿಗೆ ಅವರೇ ಆಜೀವಪರ್ಯಂತ ಅಧ್ಯಕ್ಷರಾದರಲ್ಲವೇ?

ಎಂ.ಎಂ. ಪುಂಚಿ: ಆಗಿನ ಹರ್ಯಾಣದ ಮುಖ್ಯಮಂತ್ರಿ ಭಜನ್ ಲಾಲ್ ವಿರುದ್ಧವಿದ್ದ ಗಂಭೀರ ಪ್ರಕರಣಗಳನ್ನು ವಜಾಗೊಳಿಸಿದ ದಿನವೇ ಪುಂಚಿಯವರ ಇಬ್ಬರು ಹೆಣ್ಣು ಮಕ್ಕಳು ಮುಖ್ಯಮಂತ್ರಿ ವಿವೇಚನೆಯ ಕೋಟಾದಡಿಯಲ್ಲಿ ಎರಡು ನಿವೇಶನಗಳನ್ನು ಪಡೆದುಕೊಂಡರೆ? ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ಹಿತಾಸಕ್ತಿಗಳ ಸ್ಪಷ್ಟ ಸಂಘರ್ಷವಿದ್ದ ಪ್ರಕರಣಗಳ ವಿಚಾರಣೆಗೂ ಅವರು ಪ್ರಯತ್ನಿಸಿರಲಿಲ್ಲವೇ?

ಎ.ಎಸ್. ಆನಂದ್: ಜಮ್ಮು ಕಾಶ್ಮೀರದ ಹೈಕೋರ್ಟಿನ ಮುಖ್ಯ ನಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ವ್ಯಕ್ತಿಯೊಬ್ಬನಿಂದ ನಿವೇಶನವನ್ನು ಪಡೆದು ಆ ವ್ಯಕ್ತಿಗೆ ಅನುಕೂಲಕರವಾದ ತೀರ್ಪನ್ನು ಆನಂದ್‌ರವರು ನೀಡಿದ್ದರಲ್ಲವೇ? ಸರಕಾರದ ವತಿಯಿಂದ ಕಡಿಮೆ ಬೆಲೆಯ ಭೂಮಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಸುಳ್ಳು ಅಫಿಡವಿಟ್‌ಅನ್ನು ಸಲ್ಲಿಸಿದ್ದರಲ್ಲವೇ?

ವೈ.ಕೆ. ಸಬರ್‌ವಾಲ್: ದೆಹಲಿಯ ವಾಣಿಜ್ಯ ವಹಿವಾಟಿನ ಜಾಗವೊಂದನ್ನು ಸೀಲ್ ಮಾಡಬೇಕೆಂದು ಸಬರ್‌ವಾಲ್ ಅವರು ಹೊರಡಿಸಿದ ಆದೇಶವು ಅವರ ಅಧಿಕೃತ ನಿವಾಸದಲ್ಲೇ ವಾಸವಿದ್ದು ಕೆಲಸ ಮಾಡುತ್ತಿದ್ದ ಅವರ ಮಕ್ಕಳು ಶಾಪಿಂಗ್ ಮಾಲ್‌ಮತ್ತು ಇತರೆ ವಾಣಿಜ್ಯ ಸಂಕೀರ್ಣಗಳೊಂದಿಗೆ ಲಾಭದಾಯಕ ಒಪ್ಪಂದಗಳಿಗೆ ಬರಲು ಅನುಕೂಲ ಮಾಡಿಕೊಟ್ಟಿತೆ? ಉತ್ತರ ಪ್ರದೇಶದ ಮುಲಾಯಂ ಸಿಂಗ್ ಸರಕಾರವು ಸಬರ್‌ವಾಲರ ಮಕ್ಕಳಿಗೆ ನೋಯ್ಡಾದಲ್ಲಿ ವಾಣಿಜ್ಯ ಉದ್ದೇಶದ ದೊಡ್ಡ ಜಾಗವನ್ನು ನೀಡಿದ್ದು ಸತ್ಯವಲ್ಲವೇ?

ಕೆ.ಜಿ. ಬಾಲಕೃಷ್ಣನ್: ನ್ಯಾಯಾಧೀಶರಾಗಿ, ತದನಂತರ ಮುಖ್ಯನ್ಯಾಯಮೂರ್ತಿಗಳಾದ ಬಾಲಕೃಷ್ಣನ್‌ರವರ ಹೆಣ್ಣುಮಕ್ಕಳು, ಅಳಿಯಂದಿರು, ಸಹೋದರ ಮತ್ತು ಸಹಾಯಕರಲ್ಲೊಬ್ಬರು ತಮ್ಮ ನಿಗದಿತ ದುಡಿಮೆಗೆ ಮೀರಿದಂತಹ ಬಹುವಿಸ್ತಾರದ ಭೂಮಿಯನ್ನು ಪಡೆದುಕೊಳ್ಳಲು ಹೇಗೆ ಸಾಧ್ಯವಾಯಿತು?

ಎಸ್. ಹೆಚ್. ಕಪಾಡಿಯ: ಸ್ವತಃ ನ್ಯಾಯಾಲಯ ನೇಮಿಸಿದ್ದ ಪರಿಸರ ತಜ್ಞರ ಸಮಿತಿಯು ಕೊಟ್ಟ ವರದಿಗೆ ತದ್ವಿರುದ್ಧವಾಗಿ ಸ್ಟೆರ್‌ಲೈಟ್ ಕಂಪನಿಗೆ ಲೀಸ್ ದಯಪಾಲಿಸಿ ಕಪಾಡಿಯರವರು ತೀರ್ಪನ್ನಿತ್ತಿದ್ದರಲ್ಲವೇ? ಪ್ರಕರಣದ ವಿಚಾರಣೆ ನಡೆಯುವ ಪ್ರಾರಂಭದಲ್ಲೇ ಸ್ಟೆರ್‌ಲೈಟ್ ಕಂಪನಿಯ ಶೇರುಗಳನ್ನು ಅವರು ಹೊಂದಿರುವ ಅಂಶವನ್ನು ಅವರು ಬಹಿರಂಗಪಡಿಸಲಿಲ್ಲವೇಕೆ?

ನ್ಯಾಯಾಲಯದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಇಂತಹ ಪ್ರಶ್ನೆಗಳನ್ನು ಕೇಳುವುದಕ್ಕೆ ಎಷ್ಟು ಶ್ರಮವಿರಬೇಕು, ಎಷ್ಟು ಧೈರ್ಯವಿರಬೇಕೆಂದು ನೀವೇ ಊಹಿಸಿ! ಪ್ರಶ್ನೆ ಕೇಳುವುದಷ್ಟಕ್ಕೇ ಪ್ರಶಾಂತ್ ಭೂಷಣ್‌ರವರು ಸೀಮಿತವಾಗುವುದಿಲ್ಲ. ತಮ್ಮ ಪ್ರತಿ ಪ್ರಶ್ನೆಗೂ ದಾಖಲೆಗಳನ್ನು ಒದಗಿಸುತ್ತಾರೆ. ನಿಯಮ ಮೀರಿದ ದಿನಾಂಕಗಳು, ಸ್ವತ್ತಿನ ಒಡೆತನದ ದಾಖಲೆಗಳನ್ನೆಲ್ಲವನ್ನೂ ಒದಗಿಸುತ್ತಾರೆ. ಈ ಪ್ರಶ್ನೆಗಳಿಗೆ ಉತ್ತರ ಬಯಸುವುದು ತಪ್ಪೇ?

ಇತ್ತೀಚಿನ ನಾಲ್ಕು ಮುಖ್ಯ ನ್ಯಾಯಮೂರ್ತಿಗಳ ಕುರಿತ ಪ್ರಶ್ನೆಗಳು
ಇನ್ನುಳಿದ ನಾಲ್ಕು ಪ್ರಕರಣಗಳು ಈಗ ಸದ್ಯ ಇರುವ ನ್ಯಾಯಮೂರ್ತಿಗಳನ್ನೂ ಸೇರಿಸಿ ಇತ್ತೀಚಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಕುರಿತಾಗಿರುವಂತದ್ದು. ಇಲ್ಲಿ ಪ್ರಶಾಂತ್ ಭೂಷಣ್‌ರವರ ಪ್ರಶ್ನೆಯಿರುವುದು “ಭ್ರಷ್ಟಾಚಾರದ” ಬಗ್ಗೆಯಲ್ಲ, ಬದಲಿಗೆ “ಪ್ರಜಾಪ್ರಭುತ್ವವನ್ನು ಕೆಡವುತ್ತಿರುವುದರ” ವಿದ್ಯಮಾನದಲ್ಲಿ ನ್ಯಾಯಮೂರ್ತಿಗಳ ಪಾತ್ರದ ಪ್ರಶ್ನೆ. ಪ್ರಶಾಂತ್ ಭೂಷಣ್‌ರವರು ಇದರ ಬಗ್ಗೆ ಅಧಿಕೃತ ಅಫಿಡವಿಟ್‌ಅನ್ನು ಇನ್ನೂ ಸಲ್ಲಿಸಬೇಕಿದೆಯಾದರೂ ಪ್ರಶ್ನೆಗಳನ್ನು ಊಹಿಸುವುದು ಕಷ್ಟದ ಕೆಲಸವೇನಲ್ಲ.

ಜೆ.ಎಸ್. ಖೇಹರ್: ಖೇಹರ್‌ರವರು ‘ಬಿರ್ಲಾ – ಸಹಾರಾ ಡೈರಿ’ಯ ಕುರಿತಾದ ತನಿಖೆಯನ್ನು ಮುಚ್ಚಿಹಾಕುವುದಕ್ಕೆ ಸಹಾಯ ಮಾಡಿದ್ದಕ್ಕೂ ಸರಕಾರವು ಖೇಹರ್‌ರವರ ಹೆಸರು ಪ್ರಸ್ತಾಪವಾಗಿದ್ದ ‘ಕಲಿಖೋಪುಲ್’ ಆತ್ಮಹತ್ಯೆ ಪ್ರಕರಣವನ್ನು ತ್ವರಿತವಾಗಿ ಮುಚ್ಚಿಹಾಕುವುದಕ್ಕೂ ಸಂಬಂಧವಿದೆಯಾ?

ದೀಪಕ್ ಮಿಶ್ರಾ: ನ್ಯಾಯಾಧೀಶರಾದ ಲೋಯಾರ ಸಾವಿನ ಪ್ರಕರಣನ್ನೂ ಸೇರಿಸಿದಂತೆ ಅನೇಕ  ಸೂಕ್ಷ್ಮ ಪ್ರಕರಣಗಳನ್ನು ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡುವಾಗ ಪಕ್ಷಪಾತ ನಡೆಯುತ್ತಿತ್ತು ಎಂದು ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರಲ್ಲಿ ಹುರುಳಿದೆಯೇ? ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿರುವ ರೀತಿಯು ಪ್ರಜಾಪ್ರಭುತ್ವದ ಉಳಿವಿಗೇ ಅಪಾಯವನ್ನೊಡ್ಡುತ್ತಿದೆ ಎಂದು ನ್ಯಾಯಾಧೀಶರಾದ ಚಲಮೇಶ್ವರ್ ಹೇಳಿದ್ದು ಸರಿಯಿತ್ತೇ?

ರಂಜನ್ ಗೋಗೊಯ್: ತಮ್ಮ ವಿರುದ್ಧವೇ ಇದ್ದ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಅವರು ನಿಭಾಯಿಸಿದ ರೀತಿ ಕೆಟ್ಟ ಆಪತ್ತಿನ ಪದ್ಧತಿಯೊಂದಕ್ಕೆ ನಾಂದಿಯಾಡಿತಲ್ಲವೇ? ನಿವೃತ್ತರಾದ ತಕ್ಷಣವೇ ರಾಜ್ಯಸಭೆಗೆ ನೇಮಕಗೊಂಡಿದ್ದು ನ್ಯಾಯಾಲಯ ಮತ್ತು ರಾಜಕೀಯ ಪಕ್ಷಗಳ ನಡುವಿನ ‘ಕೊಡು ಕೊಳ್ಳುವಿಕೆ’ಗೊಂದು ನಿದರ್ಶನವಲ್ಲವೇ?

ನ್ಯಾಯಮೂರ್ತಿ ಎಸ್. ಎ. ಬೋಬ್ಡೆ: ಚುನಾವಣಾ ಬಾಂಡ್‌ಗಳ ಸಾಂವಿಧಾನಿಕ ಮಾನ್ಯತೆ, ಪೌರತ್ವ ತಿದ್ದುಪಡಿ ಕಾಯ್ದೆ, ೩೭೦ನೇ ವಿಧಿಯ ತಿದ್ದುಪಡಿ ಮತ್ತು ಜಮ್ಮು ಕಾಶ್ಮೀರದ ಪುನರ್‌ರಚನೆಯ ಕುರಿತಾದ ಪ್ರಮುಖ ತುರ್ತಿನ ಪ್ರಕರಣಗಳ ವಿಚಾರಣೆಗಳು ವಿಳಂಬಳ್ಳುತ್ತಿರುವುದೇಕೆ?

ಈ ಪ್ರಶ್ನೆಗಳು ಭಾಗಶಃ ಸರಿಯಾಗಿದ್ದರೂ, ಸಾಂಸ್ಥಿಕ ಅಡಿಪಾಯ ಅಲ್ಲಾಡುತ್ತಿರುವ ಬಗ್ಗೆ ಉದಾಸೀನತೆ ಮತ್ತು ಅದರಿಂದ ಪ್ರಜಾಪ್ರಭುತ್ವದ ಬುನಾದಿಯನ್ನು ವಿನಾಶದಂಚಿಗೆ ತಳ್ಳುತ್ತಿರುವುದನ್ನು ಸೂಚಿಸುತ್ತವೆ. ಕೊನೆಯದಾಗಿ ಒಬ್ಬೊಬ್ಬ ನ್ಯಾಯಾಧೀಶರಿಗೆ ಸಂಬಂಧಿಸದ ಸಂವಿಧಾನಾತ್ಮಕ ಪ್ರಶ್ನೆಯೊಂದಿದೆ:

ನೈಜ ಹೇಳಿಕೆಯೊಂದು ನ್ಯಾಯ ವ್ಯವಸ್ಥೆಯ ಹುಳುಕನ್ನು ಎತ್ತಿ ತೋರಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆಯೇ? ಒಂದು ನೈಜ ಅಭಿಪ್ರಾಯವು, ಅದು ಸಾಬೀತಾಗಿರಲಿ, ಇಲ್ಲದಿರಲಿ ನ್ಯಾಯಾಂಗ ನಿಂದನೆಯಾಗುತ್ತದೆಯೇ?

ಸಂಪೂರ್ಣ ಮತ್ತು ನ್ಯಾಯಸಮ್ಮತ ವಿಚಾರಣೆಯ ನಿರೀಕ್ಷೆಯಲ್ಲಿ:

ಸಂಪೂರ್ಣ ನ್ಯಾಯಸಮ್ಮತ ವಿಚಾರಣೆಯ ಮೂಲಕ ಇಲ್ಲಿ ಕೇಳಲಾಗಿರುವ ಎಲ್ಲಾ ಹದಿಮೂರು ಪ್ರಶ್ನೆಗಳಿಗೂ ನ್ಯಾಯಾಲಯ ಉತ್ತರಿಸುತ್ತದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೇನೆ. ಈ ‘ಸಂಪೂರ್ಣ ಮತ್ತು ನ್ಯಾಯಸಮ್ಮತ’ ವಿಚಾರಣೆಯಲ್ಲಿ ಮೂರು ಅತ್ಯವಶ್ಯ ಸಂಗತಿಗಳಿರಬೇಕೆಂದು ನನಗೆ ತೋಚುತ್ತಿದೆ.

ಮೊದಲಿಗೆ, ವಿಚಾರಣೆಯು ತೆರೆದ ನ್ಯಾಯಾಲಯದಲ್ಲಿ ನಡೆಯಬೇಕು, ಕೆಲವರಿಗಷ್ಟೇ ಲಭ್ಯವಾಗುವ ಕಂಪ್ಯೂಟರ್ ಪರದೆಯ ಹಿಂದಲ್ಲ.

ಎರಡನೆಯದಾಗಿ, ವಿಚಾರಣಾ ನ್ಯಾಯಾಲಯದಂತೆಯೇ, ಸಾಕ್ಷ್ಯವನ್ನು ತೆರೆದಿಡಲು, ಸಾಕ್ಷ್ಯವನ್ನು ಪರಿಶೀಲಿಸಲು ಅತ್ಯಗತ್ಯವಾದ ಸಮಯವನ್ನು ಮೀಸಲಿಡಬೇಕು.

ಮೂರನೆಯದಾಗಿ, ಐವರು ಹಿರಿಯ ನ್ಯಾಯಮೂರ್ತಿಗಳಿರುವ ಪೀಠದ ಮುಂದೆ ವಿಚಾರಣೆ ನಡೆಯಬೇಕು. (ಮುಂದಿನ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗುವ ಐವರಾದರೂ ಸರಿಯೇ). ಈಗಿನ ಮುಖ್ಯನ್ಯಾಯಮೂರ್ತಿಗಳು (ಈ ಪ್ರಕರಣಕ್ಕೆ ಸಂಬಂಧಿಸಿರುವುದರಿಂದ) ಮತ್ತು ನ್ಯಾಯಮೂರ್ತಿ ಅರುಣ್ ಮಿಶ್ರಾರವರು (ತಮಗೆ ನ್ಯಾಯ ದಕ್ಕಲಾರದು ಎಂದು ಪ್ರಶಾಂತ್ ಭೂಷಣ್‌ರವರು ನ್ಯಾಯಸಮ್ಮತ ಕಾರಣಗಳನ್ನು ನೀಡಿ ಆತಂಕ ತೋಡಿಕೊಂಡಿರುವುದರಿಂದ) ಈ ವಿಚಾರಣೆಯ ಪೀಠದಲ್ಲಿರಬಾರದು.

ಅಂತಹ ಸಂಪೂರ್ಣ ನ್ಯಾಯಸಮ್ಮತ ವಿಚಾರಣೆಯ ನಂತರ ನ್ಯಾಯಾಲಯವು ಪ್ರಶಾಂತ್ ಭೂಷಣ್‌ರವರುಸಲ್ಲಿಸಿರುವ ಪ್ರಮಾಣೀಕೃತ ಅಫಿಡವಿಟ್‌ಗಳಲ್ಲಿರುವುದು ಸುಳ್ಳೆಂಬ ನಿರ್ಣಯಕ್ಕೆ  ಬಂದರೆ, ಅಫಿಡವಿಟ್‌ನಲ್ಲಿರುವುದು ಸುಳ್ಳೆಂಬ ಅರಿವಿದ್ದೂ ಸುಪ್ರೀಂ ಕೋರ್ಟ್ನಂತಹ ಉನ್ನತ ಸಂಸ್ಥೆಯನ್ನು ತಮ್ಮ ಸುಳ್ಳು ಪ್ರಚಾರದಿಂದ ಪ್ರಶಾಂತ್ ಭೂಷಣ್ ಅವಮಾನಕ್ಕೀಡು ಮಾಡಿದರು ಎಂಬ ನಿರ್ಧಾರಕ್ಕೆ ಬಂದರೆ ಆಗ ಪ್ರಶಾಂತ್ ಭೂಷಣ್‌ರವರನ್ನು ಶಿಕ್ಷಿಸಬೇಕು. ಇಲ್ಲವಾದಲ್ಲಿ, ಇದು ನ್ಯಾಯಾಲಯಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕಾದ, ದೂರದೃಷ್ಟಿಯುಳ್ಳ ಸಾಂಸ್ಥಿಕ ಸುಧಾರಣೆಗಳು ಜಾರಿಗೊಳಿಸುವುದರ ಕುರಿತು ಆಲೋಚಿಸಬೇಕಲ್ಲವೇ?

  • ಯೋಗೇಂದ್ರ ಯಾದವ್

ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಸ್ತುತಪಡಿಸುವ ಯೋಗೇಂದ್ರ ಯಾದವ್ ಅವರ ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ.

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್


ಇದನ್ನೂ ಓದಿ: ಪ್ರಶಾಂತ್ ಭೂಷಣ್ ಪ್ರಕರಣ: ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...