Homeಮುಖಪುಟಪ್ರಶಾಂತ್ ಭೂಷಣ್‌ರ ನ್ಯಾಯಾಂಗ ನಿಂದನೆ ಪ್ರಕರಣದೆಡೆಗೆ ನನಗೇಕೆ ಕುತೂಹಲವೆಂದರೆ..; ಯೋಗೇಂದ್ರ ಯಾದವ್

ಪ್ರಶಾಂತ್ ಭೂಷಣ್‌ರ ನ್ಯಾಯಾಂಗ ನಿಂದನೆ ಪ್ರಕರಣದೆಡೆಗೆ ನನಗೇಕೆ ಕುತೂಹಲವೆಂದರೆ..; ಯೋಗೇಂದ್ರ ಯಾದವ್

ನೈಜ ಹೇಳಿಕೆಯೊಂದು ನ್ಯಾಯ ವ್ಯವಸ್ಥೆಯ ಹುಳುಕನ್ನು ಎತ್ತಿ ತೋರಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆಯೇ? ಒಂದು ನೈಜ ಅಭಿಪ್ರಾಯವು, ಅದು ಸಾಬೀತಾಗಿರಲಿ, ಇಲ್ಲದಿರಲಿ ನ್ಯಾಯಾಂಗ ನಿಂದನೆಯಾಗುತ್ತದೆಯೇ?

- Advertisement -
- Advertisement -

ಸುಪ್ರೀಂ ಕೋರ್ಟಿನಲ್ಲಿನ ಇತ್ತೀಚಿನ ನ್ಯಾಯಾಂಗ ನಿಂದನೆ ಪ್ರಕರಣಗಳ ಕುರಿತಾಗಿ ನಡೆಯುತ್ತಿರುವ ಚರ್ಚೆಯು ‘ತಮ್ಮ ಟ್ವೀಟುಗಳಿಗಾಗಿ ಮತ್ತು ಈ ಮುಂಚಿನ ಹೇಳಿಕೆಗಳಿಗಾಗಿ ಪ್ರಶಾಂತ್ ಭೂಷಣ್ ರವರನ್ನು ಶಿಕ್ಷಿಸಬೇಕಾ?’ ಎಂಬ ತಪ್ಪು ಪ್ರಶ್ನೆಗಳನ್ನೆತ್ತುತ್ತಿದೆ. ತಪ್ಪು ಪ್ರಶ್ನೆಗಳಿಗೆ ತಪ್ಪಾದ ಉತ್ತರಗಳೇ ಲಭ್ಯವಾಗಲು ಸಾಧ್ಯವಲ್ಲವೇ? ಆ ಉತ್ತರಗಳಲ್ಲಿ ಅನುಕಂಪವಿರಬಹುದು, ಸಮಂಜಸವಾದ ಉತ್ತರಗಳೂ ಇರಬಹುದು ಆದರೂ ಅವುಗಳು ತಪ್ಪು ಉತ್ತರಗಳೇ. ನ್ಯಾಯಾಂಗ ನಿಂದನೆಯ ಕಾನೂನಿನ ಪ್ರಸ್ತುತತೆ, ಸೈರಣೆಯ ಮೌಲ್ಯ, ನ್ಯಾಯಾಲಯಗಳಿಗೆ ಅವಶ್ಯವಾಗಿ ಇರಬೇಕಾಗಿರುವ ವಿಶಾಲ ಮನಸ್ಥಿತಿ, ಪ್ರಶಾಂತ್ ಭೂಷಣ್ ರವರ ಸಾಮಾಜಿಕ ಕಾರ್ಯಗಳ ಕುರಿತು ಚರ್ಚಿಸತೊಡಗಿದ್ದೇವೆ.

ಆದರೆ ಪ್ರಶ್ನೆ ಅದಲ್ಲ. ಈ ಪ್ರಕರಣ ಪ್ರಶಾಂತ್ ಭೂಷಣ್‌ರವರ ‘ಮಿತಿ ಮೀರಿದ’ ಹೇಳಿಕೆಗಳ ಕುರಿತಿರುವುದಲ್ಲ. ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿರುವ ಸಂವಿಧಾನ ರಕ್ಷಿಸಲು ಕಟಿಬದ್ಧರಾಗಿರಬೇಕಾದಂತಹ ಅತ್ಯುನ್ನತ ಹುದ್ದೆಯಲ್ಲಿರುವವರು ಸಂವಿಧಾನ, ಕಾನೂನು ಮತ್ತು ನೈತಿಕತೆಯ ಚೌಕಟ್ಟನ್ನು ಉಲ್ಲಂಘಿಸುತ್ತಿರುವ ಕುರಿತಾದ ಪ್ರಕರಣವಿದು. ಭಾರತದ ಮುಖ್ಯ ನ್ಯಾಯಮೂರ್ತಿಗಳ ಕುರಿತು ಪ್ರಶಾಂತ್ ಭೂಷಣ್‌ರು ಹೇಳಿದ್ದು ತಮಾಷೆಗಲ್ಲ, ಒಂದು ಬೀಸು ಹೇಳಿಕೆ ನೀಡಿ ಓಡಿಹೋಗುವುದಕ್ಕೂ ಅಲ್ಲ. ಅವರು ದೃಢತೆಯಿಂದ ಮಾತನಾಡಿದ್ದಾರೆ ಮತ್ತು ಗುರುತರ ಜವಾಬ್ದಾರಿಯೊಂದಿಗೆ ಮಾತನಾಡಿದ್ದಾರೆ ಹಾಗೂ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನಕ್ಕೆ ದೊಡ್ಡ ಮಟ್ಟದಲ್ಲಿ ಧಕ್ಕೆಯುಂಟಾಗಬಹುದು ಎಂಬ ಅರಿವಿದ್ದೇ ಮಾತನಾಡಿದ್ದಾರೆ. ಉಚ್ಛ – ಸರ್ವೋಚ್ಚ ನ್ಯಾಯಾಲಯಗಳಲ್ಲೊಂದಷ್ಟು ಉತ್ತಮ ರೀತಿಯ ಬದಲಾವಣೆಗಳು ಕಾಣುವಂತಾಗಲಿ ಎಂಬ ಉದ್ದೇಶದಿಂದಲೇ ಮಾತನಾಡಿದ್ದಾರೆ.

ಈ ದೃಷ್ಟಿಯಿಂದ ಪ್ರಶಾಂತ್ ಭೂಷಣ್ ಅವರ ವಿರುದ್ಧದ ಹನ್ನೊಂದು ವರ್ಷದ ಹಿಂದಿನ ನ್ಯಾಯಾಂಗ ನಿಂದನೆ ಪ್ರಕರಣದ ಪುನರ್ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟಿನ ನಿರ್ಧಾರವನ್ನು ಸ್ವಾಗತಿಸಬೇಕಿದೆ. ಪ್ರಜಾಪ್ರಭುತ್ವದ ವಿನಾಶಕ್ಕೆ ಕಳೆದ ನಾಲ್ಕು ಮುಖ್ಯ ನ್ಯಾಯಮೂರ್ತಿಗಳು ಕೊಟ್ಟ ಕೊಡುಗೆಯ ಕುರಿತು ಪ್ರಶಾಂತ್ ಭೂಷಣ್ ಮಾಡಿರುವ ಟ್ವೀಟುಗಳನ್ನು ತನ್ನರಿವಿಗೆ ತೆಗೆದುಕೊಂಡು ವಿಚಾರಣೆಗೊಳಪಡಿಸುವ ನ್ಯಾಯಾಲಯದ ನಿರ್ಧಾರ ಒಳ್ಳೆಯದೆ. (ಪ್ರಶಾಂತ್ ಭೂಷಣ್ ಮಾಡಿರುವ ಮೋಟಾರ್ ಸೈಕಲ್ಲಿನ ಕುರಿತಾದ ಟ್ವೀಟು ಈ ಪರಿಧಿಗೆ ಬರಲಾರದು. ಆ ಖಾಸಗಿ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡು, ಅದರ ಕುರಿತಾದ ಕೆಲಸಕ್ಕೆ ಬಾರದ ಅರ್ಜಿಯನ್ನು ಸ್ವೀಕರಿಸುವುದರ ಮೂಲಕ ನ್ಯಾಯಾಲಯವು ತನ್ನನ್ನು ತಾನೇ ಮುಜುಗರಕ್ಕೆ ಒಳಪಡಿಸಿಕೊಂಡಿದೆ). ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದರ ಮೂಲಕ ಉನ್ನತ ನ್ಯಾಯಾಲಯವು, ಸುದೀರ್ಘ ಕಾಲದಿಂದ ಚಾಪೆಯ ಕೆಳಗೆ ಗುಡಿಸಿ ಮುಚ್ಚಿಹಾಕಲಾಗುತ್ತಿದ್ದ ವಿಚಾರಗಳನ್ನು ಸಾರ್ವಜನಿಕ ಚರ್ಚೆಯ ನಿಕಷಕ್ಕೆ ಒಳಪಡಿಸುವ ಐತಿಹಾಸಿಕ ಅವಕಾಶವನ್ನಿತ್ತಿದೆ.

Image Courtesy: NDTV

ತೆಹೆಲ್ಕಾಗೆ ಪ್ರಶಾಂತ್ ಭೂಷಣ್ ನೀಡಿದ ಸಂದರ್ಶನದಲ್ಲಿ ಎತ್ತಿದ ಗಮನಾರ್ಹ ಪ್ರಶ್ನೆಗಳಿಗೆ ಈ ವಿಚಾರಣೆಯಲ್ಲಿ ಉತ್ತರ ಸಿಗಬಹುದು ಎಂಬ ನಂಬುಗೆಯಿಂದ ಪ್ರಕರಣದ ವಿಚಾರಣೆಯನ್ನು ಎದುರು ನೋಡುತ್ತಿದ್ದೇನೆ. ನ್ಯಾಯಾಂಗನಿಂದನೆಯ ಪ್ರಕರಣದ ವಿಚಾರಣೆ ಪ್ರಾರಂಭವಾದಾಗ ಪ್ರಶಾಂತ್ ಭೂಷಣ್ ಮೂರು ಸವಿವರವಾದ ಅಫಿಡವಿಟ್ ಸಲ್ಲಿಸುತ್ತಾರೆ. ಪುಟಗಟ್ಟಲೆಯಷ್ಟು ದಾಖಲೆಗಳನ್ನು ಸಾಕ್ಷ್ಯವಾಗಿ ಸಲ್ಲಿಸುತ್ತಾರೆ. ಈ ಸಾಕ್ಷ್ಯಗಳನ್ನೆಲ್ಲ ಪರಿಶೀಲಿಸಲು ನ್ಯಾಯಾಲಯ ಕೂರಲೇ ಇಲ್ಲ. ಎಂಟು ವರ್ಷಗಳ ಕಾಲ ಈ ಸಾಕ್ಷ್ಯಗಳ ಕುರಿತು ನ್ಯಾಯಾಲಯ ಮೌನವಾಗುಳಿದಿದ್ದು ಆ ದಾಖಲೆಗಳು ಸಂಬಂಧಪಟ್ಟವರಲ್ಲಿ ಭೀತಿ ಹುಟ್ಟಿಸಿತ್ತು ಎನ್ನುವ ಭಾವನೆಯನ್ನು ಮೂಡಿಸಿತ್ತು. ಸನ್ಮಾನ್ಯ ನ್ಯಾಯಮೂರ್ತಿಗಳ ಉದ್ದಿಶ್ಯಗಳೇನೇ ಇದ್ದರೂ, ಉನ್ನತ ನ್ಯಾಯಾಲಯವು ಈ ಅನುಕೂಲಕರವಲ್ಲದ ಪ್ರಶ್ನೆಗಳನ್ನು ಎದುರಿಸಲು ಮತ್ತು ಬಗೆಹರಿಸುವುದಕ್ಕೆ ನಿರ್ಧಾರ ತೆಗೆದುಕೊಂಡಿರುವುದು ನಾವೆಲ್ಲಾ ಆಭಾರಿಗಳಾಗಿರಬೇಕು.

ಎಂಟು ಮುಖ್ಯ ನ್ಯಾಯಮೂರ್ತಿಗಳ ಕುರಿತಿರುವ ಪ್ರಶ್ನೆಗಳು

ಸುಪ್ರೀಂ ಕೋರ್ಟಿನಲ್ಲಿ ಪ್ರಶಾಂತ್ ಭೂಷಣ್‌ರವರು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಎತ್ತಿದ ಪ್ರಮುಖ ಪ್ರಶ್ನೆಗಳನ್ನು ಇಲ್ಲಿ ನೆನಪಿಸಿಕೊಳ್ಳೋಣ. 1990ರಿಂದ 2010ರವರೆಗೆ ಇದ್ದ ಹದಿನೆಂಟು ಮುಖ್ಯ ನ್ಯಾಯಮೂರ್ತಿಗಳಲ್ಲಿ ಎಂಟು ಮಂದಿಯ ವಿರುದ್ಧವಿದ್ದ ಭ್ರಷ್ಟಾಚಾರದ (ಭ್ರಷ್ಟಾಚಾರವು ಹಣದ ರೂಪದಲ್ಲೇ ಇತ್ತೆಂದೇನಲ್ಲ) ಆರೋಪಗಳ ಕುರಿತಾದ ವಿಸ್ತೃತ ಸಾಕ್ಷ್ಯಗಳನ್ನು 2009ರಲ್ಲಿ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಎಂಟು ಪ್ರಶ್ನೆಗಳಿದ್ದವು.

ರಂಗನಾಥ್ ಮಿಶ್ರಾ: ನಿವೃತ್ತರಾದ ನಂತರ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಟಿಕೆಟ್ ಒಪ್ಪಿಕೊಂಡ ಮಿಶ್ರಾರವರ ನಡೆಗೂ 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ನಾಯಕರ ಮೇಲಿದ್ದ ಆರೋಪಗಳಲ್ಲಿ ಹುರುಳಿಲ್ಲ ಎಂದು ಮಿಶ್ರಾರವರ ತನಿಖಾ ಆಯೋಗ ಸಲ್ಲಿಸಿದ ವರದಿಗೂ ಸಂಬಂಧವಿಲ್ಲವೇ?

ಕೆ. ಎನ್. ಸಿಂಗ್: ಹದಿನೆಂಟು ದಿನಗಳ ಕಾಲ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದನ್ನು ಬಳಸಿಸಿಕೊಂಡು ಜೈನ್ ಎಕ್ಸ್ಪೋರ್ಟ್ ಮತ್ತು ಜೈನ್ ಶುಧ್ ವನಸ್ಪತಿಯ ಕುರಿತಾದ ಎಲ್ಲಾ ಪ್ರಕರಣಗಳನ್ನು ತಮಗೇ ವರ್ಗಾಯಿಸಿಕೊಂಡು ಆ ಕಂಪನಿಗಳಿಗೆ ಅನುಕೂಲಕರವಾದ ತೀರ್ಪುಗಳನ್ನು ನೀಡಲಿಲ್ಲವೇ? ಇಲ್ಲವಾದಲ್ಲಿ ಸಿಂಗ್‌ರವರು ಮುಖ್ಯನ್ಯಾಯಮೂರ್ತಿ ಸ್ಥಾನದಿಂದ ನಿರ್ಗಮಿಸಿದ ಮೇಲೆ ನ್ಯಾಯಾಲಯವು ಅವರಿತ್ತ ತೀರ್ಪುಗಳನ್ನು ಮರುಪರಿಶೀಲನೆಗೊಳಪಡಿಸಿ ಆ ತೀರ್ಪುಗಳನ್ನು ರದ್ದುಗೊಳಿಸಿದ್ದು ಏಕೆ?

ಎ.ಎಂ. ಅಹಮದಿ: ಈ ಹಿಂದೆ ಸುಪ್ರೀಂ ಕೋರ್ಟಿನ ಆದೇಶದನ್ವಯ ಎಲ್ಲಾ ಕಟ್ಟಡ ಕಾಮಗಾರಿ ಚಟುವಟಿಕೆಯನ್ನು ನಿಷೇಧಿಸಲಾಗಿದ್ದ ಪ್ರದೇಶದಲ್ಲೇ ಅಹಮದಿಯವರು ನಿವೇಶನ ಖರೀದಿಸಿ ಅರಮನೆಯಂತಹ ಭವ್ಯ ಮನೆಯನ್ನು ಕಟ್ಟಿಸಿದರಲ್ಲವೇ? ಸುಪ್ರೀಂ ಕೋರ್ಟಿನ ಆದೇಶಗಳನ್ನು ತಾವು ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ಗಾಳಿಗೆ ತೂರಿದರಲ್ಲವೇ? ಮುಖ್ಯನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ಹಣ ಘೋಷಿಸಿದ್ದ ಮತ್ತು ಸ್ಥಾಪಿಸಿದ್ದ ಭೋಪಾಲಿನ ಆಸ್ಪತ್ರೆಯ ಟ್ರಸ್ಟಿಗೆ ಅವರೇ ಆಜೀವಪರ್ಯಂತ ಅಧ್ಯಕ್ಷರಾದರಲ್ಲವೇ?

ಎಂ.ಎಂ. ಪುಂಚಿ: ಆಗಿನ ಹರ್ಯಾಣದ ಮುಖ್ಯಮಂತ್ರಿ ಭಜನ್ ಲಾಲ್ ವಿರುದ್ಧವಿದ್ದ ಗಂಭೀರ ಪ್ರಕರಣಗಳನ್ನು ವಜಾಗೊಳಿಸಿದ ದಿನವೇ ಪುಂಚಿಯವರ ಇಬ್ಬರು ಹೆಣ್ಣು ಮಕ್ಕಳು ಮುಖ್ಯಮಂತ್ರಿ ವಿವೇಚನೆಯ ಕೋಟಾದಡಿಯಲ್ಲಿ ಎರಡು ನಿವೇಶನಗಳನ್ನು ಪಡೆದುಕೊಂಡರೆ? ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ಹಿತಾಸಕ್ತಿಗಳ ಸ್ಪಷ್ಟ ಸಂಘರ್ಷವಿದ್ದ ಪ್ರಕರಣಗಳ ವಿಚಾರಣೆಗೂ ಅವರು ಪ್ರಯತ್ನಿಸಿರಲಿಲ್ಲವೇ?

ಎ.ಎಸ್. ಆನಂದ್: ಜಮ್ಮು ಕಾಶ್ಮೀರದ ಹೈಕೋರ್ಟಿನ ಮುಖ್ಯ ನಾಯಮೂರ್ತಿಗಳಾಗಿದ್ದ ಅವಧಿಯಲ್ಲಿ ವ್ಯಕ್ತಿಯೊಬ್ಬನಿಂದ ನಿವೇಶನವನ್ನು ಪಡೆದು ಆ ವ್ಯಕ್ತಿಗೆ ಅನುಕೂಲಕರವಾದ ತೀರ್ಪನ್ನು ಆನಂದ್‌ರವರು ನೀಡಿದ್ದರಲ್ಲವೇ? ಸರಕಾರದ ವತಿಯಿಂದ ಕಡಿಮೆ ಬೆಲೆಯ ಭೂಮಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಸುಳ್ಳು ಅಫಿಡವಿಟ್‌ಅನ್ನು ಸಲ್ಲಿಸಿದ್ದರಲ್ಲವೇ?

ವೈ.ಕೆ. ಸಬರ್‌ವಾಲ್: ದೆಹಲಿಯ ವಾಣಿಜ್ಯ ವಹಿವಾಟಿನ ಜಾಗವೊಂದನ್ನು ಸೀಲ್ ಮಾಡಬೇಕೆಂದು ಸಬರ್‌ವಾಲ್ ಅವರು ಹೊರಡಿಸಿದ ಆದೇಶವು ಅವರ ಅಧಿಕೃತ ನಿವಾಸದಲ್ಲೇ ವಾಸವಿದ್ದು ಕೆಲಸ ಮಾಡುತ್ತಿದ್ದ ಅವರ ಮಕ್ಕಳು ಶಾಪಿಂಗ್ ಮಾಲ್‌ಮತ್ತು ಇತರೆ ವಾಣಿಜ್ಯ ಸಂಕೀರ್ಣಗಳೊಂದಿಗೆ ಲಾಭದಾಯಕ ಒಪ್ಪಂದಗಳಿಗೆ ಬರಲು ಅನುಕೂಲ ಮಾಡಿಕೊಟ್ಟಿತೆ? ಉತ್ತರ ಪ್ರದೇಶದ ಮುಲಾಯಂ ಸಿಂಗ್ ಸರಕಾರವು ಸಬರ್‌ವಾಲರ ಮಕ್ಕಳಿಗೆ ನೋಯ್ಡಾದಲ್ಲಿ ವಾಣಿಜ್ಯ ಉದ್ದೇಶದ ದೊಡ್ಡ ಜಾಗವನ್ನು ನೀಡಿದ್ದು ಸತ್ಯವಲ್ಲವೇ?

ಕೆ.ಜಿ. ಬಾಲಕೃಷ್ಣನ್: ನ್ಯಾಯಾಧೀಶರಾಗಿ, ತದನಂತರ ಮುಖ್ಯನ್ಯಾಯಮೂರ್ತಿಗಳಾದ ಬಾಲಕೃಷ್ಣನ್‌ರವರ ಹೆಣ್ಣುಮಕ್ಕಳು, ಅಳಿಯಂದಿರು, ಸಹೋದರ ಮತ್ತು ಸಹಾಯಕರಲ್ಲೊಬ್ಬರು ತಮ್ಮ ನಿಗದಿತ ದುಡಿಮೆಗೆ ಮೀರಿದಂತಹ ಬಹುವಿಸ್ತಾರದ ಭೂಮಿಯನ್ನು ಪಡೆದುಕೊಳ್ಳಲು ಹೇಗೆ ಸಾಧ್ಯವಾಯಿತು?

ಎಸ್. ಹೆಚ್. ಕಪಾಡಿಯ: ಸ್ವತಃ ನ್ಯಾಯಾಲಯ ನೇಮಿಸಿದ್ದ ಪರಿಸರ ತಜ್ಞರ ಸಮಿತಿಯು ಕೊಟ್ಟ ವರದಿಗೆ ತದ್ವಿರುದ್ಧವಾಗಿ ಸ್ಟೆರ್‌ಲೈಟ್ ಕಂಪನಿಗೆ ಲೀಸ್ ದಯಪಾಲಿಸಿ ಕಪಾಡಿಯರವರು ತೀರ್ಪನ್ನಿತ್ತಿದ್ದರಲ್ಲವೇ? ಪ್ರಕರಣದ ವಿಚಾರಣೆ ನಡೆಯುವ ಪ್ರಾರಂಭದಲ್ಲೇ ಸ್ಟೆರ್‌ಲೈಟ್ ಕಂಪನಿಯ ಶೇರುಗಳನ್ನು ಅವರು ಹೊಂದಿರುವ ಅಂಶವನ್ನು ಅವರು ಬಹಿರಂಗಪಡಿಸಲಿಲ್ಲವೇಕೆ?

ನ್ಯಾಯಾಲಯದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಇಂತಹ ಪ್ರಶ್ನೆಗಳನ್ನು ಕೇಳುವುದಕ್ಕೆ ಎಷ್ಟು ಶ್ರಮವಿರಬೇಕು, ಎಷ್ಟು ಧೈರ್ಯವಿರಬೇಕೆಂದು ನೀವೇ ಊಹಿಸಿ! ಪ್ರಶ್ನೆ ಕೇಳುವುದಷ್ಟಕ್ಕೇ ಪ್ರಶಾಂತ್ ಭೂಷಣ್‌ರವರು ಸೀಮಿತವಾಗುವುದಿಲ್ಲ. ತಮ್ಮ ಪ್ರತಿ ಪ್ರಶ್ನೆಗೂ ದಾಖಲೆಗಳನ್ನು ಒದಗಿಸುತ್ತಾರೆ. ನಿಯಮ ಮೀರಿದ ದಿನಾಂಕಗಳು, ಸ್ವತ್ತಿನ ಒಡೆತನದ ದಾಖಲೆಗಳನ್ನೆಲ್ಲವನ್ನೂ ಒದಗಿಸುತ್ತಾರೆ. ಈ ಪ್ರಶ್ನೆಗಳಿಗೆ ಉತ್ತರ ಬಯಸುವುದು ತಪ್ಪೇ?

ಇತ್ತೀಚಿನ ನಾಲ್ಕು ಮುಖ್ಯ ನ್ಯಾಯಮೂರ್ತಿಗಳ ಕುರಿತ ಪ್ರಶ್ನೆಗಳು
ಇನ್ನುಳಿದ ನಾಲ್ಕು ಪ್ರಕರಣಗಳು ಈಗ ಸದ್ಯ ಇರುವ ನ್ಯಾಯಮೂರ್ತಿಗಳನ್ನೂ ಸೇರಿಸಿ ಇತ್ತೀಚಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಕುರಿತಾಗಿರುವಂತದ್ದು. ಇಲ್ಲಿ ಪ್ರಶಾಂತ್ ಭೂಷಣ್‌ರವರ ಪ್ರಶ್ನೆಯಿರುವುದು “ಭ್ರಷ್ಟಾಚಾರದ” ಬಗ್ಗೆಯಲ್ಲ, ಬದಲಿಗೆ “ಪ್ರಜಾಪ್ರಭುತ್ವವನ್ನು ಕೆಡವುತ್ತಿರುವುದರ” ವಿದ್ಯಮಾನದಲ್ಲಿ ನ್ಯಾಯಮೂರ್ತಿಗಳ ಪಾತ್ರದ ಪ್ರಶ್ನೆ. ಪ್ರಶಾಂತ್ ಭೂಷಣ್‌ರವರು ಇದರ ಬಗ್ಗೆ ಅಧಿಕೃತ ಅಫಿಡವಿಟ್‌ಅನ್ನು ಇನ್ನೂ ಸಲ್ಲಿಸಬೇಕಿದೆಯಾದರೂ ಪ್ರಶ್ನೆಗಳನ್ನು ಊಹಿಸುವುದು ಕಷ್ಟದ ಕೆಲಸವೇನಲ್ಲ.

ಜೆ.ಎಸ್. ಖೇಹರ್: ಖೇಹರ್‌ರವರು ‘ಬಿರ್ಲಾ – ಸಹಾರಾ ಡೈರಿ’ಯ ಕುರಿತಾದ ತನಿಖೆಯನ್ನು ಮುಚ್ಚಿಹಾಕುವುದಕ್ಕೆ ಸಹಾಯ ಮಾಡಿದ್ದಕ್ಕೂ ಸರಕಾರವು ಖೇಹರ್‌ರವರ ಹೆಸರು ಪ್ರಸ್ತಾಪವಾಗಿದ್ದ ‘ಕಲಿಖೋಪುಲ್’ ಆತ್ಮಹತ್ಯೆ ಪ್ರಕರಣವನ್ನು ತ್ವರಿತವಾಗಿ ಮುಚ್ಚಿಹಾಕುವುದಕ್ಕೂ ಸಂಬಂಧವಿದೆಯಾ?

ದೀಪಕ್ ಮಿಶ್ರಾ: ನ್ಯಾಯಾಧೀಶರಾದ ಲೋಯಾರ ಸಾವಿನ ಪ್ರಕರಣನ್ನೂ ಸೇರಿಸಿದಂತೆ ಅನೇಕ  ಸೂಕ್ಷ್ಮ ಪ್ರಕರಣಗಳನ್ನು ನ್ಯಾಯಮೂರ್ತಿಗಳಿಗೆ ಹಂಚಿಕೆ ಮಾಡುವಾಗ ಪಕ್ಷಪಾತ ನಡೆಯುತ್ತಿತ್ತು ಎಂದು ನಾಲ್ವರು ನ್ಯಾಯಾಧೀಶರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರಲ್ಲಿ ಹುರುಳಿದೆಯೇ? ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿರುವ ರೀತಿಯು ಪ್ರಜಾಪ್ರಭುತ್ವದ ಉಳಿವಿಗೇ ಅಪಾಯವನ್ನೊಡ್ಡುತ್ತಿದೆ ಎಂದು ನ್ಯಾಯಾಧೀಶರಾದ ಚಲಮೇಶ್ವರ್ ಹೇಳಿದ್ದು ಸರಿಯಿತ್ತೇ?

ರಂಜನ್ ಗೋಗೊಯ್: ತಮ್ಮ ವಿರುದ್ಧವೇ ಇದ್ದ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಅವರು ನಿಭಾಯಿಸಿದ ರೀತಿ ಕೆಟ್ಟ ಆಪತ್ತಿನ ಪದ್ಧತಿಯೊಂದಕ್ಕೆ ನಾಂದಿಯಾಡಿತಲ್ಲವೇ? ನಿವೃತ್ತರಾದ ತಕ್ಷಣವೇ ರಾಜ್ಯಸಭೆಗೆ ನೇಮಕಗೊಂಡಿದ್ದು ನ್ಯಾಯಾಲಯ ಮತ್ತು ರಾಜಕೀಯ ಪಕ್ಷಗಳ ನಡುವಿನ ‘ಕೊಡು ಕೊಳ್ಳುವಿಕೆ’ಗೊಂದು ನಿದರ್ಶನವಲ್ಲವೇ?

ನ್ಯಾಯಮೂರ್ತಿ ಎಸ್. ಎ. ಬೋಬ್ಡೆ: ಚುನಾವಣಾ ಬಾಂಡ್‌ಗಳ ಸಾಂವಿಧಾನಿಕ ಮಾನ್ಯತೆ, ಪೌರತ್ವ ತಿದ್ದುಪಡಿ ಕಾಯ್ದೆ, ೩೭೦ನೇ ವಿಧಿಯ ತಿದ್ದುಪಡಿ ಮತ್ತು ಜಮ್ಮು ಕಾಶ್ಮೀರದ ಪುನರ್‌ರಚನೆಯ ಕುರಿತಾದ ಪ್ರಮುಖ ತುರ್ತಿನ ಪ್ರಕರಣಗಳ ವಿಚಾರಣೆಗಳು ವಿಳಂಬಳ್ಳುತ್ತಿರುವುದೇಕೆ?

ಈ ಪ್ರಶ್ನೆಗಳು ಭಾಗಶಃ ಸರಿಯಾಗಿದ್ದರೂ, ಸಾಂಸ್ಥಿಕ ಅಡಿಪಾಯ ಅಲ್ಲಾಡುತ್ತಿರುವ ಬಗ್ಗೆ ಉದಾಸೀನತೆ ಮತ್ತು ಅದರಿಂದ ಪ್ರಜಾಪ್ರಭುತ್ವದ ಬುನಾದಿಯನ್ನು ವಿನಾಶದಂಚಿಗೆ ತಳ್ಳುತ್ತಿರುವುದನ್ನು ಸೂಚಿಸುತ್ತವೆ. ಕೊನೆಯದಾಗಿ ಒಬ್ಬೊಬ್ಬ ನ್ಯಾಯಾಧೀಶರಿಗೆ ಸಂಬಂಧಿಸದ ಸಂವಿಧಾನಾತ್ಮಕ ಪ್ರಶ್ನೆಯೊಂದಿದೆ:

ನೈಜ ಹೇಳಿಕೆಯೊಂದು ನ್ಯಾಯ ವ್ಯವಸ್ಥೆಯ ಹುಳುಕನ್ನು ಎತ್ತಿ ತೋರಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆಯೇ? ಒಂದು ನೈಜ ಅಭಿಪ್ರಾಯವು, ಅದು ಸಾಬೀತಾಗಿರಲಿ, ಇಲ್ಲದಿರಲಿ ನ್ಯಾಯಾಂಗ ನಿಂದನೆಯಾಗುತ್ತದೆಯೇ?

ಸಂಪೂರ್ಣ ಮತ್ತು ನ್ಯಾಯಸಮ್ಮತ ವಿಚಾರಣೆಯ ನಿರೀಕ್ಷೆಯಲ್ಲಿ:

ಸಂಪೂರ್ಣ ನ್ಯಾಯಸಮ್ಮತ ವಿಚಾರಣೆಯ ಮೂಲಕ ಇಲ್ಲಿ ಕೇಳಲಾಗಿರುವ ಎಲ್ಲಾ ಹದಿಮೂರು ಪ್ರಶ್ನೆಗಳಿಗೂ ನ್ಯಾಯಾಲಯ ಉತ್ತರಿಸುತ್ತದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೇನೆ. ಈ ‘ಸಂಪೂರ್ಣ ಮತ್ತು ನ್ಯಾಯಸಮ್ಮತ’ ವಿಚಾರಣೆಯಲ್ಲಿ ಮೂರು ಅತ್ಯವಶ್ಯ ಸಂಗತಿಗಳಿರಬೇಕೆಂದು ನನಗೆ ತೋಚುತ್ತಿದೆ.

ಮೊದಲಿಗೆ, ವಿಚಾರಣೆಯು ತೆರೆದ ನ್ಯಾಯಾಲಯದಲ್ಲಿ ನಡೆಯಬೇಕು, ಕೆಲವರಿಗಷ್ಟೇ ಲಭ್ಯವಾಗುವ ಕಂಪ್ಯೂಟರ್ ಪರದೆಯ ಹಿಂದಲ್ಲ.

ಎರಡನೆಯದಾಗಿ, ವಿಚಾರಣಾ ನ್ಯಾಯಾಲಯದಂತೆಯೇ, ಸಾಕ್ಷ್ಯವನ್ನು ತೆರೆದಿಡಲು, ಸಾಕ್ಷ್ಯವನ್ನು ಪರಿಶೀಲಿಸಲು ಅತ್ಯಗತ್ಯವಾದ ಸಮಯವನ್ನು ಮೀಸಲಿಡಬೇಕು.

ಮೂರನೆಯದಾಗಿ, ಐವರು ಹಿರಿಯ ನ್ಯಾಯಮೂರ್ತಿಗಳಿರುವ ಪೀಠದ ಮುಂದೆ ವಿಚಾರಣೆ ನಡೆಯಬೇಕು. (ಮುಂದಿನ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗುವ ಐವರಾದರೂ ಸರಿಯೇ). ಈಗಿನ ಮುಖ್ಯನ್ಯಾಯಮೂರ್ತಿಗಳು (ಈ ಪ್ರಕರಣಕ್ಕೆ ಸಂಬಂಧಿಸಿರುವುದರಿಂದ) ಮತ್ತು ನ್ಯಾಯಮೂರ್ತಿ ಅರುಣ್ ಮಿಶ್ರಾರವರು (ತಮಗೆ ನ್ಯಾಯ ದಕ್ಕಲಾರದು ಎಂದು ಪ್ರಶಾಂತ್ ಭೂಷಣ್‌ರವರು ನ್ಯಾಯಸಮ್ಮತ ಕಾರಣಗಳನ್ನು ನೀಡಿ ಆತಂಕ ತೋಡಿಕೊಂಡಿರುವುದರಿಂದ) ಈ ವಿಚಾರಣೆಯ ಪೀಠದಲ್ಲಿರಬಾರದು.

ಅಂತಹ ಸಂಪೂರ್ಣ ನ್ಯಾಯಸಮ್ಮತ ವಿಚಾರಣೆಯ ನಂತರ ನ್ಯಾಯಾಲಯವು ಪ್ರಶಾಂತ್ ಭೂಷಣ್‌ರವರುಸಲ್ಲಿಸಿರುವ ಪ್ರಮಾಣೀಕೃತ ಅಫಿಡವಿಟ್‌ಗಳಲ್ಲಿರುವುದು ಸುಳ್ಳೆಂಬ ನಿರ್ಣಯಕ್ಕೆ  ಬಂದರೆ, ಅಫಿಡವಿಟ್‌ನಲ್ಲಿರುವುದು ಸುಳ್ಳೆಂಬ ಅರಿವಿದ್ದೂ ಸುಪ್ರೀಂ ಕೋರ್ಟ್ನಂತಹ ಉನ್ನತ ಸಂಸ್ಥೆಯನ್ನು ತಮ್ಮ ಸುಳ್ಳು ಪ್ರಚಾರದಿಂದ ಪ್ರಶಾಂತ್ ಭೂಷಣ್ ಅವಮಾನಕ್ಕೀಡು ಮಾಡಿದರು ಎಂಬ ನಿರ್ಧಾರಕ್ಕೆ ಬಂದರೆ ಆಗ ಪ್ರಶಾಂತ್ ಭೂಷಣ್‌ರವರನ್ನು ಶಿಕ್ಷಿಸಬೇಕು. ಇಲ್ಲವಾದಲ್ಲಿ, ಇದು ನ್ಯಾಯಾಲಯಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕಾದ, ದೂರದೃಷ್ಟಿಯುಳ್ಳ ಸಾಂಸ್ಥಿಕ ಸುಧಾರಣೆಗಳು ಜಾರಿಗೊಳಿಸುವುದರ ಕುರಿತು ಆಲೋಚಿಸಬೇಕಲ್ಲವೇ?

  • ಯೋಗೇಂದ್ರ ಯಾದವ್

ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಸ್ತುತಪಡಿಸುವ ಯೋಗೇಂದ್ರ ಯಾದವ್ ಅವರ ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ.

ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್


ಇದನ್ನೂ ಓದಿ: ಪ್ರಶಾಂತ್ ಭೂಷಣ್ ಪ್ರಕರಣ: ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...